ಶುಕ್ರನ ಅನುಗ್ರಹ ಇದ್ದರೆ ಇವರ್ಯಾಕೆ ಪದೇ ಪದೇ ಲವ್ ನಲ್ಲಿ ಬೀಳ್ತಾರೆ?
ಇಂದಿನ ಲೇಖನದ ವಿಷಯ ಪ್ರಶ್ನೆಯೊಂದಕ್ಕೆ ನೀಡುತ್ತಿರುವ ಉತ್ತರ. ಆದ್ದರಿಂದ ಇದರ ಪ್ರತಿ ಸಾಲು, ಪದವನ್ನು ಗಮನವಿಟ್ಟು ಓದಿ. ಕಲಾವಿದರು, ಸಂಗೀತಗಾರರು, ಕ್ರೀಡಾಳುಗಳು, ಸಾಹಿತಿಗಳು, ಚಿತ್ರರಂಗದಲ್ಲಿ ಇರುವವರಿಗೆ ಒಂದದಕ್ಕಿಂತ ಹೆಚ್ಚಿನ ಮದುವೆ ಅಥವಾ ಸಂಬಂಧ ಇರುತ್ತದಲ್ಲಾ ಏಕೆ ಅನ್ನೋದು ಓದುಗರೊಬ್ಬರ ಪ್ರಶ್ನೆ.
ಎಲ್ಲರೂ ಹಾಗಿರುವುದಿಲ್ಲ. ಆದರೆ ಕೆಲವರಲ್ಲಿ ಅಂಥದ್ದು ನಡೆದಿದೆ ಎಂಬುದನ್ನು ಆರಂಭದಲ್ಲೇ ಹೇಳಬೇಕಿದೆ. ಆದರೆ ಆ ರೀತಿ ಆಗುವುದಕ್ಕೆ ಮುಖ್ಯ ಕಾರಣ ಗ್ರಹಗತಿ ಎಂಬುದು ಸತ್ಯ. ಹಾಗಿದ್ದರೆ ಯಾವುದು ಆ ಗ್ರಹ? ಯಾವ ಗ್ರಹದ ಪರಿಣಾಮದಿಂದ (ಇಲ್ಲಿ ಸಾಹಿತಿಗಳು, ಚಿತ್ರರಂಗದವರು ಎಂಬ ನಿರ್ದಿಷ್ಟ ವೃತ್ತಿಯವರೇ ಆಗಬೇಕೆಂದಿಲ್ಲ) ವ್ಯಕ್ತಿಯ ಜೀವನದಲ್ಲಿ ಇಂಥ ಸಂಬಂಧ ಏರ್ಪಡುತ್ತದೆ?
ಜ್ಯೋತಿಷ್ಯ ಬುರುಡೆಯೋ ವೈಜ್ಞಾನಿಕವೋ?: ಕಬ್ಯಾಡಿ ಜಯರಾಮಾಚಾರ್ಯ ಸಂದರ್ಶನ
ಒಂದಕ್ಕಿಂತ ಹೆಚ್ಚಿನ ಮದುವೆ ಆಗುತ್ತದೆ ಎಂದು ತಿಳಿಸುವ ಪ್ರಯತ್ನ ಇದು. ಜತೆಗೆ ಜಾತಕದಲ್ಲಿ ಅಂಥ ಯೋಗವಿದ್ದರೆ ಏನು ಪರಿಹಾರ ಅನ್ನೋದನ್ನೂ ತಿಳಿಸಲಾಗುತ್ತಿದೆ. ಈ ಅಂಶಗಳನ್ನು ಗುರುತಿಸುವುದಕ್ಕೆ ಜನ್ಮ ದಿನಾಂಕ, ಹುಟ್ಟಿದ ಊರು, ಸಮಯದ ಆಧಾರದಲ್ಲಿ ಮೊದಲಿಗೆ ಜಾತಕ ಮಾಡಿಸಬೇಕು. ಆ ನಂತರ ಜ್ಯೋತಿಷಿಗಳಿಗೆ ತೋರಿಸಬೇಕು.
ಸಾಹಿತಿ, ಕಲಾವಿದರು, ರಾಜಕಾರಣಿ ಆಗುವ ಯೋಗ
ಯಾರದೇ ಜಾತಕದಲ್ಲಿ ಭಾಗ್ಯ, ಕೀರ್ತಿ, ಅದೃಷ್ಟ ಮತ್ತು ಚುರುಕುತನಕ್ಕೆ, ಲವಲವಿಕೆಗೆ ಕಾರಕನಾದ ಶುಕ್ರನು ಬಲಿಷ್ಠನಾಗಿರಬೇಕು (ಉಚ್ಚ, ಸ್ವಕ್ಷೇತ್ರದಲ್ಲಿರುವುದು, ಆ ನವಾಂಶ ಹೊಂದಿರುವುದು). ಹಾಗೂ ಬಲಿಷ್ಠರಾದ ಗುರು, ಬುಧ, ಕುಜ, ರವಿಗಳೊಂದಿಗೆ ಯೋಗ, ದೃಷ್ಟಿಯನ್ನು ಹೊಂದಿದ್ದರೆ ಅಂಥವರು ಹೆಸರುವಾಸಿಯಾದ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳಾಗುವ ಯೋಗವಿರುತ್ತದೆ.
