ಜ್ಯೋತಿಷಿಯ ಪ್ರಕಾರ ಓಮಿಕ್ರಾನ್ ಎಷ್ಟು ಪ್ರಬಲವಾಗಿದೆ ಗೊತ್ತಾ?
ಜೋಹಾನ್ಸ್ಬರ್ಗ್ ಡಿಸೆಂಬರ್ 2: ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕೊರೊನಾ ರೂಪಾಂತರ ಓಮಿಕ್ರಾನ್ ವೈರಸ್ ಯಾವ್ಯಾವ ದೇಶಕ್ಕೆ ಕಾಲಿಟ್ಟು ಯಾವ ಅವಾಂತರ ಸೃಷ್ಟಿಸುತ್ತದೆ ಎನ್ನುವ ಭೀತಿ ಹುಟ್ಟಿಸಿದೆ. ಈಗಾಗಲೇ ದಕ್ಷಿಣ ಆಫ್ರಿಕಾದ ಒಟ್ಟು 9 ಪ್ರದೇಶಗಳ ಪೈಕಿ ಐದು ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಯಾಗಿದೆ. ಮಾತ್ರವಲ್ಲದೇ ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಇಸ್ರೇಲ್, ಇಟಲಿ, ನೈಜೀರಿಯಾ ಮತ್ತು ಪೋರ್ಚುಗಲ್ ಸೇರಿದಂತೆ 24 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಓಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆ ಆಗಿವೆ. ಅಮೆರಿಕಾದಲ್ಲೂ ಇದೀಗ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ಒಬ್ಬರಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ.
B.1.1.529 ಅಥವಾ ಓಮಿಕ್ರಾನ್ (Omicron) ಕೊರೊನಾದ ಇತ್ತೀಚಿನ ರೂಪಾಂತರವಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಓಮಿಕ್ರಾನ್ ಕಾಳಜಿಯ ರೂಪಾಂತರವೆಂದು ಗೊತ್ತುಪಡಿಸಿದೆ. ಡೆಲ್ಟಾದಂತಹ ಇತರ ರೂಪಾಂತರಗಳಿಗೆ ಹೋಲಿಸಿದರೆ ಓಮಿಕ್ರಾನ್ ಹೆಚ್ಚು ಹರಡುತ್ತದೆಯೇ ಅಥವಾ ಅದರ ನಿಖರವಾದ ತೀವ್ರತೆಯ ಮಟ್ಟ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಪ್ರಕರಣಗಳ ಸಂಖ್ಯೆ ಪ್ರಪಂಚದಾದ್ಯಂತ ಎಚ್ಚರಿಕೆಯನ್ನು ನೀಡಿದೆ. ಕೊರೊನಾವೈರಸ್ನ ಹೊಸ ರೂಪಾಂತರ ಓಮಿಕ್ರಾನ್ ಎಷ್ಟು ಪ್ರಬಲವಾಗಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ವಿವರಿಸಿದ್ದಾರೆ. ಭವಿಷ್ಯಶಾಸ್ತ್ರಜ್ಞ ಮತ್ತು ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅವರು ಓಮಿಕ್ರಾನ್ ಎಷ್ಟು ಪ್ರಬಲ ಎನ್ನುವುದಕ್ಕೆ ಉತ್ತರಿಸಿದ್ದಾರೆ. ಈ ಹಿಂದೆ ಇವರು 2020 ರಲ್ಲಿ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳು ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ದಾಖಲಾಗುತ್ತವೆ ಎಂದು ಸರಿಯಾಗಿ ಭವಿಷ್ಯ ನುಡಿದಿದ್ದರು.
