ವೃಷಭ ರಾಶಿಯವರಿಗೆ ಗುರು ಗ್ರಹದ ಅನುಗ್ರಹ ಹೇಗಿದೆ ಗೊತ್ತಾ?
ಮುಳುಗುತ್ತಿರುವವರಿಗೆ ಹುಲ್ಲು ಕಡ್ಡಿ ಸಿಕ್ಕರೂ ಆಸರೆ ಎಂಬ ಮಾತೊಂದಿದೆ. ಈ ಮಾತು ಸದ್ಯದ ಸನ್ನಿವೇಶಕ್ಕೆ ವೃಷಭ ರಾಶಿಯವರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ. ಇಷ್ಟು ಕಾಲ ಅಷ್ಟಮ ಶನಿ ಹಾಗೂ ಆರನೇ ಮನೆಯ ಗುರುವಿನ ಪ್ರಭಾವದಿಂದ ಬಹಳ ಸಮಸ್ಯೆ ಅನುಭವಿಸಿದ್ದೀರಿ ಅಂದರೆ, ಇದೀಗ ತುಸು ನಿರಾಳ ಆಗುವ ಸಮಯದಲ್ಲಿ ಇದ್ದೀರಿ.
ಹಾಗಂತ ಇದು ರಾತ್ರೋ ರಾತ್ರಿ ಆಗುವ ಬದಲಾವಣೆ ಅಲ್ಲ. ವೃಷಭ ರಾಶಿಯವರಿಗೆ ಅಷ್ಟಮ ಹಾಗೂ ಹನ್ನೊಂದನೇ ಸ್ಥಾನದ ಅಧಿಪತಿ ಗುರು ಗ್ರಹ. ಅಕ್ಟೋಬರ್ ಹನ್ನೊಂದನೇ ತಾರೀಕು ಗುರು ಗ್ರಹ ನಿಮ್ಮ ರಾಶಿಯಿಂದ ಏಳನೇ ಮನೆಗೆ ಪ್ರವೇಶ ಮಾಡಿದೆ. ಈ ಸ್ಥಾನವು ಕಳತ್ರ ಅಂದರೆ ಗಂಡಿಗಾದರೆ ಪತ್ನಿಯ ಬಗ್ಗೆಯೂ ಹೆಣ್ಣಿಗಾದರೂ ಪತಿಯ ವಿಚಾರವನ್ನು ವಿಶ್ಲೇಷಣೆ ಮಾಡುವ ಮನೆ ಇದು.
ಮೇಷ ರಾಶಿಯವರಿಗೆ ಗುರು, ಶನಿಯಿಂದ ಆಗುವ ಪರಿಣಾಮಗಳಿವು
ಈಗಿನ ಪರಿಸ್ಥಿತಿಯಲ್ಲಿ ಏಳನೇ ಮನೆಯ ಗುರು, ಎಂಟನೇ ಮನೆಯ ಶನಿಯ ಪ್ರಭಾವದಲ್ಲಿ ಇದ್ದೀರಿ ಎಂದರ್ಥ. ಶನಿ ಎಂಟನೇ ಸ್ಥಾನದಲ್ಲಿದ್ದರೆ ಆರೋಗ್ಯ, ಆಯುಷ್ಯದ ಬಗ್ಗೆಯೇ ಹೆಚ್ಚಿನ ಫಲ ನೀಡುತ್ತಾನೆ. ಇಷ್ಟು ಕಾಲ ನೀವು ಅನಾರೋಗ್ಯ ಸಮಸ್ಯೆಗಳು, ತೀರ ಗಂಭೀರವಾದ ಆರೋಗ್ಯದ ಸವಾಲುಗಳನ್ನು ಎದುರಿಸಿದ್ದರೆ ಅದೇ ಕಾರಣಕ್ಕೆ. ಇನ್ನು ಮುಂದೆ ನಿಮಗೆ ಗುರುವಿನ ರಕ್ಷಾ ಕವಚ ಸಿಕ್ಕಂತಾಗಿದೆ.
