ಕಾರ್ತೀಕ ಅಮಾವಾಸ್ಯೆ ಶನೈಶ್ಚರ ಪೂಜೆ ವಿಪರೀತ ವಿಶೇಷ, ಸಿಕ್ಕಾಪಟ್ಟೆ ಫಲ
Recommended Video
ಶನೈಶ್ಚರ ಆರಾಧನೆ ಬಹಳ ಮಹತ್ವದಿಂದ ಕೂಡಿದ ವಿಚಾರ. ಆದುದರಿಂದ ಆರಾಧನೆ ಮಾಡುವಾಗ ಸೂಕ್ತ ಹಾಗೂ ಹೆಚ್ಚಿನ ವಿಶೇಷ ಫಲ ನೀಡುವ ದಿನಗಳನ್ನು ನೋಡಿ ಮಾಡುವುದು ಉತ್ತಮ. ಹೀಗಿರುವಾಗ ಅಂಥ ಉತ್ತಮ ಹಾಗೂ ಶ್ರೇಷ್ಠ ದಿನಗಳಲ್ಲಿ ಕಾರ್ತೀಕ ಮಾಸದ ಅಮಾವಾಸ್ಯೆ ಅಂದರೆ ನಾಳೆಯ (ನವೆಂಬರ್ 18, ಶನಿವಾರ) ದಿನ ಸಹ ಒಂದು.
ಕಾರ್ತೀಕ ಮಾಸ ಅಂದರೆ ಅದು ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವ ಮಾಸ. ಆದುದರಿಂದ ಇಲ್ಲಿ ದೀಪ ಹಚ್ಚುವ ಪದ್ಧತಿಗೆ ವಿಶೇಷ ಮಹತ್ವ ಇದೆ. ಈ ಕಾರ್ತೀಕ ಅಮಾವಾಸ್ಯೆಯಂದು ಮಾಡುವ ಶನಿ ದೇವರ ಆರಾಧನೆಯಲ್ಲಿ ಸಹ ದೀಪಕ್ಕೆ ವಿಶೇಷವಾದ ಪಾತ್ರ ಇದೆ.
ಶನಿಯಿಂದ ಆಗುವ ತೊಂದರೆಗೆ ಮಾಡಿಸಬೇಕಾದ ಶಾಂತಿ, ಪರಿಹಾರ ಮಾರ್ಗ
ಆದ್ದರಿಂದ ಹತ್ತಿರದ ಶನೈಶ್ಚರ ದೇಗುಲಕ್ಕೆ ಹೋಗಿ ಅಲ್ಲಿ ಸ್ವಾಮಿಗೆ ಪರಿಶುದ್ಧವಾದ (ಅಡುಗೆ ದರ್ಜೆ) ಎಳ್ಳೆಣ್ಣೆಯಲ್ಲಿ ಅಭಿಷೇಕ ಮಾಡಿಸಿ ಹಾಗೂ ಬಿಲ್ವಪತ್ರೆಯಲ್ಲಿ ಶನಿಯ ಅಷ್ಟೋತ್ತರ ಪಠಿಸುತ್ತಾ ಅರ್ಚನೆ ಮಾಡಿಸಬೇಕು. ಆ ನಂತರ ಶನೈಶ್ಚರನಿಗೆ ಕರಿ ಎಳ್ಳು- ಬೆಲ್ಲ ಮಿಶ್ರಣ ಮಾಡಿ, ತಯಾರು ಮಾಡಿದ ಭಕ್ಷ್ಯ ನೈವೇದ್ಯ ಮಾಡಿಸಬೇಕು.
ಎಳ್ಳೆಣ್ಣೆಯಲ್ಲಿ ಮುಖ ನೋಡಿ
ಆ ನಂತರ ಕಬ್ಬಿಣದ ಬಾಣಲೆಯಲ್ಲಿ ಪರಿಶುದ್ಧ ಎಳ್ಳೆಣ್ಣೆ ಹಾಕಿ, ಅದರಲ್ಲಿ ನಿಮ್ಮ ಮುಖ ನೋಡಿಕೊಂಡು ಬತ್ತಿ ಹಾಕಿ, ದೀಪ ಹಚ್ಚಬೇಕು. ಇಲ್ಲಿ ಆ ದೇಗುಲದ ಅರ್ಚಕರಿಗೆ ಅಥವಾ ಶನೈಶ್ಚರ ವಿಗ್ರಹಕ್ಕೆ ನಿತ್ಯ ಉಡಿಸಲು ನೀಲಿ ಬಣ್ಣದ ವಸ್ತ್ರ ಸಮರ್ಪಣೆ ಮಾಡುವುದು ವಿಶೇಷ ಫಲ ನೀಡುತ್ತದೆ.
