ಚುನಾವಣೆಯ ಜಾತಕ ಬರೆಯುವ ಅಮಿತ್ ಶಾ ಜಾತಕ ಫಲ
ಬಿಜೆಪಿಯ ವೇಗವನ್ನೇ ಬದಲಿಸಿದ, ಪಕ್ಷದಲ್ಲಿ ಗೆಲುವಿನ ಹಸಿವನ್ನು ಹಾಗೂ ಅದನ್ನು ದಕ್ಕಿಸಿಕೊಳ್ಳುವ ಛಾತಿಯನ್ನು ತುಂಬಿದ ಹಾಗೂ ತುಂಬುತ್ತಿರುವ ವ್ಯಕ್ತಿ ಅಮಿತ್ ಶಾ. ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಅವರ ಜಾತಕ ವಿಮರ್ಶೆಯನ್ನು ಇಂದು ಮಾಡಲಾಗುತ್ತಿದೆ. ಅವರ ಬಗ್ಗೆ ತಿಳಿಸುವ ಪ್ರಯತ್ನವಿದು.
ಅಮಿತ್ ಶಾ ಅವರದು ಭರಣಿ ನಕ್ಷತ್ರ, ಮೇಷ ರಾಶಿ, ಧನುಸ್ಸು ಲಗ್ನ. ರಾಶ್ಯಾಧಿಪತಿ ಕುಜ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇವರದು ಸೈನಿಕ- ಹೋರಾಟಗಾರನ ಸ್ವಭಾವ. ತನ್ನನ್ನು ನೆಚ್ಚಿದ ಯಜಮಾನನ ಸಲುವಾಗಿ ಯುದ್ಧಭೂಮಿಯಲ್ಲಿ ಎದುರಾಳಿಯ ಬಾಣಕ್ಕೆ ತಾನು ಎದೆಯೊಡ್ಡುವಂಥ ನಿಯತ್ತು ಹಾಗೂ ಸ್ವಾಮಿ ಭಕ್ತಿ.
ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?
ಅದೇ ರೀತಿ ವಿಪರೀತ ಶಿಸ್ತಿನ ಸಿಪಾಯಿ. ತಮ್ಮ ಮೇಜಿನ ಮೇಲೆ ಯಾವುದೇ ಕಡತವನ್ನು ಕೊಳೆಯಲು ಬಿಡುವವರಲ್ಲ. ತೀರ್ಮಾನ ತೆಗೆದುಕೊಳ್ಳುವುದರಲ್ಲಾಗಲೀ ಅವಸರ ಪಡುತ್ತಾರೆ.
ತಾಳ್ಮೆ ರಹಿತರೂ ತಕ್ಷಣ ಹೇಳಿಕೆ ನೀಡುವವರೂ ಮೇಲ್ನೋಟಕ್ಕೆ ಇತರರನ್ನು ನಿರ್ಲಕ್ಷಿಸುವ ಸ್ವಭಾವದವರೂ ಒಳಗಿಂದ ಗ್ರಹಿಸುವವರೂ, ego ಇರುವವರೂ ಒಳ್ಳೆಯ ನಾಯಕತ್ವ ಉಳ್ಳವರೂ ದುರ್ಬಲ ಶತ್ರುಗಳುಳ್ಳವರೂ ಖಿನ್ನರಾದಾಗ ತಕ್ಷಣ ಹುಲಿಯಂತೆರಗುವವರೂ ಆಗಿರುತ್ತಾರೆ.
ಚುಚ್ಚುವಂಥ ಮಾತಾಡುವವರು
ಶೀಘ್ರ ಕೋಪಿಯೂ ಆದ ಅಮಿತ್ ಶಾ ಇತರರಿಗೆ ನೋವಾಗುವಂತೆ, ಹೇಳಿದ ಮಾತು ಚುಚ್ಚುವಂತೆಯೇ ಆಡುತ್ತಾರೆ. ಇನ್ನೂ ವಿಚಿತ್ರ ಏನೆಂದರೆ ಕೆಲವೊಮ್ಮೆ ಮಾತನಾಡದೆ ಕಲ್ಲಿನ ಮೂರ್ತಿಯಂತೆ ಸುಮ್ಮನೆ ಕುಳಿತು, ಹೊಸ ಐಡಿಯಾಗಳನ್ನು ಹುಡುಕುವವರು. ಇದು ಇವರ ಜಾತಕದಿಂದ ಹೇಳಬಹುದಾದ ಸ್ವಭಾವ.
