ಸಿಂಹ ರಾಶಿಯವರ ಸ್ಥಿತಿಗೆ ಗುರು-ಶನಿಯೇ ಕಾರಣ, ಒಂದು ವರ್ಷ ಏನೇನಿದೆ?
ಸಿಂಹ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಗುರು, ಐದನೇ ಸ್ಥಾನದಲ್ಲಿ ಶನಿ ಇದೆ. ಅಕ್ಟೋಬರ್ 11ನೇ ತಾರೀಕಿನಂದು ಗುರು ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಸಿಂಹ ರಾಶಿಯವರಿಗೆ ಐದು ಹಾಗೂ ಎಂಟನೇ ಸ್ಥಾನಗಳ ಅಧಿಪತಿ ಗುರು. ಈ ಸಂಚಾರದಿಂದ ಏನೇನು ಆಗಲಿದೆ. ಯಾವ ರೀತಿಯ ಬದಲಾವಣೆ ನಿರೀಕ್ಷೆ ಮಾಡಬಹುದು?
ಗುರು ಗ್ರಹವು ಎರಡು, ಐದು, ಏಳು, ಒಂಬತ್ತು ಹಾಗೂ ಹನ್ನೊಂದನೇ ಸ್ಥಾನದಲ್ಲಿ ಸಂಚರಿಸುವಾಗ ಒಳ್ಳೆಯ ಫಲಗಳನ್ನು ನೀಡುತ್ತದೆ. ಅದು ಕೂಡ ಆಯಾ ಸ್ಥಾನದಲ್ಲಿ ಸಂಚರಿಸುವಾಗ ಕಾರಕತ್ವವನ್ನು ನೋಡಿ, ಫಲ ನುಡಿಯಬೇಕಾಗುತ್ತದೆ. ಮುಂದಿನ ವರ್ಷದ ನವೆಂಬರ್ ಐದನೇ ತಾರೀಕಿನ ತನಕ ಗುರು ಗ್ರಹ ವೃಶ್ಚಿಕ ರಾಶಿಯಲ್ಲೇ ಅಂದರೆ ನಾಲ್ಕನೇ ಮನೆಯಲ್ಲಿ ಸಂಚರಿಸುತ್ತದೆ.
ಮಿಥುನ ರಾಶಿಯವರಿಗೆ ಅದೃಷ್ಟ ಕೈ ಜಾರಿದ ಸಮಯ, ಎಚ್ಚರ ಎಚ್ಚರ!
ಇಷ್ಟು ಕಾಲ ಸೋದರ- ಸೋದರಿಯರ ಜತೆಗೆ ಮುನಿಸು, ಆರೋಗ್ಯದಲ್ಲಿ ಆಗಾಗ ಏರುಪೇರು, ತಲೆ ನೋವು, ವೃಥಾ ಅಲೆದಾಟ ಇಂಥ ಫಲಗಳನ್ನು ಅನುಭವಿಸುತ್ತಿದ್ದ ಸಿಂಹ ರಾಶಿಯವರಿಗೆ ಇನ್ನು ಒಂದು ವರ್ಷ ಗುಡ್ಡಕ್ಕೆ ಕಲ್ಲು ಹೊತ್ತಂಥ ಅನುಭವ ಆಗುತ್ತದೆ. ಗುರಿಯ ಕಡೆಗೆ ಅದ್ಯಾವ ವೇಗದಲ್ಲಿ ನೀವು ಹೆಜ್ಜೆ ಇಟ್ಟರೂ ದಾರಿಯು ಸವೆಯುವುದೇ ಇಲ್ಲ.
ಹಾಗಿದ್ದರೆ ನಾಲ್ಕನೇ ಮನೆಯ ಗುರು ಹಾಗೂ ಐದನೇ ಮನೆ ಶನಿ ಏನು ಫಲ ಕೊಡುತ್ತಾರೆ ಮುಂದೆ ನೋಡೋಣ.
ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ
ನಾಲ್ಕನೇ ಮನೆಯಲ್ಲಿ ಗುರುವು ಸಂಚರಿಸುವಾಗ ತಾಯಿಯ ಆರೋಗ್ಯದ ಬಗ್ಗೆ ಅಥವಾ ತಾಯಿಗೆ ಸಮಾನರಾದವರ ಆರೋಗ್ಯದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಮಧುಮೇಹದಂಥ ಸಮಸ್ಯೆ ಇರುವವರು ನಿಯಮಿತವಾಗಿ ವೈದ್ಯರನ್ನು ಭೇಟಿ ಆಗುವುದು ಒಳ್ಳೆಯದು. ಮಧುಮೇಹದ ಲಕ್ಷಣಗಳು ಕಂಡುಬಂದರೂ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯ ಕಂಡುಬಂದಲ್ಲಿ ತಕ್ಷಣದಿಂದಲೇ ಔಷಧ-ಪಥ್ಯವನ್ನು ಆರಂಭಿಸಿ. ವಿದ್ಯಾರ್ಥಿಗಳು ಈಗಿರುವ ಕೋರ್ಸ್ ಬದಲಾವಣೆ ಮಾಡಿಸಿಕೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸಿ. ಈಗ ತೀರ್ಮಾನಿಸಿ, ನಂತರ ಚಿಂತೆ ಮಾಡುವಂತಾಗುತ್ತದೆ.
