ಸರ್ಪ ದೋಷ ಅಂದರೆ ಏನು, ಎಷ್ಟು ಬಗೆ, ಯಾವ ದೋಷಕ್ಕೆ ಏನು ಪರಿಹಾರ?
ಮದುವೆ ವಿಳಂಬ ಆಗ್ತಿದೆ, ಏನು ಕಾರಣ ಅಂತಲೇ ಗೊತ್ತಾಗ್ತಿಲ್ಲ. ಯಾವ ಉದ್ಯೋಗದಲ್ಲೂ ಬಹಳ ಕಾಲ ಉಳಿಯುವುದಕ್ಕೆ ಸಾಧ್ಯವಾಗ್ತಿಲ್ಲ. ಮದುವೆಯಾಗಿ ಬಹಳ ವರ್ಷಗಳಾದವು, ಇನ್ನೂ ಮಕ್ಕಳಾಗಿಲ್ಲ. ಯಾವುದೇ ವ್ಯಾಪಾರವೂ ಕೈ ಹಿಡಿಯುತ್ತಿಲ್ಲ... ಹೀಗೆ ಸಮಸ್ಯೆಗಳನ್ನು ಕೇಳಿಕೊಂಡು ಜ್ಯೋತಿಷಿಗಳ ಬಳಿಗೆ ಹೋದರೆ, ನಿಮ್ಮ ಜಾತಕದಲ್ಲಿ 'ಸರ್ಪ ದೋಷ' ಇದೆ. ಅದು ನಿವಾರಣೆ ಆಗಬೇಕು ಅಂತಾರೆ.
ಇದು ಒಂದು ಬಗೆಯಾಯಿತು. ಇನ್ನೂ ಹಲವರು, ಸ್ವಾಮೀ ನಾವು ಸರ್ಪ ದೋಷ ನಿವಾರಣೆ ಮಾಡಿಸಿಕೊಂಡಿವಿ. ಆದರೆ ಬದಲಾವಣೆ ಏನೂ ಗೊತ್ತಾಗ್ತಾ ಇಲ್ಲ ಎಂದು ಸಂಕಟ ಹೇಳಿಕೊಳ್ಳುತ್ತಾರೆ. ಸರ್ಪ ದೋಷ ಏಕೆ ಬರುತ್ತದೆ ಅನ್ನೋದು ಮೊದಲು ಗೊತ್ತಾಗಬೇಕು ಅಲ್ಲವಾ?
ಹಾವೊಂದರ ಸಾವಿಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಕಾರಣವಾದರೆ ಜಾತಕದಲ್ಲಿ ಈ ದೋಷ ಕಾಣಿಸಿಕೊಳ್ಳುತ್ತದೆ. ತಂದೆ, ಚಿಕ್ಕಪ್ಪ, ದೊಡ್ಡಪ್ಪ, ತಾತ, ಮಾವ... ಹೀಗೆ ಕುಟುಂಬದಲ್ಲಿ ಯಾರಾದರೂ ಹಾವನ್ನು ಕೊಂದಿದ್ದರೆ ಈ ದೋಷ ಬಂದಿರುತ್ತದೆ. ಈ ರೀತಿ ಹಾವನ್ನು ಕೊಲ್ಲುವುದು, ಅದು ಗೊತ್ತಿದ್ದೋ ಅಥವಾ ಗೊತ್ತಿಲದೆಯೋ ಕೊಲ್ಲುವುದು ಪಾಪ ಕಾರ್ಯ.
ಅದರ ನಿವಾರಣೆಗಾಗಿ ಮಾಡುವ ಕ್ರಿಯೆಯೇ ಸರ್ಪ ಸಂಸ್ಕಾರ. ಇದು ಮೊದಲ ವಿಧಾನ. ಹೀಗಂದರೆ ನಾಗನಿಗೆ ಅಪರ ಕ್ರಿಯೆಗಳನ್ನು ಮಾಡಿದಂತೆಯೇ. ನಾಗನ ಬಿಂಬವೊಂದನ್ನು ಮಾಡಿ, ನಿಮ್ಮಿಂದಲೇ ಅದರ ಅಪರ ಕ್ರಿಯೆಗಳನ್ನು ಮಾಡಿಸಲಾಗುತ್ತದೆ. ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ತಂದೆ-ತಾಯಿ ಬದುಕಿರುವ ಪಕ್ಷದಲ್ಲಿ ಮಕ್ಕಳು ಈ ಸಂಸ್ಕಾರವನ್ನು ಮಾಡಿಸಬಾರದು. ತಂದೆ-ತಾಯಿಯಿಂದ ಮಾಡಿಸಬಹುದು.

