ಪ್ರಕಾಶ್ ಅಮ್ಮಣ್ಣಾಯ ಜ್ಯೋತಿಷ್ಯ ವಿಶ್ಲೇಷಣೆ: 2020ಕ್ಕೆ ಆರ್ಥಿಕ ಹಿಂಜರಿತಕ್ಕೆ ಬೈ ಬೈ
ಒಬ್ಬೊಬ್ಬ ಆರ್ಥಿಕ ತಜ್ಞರು ಅವರ ದೃಷ್ಟಿಕೋನದ ಪ್ರಕಾರ ಭಾರತದ ಆರ್ಥಿಕತೆಯ ವಿಶ್ಲೇಷಣೆ ಮಾಡುತ್ತಾರೆ. ಇರಲಿ, ಮಾಡಲಿ. ಆದರೂ ಒಬ್ಬ ರೋಗಿಗೆ ವೈದ್ಯರು, 'ನೀನು ಇನ್ನು ಬದುಕುವುದು ಕಷ್ಟ' ಎಂದು ಹೇಳುವುದು ವೈದ್ಯ ಧರ್ಮವಾಗದು.
ನಾಳೆಯನ್ನು ಇಂದು ನಮ್ಮ ಆಲೋಚನೆಯ ಪ್ರಕಾರ ನಿರ್ಧರಿಸಿ, ಅದೇ ಪ್ರಕಾರ ನಡೆದದ್ದೂ ಇದೆ, ನಡೆಯದೇ ಇದ್ದದ್ದೂ ಇದೆ. ಹಾಗಾಗಿ ನಿಖರತೆ ಎಂಬುದು ಎಲ್ಲೂ ಇರೋದಿಲ್ಲ. ಹೀಗಿದ್ದ ಮೇಲೆ ಆರ್ಥಿಕತೆಯ ವಿಚಾರದಲ್ಲೂ ನಿರ್ಣಾಯಕ ಮಾತು ಹೇಳುವುದು ತಪ್ಪಾಗುತ್ತದೆ ಎಂಬುದು ನನ್ನ ಅನಿಸಿಕೆ.
ಒಂದು ವಾಹನವು 100 ಕಿ. ಮೀ. ವೇಗದಲ್ಲಿ ಸಾಗುತ್ತಿದ್ದದ್ದು ಒಮ್ಮೆಗೇ 60 ಕಿ. ಮೀ. ಗೆ ಇಳಿದರೆ ವಾಹನ ಕೆಟ್ಟು ಹೋಯಿತು, ಮುಂದೆ ಹೋಗಲ್ಲ ಎಂದು ಹೇಳಲಾದೀತೇ? ಅಲ್ಲಿ ಹಲವು ಕಾರಣಗಳಿರಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಲೆಕ್ಕಾಚಾರ ಪ್ರಕಾರ ಇಷ್ಟೇ ಸಮಯ ಎಂದು ನಿರ್ಧರಿಸಿದರೂ ಒಂದು ನಿಮಿಷ ಮೊದಲೇ ಹೋಗಬಹುದು ಅಥವಾ ತಡವಾಗಿಯೂ ತಲುಪಬಹುದು.
ಇದು ಚಾಲಕನ ಸ್ಥಿತಿಯನ್ನಷ್ಟೇ ಅಲ್ಲ, ಇತರ ಬಾಹ್ಯ ಅಂಶಗಳ ಮೇಲೂ ಅವಲಂಬಿತ ಆಗಿರುತ್ತದೆ. ಇನ್ನು ಯಾವುದೇ ವಿಚಾರವಾಗಲೀ ಒಂದೋ ದುಃಸ್ಥಿತಿಯೇ ಇನ್ನೊಂದು ಸುಸ್ಥಿತಿಗೆ ಒಯ್ಯಬಹುದು ಅಥವಾ ಸುಸ್ಥಿತಿಯೇ ಇನ್ನೊಂದು ದುಃಸ್ಥಿತಿಗೆ ಕಾರಣವೂ ಆಗಬಹುದು. ಇದೊಂದು ತರ್ಕ ಅಷ್ಟೇ.
ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಕಾಲದ ಮುಹೂರ್ತವನ್ನು ಆಧರಿಸಿ, ನನ್ನ ಲೇಖನ ಪ್ರಕಟವಾಗಿತ್ತು. ಈಗಿನ ದೇಶದ ಆರ್ಥಿಕ ಸವಾಲಿನ ಬಗ್ಗೆ ನನ್ನ ಅರಿವಿನ ವ್ಯಾಪ್ತಿಯಲ್ಲಿ ಒಂದು ಸೂಚನೆ ನೀಡಿದ್ದೆ. ಅದರ ಲಿಂಕ್ ಇಲ್ಲಿ ಗಮನಿಸಬಹುದು.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ನರೇಂದ್ರ ಮೋದಿ ಪ್ರಮಾಣ ವಚನದ ಮುಹೂರ್ತ ವಿಶ್ಲೇಷಣೆ
ದೇಶದ ಈಗಿನ ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬಗ್ಗೆ ಜ್ಯೋತಿಷ್ಯ ರೀತಿಯಲ್ಲಿ ವಿಶ್ಲೇಷಣೆ ಮುಂದಿಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ.
ಶನಿಯ ಪ್ರಭಾವದಿಂದ ವಿತ್ತೀಯ ಹಿನ್ನಡೆ
ಮೊದಲು ಈಗಿನ ಗೋಚಾರ ಸ್ಥಿತಿ ನೋಡೋಣ. ಆರ್ಥಿಕ ಹಿನ್ನಡೆ ಕೇವಲ ಭಾರತಕ್ಕೆ ಸಿಮಿತವಾಗಿಲ್ಲ. ವಿಶ್ವಸಂಸ್ಥೆಯೇ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವರದಿಯಾಗುತ್ತಿದೆ. ಜಗತ್ತಿನ ನಾನಾ ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುತ್ತಿವೆ. ಭಾರತವು ಇಲ್ಲಿನ ಸರ್ಕಾರದ ಕಾರಣಕ್ಕೆ ಆರ್ಥಿಕ ಸಮಸ್ಯೆ ಸುಳಿಯಲ್ಲಿದೆ ಎನ್ನುವುದು ಏಕಪಕ್ಷೀಯ ವಾದವಾದೀತು. ಇನ್ನು ಗ್ರಹ ಸ್ಥಿತಿಗಳ ಬಗ್ಗೆ ನೋಡೋಣ. ನೈಸರ್ಗಿಕ ಕುಂಡಲಿಯ ರಾಶಿ, ಲಗ್ನವು ಮೇಷ. ಈ ಮೇಷ ರಾಶಿಗೆ ವೃಶ್ಚಿಕದಲ್ಲಿ ಗುರುವಿನ ಅಷ್ಟಮ ಸಂಚಾರ. ಅವನ ದೃಷ್ಟಿ ಧನ ಸ್ಥಾನ ವೃಷಭಕ್ಕೆ ಇದೆ. ಇಲ್ಲಿ ಒಂದು ನೆಗೆಟಿವ್ ಬಂತು. ಲಾಭ, ಕರ್ಮಾಧಿಪತಿ ಶನಿಯು ನೈಸರ್ಗಿಕ ಮೇಷಕ್ಕೆ ಒಂಬತ್ತನೆಯ ಮನೆ ಧನುರಾಶಿಯಲ್ಲಿ ಸಂಚಾರ ಆಗುತ್ತಿದೆ. ಶನಿಯು ಆಡಳಿತಗಾರ. ಅವನಿಗೆ ಒಂಬತ್ತನೆಯ ಮನೆಯು ಇಷ್ಟ ಸ್ಥಾನ ಅಲ್ಲ. ಅಂದರೆ ಇದು ಪೂರ್ವ ಜನ್ಮ, ಪಿತೃ, ಭಾಗ್ಯ ಸ್ಥಾನವಾಗುತ್ತದೆ. ಪಾಪ ಗ್ರಹ ಶನಿಗೆ ಇದು ಉತ್ತಮವಾಗದು. ಶನಿಯು ಇಲ್ಲಿ ದ್ರವ್ಯ ನಾಶ, ಧನ ನಾಶ ಮಾಡಿಸುತ್ತಾನೆ. ಅಂದರೆ ವಿತ್ತೀಯ ಹಿನ್ನಡೆಗೆ ಕಾರಣನಾಗುತ್ತಾನೆ.
