ವರ್ಷಭವಿಷ್ಯ 2015 : ಮಿಥುನ, ಕನ್ಯಾ, ಮಕರಕ್ಕೆ ಸೂಪರ್
ಭವಿಷ್ಯ, ಜ್ಯೋತಿಷ್ಯವೆಂದರೆ ಉದ್ಧಟತನದಿಂದ ಮಾತನಾಡುತ್ತ ಮೂಗೆಳೆಯುವ, ಹೀಗಳಿಯುವ ಹಿಂದೂ ಧರ್ಮ ವಿರೋಧಿಗಳಿಗೆ ಈಗ ಪರೀಕ್ಷಾ ಕಾಲವೆನ್ನಬಹುದು. ಏಕೆಂದರೆ, ಇಂತಹ ನಾಸ್ತಿಕರು ಮುಂಬರುವ 2015ರಲ್ಲಿ ಮಿಥುನ, ಕನ್ಯಾ, ಮಕರ, ಮೀನ ರಾಶಿಯವರ ಏಳ್ಗೆಯನ್ನು ನೋಡಿ ನೋಡಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಂತಾಗುತ್ತದೆ. ಬೇಕಿದ್ದರೆ ಪರೀಕ್ಷಿಸಿಕೊಳ್ಳಬಹುದು ಅಂಥಹವರು.
ಇಲ್ಲಾಂದ್ರೆ ನಮ್ಮ ದೇವರ ಬಗ್ಗೆ ಕೊಂಕು ಮಾತನಾಡದಿರುವುದೇ ಒಳ್ಳೆಯದು. "ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಕು" ಆ ತರಹ ಅನಾಹುತ ಮಾಡುವ ಉಗ್ರ ದೇವರೂ ನಮ್ಮಲ್ಲಿದ್ದಾರೆ ಎಂಬುದು ಗೊತ್ತಿರಿಸಿಕೊಂಡು "ಹೊಗೆ ಹಾಕಿಸಿಕೊಳ್ಳುವ" ಕೆಲಸ ಮಾಡದಿದ್ದರೆ ಇನ್ನೂ ಒಳ್ಳೆಯದು ಅಂಥವರಿಗೆ.
ಸಾಮಾನ್ಯವಾಗಿ ವರ್ಷಭವಿಷ್ಯವನ್ನು ನೋಡುವವರು ಮತ್ತು ನಂಬುವವರು ಮಧ್ಯ ವಯಸ್ಕರು. ಹಿಂದೂ ಧರ್ಮದಲ್ಲಿ ಜನಿಸಿದವರು ಜೀವನದ ಕಾಲು ಭಾಗ ವಿದ್ಯಾಭ್ಯಾಸ, ಅದು, ಇದೂ ಅಂತ ಮೊದಲಿಪ್ಪತ್ತೈದು ವರ್ಷ ಕಳೆಯುತ್ತಾರೆ. ಪಾಲಕರೇ ಇವರ ಭವಿಷ್ಯದ ಬಗ್ಗೆ ಚಿಂತಿಸುತ್ತಿರುತ್ತಾರೆ. ಇವರಿಗಂತೂ ಭವಿಷ್ಯದ ಬಗ್ಗೆ ಚಿಂತೆಯೇ ಇರಲ್ಲ. ನಂತರ ಉದ್ಯೋಗ, ಮದುವೆ, ಮನೆ, ಮಕ್ಕಳು, ಕಾರು, ಬಾರು ಎಂದು ಮತ್ತೈದಿಪ್ಪತ್ತು ವರ್ಷದ ಜೀವನವನ್ನಾರಂಭಿಸುತ್ತಾರೆ.
ಇವಾಗ್ಲೇ ಬರುವುದು ನೋಡಿ ಭವಿಷ್ಯ, ಜ್ಯೋತಿಷ್ಯದ ಚಿಂತೆ ಮತ್ತು ಅದರ ಮಹತ್ವ ಗೊತ್ತಾಗುವ ಸಮಯ. ಚೆನ್ನಾಗಿ ಕಲಿತರೂ ಉದ್ಯೋಗದ ತೊಂದರೆ, ಕೆಲಸ ಸಿಕ್ಕರೂ ಅಲ್ಲಿ ಕಿರಿಕಿರಿ, ಮದುವೆಯಾಗದಿರುವುದು, ಮದುವೆಯಾದರೆ ಹೊಂದಾಣಿಕೆಯ ಅಭಾವದಿಂದ ಬಿಡುಗಡೆ, ಮದುವೆಯಾಗಿ ಚೆನ್ನಾಗಿದ್ದರೆ ಮಕ್ಕಳಾಗದಿರುವುದು, ಮಕ್ಕಳಾದರೆ ಆರೋಗ್ಯವಂತರಾಗಿರದಿರುವುದು, ಇನ್ನು ರೋಗ-ರುಜಿನಗಳ ಕಾಟ ಬೇರೆ, ಸಾಲದ ಹೊರೆ, ಮಕ್ಕಳ ಹೊರೆ, ಸ್ವಂತಕ್ಕೊಂದು ಮನೆ ಕಟ್ಟಿಸಿಕೊಳ್ಳುವ ಬಯಕೆ ಹೀಗೆ ಮುಂದುವರೆಯುತ್ತದೆ ತೊಂದರೆಗಳ ಸರಮಾಲೆ.

ಕೈ ಖಾಲಿಯಾದಾಗ ಮೊದಲೇ ನನಗೆ ಈ ಸಮಯ ಬರಲಿದೆ ಎಂದು ಗೊತ್ತಿದ್ದರೆ ಹುಷಾರಾಗಿರಬಹುದಿತ್ತಲ್ಲ ಎಂಬ ಯೋಚನೆ ಹೊಳೆಯೋದು ಇವರಿಗೆ. ಇದೇ ಜ್ಯೋತಿಷ್ಯ ಮತ್ತು ಭವಿಷ್ಯವೆನ್ನಬಹುದು. [2015 ಸಂಕ್ರಮಣ ರಾಶಿಫಲ : ಯಾರಿಗೆ ಲಾಭ, ನಷ್ಟ]
ಹೀಗೆ ಮಧ್ಯ ವಯಸ್ಸಿನಲ್ಲಿ ವಕ್ಕರಿಸಿಕೊಳ್ಳುವ ತೊಂದರೆಗಳನ್ನು ಪರಿಹರಿಸಿಕೊಂಡು ಮುಂದಿನ ಇಪ್ಪತ್ತೈದು ವರ್ಷ ದೇವರು, ದಿಂಡರು, ಆಸ್ಪತ್ರೆ, ಚಿಕಿತ್ಸೆ, ಹಿರಿತನ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ದೇಹದಲ್ಲಿನ ಎಲ್ಲ ಭಾಗಗಳು ಸವಕಳಿ ಹೊಂದುತ್ತ ಒಂದೊಂದೇ ಶಕ್ತಿ ಕಳೆದುಕೊಳ್ಳುತ್ತಿರುತ್ತವೆ. ನಮ್ಮೆಲ್ಲ ದೇವರುಗಳು ಇವರಿಗೆ ನೆನಪಿಗೆ ಬರಲಾಂಭಿಸುತ್ತವೆ.
ಇನ್ನು ಮುಂದಿನ ಇಪ್ಪತ್ತೈದು ವರ್ಷ ಜೀವನ ಅಂತ್ಯಗೊಳಿಸುವ ಸಮಯ. ಈ ಸಮಯದಲ್ಲಿ ಆರೋಗ್ಯದ ತೊಂದರೆಗಳು ಉಲ್ಬಣಿಸಲಾರಂಭಿಸುತ್ತವೆ. ಆದರೆ ಜೀವನ ಅಂತ್ಯಗೊಳಿಸಲು ಇಷ್ಟವಿಲ್ಲದವರು ಇನ್ನೊಂದಿಷ್ಟು ಆಯಸ್ಸು ಕೊಡಬಾರದೇ ದೇವರೇ ಎಂದು ಮನದಲ್ಲಿ ಕೊರಗಲಾರಂಭಿಸುತ್ತಾರೆ. ಜೀವದ ಮೇಲಿನ ಆಸೆ ಹೆಚ್ಚುತ್ತದೆ. ಆದರೂ ಆ ದೇವರು ಯಾವಾಗ ಕರಕೊಳ್ತಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಬೇಗ ಕರೆದುಕೊಂಡು ಹೋದರೆ ಸಾಕು. ಭೂಮಿ ಋಣ ಮುಗೀತು ಎಂದು ಹೃದಯ ಹಿಂಡಿಕೊಂಡು ಹೇಳುತ್ತಿರುತ್ತಾರೆ.
