ಅಂಬಿ ಆಯುಷ್ಯದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಅಮ್ಮಣ್ಣಾಯರ ಸಂದರ್ಶನ

Recommended Video

      Ambareesh : ಅಂಬರೀಶ್ ಜಾತಕದ ಬಗ್ಗೆ ಷಾಕಿಂಗ್ ಮಾಹಿತಿ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

      "ಅವರು ಬಹಳ ಭಾವೋದ್ವೇಗದ ವ್ಯಕ್ತಿ. ಅದನ್ನು ಅವರ ಜತೆ ಮಾತನಾಡುವಾಗಲೇ ಹೇಳಿದ್ದೆ. ಆಶ್ಲೇಷ ಬಲಿ ಪೂಜೆ ಮಾಡಿಸಬೇಕು ಅಂತ ನಾನು ಸಲಹೆ ನೀಡಿದಾಗ, ನಾಗದೋಷ ಪರಿಹಾರಕ್ಕಾ ಈ ಪೂಜೆ ಎಂದು ಕೇಳಿದ್ದರು. ನಾಗಾರಾಧನೆ ಎಂಬುದು ನಾಗ ದೋಷ ಪರಿಹಾರಕ್ಕೆ ಮಾತ್ರ ಎಂಬ ಭಾವನೆ ಇದೆ. ಮನಸ್ಸಿನ ಭಾವನೆ ಹತೋಟಿಗೆ ತರಲು ಸಹ ಅದರಿಂದ ಅನುಕೂಲ" ಅಂತಲೇ ಮಾತಿಗೆ ಆರಂಭಿಸಿದರು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ.

      ನಟ-ಮಾಜಿ ಸಚಿವ ಅಂಬರೀಶ್ ಸಾವಿನ ನಂತರ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ, ಅಂಬಿ ಜತೆಗೆ ಮೊಬೈಲ್ ನಲ್ಲಿ ಮಾತನಾಡಿದ ಮಾಹಿತಿಯನ್ನು ಹಂಚಿಕೊಂಡಿದ್ದರು. ಮೃತ್ಯುಂಜಯ ಹೋಮ ಹಾಗೂ ಆಶ್ಲೇಷ ಬಲಿ ಪೂಜೆಗೆ ಸಲಹೆ ನೀಡಿದ್ದೆ ಎಂದು ತಿಳಿಸಿದ್ದಾಗಿ ಮಾಹಿತಿ ಹಾಕಿದ್ದಾರೆ.

      ಆದರೆ, ಅಂಬರೀಶ್ ಅವರಿಗೆ ಗೋಚಾರ ರೀತಿಯಲ್ಲಿ ಬಹಳ ಉತ್ತಮ ಸಮಯ ಇದು. ಅವರದು ಪುಷ್ಯಾ ನಕ್ಷತ್ರ, ಕರ್ಕಾಟಕ ರಾಶಿ. ಆ ರಾಶಿಗೆ ಈಗ ಗೋಚಾರ ಪ್ರಕಾರ ಐದನೇ ಮನೆಯ ಗುರು ಹಾಗೂ ಆರನೇ ಮನೆಯ ಶನಿ ಉತ್ತಮ ಸ್ಥಿತಿಯಲ್ಲೇ ಇದೆ. ಜನ್ಮ ಜಾತಕದ ಪ್ರಕಾರ ಲಗ್ನಕ್ಕೆ ಎಂಟನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿರುವುದರ ಪ್ರಭಾವ ಇಂಥ ಅನಾಹುತ ಮಾಡಿತು ಎಂದು ಒನ್ ಇಂಡಿಯಾ ಕನ್ನಡಕ್ಕೆ ವಿವರಿಸಿದರು ಜ್ಯೋತಿಷಿ ಅಮ್ಮಣ್ಣಾಯ.