ಗುರುವಿನ ಅನುಗ್ರಹಕ್ಕಾಗಿ ಸ್ವಲ್ಪ ಕಾಯಬೇಕು
ಅಷ್ಟಮ ಶನಿ ಪ್ರಭಾವದಿಂದ ವೃಷಭ ರಾಶಿಯವರು ಅನುಭವಿಸಿದ ಕಷ್ಟ, ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆಗಳು ನಿಧಾನಕ್ಕೆ ಕರಗುತ್ತವೆ. ಅಷ್ಟಮ ಶನಿಯ ದುಷ್ಪ್ರಭಾವದಿಂದ ನಿಮ್ಮನ್ನು ಕಾಪಾಡಿಕೊಳ್ಳಬಹುದು. ಎಲ್ಲ ರೀತಿ ಕಷ್ಟ, ದುಃಖ, ಸಮಸ್ಯೆಯಿಂದ ಹೊರಬರಬಹುದು. ಹಾಗಂತ ಗುರು ಬಲ ಬಂದ ಮೇಲೂ ಅದರ ಒಳ್ಳೆ ಪರಿಣಾಮಗಳು ಆಗುತ್ತಿಲ್ಲ ಅನ್ನಬೇಡಿ. ಏಕೆಂದರೆ ಒಂದೆರಡು ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಸಪ್ತಮ ಗುರು ಒಳ್ಳೆ ಫಲಗಳನ್ನು ನೀಡಲು ಆರಂಭಿಸಿ, ಅದರ ಅನುಭವ ನಿಮಗಾಗಲು ಒಂದಿಷ್ಟು ತಾಳ್ಮೆಯಿಂದ ಕಾಯಬೇಕು.
ವಿದೇಶ ವ್ಯಾಸಂಗ- ಉದ್ಯೋಗಕ್ಕೆ ಉತ್ತಮ ಅವಕಾಶ
ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಾ ಇರುವವರಿಗೆ ಅಥವಾ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಇರುವವರಿಗೆ ಉತ್ತಮ ಅವಕಾಶಗಳಿವೆ. ದೇವ ಗುರು ಬೃಹಸ್ಪತಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆ ಅನುಗ್ರಹ ಮಾಡುತ್ತಾನೆ. ಅದೇ ರೀತಿ ವಿದೇಶದಲ್ಲಿ ವ್ಯಾಸಂಗ- ಉದ್ಯೋಗ ಮಾಡಬೇಕು ಎಂದುಕೊಂಡು, ಕಳೆದ ಒಂದು-ಒಂದೂವರೆ ವರ್ಷದಿಂದ ನಾನಾ ಸವಾಲುಗಳನ್ನು ಎದುರಿಸಿ, ಶ್ರಮ ಪಡುತ್ತಿದ್ದರೂ ಗುರಿ ತಲುಪಲು ಆಗುತ್ತಿಲ್ಲ ಎಂಬ ಕೊರಗಿದ್ದರೆ ಅದು ನಿವಾರಣೆ ಆಗುತ್ತದೆ. ನಿಮಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ಅದನ್ನು ಸದುಪಯೋಗ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ.