ಶತ್ರುಗಳನ್ನು ತಂತ್ರಗಾರಿಕೆಯಿಂದ ಮಣಿಸುತ್ತಾರೆ
ಇವರ ಜನ್ಮ ಜಾತಕದಲ್ಲಿ ತ್ರಿಕೋಣದಲ್ಲಿ ಬಲಿಷ್ಠ ಶನಿಯೂ, ಏಕಾದಶದಲ್ಲಿ ರವಿ- ಬುಧರ ನಿಪುಣ ಯೋಗ ಇದೆ. ಇನ್ನು ಅದೇ ಶನಿಯು ಷಷ್ಠಾಧಿಪನನ್ನು ಪೂರ್ಣ ದೃಷ್ಟಿಯಿಂದ ನೋಡುವುದರಿಂದ ಶತ್ರುವನ್ನು ಕಲಹ ಮಾಡದೆ ತಂತ್ರಗಾರಿಕೆಯಲ್ಲಿ ಮಣಿಸುವವರೂ ಆಗಿತ್ತಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.
ಅಮಿತ್ ಶಾ ಇರುವಾಗ ಹೋಟೆಲ್ ನಲ್ಲಿ ಹಾವು ಕಂಡರೆ ಹೀಗೆ ಕಥೆ ಕಟ್ಟೋದಾ?
ಕರ್ನಾಟಕ ಚುನಾವಣೆ ಎದುರಿಗಿದೆ
ಇಲ್ಲಿ ಇನ್ನೊಂದು ವಿಚಾರ ಹೇಳಬೇಕು. ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೋಡಿ ಇಷ್ಟು ಚೆನ್ನಾಗಿ ಕೆಲಸ ಮಾಡುವುದಕ್ಕೆ ಕಾರಣ ಇಬ್ಬರ ರಾಶ್ಯಾಧಿಪತಿಯೂ ಕುಜನೇ. ಅಂದರೆ ಇಬ್ಬರೂ ಸಮರ ಯೋಧರು. ಸವಾಲುಗಳೆಂದರೆ ಇಬ್ಬರಿಗೂ ಹಬ್ಬ. ಎದುರಿಗೆ ದೊಡ್ಡ ಸವಾಲುಗಳಿಲ್ಲದೆ ಸುಮ್ಮನೆ ಕೂರುವುದೆಂದರೆ ಇಬ್ಬರಿಗೂ ಇಷ್ಟವಿಲ್ಲ. ಇನ್ನು ಒಂದೊಂದೇ ರಾಜ್ಯವನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟದ್ದೇ ಅಮಿತ್ ಶಾ ತಂತ್ರಗಾರಿಕೆ. ಈಗ ಕರ್ನಾಟಕ ಚುನಾವಣೆ ಇದಿರಾಗಿದೆ. ಹಾಗಿದ್ದರೆ ಏನಾಗಬಹುದು.?
ಅಮಿತ್ ಶಾ ತಂತ್ರಗಾರಿಕೆ ಪೂರ್ಣ ಫಲಿಸುವುದಿಲ್ಲ
ಇನ್ನು ಗೋಚಾರದಲ್ಲಿ ಶನಿಯು ಅದೇ ಮೂಲ ತ್ರಿಕೋಣ ಕುಂಭವನ್ನು ನೋಡುವುದು, ಜತೆಗೆ ಗುರುವೂ ಅನುಕೂಲ. ಇಲ್ಲಿ ಸಾಮಾನ್ಯವಾಗಿ ಇವರ ತಂತ್ರಗಾರಿಕೆ ಫಲಿಸಬಹುದು. ಆದರೆ ಇವರಿಗೆ ಬಲಿಷ್ಠ ಶನಿ ಇದ್ದರೂ ಇನ್ನೂ ಬಾಲಾವಸ್ಥೆಯ ರೂಪದಲ್ಲಿ ವಕ್ರನಾಗಿ, 5 ಡಿಗ್ರಿ ಇರುವುದು. ಇವರ ಆಲೋಚನಾ ತಂತ್ರಗಳಿಗೆ ಪೂರ್ಣ ಫಲ ನೀಡುತ್ತದೆ ಎಂದು ಹೇಳಲಾಗದು. ಮುರಿದು ಹೋದ ಬಿಜೆಪಿಯನ್ನು ಮತ್ತೆ ಬಲಿಷ್ಠ ಮಾಡುತ್ತದೆ. ಆದರೆ ಅಧಿಕಾರ ಗದ್ದುಗೆಯಲ್ಲಿ ಇರಿಸುವುದು ಈ ವಿಳಂಬಿ (2018) ಸಂವತ್ಸರದಲ್ಲಿ ಸಾಧ್ಯ ಎನ್ನಲಾಗದು.