      ಜ್ಯೋತಿಷ್ಯಕ್ಕೂ ವೃತ್ತಿ ಧರ್ಮ ಎಂಬುದಿದೆ

      ಜ್ಯೋತಿಷ್ಯಕ್ಕೂ ವೃತ್ತಿ ಧರ್ಮ ಎಂಬುದಿದೆ

      ಸಾವಿನ ನಂತರ ಈ ರೀತಿಯ ಭವಿಷ್ಯ ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಕ ವಿಶ್ಲೇಷಣೆ ಎಂಬುದು ವೈಯಕ್ತಿಕ ವಿಚಾರ. ಯಾವುದೇ ವ್ಯಕ್ತಿಯು ತಾನಾಗಿಯೇ ಪ್ರಶ್ನೆ ಕೇಳಿದರೆ ಅವರ ಬಳಿಯಷ್ಟೇ ಆ ವಿಚಾರ ಹೇಳಬಹುದು. ಆ ವ್ಯಕ್ತಿಯ ಪತ್ನಿ, ಮಕ್ಕಳು, ಸ್ನೇಹಿತರ ಬಳಿ ಕೂಡ ಇಂಥ ವಿಚಾರ ತಿಳಿಸುವುದಿಲ್ಲ ನಾನು. ಹೇಗೆ ವೈದ್ಯರು, ವಕೀಲರು ವಿವಿಧ ವೃತ್ತಿನಿರತರಿಗೆ ಆಯಾ ವೃತ್ತಿ ಧರ್ಮ ಎಂಬುದಿದೆಯೋ ಅದೇ ರೀತಿ ಜ್ಯೋತಿಷ್ಯಕ್ಕೂ ವೃತ್ತಿ ಧರ್ಮ ಇದೆ. ಯಾರಿಗಾದರೂ ಮರಣ ಹಾಗೂ ಮರಣಕ್ಕೆ ಸಮಾನವಾದ ತೊಂದರೆ ಇದ್ದರೆ ಅದಕ್ಕೊಂದು ರಕ್ಷಣಾ ಕವಚದಂತೆ ಕೆಲವು ಪೂಜೆ-ಪುರಸ್ಸರಗಳನ್ನು ಸಲಹೆ ನೀಡುತ್ತೇವೆ ವಿನಾ ಅದರಿಂದ ಸಾವನ್ನು ಗೆದ್ದೇ ಬಿಡಬಹುದು ಎಂಬ ಆಶ್ವಾಸನೆ ನೀಡುವುದಿಲ್ಲ. ಅಂಬರೀಶ್ ಅವರ ಜಾತಕ ನೋಡಿದ ವೇಳೆ ಕೂಡ ಅವರ ವೃಷಭ ಲಗ್ನಕ್ಕೆ ಎಂಟನೇ ಮನೆಯಲ್ಲಿರುವ ಶನಿ ಹಾಗೂ ಕೇತುವಿನ ಸ್ಥಿತಿ ಆಧಾರದಲ್ಲಿ ಮೃತ್ಯುಂಜಯ ಹೋಮ ಹಾಗೂ ಆಶ್ಲೇಷ ಬಲಿ ಪೂಜೆಗೆ ಸಲಹೆ ನೀಡಿದ್ದೆ.

      1981ರಿಂದ 2001ರ ವರೆಗೆ ಶುಕ್ರ ದಶೆ

      1981ರಿಂದ 2001ರ ವರೆಗೆ ಶುಕ್ರ ದಶೆ

      ಅಂಬರೀಶ್ ಅವರದು ವೃಷಭ ಲಗ್ನ್. ಆ ಲಗ್ನದಲ್ಲೇ ರವಿ, ಬುಧ, ಶುಕ್ರರು ಸ್ಥಿತರಾಗಿದ್ದಾರೆ. ಹನ್ನೆರಡನೇ ಮನೆಯಲ್ಲಿ ಗುರು, ಹತ್ತರಲ್ಲಿ ರಾಹು, ನಾಲ್ಕನೇ ಮನೆಯಲ್ಲಿ ಕೇತು ಹೀಗೆ ಗ್ರಹ ಸ್ಥಿತಿ ಇದೆ. ಈ ವ್ಯಕ್ತಿಗೆ ಚತುರ್ಥ ಸ್ಥಾನಾಧಿಪತಿ ರವಿ ಜನ್ಮ ಲಗ್ನದಲ್ಲೇ ಇದ್ದಾನೆ. ಆದ್ದರಿಂದ ಸರಕಾರದ ಮಟ್ಟದಲ್ಲಿ ಪ್ರಭಾವಶಾಲಿ. ಇನ್ನು ಲಗ್ನದಲ್ಲೇ ಶುಕ್ರ ಇರುವುದು ಅದರಲ್ಲೂ ವೃಷಭ ರಾಶಿಯ ಅಧಿಪತಿಯಾದ ಶುಕ್ರ ಅದೇ ಮನೆಯಲ್ಲಿ ಇರುವುದು ಅದ್ಭುತವಾದ ಯೋಗ. ಕಲಾವಿದರಾಗಲು, ಆ ಪರಿಯ ಯಶಸ್ಸು ಪಡೆಯಲು ಶುಕ್ರನ ಅನುಗ್ರಹವೇ ಕಾರಣವಾಯಿತು. 1981ರಿಂದ 2001ರ ವರೆಗೆ ಅವರಿಗೆ ಶುಕ್ರ ದಶೆ ನಡೆಯಿತು. ಆ ಕಾಲವು ವೃತ್ತಿ ಜೀವನದ ಅತ್ಯುತ್ತಮ ಕಾಲ. ಆ ನಂತರ ಅಂದರೆ 2001ರಲ್ಲಿ ಶುಕ್ರಾದಿತ್ಯ ಸಂಧಿ ಶಾಂತಿ ಮಾಡಿಸಿಕೊಂಡಿರಬೇಕು. ಇಲ್ಲದಿದ್ದರೆ ಆ ಸಮಯದಲ್ಲಿ ಕೆಲವು ಹಿನ್ನಡೆ, ವ್ಯಾಪಾರ- ವ್ಯವಹಾರದಲ್ಲಿ ತೊಡಕು ಇನ್ನಿತರ ಕಷ್ಟಗಳನ್ನು ಅನುಭವಿಸಿರುತ್ತಾರೆ.

