ಮಳೆಗಾಲದಲ್ಲಿ ನಿಮ್ಮ ರಾಶಿಗೆ ಯಾವ ಆರೋಗ್ಯ ಸಮಸ್ಯೆ? ಜ್ಯೋತಿಷ್ಯ ಹೇಳುವ ಎಚ್ಚರಿಕೆಗಳು ಇಲ್ಲಿವೆ!
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಜನ್ಮರಾಶಿಯವರಿಗೂ ತಮ್ಮದೇ ಆದ ಅಧಿದೇವತೆ ಗ್ರಹ ಇದೆ. ಪ್ರತಿ ಗ್ರಹದ ಗುಣವೂ ಬೇರೆ ಆದುದರಿಂದ, ಮಳೆಗಾಲಕ್ಕೆ ಇವರು ಸ್ಪಂದಿಸುವ ರೀತಿಯೂ ಬೇರೆಯಾಗಿರುತ್ತದೆ. ಮಳೆಗಾಲದಲ್ಲಿ ಪ್ರತಿಯೊಬ್ಬರೂ ತಮ್ಮ ದೇಹದ ಕೆಲವು ಭಾಗಗಳ ಬಗ್ಗೆ, ತಮ್ಮ ಚಟುವಟಿಕೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಉದಾಹರಣೆಗೆ ಮಂಗಳ ತಂಪಿನ ಗ್ರಹ. ತಂಪು ವಸ್ತುಗಳನ್ನು ಹೆಚ್ಚು ಸೇವಿಸುವಂತಿಲ್ಲ- ಹೀಗೆ. ಮಳೆಗಾಲದಲ್ಲಿ ಒಂದೊಂದು ರಾಶಿಗೆ ಒಂದೊಂದು ಬಗೆಯ ಅನಾರೋಗ್ಯ ಕಾಡಬಹುದು. ಇದೊಂದು ಸಾಮಾನ್ಯ ಜ್ಯೋತಿಷ್ಯ ಗೈಡ್. ಹಾಗಾದರೆ, ಯಾವ ರಾಶಿಯವರಿಗೆ ಏನು ಬಾಧೆ, ತಡೆಯುವುದು ಹೇಗೆ, ನೋಡೋಣ.
ಮೇಷ
ರಾಶಿ ಗ್ರಹ ಮಂಗಳ. ಮಳೆಗಾದಲ್ಲಿ ಸಂಭವಿಸಬಹುದಾದ ಸಮಸ್ಯೆ ಜ್ವರ, ತಲೆನೋವು, ವೈರಲ್ ಸೋಂಕು. ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ. ಬಿಸಿ ನೀರು ಕುಡಿಯಿರಿ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ. ಕುದಿಸಿದ ಅಥವಾ ಶುದ್ಧೀಕರಿಸಿದ ನೀರನ್ನೇ ಕುಡಿಯಿರಿ. ಶುಂಠಿ- ಕರಿಮೆಣಸಿನ ಕಷಾಯ ಸೇವನೆ ರೂಢಿ ಮಾಡಿಕೊಳ್ಳಿ.

ವೃಷಭ
ರಾಶಿಗ್ರಹ ಶುಕ್ರ. ಸಂಭವಿಸಬಹುದಾದ ಸಮಸ್ಯೆ ಗಂಟಲು ನೋವು, ಶೀತ, ಕೆಮ್ಮು. ತಡೆಯಲು ತಣ್ಣನೆಯ ಆಹಾರ ಕಡಿಮೆ ಮಾಡಿ. ಅರಿಶಿನ ಹಾಲು ಅಥವಾ ಬಿಸಿ ಕಷಾಯ ಸೇವಿಸಿ. ರಸ್ತೆಬದಿ ಮತ್ತು ಹಳಸಿದ ಆಹಾರ ಸೇವಿಸಬೇಡಿ. ಫ್ರಿಜ್ನಲ್ಲಿಟ್ಟ ಆಹಾರ ಸೇವನೆ ತಪ್ಪಿಸಿ. ಹೆಚ್ಚು ಹುದುಗು ಬರಿಸಿದ ಆಹಾರ ಸೇವನೆ ಬೇಡ. ಗಂಟಲು ಆಗಾಗ ಗಾರ್ಗಲ್ ಮಾಡಿಕೊಳ್ಳಿ.
ಮಿಥುನ
ರಾಶಿಗ್ರಹ ಬುಧ. ಸಂಭವಿಸಬಹುದಾದ ಸಮಸ್ಯೆ: ಉಸಿರಾಟದ ತೊಂದರೆ, ಅಲರ್ಜಿ. ಧೂಳು ಮತ್ತು ತೇವಾಂಶ ಹೆಚ್ಚಿರುವ ಸ್ಥಳಗಳಿಂದ ದೂರವಿರಿ. ಉಸಿರಾಟದ ವ್ಯಾಯಾಮ ಮಾಡಿ. ಮಳೆಯಲ್ಲಿ ನೆನೆದರೆ ತಕ್ಷಣ ಒಣ ಬಟ್ಟೆ ಧರಿಸಿ. ಹಸಿ ಬಟ್ಟೆಗಳನ್ನು ಒಣಗಿಸದೇ ಮೈಗೆ ಧರಿಸಬೇಡಿ.
ಕಟಕ
ರಾಶಿಗ್ರಹ ಚಂದ್ರ. ಸಂಭವಿಸಬಹುದಾದ ಸಮಸ್ಯೆ ಹೊಟ್ಟೆ ತೊಂದರೆ, ಅಜೀರ್ಣ, ಆಹಾರ ವಿಷಬಾಧೆ. ರಸ್ತೆಬದಿ ಆಹಾರ ಸೇವನೆ ತಪ್ಪಿಸಿ. ಕುದಿಸಿದ ನೀರನ್ನೇ ಕುಡಿಯಿರಿ. ತಣ್ಣೀರನ್ನು ಕುಡಯಬೇಡಿ. ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಬಾರಿ ಹಬೆ ತೆಗೆದುಕೊಳ್ಳಿ. ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಬಿಸಿ ನೀರು ಕುಡಿಯಿರಿ.
ಸಿಂಹ
ರಾಶಿಗ್ರಹ ಸೂರ್ಯ. ಸಂಭವಿಸಬಹುದಾದ ಸಮಸ್ಯೆ ದೇಹದ ಆಯಾಸ, ವೈರಲ್ ಜ್ವರ. ತಡೆಯಲು ಸಾಕಷ್ಟು ನಿದ್ರೆ ಮಾಡಿ. ಪೌಷ್ಟಿಕ ಆಹಾರ ಸೇವಿಸಿ. ಮೊಳಕೆ ಕಾಳು ಸೇವನೆ ಈಗ ಬೇಡ. ಪ್ರೊಟೀನ್ ಇರಲಿ. ಹದವಾಗಿ ಬಿಸಿಯಾದ ಆಹಾರ ಉತ್ತಮ. ಹೋಟೆಲ್ ತಿಂಡಿ ಸೇವನೆ ಆದಷ್ಟೂ ತಪ್ಪಿಸಿ.
ಕನ್ಯಾ
ರಾಶಿಗ್ರಹ ಬುಧ. ಸಂಭವಿಸಬಹುದಾದ ಅನಾರೋಗ್ಯ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್, ಹೊಟ್ಟೆ ಉರಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ. ಎಣ್ಣೆಯುಕ್ತ ಆಹಾರ ಕಡಿಮೆ ಮಾಡಿ. ಆಲ್ಕೋಹಾಲ್ ಸೇನೆ ಕಡಿಮೆ ಮಾಡಿ. ಕರಿಮೆಣಸು, ಶುಂಠಿ ಹಾಕಿದ ಕಷಾಯ ಸೇವಿಸಿ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಎರಡು ಎಸಳು ಬೆಳ್ಳುಳ್ಳಿ ಸೇವಿಸಿ ನೀರು ಕುಡಿಯಿರಿ.
ತುಲಾ
ರಾಶಿಗ್ರಹ ಶುಕ್ರ. ಸಂಭವಿಸಬಹುದಾದ ಸಮಸ್ಯೆ ಚರ್ಮದ ಅಲರ್ಜಿ, ಫಂಗಲ್ ಸೋಂಕು. ದೇಹವನ್ನು ಬೆಚ್ಚಗೆ, ಒಣದಾಗಿಸಿ ಇಟ್ಟುಕೊಳ್ಳಿ. ಒದ್ದೆ ಬಟ್ಟೆ ಧರಿಸಬೇಡಿ. ಮಳೆಗೆ ನೆನೆದರೂ ಮನೆಗೆ ಬಂದ ಕೂಡಲೆ ಬಿಸಿ ನೀರು ಸ್ನಾನ ಮಾಡಿ. ಕಷಾಯ ಸೇವನೆ ದಿನನಿತ್ಯದ ಅಭ್ಯಾಸ ಮಾಡಿಕೊಳ್ಳಿ. ಐಸ್ಕ್ರೀಮ್ ಸೇವನೆ ತಪ್ಪಿಸಿ. ಸೇವಿಸಿದರೆ ಮಲಗುವ ಮುನ್ನ ಉಪ್ಪುನೀರಿನಿಂದ ಗಾರ್ಗಲ್ ಮಾಡಿ.