ರಸಿಕರೋ ವಿಷಯಾಸಕ್ತರು ಆಗುವ ಸಂಭವ
ಅಂಥವರಿಗೆ ಗುರುವಿನ ಹೊರತಾಗಿ ಈ ಗ್ರಹಯೋಗಗಳು ಲಗ್ನದಲ್ಲಿ ಅಥವಾ ಜನ್ಮರಾಶಿಯಲ್ಲಿ ಅಥವಾಲ ಗ್ನಾಧಿಪತಿಯೊಂದಿಗೆ ಅಥವಾ ಲಗ್ನದಿಂದ 7ನೇ ಭಾವದಲ್ಲಿ ಅಥವಾ 7ನೇ ಭಾವಾಧಿಪತಿಯೊಂದಿಗೆ ಯಾವುದೇ ಭಾವದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ಮ (ಲಗ್ನದಿಂದ 10ನೇ ಮನೆ) ಭಾವದಲ್ಲಿ ಅಥವಾ ಬುದ್ಧಿ (ಲಗ್ನದಿಂದ 5ನೇ ಮನೆ) ಭಾವದಲ್ಲಿ (ಶುಕ್ರನು ಕುಜನೊಂದಿಗೆ ಅಥವಾ ಬುಧನೊಂದಿಗೆ ಅಥವಾ ರವಿ ಅಥವಾ ಶನಿ ರಾಹು ಕೇತುಗಳೊಂದಿಗೆ ) ಇದ್ದರೆ ಅವರು ರಸಿಕರೋ, ವಿಷಯಾಸಕ್ತರೋ ಆಗುವ ಸಂಭವವೂ ಹೆಚ್ಚಿರುತ್ತದೆ.
ಮರುಳಾಗುವ ಸಂದರ್ಭ
ಅಂಥವರು ಪ್ರಸಿದ್ಧರೂ, ಜನಾನುರಾಗಿಗಳೂ ಆದಾಗ ಅಭಿಮಾನಿಗಳು ಅವರಿಗೆ ಮರುಳಾಗುವ ಸಂಭವವೂ ಕೆಲ ಸಂದರ್ಭಗಳಲ್ಲಿ ಬರಬಹುದು. ಹಾಗಾದಾಗ ಅವರು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಿರುವ ಸಂಭವವೂ ಬಂದೀತು. ಪರಿಹಾರಕ್ಕೆ ಶುಕ್ರ, ಕುಜ, ಬುಧ, ರವಿ, ಶನಿ, ರಾಹು ಕೇತುಕಾರಕ ಅನುಕ್ರಮ ರತ್ನಗಳಾದ ವಜ್ರ, ಹವಳ, ಪಚ್ಚೆ, ಮಾಣಿಕ್ಯ, ನೀಲಿ, ಗೋಮೇಧ, ವೈಡೂರ್ಯಾದಿ ರತ್ನಗಳನ್ನು ಧರಿಸಬೇಕಾಗುತ್ತದೆ.
ಮಂತ್ರ ಜಪ, ಕ್ಷೇತ್ರ ದರ್ಶನ
ಅದೇ ರೀತಿ ಆಯಾ ಗ್ರಹಗಳಿಗೆ ಧಾನ್ಯಗಳಾದ ಅವರೆ, ತೊಗರಿ, ಹೆಸರು, ಗೋಧಿ, ಎಳ್ಳು, ಉದ್ದು, ಹುರುಳಿಗಳನ್ನು ಸುಲಿದು ಬಿಳಿ, ಕೆಂಪು, ಹಸಿರು, ಕೇಸರಿ, ಕಪ್ಪು(ನೀಲಿ), ಬೂದು, ಕಡುವರ್ಣದ ಬಟ್ಟೆಗಳಲ್ಲಿ ಕಟ್ಟಿ ಆಗಾಗ ದಾನ ಮಾಡಬೇಕಾಗುತ್ತದೆ. ದುರ್ಗೆ, ನರಸಿಂಹ, ವಿಷ್ಣು, ಶಿವ, ಹನುಮ, ನಾಗ, ಗಣಪತಿ ದೇವರ ಮಂತ್ರ ಜಪ, ಕ್ಷೇತ್ರದರ್ಶನ ಕೂಡ ಮಾಡಬಹುದು.
ಜಾತಕ ಪರಿಶೀಲನೆ ಮಾಡಿಸಿ
ಆದರೆ, ಜಾತಕದಲ್ಲಿ ಯಾವ ಗ್ರಹ ಉಚ್ಚ ಇದೆಯೋ ಯಾವುದಕ್ಕೆ ಶಾಂತಿ ಎಂಬುದನ್ನು ನೀವಾಗಿಯೇ ನೋಡಿ ಮಾಡಿಕೊಳ್ಳಲು ಮುಂದಾಗುವುದು ಸ್ವಯಂ ವೈದ್ಯ ಮಾಡಿಕೊಂಡಂತಾಗುತ್ತದೆ. ಅದೃಷ್ಟವಶಾತ್ ಶಮನವೂ ಅಗಬಹುದು. ಅಥವಾ ಮಾಡಿದ್ದು ಏನೂ ಪ್ರಯೋಜನಕ್ಕೆ ಆಗದೇ ಇರಬಹುದು. ಆದ್ದರಿಂದ ಅಧ್ಯಯನ ಮಾಡಿದ ಜ್ಯೋತಿಷಿಯಿಂದ ಜಾತಕ ಪರಿಶೀಲನೆ ಮಾಡಿಸಿ.