ವೃಶ್ಚಿಕ ರಾಶಿಯವರು ಸಿಟ್ಟು ಬಿಟ್ಟರೆ ಬಚಾವಾಗ್ತೀರಿ, ಶನಿ ಆರಾಧನೆ ಮುಖ್ಯ
ವೃಶ್ಚಿಕ ರಾಶಿಯವರಿಗೆ ಕಳೆದ ತಿಂಗಳು ಜನ್ಮ ರಾಶಿಗೆ ಗುರು ಗ್ರಹದ ಪ್ರವೇಶ ಆಗಿದೆ. ಜನ್ಮ ಸ್ಥಾನದ ಗುರು, ಎರಡನೇ ಮನೆಯಲ್ಲಿರುವ ಶನಿ ಹಾಗೂ ಇತರ ಗ್ರಹಗಳ ಪ್ರಭಾವ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲ ಇರುತ್ತದೆ. ಅದಕ್ಕೆ ಉತ್ತರವಾಗಿ ಈ ಲೇಖನ ನಿಮ್ಮ ಎದುರಿಗೆ ಇದೆ. ಒಮ್ಮೆ ಗಮನ ಇಟ್ಟು ಓದಿಕೊಂಡು ಬಿಡಿ.
ಹೌದು, ಇಲ್ಲಿಂದಲೇ ಆರಂಭಿಸುವುದು ಉತ್ತಮ. ಇಷ್ಟು ಕಾಲ ಎಲ್ಲೋ ಅಲೆದಾಡುತ್ತಿದ್ದ ಮನಸ್ಸನ್ನು ಕಟ್ಟಿ ಹಾಕಿ, ಏಕಾಗ್ರತೆ ರೂಢಿಸಿಕೊಳ್ಳಬೇಕಾದ ಸಮಯ ಇದು. ಮಾಡಿಕೊಂಡ ಸಾಲಗಳು, ಸೋಮಾರಿತನ ಮಾಡಿ ನಿರ್ಲಕ್ಷ್ಯ ಮಾಡಿದ್ದ ಕೆಲವು ಮುಖ್ಯ ಅಂಶಗಳು, ನಾಳೆ ಮಾಡಿದರಾಯಿತು ಎಂಬ ಧೋರಣೆ ಕಾರಣಕ್ಕೆ ಕಣ್ಣೆದುರೇ ವ್ಯರ್ಥವಾಗಿ ಬಿದ್ದಿರುವ ಬಂಡವಾಳ ಹಾಕಿದ ವಸ್ತು ಎಲ್ಲದರ ಕಡೆಗೂ ಒಮ್ಮೆ ಗಮನ ಹರಿಸಿ.
ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?
ಅಲ್ಪ-ಸ್ವಲ್ಪ ಆರೋಗ್ಯ ಸಮಸ್ಯೆಯನ್ನೂ ದೊಡ್ಡದು ಮಾಡುವ ನಿಮ್ಮ ಮನಸಿಗೆ ಸಾಂತ್ವನ ಹೇಳುವುದು ಈಗ ಬಹಳ ಮುಖ್ಯ. ಚಿಂತೆಗಳೆಲ್ಲ ಒಟ್ಟಿಗೆ ಮುತ್ತಿಕೊಂಡಾಗ 'ಸ್ತ್ರೀ' ರೂಪದಲ್ಲಿ ಒಂದು ಸಂತೈಕೆ ನಿಮ್ಮ ಪಾಲಿಗೆ ದೊರೆಯುತ್ತದೆ. ಅದು ತಾಯಿ ಅಥವಾ ತಾಯಿ ಸಮಾನರು, ಪತ್ನಿ, ಸಹೋದ್ಯೋಗಿ, ಶಿಕ್ಷಕಿ, ಗೆಳತಿ, ಪ್ರೇಯಸಿ ಹೀಗೆ ಯಾರು ಬೇಕಾದರೂ ಆಗಬಹುದು. ನಿಮ್ಮ ಬಗ್ಗೆ ಕಾಳಜಿ ಮಾಡಲು ಹೆಣ್ಣು ಜೀವವೊಂದರ ಆಸರೆ ದೊರೆಯುತ್ತದೆ. ಆ ಬಂಧ ಗಟ್ಟಿ ಆಗುತ್ತದೆ.