      ಮಾಡಿದರಾಯಿತು, ನೋಡಿದರಾಯಿತು ಎಂಬ ಪ್ರವೃತ್ತಿ

      ಮಾಡಿದರಾಯಿತು, ನೋಡಿದರಾಯಿತು ಎಂಬ ಪ್ರವೃತ್ತಿ

      ಅಂಬರೀಶ್ ರ ಗುಣದಲ್ಲೇ ಉಡಾಫೆತನ ಇದ್ದುಹೋಗಲು ಮುಖ್ಯ ಕಾರಣ ಕೂಡ ಗ್ರಹ ಸ್ಥಿತಿಯೇ. ಜನ್ಮ ಸಮಯದಲ್ಲಿ ಬುಧನ ಸ್ಥಿತಿಯಿಂದ ನಾಲ್ಕನೇ ಮನೆಯಲ್ಲಿ ಇದ್ದ ಕೇತುವಿನ ಕಾರಣಕ್ಕೆ ಹಲವು ಬಗೆಯ ನಕಾರಾತ್ಮಕ ಗುಣಗಳು ಬಂದಿದ್ದವು. ಯಾವುದೋ ಸಮಯಕ್ಕೆ ಏಳುವುದು, ಮಾತನಾಡುವಾಗ ಅಪ ಶಬ್ದಗಳ ಬಳಕೆ, ಮುಂದೇನಾಗಬಹುದು ಎಂಬ ಆಲೋಚನೆ ಇಲ್ಲದಂಥ ಮಾತು ಇವೆಲ್ಲ ಕೂಡ ಆ ಗ್ರಹ ಸ್ಥಿತಿಯ ಪ್ರಭಾವವೇ. ಆದರೆ ಉಳಿದ ಗ್ರಹ ಅನುಗ್ರಹ ಇದ್ದ ಕಾರಣಕ್ಕೆ ಈ ನಕಾರಾತ್ಮಕ ಪ್ರಭಾವ ಅವರ ಮೇಲೆ ಹೆಚ್ಚು ಆಗಿಲ್ಲ. ಇಲ್ಲದಿದ್ದರೆ ಇಷ್ಟು ದೊಡ್ಡ ಮಟ್ಟದ ಹೆಸರು ಕೂಡ ಪಡೆಯಲು ಸಾಧ್ಯವಿರುತ್ತಿರಲಿಲ್ಲ. ಅದೇ ರೀತಿ ಇನ್ನೊಬ್ಬರ ಮಾತು ಕೇಳುವ ವ್ಯಕ್ತಿ ಕೂಡ ಇವರಾಗಿರಲಿಲ್ಲ. ಮಾಡಿದರಾಯಿತು, ನೋಡಿದರಾಯಿತು ಎಂಬ ಪ್ರವೃತ್ತಿ ಬಹಳ ಇತ್ತು ಎಂಬುದನ್ನು ಈ ಜಾತಕದ ಮೂಲಕ ಹೇಳಬಹುದು.