ನಾಗ ಪ್ರತಿಷ್ಠೆ
ಒಂದು ವೇಳೆ ತಾತ-ಅಜ್ಜಿ ಬದುಕಿದ್ದು, ಆರೋಗ್ಯವಾಗಿದ್ದ ಪಕ್ಷದಲ್ಲಿ ಅವರಿಂದಲೇ ಈ ಸಂಸ್ಕಾರವನ್ನು ಮಾಡಿಸಬೇಕಾಗುತ್ತದೆ. ತಂದೆ-ತಾಯಿ ಬದುಕಿದ್ದಂತಹವರಿಗೆ ಈ ಸರ್ಪ ಸಂಸ್ಕಾರವನ್ನು ಮಾಡುವ ಅಧಿಕಾರ ಇಲ್ಲ. ಇನ್ನೊಂದು ವಿಧಾನ ಅಂದರೆ ನಾಗ ಪ್ರತಿಷ್ಠೆ. ಹಾಗಂದರೆ ನಾಗನಿಗೆ ಕಾಯಂ ಸ್ಥಾನವನ್ನು ಕಲ್ಪಿಸಿಕೊಡುವುದು.
ಜಮೀನು ಇದ್ದು, ಅಲ್ಲಿ ನಾಗನ ಸಂಚಾರ ಇದ್ದು, ಅಲ್ಲಿ ಮಾಲೀಕರಿಂದ ತೊಂದರೆ ಆಗಿದ್ದರೆ, ಮನೆ ನಿರ್ಮಾಣ ಮಾಡಿದ್ದರೆ, ನಾಗಗಳ ವಾಸಸ್ಥಾನ ನಾಶ ಮಾಡಿದ್ದರೆ ಅದು ದೋಷ. ನಮ್ಮ ಮನೆ ನಿರ್ಮಾಣಕ್ಕೋ ಅನುಕೂಲಕ್ಕೋ ನಾಗನ ವಾಸಸ್ಥಾನವನ್ನು ನಾಶ ಮಾಡಿದ್ದಲ್ಲಿ ನಾಗ ಪ್ರತಿಷ್ಠೆ ಮಾಡಿಸಬೇಕಾಗುತ್ತದೆ. ಜತೆಗೆ ಪೂಜೆಯ ವ್ಯವಸ್ಥೆ ಮಾಡಬೇಕಾಗುತ್ತದೆ.

ಮಲಿನ ಮಾಡಿದ್ದರೆ ದೋಷ
ಹಾವು ಒಂದು ಜಾಗದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಮಾಡುತ್ತಿರುತ್ತದೆ. ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ, ಉಗುಳುವುದು- ಗಲೀಜು ಮಾಡಿದರೆ ಅದು ಕೂಡ ದೋಷವಾಗುತ್ತದೆ. ಒಟ್ಟಾರೆ ಅದರ ಸಂಚಾರಕ್ಕೆ ಅಡ್ಡ ಪಡಿಸಿದ್ದಲ್ಲಿ ನಾಗನ ಸಂಚಾರಕ್ಕೆ ಅಡ್ಡಿ ಪಡಿಸಿದ ದೋಷ ಬರುತ್ತದೆ. ಆಗ ನಾಗ ಪ್ರತಿಷ್ಠೆ ಮಾಡಬೇಕಾಗುತ್ತದೆ.