ಸುಲಭ ಮಾರ್ಗದಲ್ಲಿ ಹಣ ಮಾಡುವ ಯೋಚನೆ ಸಲ್ಲದು
ನಿಮ್ಮ ರಾಶಿಯವರಿಗೆ ಸುಲಭ ಮಾರ್ಗದಲ್ಲಿ ಹಣ ಮಾಡಲು ಮನಸಾಗುತ್ತದೆ. ಅದಕ್ಕಾಗಿ ಈವರೆಗೆ ನೀವು ತುಳಿಯದ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. ಅದರಲ್ಲೂ ಸಟ್ಟಾ ವ್ಯಾಪಾರ, ಅಧಿಕ ಬಡ್ಡಿಗೆ ಸಾಲ ನೀಡುವುದು ಇತ್ಯಾದಿ ವಿಚಾರಗಳ ಕಡೆಗೆ ಯೋಚನೆ ಆರಂಭಿಸುತ್ತೀರಿ. ಆ ಪೈಕಿ ಬಂದ ಹಣದಲ್ಲಿ ಅಲ್ಪ ಪ್ರಮಾಣದ ದಾನ-ಧರ್ಮವನ್ನೂ ಮಾಡುತ್ತೀರಿ. ಆದರೆ ಮನಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಆಸ್ತಿ ಪಾಲು ಎಂಬ ವಿಚಾರ ಮುನ್ನೆಲೆಗೆ ಬಂದರೆ ಅವರ ನಿರ್ಧಾರದಿಂದ ಬೇಸರ ಮಾಡಿಕೊಳ್ಳುವ ಸಾಧ್ಯತೆ ಇದೆ. ಆ ಕಾರಣಕ್ಕೆ ಅವರ ಜತೆ ಜಗಳ ಆಡುವುದು, ಬೇಸರ ಮಾಡಿಕೊಳ್ಳುವುದು ಸರಿಯಲ್ಲ. ಪಿತ್ರಾರ್ಜಿತವಾಗಿ ಬಂದ ಆಸ್ತಿಯು ವ್ಯಾಜ್ಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದ್ದು, ಮೇಲ್ನೋಟಕ್ಕೆ ನೀವೇ ಗೆದ್ದುಬಿಡುವಂತೆ ಕಂಡರೂ ಅದು ಬಹಳ ಕಾಲ ಎಳೆದು, ನಿಮಗೆ ನಷ್ಟ ತರಬಹುದು. ಆದ್ದರಿಂದ ಸಂಧಾನವೇ ಉತ್ತಮ.
ಸ್ಥಳ ಬದಲಾವಣೆ ಮಾಡುವ ಸಾಧ್ಯತೆ ಇದೆ
ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕೋರ್ಸ್ ಮಾಡುವ ಸಾಧ್ಯತೆಗಳಿವೆ. ಅಕೌಂಟೆಂಟ್ ಗಳಿಗೆ, ವಕೀಲರಿಗೆ, ವೈದ್ಯರಿಗೆ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ವೃತ್ತಿಪರ ಬದುಕಿನ ಬದಲಾವಣೆ ಬಗ್ಗೆ ಗಂಭೀರವಾಗಿ ಆಲೋಚಿಸಿ, ಪ್ರಮುಖವಾದ ನಿರ್ಧಾರ ಕೈಗೊಳ್ಳುತ್ತೀರಿ. ವಿದೇಶದಲ್ಲಿ ವ್ಯಾಸಂಗ ಅಥವಾ ಉದ್ಯೋಗ ಮಾಡುವ ಅವಕಾಶ ಸಿಕ್ಕರೆ ಪೂರ್ವಾಪರ ಯೋಚಿಸಿ, ತೀರ್ಮಾನ ಕೈಗೊಳ್ಳಿ. ಜಾತಕ ಪರಿಶೀಲನೆ ನಂತರವೇ ಮುಂದುವರಿಯಿರಿ. ಪುರುಷರು ಪ್ರೀತಿ-ಪ್ರೇಮಕ್ಕೆ ಬೀಳುವ ಸಾಧ್ಯತೆಗಳಿವೆ. ಮಹಿಳೆಯರಿಗೆ ತಾಯಿಯೊಂದಿಗೆ ಮನಸ್ತಾಪ ಆಗಿದ್ದರೆ ಅದು ಸುಧಾರಣೆ ಆಗುವ ಸಮಯ ಇದು. ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ಸಾಲ ಮಾಡಿದ್ದೀನಿ ಎಂದು ಚಿಂತಿಸುತ್ತಿದ್ದರೆ ಇನ್ನು ಚಿಂತೆಯ ಅಗತ್ಯ ಇಲ್ಲ. ಖರ್ಚಿನ ವೆಚ್ಚದಲ್ಲಿ ಚೆನ್ನಾಗಿ ಯೋಜನೆ ರೂಪಿಸಿಕೊಳ್ಳುತ್ತೀರಿ. ಅದರಿಂದ ಆತ್ಮವಿಶ್ವಾಸ ಮೂಡುತ್ತದೆ.