ಗ್ರಹಗಳ ಸಂಯೋಜನೆ ಮತ್ತು ಅವರ ಸ್ವಂತ ಕಲಿಕೆಯೊಂದಿಗೆ ಸಂಯೋಜಿಸಲ್ಪಟ್ಟ ಜ್ಯೋತಿಷ್ಯ ಲೆಕ್ಕಾಚಾರಗಳ ಆಧಾರದ ಮೇಲೆ, "ಕೋವಿಡ್ನ ಮೂರನೇ ತರಂಗವು ಈಗಾಗಲೇ ಪ್ರಾರಂಭವಾಗಿದೆ. ಆದರೂ ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ" ಎಂದು ಭವಿಷ್ಯವಾಣಿಯು ಹೇಳುತ್ತದೆ. "ನಾವು ಡಿಸೆಂಬರ್ ಅಂತ್ಯದ ವೇಳೆಗೆ, ಹೊಸ ರೂಪಾಂತರದ ಪ್ರಭಾವವು ತೀವ್ರಗೊಳ್ಳಲಿದೆ ಮತ್ತು ಮುಂದಿನ ವರ್ಷ ಮಾರ್ಚ್ ಅಂತ್ಯದವರೆಗೆ ಇದೇ ರೀತಿ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.
ಈ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗವು ತಂದಿಟ್ಟ ಅಪಾಯದಂತೆಯೇ ಮುಂದಿನ ಪರಿಸ್ಥಿತಿಯು ಇದಕ್ಕೆ ಹೋಲುತ್ತದೆಯೇ ಎಂದು ಕೇಳಿದಾಗ, ಜ್ಯೋತಿಷಿಗಳು ಕೊಂಚ ಸಮಾಧಾನದ ನಿಟ್ಟುಸಿರು ಬಿಡುವಂತ ವಿಚಾರವನ್ನು ಹೇಳಿದ್ದಾರೆ. "2021 ರಲ್ಲಿ ನಾವು ಕಂಡ ವಿನಾಶಕ್ಕೆ ಅನೇಕ ಅಂಶಗಳು ಕಾರಣವಾಗಿದೆ. ಅದರಲ್ಲಿ ಪ್ರಮುಖವಾದದ್ದು ಸನ್ನದ್ಧತೆ ಮತ್ತು ವ್ಯಾಕ್ಸಿನೇಷನ್ ಕೊರತೆ. ಅದೃಷ್ಟವಶಾತ್, ಜನಸಂಖ್ಯೆಯ ಬಹುತೇಕ ಭಾಗವು ಈಗ ಲಸಿಕೆಯನ್ನು ಪಡೆಯುತ್ತಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ಮತ್ತು ಅಧಿಕಾರಿಗಳು ಪ್ರಯಾಣ ನಿರ್ದೇಶನಗಳು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಪರಿಸ್ಥಿತಿಯು ತೀವ್ರವಾಗಿ ಬದಲಾಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಎಲ್ಲಾ ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸುವ ಜವಾಬ್ದಾರಿ ಈಗ ಜನರ ಮೇಲಿದೆ" ಎಂದು ಪಂಡಿತ್ ಜಗನ್ನಾಥ್ ಗುರೂಜಿ ಹೇಳಿದ್ದಾರೆ.
ಜ್ಯೋತಿಷಿ ಮತ್ತು ಭವಿಷ್ಯವಾಣಿಯು ಹೇಳುವಂತೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ರೂಪಾಂತರಗಳು ಅಸ್ತಿತ್ವಕ್ಕೆ ಬರಲಿವೆ. ಜೊತೆಗೆ ಇವು ಪ್ರತಿಯೊಂದೂ ಮನುಕುಲದ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಹುಟ್ಟಿಕೊಳ್ಳುವ ವಿವಿಧ ಕೋವಿಡ್ ಬಹು ರೂಪಾಂತರಗಳಿಗಾಗಿ ಅನೇಕ ಹೊಸ ಲಸಿಕೆಗಳು ಮತ್ತು ಬೂಸ್ಟರ್ ಹೊಡೆತಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಜೊತೆಗೆ ಹೊಸ ರೂಪಾಂತರದ ಬಗ್ಗೆ ಮಾತನಾಡಿದ ಅವರು, ಇದು ಖಂಡಿತವಾಗಿಯೂ ನಾವು ಈಗಾಗಲೇ ಎದುರಿಸಿರುವಷ್ಟು ಮಾರಕವಲ್ಲ ಎಂದಿದ್ದಾರೆ.
Recommended Video