ಸುಧಾರಣೆ ಕ್ರಮಗಳಿಗೆ ಮುಂದಾಯಿತು ಸರ್ಕಾರ
ಈ ಸ್ಥಾನದಿಂದ ಅವನ ದೃಷ್ಟಿಯು ತೃತೀಯ ಮಿಥುನಕ್ಕಿರುತ್ತದೆ. ಈ ತೃತೀಯಕ್ಕೆ ಇರುವ ದೃಷ್ಟಿಯು ಶನಿಗೆ ಸೌಭಾಗ್ಯವಾದರೆ, ತೃತೀಯವು ವಿಕ್ರಮ, ದುರಿತ, ಸಹೋದರ, ಮಿತ್ರ ಸೂಚಕ ಆಗುತ್ತದೆ. ಇಲ್ಲಿ ನಾವೇನು ಚಿಂತನೆ ಮಾಡಬೇಕಾಗುತ್ತದೆ? ವಿತ್ತೀಯ ಕೊರತೆ ನಿವಾರಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತೇವೆ. ದೇಶಕ್ಕಾಗುವಾಗ ಒಂದೆಡೆ ಹೊರ ದೇಶದ ಸಾಲ ತೀರಿಸಿ ಬಿಡುವಾ, ಇನ್ನೊಂದೆಡೆ ಅನಾಣ್ಯೀಕರಣ, ತೆರಿಗೆ ಪದ್ಧತಿಯಲ್ಲಿ ಪರಿವರ್ತನೆ ಇತ್ಯಾದಿ ವಿಕ್ರಮಗಳಿಗೆ ಹೊರಟಿತು ಆಡಳಿತ. ಇದರ ಪರಿಣಾಮವಾಗಿ ಆರ್ಥಿಕ ಹೊಡೆತ ಬಿತ್ತು. ಐಷಾರಾಮಿ ಆಗಿದ್ದವರಿಗೆ ಇದನ್ನು ಸಹಿಸಿಕೊಳ್ಳಲು ಕಷ್ಟ ಆಗುತ್ತಿದೆ. ಬಿಎಂಡಬ್ಲ್ಯು ಕಾರಿನಲ್ಲೇ ಓಡಾಡುವವನಿಗೆ ಮಾರುತಿ ಓಮ್ನಿ ಬಳಸುವ ಅನಿವಾರ್ಯ ತಂದೊಡ್ಡಿತು. ಈ ಸ್ಥಿತಿಗೆ ಹೊಂದಿಕೊಳ್ಳದ ಉದ್ಯಮಿಗಳು, ಹೊಂದಾಣಿಕೆ ಮಾಡಿಕೊಳ್ಳಲು ಬೇರೆ ಬೇರೆ ವ್ಯವಸ್ಥೆಗೆ ಹೋಗುತ್ತಾರೆ. ಕೆಲಸಗಾರರನ್ನು ಕಡಿಮೆ ಮಾಡುವುದು, ಅಲ್ಲಲ್ಲಿ ಶಾಖೆಗಳಿದ್ದರೆ ಅದನ್ನು ಮುಚ್ಚುವುದು ಇತ್ಯಾದಿ ವ್ಯವಹಾರ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ಇದನ್ನೇ ನಂಬಿ ಬದುಕುವವರ ಜೀವನವು ಕಷ್ಟಕ್ಕೆ ಒಳಗಾಗುತ್ತದೆ. ಇವೆಲ್ಲವೂ ಪರಿಣಾಮಗಕೇ.
ಮುಂದಿನ ಅಚ್ಛೇ ದಿನ್ ಗೆ ಕಾಯದೇ ವಿಧಿಯಿಲ್ಲ
ಈಗಿನ ಸ್ಥಿತಿ ಸಮತೋಲನಕ್ಕೆ ಬರಬೇಕಾದರೆ ತುಂಬಾ ಕಾಲಾವಕಾಶ ಬೇಕು. ದೇಶಕ್ಕೆ ಆರ್ಥಿಕ ಹಿನ್ನಡೆ ಆಗುವಾಗ ಇಂಧನ ಬೆಲೆ, ಆಹಾರ ಧಾನ್ಯಗಳ ಬೆಲೆಯನ್ನು ಏರಿಸುವ ಸಾಹಸಕ್ಕೆ ಮುಂದಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ದಕ್ಷ ನಾಯಕರು ಬೇಕು. ಮೋದಿಯವರು ಈ ದೇಶದ ಪ್ರಧಾನ ಮಂತ್ರಿ ಮತ್ತು ರಾಷ್ಟ್ರದ ಅತ್ಯುನ್ನತ ನಾಯಕ. ಇವರ ಜಾತಕದಲ್ಲೂ ಅನಿಷ್ಟವಿದ್ದರೆ? ಹೇಗೆ ವಾಹನ ಚಾಲಕನೊಬ್ಬನ ಜಾತಕದಲ್ಲಿ ಆಪತ್ತು ಇದ್ದು, ಆ ವಾಹನದ ಪ್ರಯಾಣಿಕರಿಗೆ ಅಪಾಯ ಆಗುತ್ತೋ, ಅದೇ ರೀತಿ ರಾಷ್ಟ್ರದ ಪ್ರಧಾನ ನಾಯಕನಿಂದಲೂ ಸಮಸ್ಯೆ ಗೋಚರಿಸಬಹುದು. ಒಂದು ವೇಳೆ ಕುಡಿದು ವಾಹನ ಚಲಾಯಿಸುವ ಚಾಲಕನಂತೆ, ಪ್ರಧಾನ ನಾಯಕನು ದೊಡ್ಡ ವಂಚಕ ಆಗಿದ್ದರೆ ಮುಂದಕ್ಕೆ ಅಪಾಯ ಇದೆ ಎಂದು ಹೇಳಬಹುದು. ದೇಶಕ್ಕೆ ಒಳಿತನ್ನು ಬಯಸುವವರಾಗಿದ್ದಾಗ ಸದ್ಯಕ್ಕೆ ಕಷ್ಟವಿದ್ದು, ಮುಂದೆ ಅಚ್ಛೇ ದಿನ್ ಎಂದು ಸುಮ್ಮನಾಗಬೇಕು.
ದೇಶ ಮುನ್ನಡೆಸುವ ನಾಯಕನ ಜಾತಕವೂ ಉತ್ತಮವಾಗಿದೆ
ಇನ್ನು ಮೋದಿಯವರ ಜಾತಕ ಪ್ರಕಾರ ಸದ್ಯಕ್ಕೆ ಚಂದ್ರ ದಶೆಯಲ್ಲಿ ಕೇತು ಭಕ್ತಿ ಮುಗಿದು, ಸಪ್ತಮಾಧಿಪ ಮತ್ತು ವ್ಯಯಾಧಿಪತಿ ಶುಕ್ರ ಭುಕ್ತಿ ನಡೆಯುತ್ತಿದೆ. ಕೇತು ಭುಕ್ತಿ ಸೆಪ್ಟೆಂಬರ್ ಗೆ ಮುಗಿಯಿತು. ಈ ಭುಕ್ತಿ ಆರ್ಥಿಕ ಸಂಕಷ್ಟದಲ್ಲಿ ಒದ್ದಾಡುವಂತೆ ಮಾಡಿತು. ಅಲ್ಲದೆ ಗೋಚಾರದಲ್ಲಿ ಜನ್ಮ ಗುರು ದುಃಖ ನೀಡಿದ. ಮುಂದೆ ಗ್ರಹರ ಸಂಚಾರದಲ್ಲಿ ಗುರು ದ್ವಿತೀಯಕ್ಕೂ, ಶನಿಯು ತೃತೀಯಕ್ಕೂ ಹೋಗಲಿದ್ದಾರೆ. ಆಗ ನೈಸರ್ಗಿಕ ಕುಂಡಲಿಗೂ ಉತ್ತಮ ಫಲದಾಯಕರಾಗುತ್ತಾರೆ. ಒಂದೆಡೆ ನಾಯಕನಿಗೂ, ಇನ್ನೊಂದೆಡೆ ನೈಸರ್ಗಿಕ ಕುಂಡಲಿಗೂ ಹಿತವಾದ ಕಾಲ ಬರುತ್ತದೆ ಎಂದರೆ, ಮೋದಿಯವರು ಹೇಳಿದ ಅಚ್ಛೇದಿನ್ ಆಯೇಗಾ ಎಂಬ ಮಾತು ನಂಬಬಹುದು. ಈಗ ಟೀಕಿಸುವುದಕ್ಕೆ ಸಮಯ ಇಲ್ಲ. ಬಲ ತುಂಬುವ ಜವಾಬ್ದಾರಿ ಇದೆ. ನಾವು ಮೋದಿಯನ್ನೂ ನೋಡುವುದಿಲ್ಲ, ಅವರನ್ನು ಟೀಕಿಸುವ ವಿರೋಧಿಗಳನ್ನೂ ನೋಡುವುದಿಲ್ಲ. ನಾವು ನೋಡುವುದು ದೇಶದ ಮುಂದಿನ ಉಜ್ವಲ ಭವಿಷ್ಯವನ್ನು ಮಾತ್ರ. ಇದನ್ನು ಯಾರು ತಂದುಕೊಡುತ್ತಾರೋ ಅವರಿಗೆ ನಮೋನಮಃ ಎಂದು ಹೇಳುತ್ತೇವೆ.