ಹೀಗಿರುವ ನಮ್ಮ ಜೀವನಚಕ್ರದಲ್ಲಿ ಜ್ಯೋತಿಷ್ಯ ಮತ್ತು ಭವಿಷ್ಯ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ನಮ್ಮ ಆಸ್ತಿಕರಿಗೆ ಗೊತ್ತಿದೆ.
ಈಗ ವರ್ಷಭವಿಷ್ಯದ ಬಗ್ಗೆ ಹೇಳುವುದಾದರೆ, ಮಿಥುನ, ಕನ್ಯಾ, ಮಕರ ಮತ್ತು ಮೀನ ರಾಶಿಯವರಿಗೆ 2015 ತುಂಬಾ ಒಳ್ಳೆಯ ದಿನಗಳು. ಈ ರಾಶಿಯವರು ಮುಖ್ಯವಾದ ಯೋಜನೆಗಳನ್ನು ಹಾಕಿಕೊಳ್ಳಬಹುದು. ಯಶಸ್ಸು ಕಟ್ಟಿಟ್ಟ ಬುತ್ತಿ ಈ ರಾಶಿಯವರಿಗೆ. ನ್ಯಾಯ, ನೀತಿ, ಧರ್ಮದಿಂದಿರುವ ಕಾರ್ಯಕ್ಕೆ ಮಾತ್ರ ಈ ಫಲ ಅನ್ವಯಿಸುತ್ತದೆ ಎಂಬುದು ಅರ್ಥ ಮಾಡಿಕೊಳ್ಳಬೇಕು ಅಷ್ಟೇ.
ಆದರೆ, ತುಲಾ, ವೃಶ್ಚಿಕ ಮತ್ತು ಧನಸ್ಸು ರಾಶಿಯವರು ಶನಿ ಸಾಡೇಸಾತಿಯ ಚಕ್ರದಲ್ಲಿ ಸಿಲುಕಿಕೊಂಡಿದ್ದಾರೆ. ಕಷ್ಟಗಳೇನು ಮತ್ತು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ಇನ್ನೂ ತಿಳಿದುಕೊಳ್ಳುವುದು ತುಂಬಾ ಇದೆ. ಎಲ್ಲವೂ ಅನುಭವಕ್ಕೆ ಬರುತ್ತದೆ ಮುಂದಿನ ವರ್ಷ.
ಇನ್ನು ಮೇಷದವರಿಗೆ ಆರೋಗ್ಯದ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೆ, ಕರ್ಕ ರಾಶಿಯವರಂತೂ "ಥೂ ಇದೂ ಒಂದು ಜೀವನಾನಾ?" ಎಂದು ತಮ್ಮಷ್ಟಕ್ಕೇ ತಾವೇ ಗೊಣಗಿಕೊಳ್ಳುವಂತಾಗುತ್ತದೆ. ಆ ಪರಿ ಶನಿಕಾಟ ಇವರಿಗಿದೆ. ಆದರೂ ಭಯಪಡುವಂಥಹದೇನೂ ಇಲ್ಲ ಇವರಿಗೆ. ಮೇಷದವರಿಗೆ ಮಾತ್ರ ಅಪಾಯ ಜಾಸ್ತಿ.
ಉಳಿದ ರಾಶಿಗಳ ಸಂಪೂರ್ಣ ವರ್ಷಭವಿಷ್ಯ ಮುಂದಿನ ಲೇಖನದಲ್ಲಿ.
ಮುಂದಿನ ಲೇಖನ : ವರ್ಷ ಭವಿಷ್ಯ 2015: ಮೇಷ












Click it and Unblock the Notifications