      ಆ ದೇವರ ಶಕ್ತಿ ಮುಂದೆ ನಾವೆಲ್ಲ ಸಣ್ಣವರು

      ಆ ದೇವರ ಶಕ್ತಿ ಮುಂದೆ ನಾವೆಲ್ಲ ಸಣ್ಣವರು

      ಈಗ ಹೆಚ್ಚು ಹೇಳಲು ಇನ್ನೇನೂ ಉಳಿದಿಲ್ಲ. ರಾಜಕೀಯವಾಗಿ ಬೆಳೆಯಬಹುದಾಗಿದ್ದ ಅವರನ್ನು ಆಲೋಚನೆ ಹಾಗೂ ಚಟುವಟಿಕೆಗೆ ಅಡ್ಡಿಪಡಿಸಿದ ಗ್ರಹಗಳು ಹೆಚ್ಚು ಸಾಧನೆ ಮಾಡಲು ಬಿಡಲಿಲ್ಲ. ಶುಕ್ರನ ಪ್ರಬಲ ಅನುಗ್ರಹ ಇದ್ದುದರಿಂದ ಆ ಗ್ರಹ ದಶೆ ನಡೆಯುವ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಅಮೋಘ ಯಶಸ್ಸು ನೀಡಿದೆ. ಅವರ ವ್ಯಕ್ತಿತ್ವ ಅಷ್ಟು ಆಕರ್ಷಣೀಯ ಆಗುವುದಕ್ಕೆ ಸಹ ಶುಕ್ರ ಗ್ರಹವೇ ಕಾರಣ. ಆದರೆ ಇಷ್ಟೆಲ್ಲ ಚಿಂತನೆ ಮಾಡಿ, ಈ ವಿಚಾರವನ್ನೆಲ್ಲ ಅವರಿಗೆ ತಿಳಿಸಿ, ಶಾಂತಿ- ಹೋಮಗಳನ್ನು ಯಾವುದು ಮಾಡಿಸಬೇಕು ಎಂಬ ಬಗ್ಗೆ ವಿವರ ನೀಡಿ, ಪುರೋಹಿತರನ್ನೂ ವ್ಯವಸ್ಥೆ ಮಾಡಿಕೊಂಡಿದ್ದರೂ ಏನೂ ಪ್ರಯೋಜನ ಆಗಲಿಲ್ಲ. ಮೃತ್ಯುಂಜಯ ಹೋಮ ಹಾಗೂ ಆಶ್ಲೇಷ ಬಲಿ ಮಾಡಲು ಆಗಲಿಲ್ಲ ಎಂಬ ಸಂಗತಿ ಆ ದೇವರ ಶಕ್ತಿಯನ್ನು ತೋರಿಸುತ್ತಿದೆಯೇನೋ ಎಂದು ವೈಯಕ್ತಿಕವಾಗಿ ಅನಿಸುತ್ತದೆ. ಜತೆಗೆ ಅಂಬರೀಶ್ ಅವರಿಗೆ ಇನ್ನಷ್ಟು ವರ್ಷ ಕಾಲ ಬದುಕಲು ಇದ್ದ ಅವಕಾಶ ಅದಾಗಿತ್ತೇನೋ? ಯಥಾಪ್ರಕಾರ 'ನಾಳೆ ಮಾಡೋಣ' ಎಂಬ ಮನಸ್ತತ್ವ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಇನ್ನು ಈ ವಿಚಾರವಾಗಿ ಹೆಚ್ಚು ಹೇಳಲಾರೆ. ಜತೆಗೆ ನಾನು ಹಾಕಿದ್ದ ಆ ಫೇಸ್ ಬುಕ್ ಪೋಸ್ಟ್ ಕೂಡ ದೇವರ ಮಾಯೆ ಬಗೆಗೆ ಉದಾಹರಣೆ ನೀಡುವುದಕ್ಕಷ್ಟೇ ಆಗಿತ್ತು ವಿನಾ ನಾನೇನೋ ಹೇಳಿದೆ ಎಂದು ಹೇಳಿಕೊಳ್ಳುವುದಾಗಿರಲಿಲ್ಲ. ಅದನ್ನೇ ಇನ್ನೊಮ್ಮೆ ಸ್ಪಷ್ಟಪಡಿಸುವುದಕ್ಕೆ ಇಚ್ಛಿಸುತ್ತೇನೆ ಎಂದರು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+