ಮೈತ್ರಿ ಸರಕಾರ ರಚನೆ
ಆದರೆ, ಕರ್ನಾಟಕದ ಭವಿಷ್ಯ ಪ್ರಕಾರ ಸಮ್ಮಿಶ್ರ ಸರಕಾರವೇ ನಿಶ್ಚಿತ. ಆದರೆ ಇದು ಮಾತ್ರ ಅಲ್ಪಾಯುಷ್ಯದಲ್ಲೇ ಪತನವಾಗುವುದೂ ನಿಶ್ಚಿತ. ಏಕೆಂದರೆ ಬಿಜೆಪಿ ಸಂಖ್ಯೆಯಲ್ಲಿ ಬಲಿಷ್ಠವಾದರೂ ಉಳಿದ ಪಕ್ಷಗಳು ಒಟ್ಟು ಸೇರಿ ಸರಕಾರ ಮಾಡಬಹುದು. ಆ ಎರಡೂ ಪಕ್ಷಗಳ ಸಂಬಂಧ ಎಣ್ಣೆ- ಶೀಗೆಕಾಯಿ ಆಗುತ್ತದೆ. ಈ ಸಮ್ಮಿಶ್ರವು ಬಿದ್ದುಹೋದರೆ ಮತ್ತೊಮ್ಮೆ ಬಿಜೆಪಿ ಸಖ್ಯ ಬಯಸಲು ಬರಬಹುದು. ಆದರೆ ಆಗ ಒಪ್ಪಿಬಿಟ್ಟರೆ ಮತ್ತೆ ಬಿಜೆಪಿಗೆ ಕಷ್ಟವೇ ಇದೆ.
ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆ
ಆದರೆ, ಚುನಾವಣೆಯೇ ಅಂತಿಮ ಎಂದು ಬಿಜೆಪಿ ಗಟ್ಟಿ ಮನಸ್ಸು ಮಾಡಿದರೆ, ಸಖ್ಯವನ್ನು ತಿರಸ್ಕರಿಸಿದರೆ ಮುಂದೆ ಲೋಕಸಭಾ ಚುನಾವಣೆಯ ಜತೆಗೆ ವಿಧಾನಸಭಾ ಚುನಾವಣೆಯೂ ನಡೆದು ಮಿಷನ್ 150 ಕಾರ್ಯರೂಪಕ್ಕೆ ಬರುತ್ತದೆ. ಆ ನಂತರ ಕೆಲವಾರು ವರ್ಷ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ. ಆಗ ಯಾರು ಮುಖ್ಯಮಂತ್ರಿ ಆಗಬಹುದು? ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಆಮೇಲೆ ನನಗಿಚ್ಛೆ ಬಂದಾಗ ಹೇಳುತ್ತೇನೆ.
ರಕ್ತದೊತ್ತಡದ ಬಗ್ಗೆ ಜಾಗ್ರತೆ
ಇನ್ನು ಅಮಿತ್ ಶಾ ಅವರ ಜಾತಕಕ್ಕೆ ಸಂಬಂಧಿಸಿದಂತೆ ರಕ್ತದೊತ್ತಡವನ್ನು ಇವರು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸ್ವಲ್ಪ ಮಟ್ಟಿಗೆ ಶಾಂತ ಸ್ವಭಾವ ರೂಢಿಸಿಕೊಳ್ಳಬೇಕು. ಇನ್ನು ಕೋಪದಲ್ಲಿ ಉದ್ರೇಕವಾಗುವುದನ್ನು ಸಹ ನಿಯಂತ್ರಣ ಮಾಡಿಕೊಂಡರೆ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.