ಆಶ್ಲೇಷ ಬಲಿ ಯಾವಾಗ ಮಾಡಬೇಕು
ದೋಷದ ಇನ್ನೊಂದು ಪರಿಹಾರ ವಿಧಾನ ಅಂದರೆ ಆಶ್ಲೇಷ ಬಲಿ. ಜನ್ಮ ಜನ್ಮಾಂತರದಲ್ಲಿ ಮಾಡಿದ ನಾಗ ದೋಷದ ಪರಿಹಾರಕ್ಕಾಗಿ ಆಶ್ಲೇಷ ಬಲಿ ಪೂಜೆ ಮಾಡಲಾಗುತ್ತದೆ. ಜಾತಕದಲ್ಲಿನ ನಾಗದೋಷದಿಂದ ಅನಾರೋಗ್ಯ ಸಮಸ್ಯೆಯು ಬಂದಿದ್ದರೆ, ಸಂತಾನ ಸಮಸ್ಯೆ ಆಗಿದ್ದರೆ ಅಥವಾ ಯಾವುದೇ ನಾಗ ದೋಷದಿಂದ ಸಮಸ್ಯೆಯಾಗಿದ್ದರೆ ಆಶ್ಲೇಷ ಬಲಿ ಪೂಜೆ ಮಾಡಬೇಕಾಗುತ್ತದೆ.
ಆಶ್ಲೇಷ ಬಲಿ ಪೂಜೆ ಅಂದ ತಕ್ಷಣ, ಯಾವುದೋ ಒಂದು ಪುಣ್ಯ ಕ್ಷೇತ್ರಕ್ಕೆ ತೆರಳಿ ಅಲ್ಲಿ ಸಾಮೂಹಿಕವಾಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇವೆ ಅಂತಾರೆ. ಅದರೆ ಆ ರೀತಿ ಪೂಜೆ ಮಾಡಿಸಿಕೊಂಡರೆ ಫಲಿತಾಂಶ ಸಿಗುವುದು ಕಡಿಮೆ. ಸಮಸ್ಯೆ ಕಡಿಮೆ ಇದ್ದವರು ಹೀಗೆ ಮಾಡಿಸಿದ್ದಲ್ಲಿ ಅಡ್ಡಿ ಇಲ್ಲ. ಆದರೆ ಸಮಸ್ಯೆ ದೊಡ್ಡದಿದ್ದಲ್ಲಿ ಪ್ರತ್ಯೇಕವಾಗಿ ಆಶ್ಲೇಷ ಬಲಿ ಮಾಡಿಸಿದರೆ ಶೀಘ್ರ ಫಲ ಸಿಗುತ್ತದೆ.

ಸರ್ಪ ಶಾಂತಿ ಹೋಮ ವಿಧಾನ
ಮುಂದಿನದು ಸರ್ಪಶಾಂತಿ ಹೋಮ. ತುಪ್ಪ, ಸಮಿಧೆ ಹಾಗೂ ಹಾಲಿನ ಪಾಯಸ, ಕರಿ ಎಳ್ಳಿಗೆ ಜೇನುತುಪ್ಪ, ಕಲ್ಲುಸಕ್ಕರೆ, ಬೆಲ್ಲ ಮಿಶ್ರಣ ಮಾಡಿದ್ದನ್ನು ಆಹುತಿ ನೀಡಬೇಕಾಗುತ್ತದೆ. ಸರ್ಪ ಸೂಕ್ತ, ನಾಗ ಮೂಲ ಮಂತ್ರ, ಸರ್ಪ ಗಾಯತ್ರಿ ಮಂತ್ರದಿಂದ ಶಾಂತಿ ಮಾಡಬೇಕಾಗುತ್ತದೆ. ಆ ನಂತರ ಪೂಜೆ ಮಾಡಿದ ಪುರೋಹಿತರಿಗೆ ಕರ್ತೃಗಳಿಂದ ತೊಗರಿ ಬೇಳೆ ದಾನ ಕೊಡಿಸಲಾಗುತ್ತದೆ.

ಕಾಳಸರ್ಪ ದೋಷ ಹೆಚ್ಚು ಪರಿಣಾಮಕಾರಿ
ಸರ್ಪ ದೋಷದ ಪೈಕಿಯೇ ಕಾಳಸರ್ಪ ಯೋಗ ಹೆಚ್ಚು ಪರಿಣಾಮಕಾರಿಯಾದದ್ದು. ಆ ಬಗ್ಗೆ ತಿಳಿಸುವುದಕ್ಕೆ ಒಂದು ಪ್ರತ್ಯೇಕ ಲೇಖನವೇ ಬರೆಯಬೇಕಾಗುತ್ತದೆ. ಜಾತಕದಲ್ಲಿ ರಾಹು ಹಾಗೂ ಕೇತು ಮಧ್ಯೆ ರವಿ- ಚಂದ್ರರೂ ಒಳಗೊಂಡಂತೆ ಏಳು ಗ್ರಹಗಳು ಇದ್ದರೆ ಒಂದೇ ಕಡೆ ಬಂದಿಯಾದಂತೆ ಇದ್ದರೆ ಕಾಳಸರ್ಪ ಯೋಗ ಎನ್ನುತ್ತೇವೆ.
ಸಂತಾನ, ವಿದ್ಯೆ, ಉದ್ಯೋಗ, ಸಂಪತ್ತಿನ ವಿಚಾರದಲ್ಲಿ ತೊಂದರೆಯಾಗುತ್ತದೆ. ಜಾತಕದಲ್ಲಿ ಕಾಳಸರ್ಪ ಯೋಗ ಇದ್ದರೆ ಕಾಳಹಸ್ತಿಗೆ ಹೋಗಿ ಎನ್ನುತ್ತಾರೆ. ಆದರೆ ಕಾಳ ಸರ್ಪ ಯೋಗಕ್ಕೂ ಕಾಳಹಸ್ತಿಗೂ ಯಾವುದೇ ಸಂಬಂಧ ಇಲ್ಲ. ಕಾಳಸರ್ಪ ದೋಷ ಪರಿಹಾರ ಶಾಂತಿ ಹವನ ಅಂತ ಇದೆ. ಅದನ್ನು ಮಾಡಿಸಬೇಕು.

ಘಟ ಕಾಳಸರ್ಪ ದೋಷ ಮತ್ತೊಂದು ಬಗೆ
ಇದರಲ್ಲೇ ಘಟ ಕಾಳಸರ್ಪ ದೋಷ ಅಂತ ಕೂಡ ಇದೆ. ಹೀಗಂದರೆ ಜಾತಕದಲ್ಲಿ ರಾಹು-ಕೇತುಗಳ ಮಧ್ಯೆ ಏಳರ ಬದಲು ಆರು ಗ್ರಹಗಳಿದ್ದು, ಪಾಪ ಗ್ರಹವೊಂದು ಹೊರಗೆ ಇದ್ದರೆ ಅದನ್ನು ಘಟ ಕಾಳಸರ್ಪ ದೋಷ ಎನ್ನಲಾಗುತ್ತದೆ. ಇದಕ್ಕೆ ಘಟ ಕಾಳಸರ್ಪ ದೋಷ ಶಾಂತಿಯನ್ನು ಮಾಡಿಸಬೇಕಾಗುತ್ತದೆ.

ಜನ್ಮ ದಿನಾಂಕ, ಜಾತಕ ಇಲ್ಲದಿದ್ದಲ್ಲಿ ಹೀಗೆ ಮಾಡಬಹುದು
ಜಾತಕದಲ್ಲಿ ಸರ್ಪ ದೋಷ ಇದೆ ಎಂದು ಗೊತ್ತಾದರೆ ಸಾಲದು. ಅದು ಯಾವ ಬಗೆಯ ಸರ್ಪ ದೋಷ, ಅದಕ್ಕೆ ಮಾಡಬೇಕಾದ ಪರಿಹಾರ ಯಾವ ರೀತಿಯದು ಎಂದು ತಿಳಿದುಕೊಳ್ಳುವುದು ಮುಖ್ಯ. ಯಾವುದೋ ದೋಷಕ್ಕೆ ಮತ್ಯಾವುದೋ ಪರಿಹಾರ ಮಾಡುವುದು ಪ್ರಯೋಜನವಿಲ್ಲ. ಇನ್ನು ಜಾತಕ ಇಲ್ಲದವರು ಕೂಡ ಸರ್ಪದೋಷ ಇರುವ ಬಗ್ಗೆ ತಿಳಿದುಕೊಳ್ಳುವ ವಿಧಾನಳಿವೆ. ಹೆಚ್ಚಿನ ಮಾಹಿತಿಗೆ ಪಂಡಿತ್ ವಿಠ್ಠಲ ಭಟ್ ಮೊಬೈಲ್ ಸಂಖ್ಯೆ 9845682380 ಸಂಪರ್ಕಿಸಿ.












Click it and Unblock the Notifications