2015 ಸಂಕ್ರಮಣ ರಾಶಿಫಲ : ಯಾರಿಗೆ ಲಾಭ, ನಷ್ಟ
2015ರ ಮಕರ ಸಂಕ್ರಮಣವು ಕರ್ಕ, ಸಿಂಹ, ಕನ್ಯಾ ರಾಶಿಯವರಿಗೆ ಭಾರಿ ಲಾಭ ತರಲಿದೆ. 2015ರ ಜನವರಿ 14ರಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಮಣವೆಂದು ಕರೆಯುವುದು ಸಂಪ್ರದಾಯ. ಅಂದೇ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುತ್ತದೆ.
ಅಂದು ಇಡೀ ದೇಶಾದ್ಯಂತ ನದಿ, ಸಮುದ್ರ ತೀರಗಳಲ್ಲಿ ಭಕ್ತರ ಮಹಾಪೂರವೇ ಸೇರಿರುತ್ತದೆ. ತಲೆಗೆ ಮತ್ತು ದೇಹದೆಲ್ಲ ಭಾಗಕ್ಕೆ ಕರಿಎಳ್ಳನ್ನು ಹಚ್ಚಿ ಉಜ್ಜಿಕೊಂಡು ಸ್ನಾನ ಮಾಡುವ ಪದ್ಧತಿ ಋಷಿ, ಮುನಿಗಳು ಮತ್ತು ರಾಜ, ಮಹಾರಾಜರ ಕಾಲದಿಂದಲೇ ನಡೆದು ಬಂದಿದೆ. ಆ ಪದ್ಧತಿ ಈಗಿನ ರಾಜಕೀಯ ಕಾಲದಲ್ಲಿ ಇಂದಿಗೂ ಮುಂದುವರೆದಿದೆ, ಮುಂದುವರೆಯುತ್ತದೆ. ಇಂತಹ ಹಲವಾರು ಪದ್ಧತಿಗಳೇ ನಮ್ಮ ಹಿಂದೂ ಧರ್ಮದ ವಿಶೇಷ.
ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ಬರುವ ಎಳ್ಳ ಅಮವಾಸ್ಯೆಯಿಂದ ಸಂಕ್ರಮಣದವರೆಗೆ ಸ್ವಲ್ಪ ಕೆಟ್ಟ ದಿನಗಳೆಂದೇ ಕರೆಯಲಾಗುತ್ತದೆ. ಈ ಸಮಯದಲ್ಲಿ ಕೆಟ್ಟ ಸುದ್ದಿಗಳು ಬಹಳಷ್ಟು ಕೇಳಿ ಬರುತ್ತವೆ. ಆದರೆ ವಿಧಿಯಾಟ ತಪ್ಪಿಸಲಾಗಲ್ಲ. ಎಲ್ಲವೂ ದೇವರಾಟ ಎನ್ನಬೇಕಾಗುತ್ತದೆ. [ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]
ಈ ಬಾರಿಯ ಸಂಕ್ರಮಣವು ಕೆಲವು ರಾಶಿಯವರಿಗೆ ಶುಭವಾದರೆ, ಇನ್ನು ಕೆಲವರಿಗೆ ಅಶುಭ ಫಲ ನೀಡುತ್ತದೆ. ಈ ಫಲವು 6 ತಿಂಗಳೊಳಗೆ ಫಲಿಸುತ್ತದೆ. ಆದರೆ ಕೆಟ್ಟ ಫಲವಿದ್ದವರು ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ, ಶುಭ ಫಲವಿದ್ದ ರಾಶಿಯವರು ಬೀಗಬೇಕಾಗಿಲ್ಲ. ಏಕೆಂದರೆ ಕಾಲಚಕ್ರದಲ್ಲಿರುವ ನಾವು ಕೆಟ್ಟದ್ದನ್ನು ಮತ್ತು ಶುಭಫಲವನ್ನು ಎದುರಿಸಲೇಬೇಕಾಗುತ್ತದೆ.
ಈ ಸಂಕ್ರಮಣವು ಪುಷ್ಯ, ಆಶ್ಲೇಷಾ, ಮಘಾ, ಪೂರ್ವಫಾಲ್ಗುಣಿ, ಉತ್ತರಫಾಲ್ಗುಣಿ ಮತ್ತು ಹಸ್ತಾ ನಕ್ಷತ್ರದವರಿಗೆ ತುಂಬಾ ಶುಭಫಲವನ್ನು ನೀಡುತ್ತದೆ.
ಆದರೆ ಮೃಗಶಿರಾ, ಆರಿದ್ರಾ, ಪುನರ್ವಸು, ಧನಿಷ್ಠಾ, ಶತತಾರಾ, ಪೂರ್ವಭಾದ್ರಪದಾ ನಕ್ಷತ್ರದವರಿಗೆ ನಷ್ಟವೇ ಹೆಚ್ಚಾಗುತ್ತದೆ. ಈ ಬಗ್ಗೆ ಜಾಗರೂಕತೆಯಿಂದಿರುವುದು ಈ ನಕ್ಷತ್ರದವರಿಗೆ ಒಳ್ಳೆಯದು.
ಅನುರಾಧಾ, ಜ್ಯೇಷ್ಠಾ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣಾ ನಕ್ಷತ್ರದವರಿಗೆ ಅತ್ಯುತ್ತಮ ಫಲವಿದೆ. ಈ ನಕ್ಷತ್ರದವರು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಲಾಭ ಮಾಡಿಕೊಳ್ಳಬಹುದು.
ಚಿತ್ತಾ, ಸ್ವಾತಿ, ವಿಶಾಖಾ ನಕ್ಷತ್ರದವರಿಗೆ ದೂರ ಪ್ರಯಾಣದಿಂದ ಲಾಭವಿರುವುದರಿಂದ ಈ ಬಗ್ಗೆ ಯೋಚನೆ ಮಾಡಿಕೊಳ್ಳಬೇಕು.
ಇನ್ನು ಉತ್ತರಭಾದ್ರಪದ, ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ನಕ್ಷತ್ರದವರಿಗೆ ಶುಭಫಲವಿದೆ. ಆದರೆ ಸಿಕ್ಕಾಪಟ್ಟೆಯಂತೂ ಅಲ್ಲ, ಇದ್ದುದರಲ್ಲಿಯೇ ಸುಧಾರಿಸಿಕೊಳ್ಳುವಷ್ಟು ಶುಭಫಲವಿರುತ್ತದೆ.
ಮಕರ ಸಂಕ್ರಮಣದಂದು ಸಾಧ್ಯವಾದರೆ ಹತ್ತಿರದ ನದಿ, ಸಮುದ್ರ ತೀರಗಳಲ್ಲಿ ಎಳ್ಳಿನ ಸ್ನಾನ, ಎಳ್ಳಿನ ಸೇವನೆ ಮಾಡಿ ಶುಭಫಲವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕೆಟ್ಟಫಲವನ್ನು ತಡೆಯುವ ಶಕ್ತಿ ಪಡೆದುಕೊಳ್ಳಬಹುದು. ಇದು ಅವರವರ ನಕ್ಷತ್ರದವರಿಗೆ ಬಿಟ್ಟದ್ದು.
ಮುಂಚಿತವಾಗಿ ಹೊಸ ವರ್ಷವು ಎಲ್ಲರಿಗೂ ಶುಭವಾಗಲಿ.