ಮೇಷ : ಈಗಿಂದ್ಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೇಷ ರಾಶಿಯವರಿಗೆ ಈಗ ಸ್ವಲ್ಪ ಹಣದ ಅಡಚಣೆಯು ಆಗುತ್ತಿರುವುದರಿಂದ ಸಾಲಕ್ಕೆ ಕೈಯೊಡ್ಡಬೇಕೆನಿಸುತ್ತದೆ. ಹಳೆ ಸಾಲ ತೀರಿಸದೆ ಮನಸ್ಸು ಚಡಪಡಿಸುತ್ತಿರುತ್ತದೆ. ಹೊಸತನ್ನು ಮಾಡಲು ಗುದ್ದಾಡಬೇಕಾಗುತ್ತದೆ. ನ್ಯಾಯಕ್ಕಾಗಿ ಹೋರಾಟ ಈ ಸಮಯದಲ್ಲಿ ಸ್ವಲ್ಪ ವಿಳಂಬವೆನಿಸುತ್ತದೆ. ದೇಹದಲ್ಲಿಯೂ ಆವಾಗಾವಾಗ ತ್ರಾಸ ಅನಿಸುತ್ತಿರುತ್ತದೆ. ಹೊಸ ಪರಿಚಯದವರೊಂದಿಗೆ ವ್ಯವಹಾರ ಲೀಗಲ್ ಆಗಿದ್ದರೆ ಮಾತ್ರ ಮಾಡಿ.
ಎಂದಿನಂತೆ ಸಂಸಾರದಲ್ಲಿ ಎಲ್ಲರಿಗೂ ಬರುವ ಕಿರಿಕಿರಿಗಳೆ ಬರುವುದರಿಂದ ಗಟ್ಟಿ ಮನಸ್ಸಿನಿಂದಿರುವುದನ್ನು ಕಲಿತುಕೊಳ್ಳಬೇಕು. ಮತ್ತೆ ಮುಂದೆ ಉತ್ತಮ ಸಮಯ ಕಾದಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಜೀವನದಲ್ಲಿ ಮಜವಾಗಿದ್ದವರು ಮಲಗುವಾಗ ಬೆಳಗ್ಗೆ ಬೇಗ ಆಗಲಿ ಮತ್ತೆ ಮಜಾ ಮಾಡಬೇಕು ನಾನು ಅಂತಿರ್ತಾರೆ. ಆದರೆ ಕಷ್ಟವಿದ್ದವರು ಮಲಗುವಾಗ ಬೆಳಗ್ಗೆ ಯಾಕಾದರೂ ಆಗುತ್ತೆ ಅಂತಾ ಚಿಂತಿಸುತ್ತಿರುತ್ತಾರೆ.
ಹೀಗಾಗಿ ಕಷ್ಟ-ಸುಖ ಎರಡನ್ನೂ ಒಂದೇ ರೀತಿಯಲ್ಲಿ ತೆಗೆದುಕೊಳ್ಳುವಂತಹ ಮನಸ್ಸನ್ನು ರೂಪಿಸಿಕೊಂಡು ಮನೆಮಂದಿಗೆಲ್ಲ ಮನಸ್ಸಿನ ಬಗ್ಗೆ ತಿಳಿ ಹೇಳಬೇಕು. ಯಾಕೆಂದರೆ ಎಲ್ಲಿಯೂ ಅರ್ಥಗರ್ಭಿತವಾಗಿ ಮನಸ್ಸನ್ನು ಹೇಗಿಟ್ಟುಕೊಳ್ಳಬೇಕು, ಜೀವನದಲ್ಲಿ ಹೇಗಿರಬೇಕು ಎಂಬುದರ ಪಾಠ ಪುಗ್ಸಟ್ಟೆ ಕೊಡುವವರಿಲ್ಲ. ಆದರೆ ಜೀವನದಲ್ಲಿ ಏಟು ತಿಂದು ಪಾಠ ಕಲಿತವರು ತಮ್ಮ ಕುಟುಂಬ ಸದಸ್ಯರಿಗೆ ಹೇಳಿ ಕೊಡಬೇಕು. ಆದರೆ ಕಲಿಸುವ ಪದ್ಧತಿ ಇದೆ ಆ ರೀತಿ ಕಲಿಸಬೇಕು. ಹೇಗೆಗೋ ಹೇಳಿದರೆ ಅರ್ಥವಾಗಲ್ಲ ಜೀವನದ ಪಾಠಗಳು ಏಷ್ಟೋ ಹಠಮಾರಿಗಳಿಗೆ!