ಔಷಧ- ವೈದ್ಯರ ಬದಲಾವಣೆಗೆ ಮುನ್ನ ಚಿಂತಿಸಿ
ಆರೋಗ್ಯ ವಿಚಾರ ಒಂದಿಷ್ಟು ಚಿಂತೆಗೆ ಕಾರಣ ಆಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಮಧುಮೇಹ, ರಕ್ತದೊತ್ತಡ, ಡಿಪ್ರೆಶನ್, ಆಸಿಡಿಟಿ ಸಮಸ್ಯೆಗಳಿಗೆ ಔಷಧ ತೆಗೆದುಕೊಳ್ಳುತ್ತಿದ್ದರೆ ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ವೈದ್ಯರನ್ನು ಬದಲಿಸುವ ಮುಂಚೆ ಒಂದಕ್ಕೆ ಎರಡು ಬಾರಿ ಯೋಚಿಸಿ. ಯಾರದೋ ಮಾತು ಕೇಳಿ ದಿಢೀರನೇ ಔಷಧ ಅಥವಾ ವೈದ್ಯರ ಬದಲಾವಣೆ ಮಾಡಕೂಡದು. ಈ ಸಂದರ್ಭದಲ್ಲಿ ನಾನೇ ಸರಿ ಎಂಬ ಅಭಿಪ್ರಾಯ ಹೆಚ್ಚಾಗಿರುತ್ತದೆ. ನೀವೇ ಕೆಲವು ಮಾಹಿತಿಗಳನ್ನು ಕಣ್ತಪ್ಪಿನಿಂದ ಗಮನಿಸದೆ ಹೋಗಬಹುದು. ಆದ್ದರಿಂದ ನಾನೇ ಸರಿ ಎಂದು ವಾದ ಮಾಡುವ ಮುನ್ನ ನಿಮ್ಮ ಬಳಿ ಇರುವ ಮಾಹಿತಿ ಸರಿಯಾಗಿದೆಯಾ ಎಂದು ಪರಿಶೀಲಿಸಿ. ಪೊಲೀಸರು, ಸೈನ್ಯದಲ್ಲಿರುವವರು ಹಿರಿಯ ಅಧಿಕಾರಿಗಳ ಬಗ್ಗೆ ಮಾತನಾಡುವಾಗ ಎಚ್ಚರದಿಂದ ವರ್ತಿಸಿ. ಹಗುರ ಮಾತನಾಡಿ, ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.
ಶನಿ ಗ್ರಹದ ಆರಾಧನೆ ಮಾಡಿ
ಸಿಟ್ಟನ್ನು ಕಡಿಮೆ ಮಾಡಿಕೊಳ್ಳಿ, ಇತರರ ಬಗ್ಗೆ ಹಗುರವಾದ ಮಾತನಾಡಬೇಡಿ, ಕಳೆದ ಒಂದು ವರ್ಷ ನೀವು ಮಾಡಿದ ಹೂಡಿಕೆ, ವ್ಯವಹಾರ, ಕೊಟ್ಟಿದ್ದ ಸಾಲ ಇತ್ಯಾದಿಗಳ ಕಡೆಗೆ ಶ್ರದ್ಧೆಯಿಂದ ಗಮನ ನೀಡಿ. ಮಾನಸಿಕ ಪ್ರಶಾಂತತೆಗೆ ಹೆಚ್ಚಿನ ಒತ್ತು ನೀಡಿ. ಇವಿಷ್ಟನ್ನು ಮಾಡಿದರೆ ಈ ವರ್ಷ ನಿಮ್ಮ ಬಹುತೇಕ ಸಮಸ್ಯೆಗಳ ಜತೆಗೆ ಬದುಕುವುದು ಸಲೀಸಾಗುತ್ತದೆ. ಆದರೆ ಮಾರ್ಚ್ ಕೊನೆಗೆ ಹಾಗೂ ಏಪ್ರಿಲ್ ನಲ್ಲಿ ಇಪ್ಪತ್ತು ದಿನ ಒಂದಿಷ್ಟು ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಆ ಸಮಯದಲ್ಲಿ ನಡೆಯಬಹುದಾದ ಕೆಲವು ಅನುಕೂಲಕರ ಬೆಳವಣಿಗೆಗಳನ್ನು ನಂಬಿ, ಮತ್ತೂ ದೊಡ್ಡ ಮೊತ್ತದ ಹೂಡಿಕೆಗೆ, ಸಾಲಕ್ಕೆ ಮುಂದಾಗಬೇಡಿ. ನವಗ್ರಹ ಆರಾಧನೆ, ಅದರಲ್ಲೂ ಶನಿ ಗ್ರಹದ ಆರಾಧನೆ ಮುಖ್ಯವಾಗಿ ಮಾಡಿ.