ಎಲ್ಲರೂ ಪೂಜೆ ಮಾಡಿದರೆ ಒಳಿತು
ಈ ವಿಚಾರಕ್ಕೆ ಬಂದಾಗ ಯಾವುದೇ ಭೇದ ಇಲ್ಲದೆ ಎಲ್ಲರೂ ಈ ಪೂಜೆ ಮಾಡಿಸುವುದು ಉತ್ತಮ. ಕಾರಣ ಏನೆಂದರೆ, ಎಷ್ಟೋ ಜನಕ್ಕೆ ತಮ್ಮ ಜಾತಕದ ಪ್ರಕಾರ ಯಾವ ಗ್ರಹದ ಮಹಾ ದಶೆ ಅಥವಾ ಯಾವ ಗ್ರಹದ ಭುಕ್ತಿ ನಡೆಯುತ್ತಿದೆ ಎನ್ನುವುದೇ ತಿಳಿದಿರುವುದಿಲ್ಲ. ನಿಮಗೆ ತಿಳಿದಿರದ ಕಾರಣ ಆ ಗ್ರಹದ ಪ್ರಭಾವ ಆಗುವುದಿಲ್ಲ ಎಂದರ್ಥ ಅಲ್ಲ.
ಐದು ರಾಶಿಯವರಿಗೆ ಕಡ್ಡಾಯ
ನಿಮಗೆ ತಿಳಿದಿರದೆ ಜಾತಕದ ಪ್ರಕಾರ ಶನಿ ಮಹಾ ದಶೆ ಅಥವಾ ಶನಿ ಭುಕ್ತಿ ನಡೆಯುತ್ತಿದ್ದಲ್ಲಿ ಈ ವಿಧದ ಪೂಜೆ ಮಾಡಿಸುವುದು ಉತ್ತಮ. ಇನ್ನು ರಾಶಿಗಳ ಪ್ರಕಾರ ನೋಡಿದಾಗ ವೃಷಭ, ಸಿಂಹ, ಕನ್ಯಾ, ವೃಶ್ಚಿಕ, ಧನು ಹಾಗೂ ಮಕರ ಈ ಐದು ರಾಶಿಯವರು ತಪ್ಪದೇ ಕಡ್ಡಾಯವಾಗಿ ಈ ಪೂಜೆ ಮಾಡಿಸುವುದರಿಂದ ಶನಿ ಗ್ರಹದ ದುಷ್ಪ್ರಭಾವ ಕಡಿಮೆ ಆಗುವುದರಲ್ಲಿ ಸಂಶಯ ಇಲ್ಲ.
ಮನೆಯಲ್ಲಾದರೂ ಪೂಜೆ ಮಾಡಿ
ಇನ್ನು ದೇಗುಲಕ್ಕೆ ಹೋಗಿ ಈ ವಿಧದಲ್ಲಿ ಪೂಜೆ ಮಾಡಿಸಲು ಆಗದವರು ಮನೆಯಲ್ಲಿ ಸಗಣಿ ತಟ್ಟಿಕೊಂಡು, ಅದರ ಮೇಲೆ ಮಣ್ಣಿನ ಹಣತೆ ಇಟ್ಟು, ಅದರಲ್ಲಿ ಎಳ್ಳೆಣ್ಣೆ ಹಾಕಿ, ಹತ್ತಿಯ ಮೂರು ಬತ್ತಿ ಸೇರಿಸಿ ಒಂದು ಬತ್ತಿ ಮಾಡಿ. ಅದರಲ್ಲಿ ಹಾಕಿ, ದೇವರ ಮನೆಯಲ್ಲಿ ದೀಪ ಹಚ್ಚಿ ಸ್ವಾಮಿಗೆ ಪ್ರಾರ್ಥಿಸುವುದು ಉತ್ತಮ. ಶುದ್ಧ ದೇಸಿ ಹಸುವಿಗೆ ಅಕ್ಕಿ- ಬೆಲ್ಲ ಹಾಗೂ ಬಾಳೆಹಣ್ಣು ತಿನ್ನಿಸಿ, ಪೂಜಿಸುವುದನ್ನು ಮರೆಯದಿರಿ