ಏಳರಲ್ಲಿರುವ ಶನಿದೇವನು ಮೇಷ ರಾಶಿಗೆ ವಿಘ್ನಗಳನ್ನು ತರುತ್ತಿರುತ್ತಾನೆ. ಯಾವುದಕ್ಕೂ ಶನಿದೇವನ ಕೃಪಾಕಟಾಕ್ಷ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶನಿದೇವನು ಮೇಷ ರಾಶಿಗೆ ಅಷ್ಟಮದವನಾಗಲಿದ್ದಾನೆ. ಆಗ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವವಿರುವುದರಿಂದ, ಈಗಿನಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಲಾರಂಭಿಸಬೇಕು. ಮನಸ್ಸು ಮತ್ತು ದೇಹ ಗಟ್ಟಿಮುಟ್ಟಾಗಿಸಿಕೊಳ್ಳಲು ಸೂರ್ಯನಮಸ್ಕಾರ ಪ್ರತಿನಿತ್ಯ ಮರೆಯದೇ ಮಾಡಬೇಕು. ಏನೂ ಪರಿಹಾರ ಮಾಡಿಕೊಳ್ಳದೆ ದೈವವನ್ನು ದೂಷಿಸಬೇಡಿ. ದೇವರು ಮೆಚ್ಚುವಂತಹ ಕೆಲಸ ಮಾಡುತ್ತಲಿರಿ. ಕೆಲವರು ಏನೇ ಮಾಡಿದರೂ ದೇವರು ಮೆಚ್ಚುತ್ತಾನೆಂದುಕೊಂಡು ಏನೇನೋ ಮಾಡಿ ಹುಚ್ಚಪ್ಯಾಲಿಗಳಾಗಿ ಶಿಕ್ಷೆ ಅನುಭವಿಸುತ್ತಾರೆ.
ಅಷ್ಟಮ ಶನಿ ಅಪಘಾತ ಮಾಡಿಸಿ ಆಸ್ಪತ್ರೆಗೆ ನೋಡಲು ಯಾರ್ಯಾರು ಬರುತ್ತಾರೆ ಎಂಬುದನ್ನು ಕೂಡ ತೋರಿಸುತ್ತಾನೆ! ಆದ್ದರಿಂದ ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಲು ಈಗಿನಿಂದಲೇ ರೂಢಿ ಮಾಡಿಕೊಳ್ಳಬೇಕು. ಅನವಶ್ಯಕವಾಗಿ ಅವರಿವರ ಜತೆ, ಅಂತಿಂಥ ಸ್ಥಳಗಳಿಗೆ ಹೋಗದೆ ಜಾಗೃತೆಯಲ್ಲಿರಬೇಕು ಎಂದಿಗೂ. ಮನೆಮಂದಿಯೆಲ್ಲ ಈ ಕುರಿತು ನಿರ್ಧಾರ ಮಾಡಿ ಒಬ್ಬರಿಗೊಬ್ಬರು ಕಣ್ಗಾವಲಾಗಿರಬೇಕು. ನಮ್ಮವರನ್ನು ನಾವೇ ನೋಡಿಕೊಳ್ಳಬೇಕು. ನೀವೆಷ್ಟೇ ಬಿಜಿಯಿರಲಿ, ನಿಮ್ಮ ತಲೆ ಬಿಸಿಯಾಗಬಾರದೆಂದರೆ ಈ ರೀತಿ ಜೀವನ ಸಾಗಿಸಬೇಕು.
ಯಾರಿಗೆ ಭಯ ಹೆಚ್ಚಿರುತ್ತದೆಯೋ ಅಂಥವರು ಈ ನವರಾತ್ರಿ ಸಮಯದಲ್ಲಿ ದೇವಿಯ ದರ್ಶನ ಮಾಡುವುದು ಅತ್ಯಂತ ಶ್ರೇಷ್ಠ. ಕೆಲವರು ಚಿಕ್ಕಪುಟ್ಟ ವಿಷಯಗಳಿಗೂ ವಿಪರೀತ ಹೆದರಿ ಬೆವರುತ್ತಿರುತ್ತಾರೆ. ಇಂಥಹವರ ಕೈ ಕಾಲು ಕೂಡ ನಡುಗುತ್ತ ಎದೆ ಡಬಡಬ ಹೊಡೆದುಕೊಳ್ಳುತ್ತಿರುತ್ತದೆ. ಹೆದರಿಕೆ ನಿಮಗೆ ಬರಲೇಬಾರದೆಂದರೆ ಮೊದಲು ದೇವಿಯ ಕೃಪೆ ಪಡೆದುಕೊಳ್ಳಬೇಕು. ದೇವಿಯ ಆಶೀರ್ವಾದವಿದ್ದರೆ ಭಯವೆನ್ನುವುದು ನಿಮ್ಮಲ್ಲಿಂದ ಓಡಿ ಹೋಗುತ್ತದೆ ನೆನಪಿಟ್ಟುಕೊಳ್ಳಿ.
ವಿದ್ಯೆ ಕಲಿತ ಮೇಲೆ ನೌಕರಿ ಚಿಂತೆ, ನೌಕರಿ ಸಿಕ್ಕಮೇಲೆ ಮದುವೆ ಚಿಂತೆ, ಮದುವೆಯಾದ ಮೇಲೆ ಹೊಂದಾಣಿಕೆ ಚಿಂತೆ, ಹೊಂದಾಣಿಕೆಯಾದ ಮೇಲೆ ಮಕ್ಕಳ ಚಿಂತೆ, ಮಕ್ಕಳಾದ ಮೇಲೆ ಅವರ ಚಿಂತೆ. ವಯಸ್ಸಾದ ಮೇಲೆ ಆರೋಗ್ಯದ ಚಿಂತೆ. ಒಟ್ಟಿನಲ್ಲಿ ಯಾವುದರಲ್ಲೂ ತೃಪ್ತಿ ಇರಲ್ಲ ಜೀವಕ್ಕೆ. ಆದರೆ ಜಾತಕದ ಮೂಲಕ ನಮ್ಮ ಭಾಗ್ಯದಲ್ಲಿ ಏನೇನು, ಎಷ್ಟಿದೆ ಎಂದು ತಿಳಿದುಕೊಂಡು "ಪಾಲಿಗೆ ಬಂದದ್ದು ಪಂಚಾಮೃತ" ಎಂದುಕೊಂಡವರು ಸುಖೀಜೀವನ ನಡೆಸುತ್ತಾರೆ. ಅಂದಂಗೆ, ಶನಿದೇವನ ಕಾಡಾಟದ ಪರಿಹಾರ ಪಡೆದುಕೊಳ್ಳಲು ಕೂಡ ಕೆಲವರಿಗೆ ಮನಸ್ಸಾಗುವುದಿಲ್ಲ. ನೋವು ಅನುಭವಿಸುವುದೇ ಅವರ ಮನಸ್ಸಿಗೆ ಇಷ್ಟ.
"ಶನಿಶಕ್ತಿ ; ವೃಷಭ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆಯ ನೈಋತ್ಯ ಕೋಣೆಯಲ್ಲಿ ಹಿರಿಯರು ಮಲಗಲಿ.
ಶನಿದೇವನ ಕೃಪೆಗೆ : ಅಮವಾಸ್ಯೆ ಹಿಂದೆ ಮತ್ತು ಮುಂದಿನ ದಿನಗಳಲ್ಲಿ ಮನಸ್ಸು ಸ್ವಲ್ಪ ಗೊಂದಲಮಯವಾಗುತ್ತದೆ. ಆದ್ದರಿಂದ ಅಮವಾಸ್ಯೆಯಂದು ಶಿವನ ದೇವಾಲಯದಲ್ಲಿ ಕನಿಷ್ಠ 15 ನಿಮಿಷ ಭಕ್ತಿಯಿಂದ ಶಿವಧ್ಯಾನ ಮಾಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)