ವಿವಾಹಕ್ಕೆ ಸೂಕ್ತ ಸಮಯವಿದು
ಮೊದಲೇ ಹೇಳಿದ ಹಾಗೆ ಏಳನೇ ಮನೆಯು ಕಳತ್ರ ಸ್ಥಾನ. ಸಪ್ತಮದ ಗುರುವಿನಿಂದಾಗಿ ಅವಿವಾಹಿತರಿಗೆ ವಿವಾಹದ ಯೋಗ ಇದೆ. ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಅಥವಾ ಸ್ನೇಹಿತರು-ಸಂಬಂಧಿಕರು ಉತ್ತಮವಾದ ಕಡೆ ಸಂಬಂಧಗಳನ್ನು ಸೂಚಿಸುತ್ತಾರೆ. ಅದಕ್ಕೆ ನೀವು ಹೇಗೆ ಸ್ಪಂದಿಸುತ್ತೀರಿ ಎಂಬುದು ಬಹಳ ಮುಖ್ಯ. ಏಕೆಂದರೆ, ಇನ್ನೊಂದು ವರ್ಷದ ನಂತರ ಗುರು ಬಲ ಹೋಗಿಬಿಡುತ್ತದೆ. ಅದಾದ ಒಂದು ವರ್ಷದ ನಂತರ ಮತ್ತೆ ಒಂಬತ್ತನೇ ಮನೆಗೆ ಗುರು ಬಂದಾಗಲೇ ಅನುಗ್ರಹ ಆಗಬೇಕು. ಆದರೆ ಆಗ ಗುರುವಿಗೆ ನೀಚ ಸ್ಥಾನವಾದ ಮಕರ ರಾಶಿಯಲ್ಲಿ ಪ್ರವೇಶ ಆಗುತ್ತದೆ. ಅಲ್ಲಿ ಒಳ್ಳೆ ಫಲ ನೀಡುವುದಿಲ್ಲ. ಗುರು ಹನ್ನೊಂದನೇ ಮನೆಗೆ ಬರಲಿ ಎಂದು ಕಾಯಬೇಕಾಗುತ್ತದೆ. ಅದಕ್ಕೆ ಮತ್ತೆ ಎರಡು ವರ್ಷ ಕಾಯಬೇಕು. ಹಾಗೆ ಆಗದಿರಲಿ. ಈ ವರ್ಷ ವಿವಾಹಕ್ಕೆ ಉತ್ತಮ ಸಂಬಂಧ ಬಂದುಬಿಟ್ಟರೆ ಮದುವೆ ಆಗುವುದು ಒಳ್ಳೆಯದು.
ವೈವಾಹಿಕ ಜೀವನದಲ್ಲಿ ರಾಜೀ ಸಂಧಾನ ಮಾಡಿಸುತ್ತಾರೆ
ಇನ್ನು ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ವಿವಾಹ ವಿಚ್ಛೇದನದವರೆಗೆ ಬಂದ ದಂಪತಿ ಮಧ್ಯೆ ಹಿರಿಯರು- ಅನುಭವಿಗಳು ಸಂಧಾನ ಮಾಡಿಸುತ್ತಾರೆ. ಅದಕ್ಕೆ ನೀವು ತೆರೆದ ಮನಸ್ಸಿನಿಂದ ಇರಬೇಕು. ಮಾರ್ಚ್ ಕೊನೆಗೆ ಏಪ್ರಿಲ್ ನಲ್ಲಿ ಇಪ್ಪತ್ತು-ಇಪತ್ಮೂರು ದಿನ ಸ್ವಲ್ಪ ಎಚ್ಚರವಾಗಿ ಇರಬೇಕು. ಆ ಅವಧಿಯಲ್ಲಿ ಗುರು ಕೆಲ ದಿನಗಳ ಮಟ್ಟಿಗೆ ಅಷ್ಟಮ ಸ್ಥಾನಕ್ಕೆ ಪ್ರವೇಶಿಸುತ್ತದೆ. ಏನೇನು ತೊಂದರೆಗಳು ಬಾಕಿ ಇದ್ದವೋ ಅದರಲ್ಲೂ ಕಾನೂನು, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಯ್ಯೋ, ಎಲ್ಲ ಸರಿಹೋಗುತ್ತದೆ ಅಂದುಕೊಳ್ಳುತ್ತಿದ್ದಾಗಲೇ ಇದೆಲ್ಲಿಯ ಹಣೆಬರಹ ಎಂದು ಬೇಸರಿಸಿಕೊಳ್ಳಬೇಡಿ. ಅದು ಕೆಲ ದಿನಗಳು ಮಾತ್ರ. 2019ರ ನವೆಂಬರ್ 5ನೇ ತಾರೀಕಿನ ತನಕ ಗುರುವಿನ ಅನುಗ್ರಹ ಕವಚದಂತೆ ನಿಮ್ಮನ್ನು ರಕ್ಷಿಸುತ್ತದೆ.