ವೃಶ್ಚಿಕ
ರಾಶಿಗ್ರಹ ಮಂಗಳ. ಸಂಭವಿಸಬಹುದಾದ ಸಮಸ್ಯೆ ಮೂತ್ರನಾಳದ ಸೋಂಕು, ದೇಹದ ಉರಿ. ಸಾಕಷ್ಟು ನೀರು ಕುಡಿಯಿರಿ. ಹದವಾದ ಬಿಸಿ ನೀರೇ ಇರಲಿ. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ. ಒದ್ದೆ ಬಟ್ಟೆ, ಹಳೆಯದಾದ ಬಟ್ಟೆ ಧರಿಸಬೇಡಿ. ಗೋಡೌನ್ಗಳಿಗೆ ಹೋಗುವುದು ತಪ್ಪಿಸಿ. ಮಳೆಯಲ್ಲಿ ಡ್ರೈವಿಂಗ್ ಬೇಡ.
ಧನು
ರಾಶಿಗ್ರಹ ಗುರು. ಸಂಭವಿಸಬಹುದಾದ ಸಮಸ್ಯೆ ಕೀಲು ನೋವು, ಸ್ನಾಯು ನೋವು. ತಪ್ಪಿಸಲು ಲಘು ವ್ಯಾಯಾಮ ಮಾಡಿ. ದೇಹವನ್ನು ಬೆಚ್ಚಗಿಡಿ. ಕೈಗಳನ್ನು ಆಗಾಗ ತೊಳೆದು ವೈಯಕ್ತಿಕ ಸ್ವಚ್ಛತೆ ಕಾಪಾಡಿ. ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ. ಮಲಗುವ ಮುನ್ನ, ಬೆಳಗ್ಗೆ ಎದ್ದ ಬಳಿಕ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡಿ.
ಮಕರ
ರಾಶಿಗ್ರಹ ಶನಿ. ಸಂಭವಿಸಬಹುದಾದ ಸಮಸ್ಯೆ ಮೊಣಕಾಲು ಮತ್ತು ಎಲುಬಿನ ನೋವು. ಇದನ್ನು ತಡೆಯಲು ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಿ. ಒದ್ದೆಯಾದ ನೆಲದಲ್ಲಿ ಹೆಚ್ಚು ಹೊತ್ತು ಇರಬೇಡಿ. ಮನೆಯಲ್ಲೂ ಗ್ರಾನೈಟ್ ಪ್ಲೋರಿಂಗ್ ಇದ್ದರೆ ಪಾದರಕ್ಷೆ ಧರಿಸಿಯೇ ಓಡಾಡಿ. ಚಳಿಯಲ್ಲಿ ಹೊರಗೆ ಹೋಗಬೇಡಿ.
ಕುಂಭ
ರಾಶಿಗ್ರಹ ಶನಿ . ಸಂಭವಿಸಬಹುದಾದ ಅನಾರೋಗ್ಯ ಸಮಸ್ಯೆ ಕಾಲುಗಳಲ್ಲಿ ನೋವು, ರಕ್ತಸಂಚಾರದ ಸಮಸ್ಯೆಗಳು. ನಿಯಮಿತವಾಗಿ ನಡೆಯಿರಿ. ಹೆಚ್ಚು ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಳ್ಳಬೇಡಿ. ಕಚೇರಿಯಲ್ಲೂ ಆಗಾಗ ಎದ್ದು ಐದು ನಿಮಿಷ ವಾಕಿಂಗ್ ಮಾಡಿ. ಬಿಸಿನೀರು ಪಕ್ಕದಲ್ಲೇ ಇರಲಿ. ಕಾಲು ಗಂಟುಗಳಿಗೆ ಆಗಾಗ ಹದ ಬೆಚ್ಚಗಿನ ಶಾಖ ಕೊಡಿ.
ಮೀನ
ರಾಶಿಗ್ರಹ ಗುರು. ಸಂಭವಿಸಬಹುದಾದ ಸಮಸ್ಯೆ ಕಾಲಿನ ಫಂಗಲ್ ಸೋಂಕು, ಶೀತ. ಪಾದಗಳನ್ನು ಸ್ವಚ್ಛವಾಗಿ ಮತ್ತು ಒಣಗಿಸಿ ಇಡಿ. ಒದ್ದೆಯಾದ ಪಾದರಕ್ಷೆಗಳನ್ನು ಬಳಸಬೇಡಿ. ಶೂ, ಸಾಕ್ಸ್ ಬೆಚ್ಚಗಿರಲಿ. ತುರಿಕೆಗೆ ಶೀಘ್ರ ಮದ್ದು ತೆಗೆದುಕೊಳ್ಳಿ. ಜ್ವರ, ತೀವ್ರ ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
(ಬರಹ: ಭವಾನಿ ಭಟ್)












Click it and Unblock the Notifications