ಮೊಸಳೆ ಗುಣದ ವ್ಯಕ್ತಿಗಳಿಂದ ದೂರವಿರಿ
ಐದನೇ ಮನೆಯಲ್ಲಿರುವ ಶನಿ ಒಳ್ಳೆಯ ಫಲ ನೀಡುವುದಿಲ್ಲ. ಮುಖ್ಯವಾಗಿ ಮಕ್ಕಳ ವಿಚಾರ, ಉದ್ಯೋಗ, ವ್ಯವಹಾರ, ವೃತ್ತಿ ಬದುಕಿನಲ್ಲಿ ಬಹಳ ಸವಾಲುಗಳು ಎದುರಾಗುತ್ತವೆ. ಯತ್ನಿಸಿದ ಕಾರ್ಯಗಳು ಅಂದುಕೊಂಡಂತೆ ಪೂರ್ಣಗೊಳ್ಳುವುದಿಲ್ಲ. ಅಗತ್ಯ ಇಲ್ಲದಿದ್ದರೂ ಸಾಲ ಮಾಡಲು ಮನಸು ಪ್ರೇರಣೆ ನೀಡುತ್ತದೆ. ಮೊಸಳೆ ಗುಣದ ವ್ಯಕ್ತಿಗಳು ಪರಿಚಯ ಆಗುತ್ತಾರೆ. ಅವರ ಮೋಸದ ಮಾತುಗಳಿಗೆ ಮರುಳಾಗಿ, ಬೇಸ್ತು ಬೀಳದಿರಿ, ಎಚ್ಚರ. ಅನಗತ್ಯ ವಿಷಯ, ವಿಚಾರ ಹಾಗೂ ವಸ್ತುಗಳಿಗೆ ಆಸಕ್ತಿ ತೋರಿಸಬೇಡಿ. ಸವಾಲೆಂದು ಪರಿಗಣಿಸಿ, ಸಾಲ ಮಾಡಿಯಾದರೂ ಖರ್ಚು ಮಾಡಿ ಇತರರಿಗೆ ನೀವು ಏನೆಂದು ಸಾಬೀತು ಪಡಿಸಲು ಹೊರಡಬೇಡಿ.
ಪ್ರೀತಿ, ದಯೆಗೆ ಮತ್ತೊಂದು ಹೆಸರೇ ಸಂಖ್ಯೆ 2ರ ವ್ಯಕ್ತಿಗಳು
ಹೊಸದಾಗಿ ವ್ಯಾಪಾರ ಆರಂಭಿಸುವ ಮುನ್ನ ಎಚ್ಚರಿಕೆಯಿಂದ ಇರಿ
ಸದ್ಯಕ್ಕೆ ಮಾಡುತ್ತಿರುವ ಉದ್ಯೋಗದಲ್ಲಿ ಒತ್ತಡ ಕಂಡುಬಂದರೆ ತಕ್ಷಣವೇ ಕೆಲಸ ಬಿಡುವ ಯೋಚನೆ ಮಾಡಬೇಡಿ. ಸೈನ್ಯ, ಪೊಲೀಸ್, ಎಚ್ ಆರ್ ಉದ್ಯೋಗಗಳಲ್ಲಿ ಇರುವವರಿಗೆ ಉತ್ತಮ ಫಲಗಳಿವೆ. ಆದರೆ ಹಣ ಮಾತ್ರ ಅನಗತ್ಯವಾಗಿಯೇ ಹೆಚ್ಚು ಖರ್ಚಾಗುತ್ತದೆ. ಹೊಸದಾಗಿ ವ್ಯಾಪಾರ ಆರಂಭಿಸುವ ಯೋಚನೆ ಇದ್ದರೆ ಇನ್ನು ಒಂದು ವರ್ಷದ ಮಟ್ಟಿಗೆ ಮುಂದಕ್ಕೆ ಹಾಕಿ. ಸ್ನೇಹಿತರು-ಸಂಬಂಧಿಕರು ವ್ಯಾಪಾರ ನಡೆಸಿಕೊಂಡು ಹೋಗಬಲ್ಲರು ಎಂಬ ಅತಿಯಾದ ವಿಶ್ವಾಸದಲ್ಲಿ ನಂಬಿ ಹಣ ಹಾಕಿದರೆ ಅದು ವಾಪಸ್ ಬರುವ ಸಾಧ್ಯತೆ ಇಲ್ಲ. ಆದ್ದರಿಂದ ಎಚ್ಚರಿಕೆಯ ಹೆಜ್ಜೆಗಳನ್ನು ಇಡಿ.
ವೇದಾಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಸ್ತ್ರ ದಾನ ಮಾಡಿ
ಗುರುವಿನ ಅನುಗ್ರಹಕ್ಕಾಗಿ ವೇದಾಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸ್ತ್ರ ದಾನ ಮಾಡಿ. ಸಾಧ್ಯವಾದರೆ ಕನಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಒಂದು ದಿನದ ಊಟಕ್ಕೆ ವ್ಯವಸ್ಥೆ ಮಾಡಿಕೊಡಿ. ಇನ್ನು ಶನಿಯ ದುಷ್ಪ್ರಭಾವ ಕಡಿಮೆ ಮಾಡಿಕೊಳ್ಳಲು ಕನಿಷ್ಠ ಮೂರು ಸಾವಿರ ಜಪ ಹಾಗೂ ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಹವನ ಮಾಡಿಸಿಕೊಳ್ಳಿ. ಇನ್ನೊಂದು ಮುಖ್ಯವಾದ ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಿ. ಇಂಥ ಗ್ರಹಗತಿಗಳ ಸಮಯದಲ್ಲಿ ಗುರು ನಿಂದನೆ ಮಾಡಿದರೆ ಕ್ರೂರ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಗುರು ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಿ.