2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..

ಲಕ್ನೋ, ಅಕ್ಟೋಬರ್‌ 07: ಭಾರತವು 2022 ರ ವಿಧಾನ ಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯು ನಡೆಯಲಿದೆ. ದೇಶದಲ್ಲಿ 2024 ಕ್ಕೆ ಲೋಕಸಭೆ ಚುನಾವಣೆ ನಡೆಯುವುದರಿಂದ ಈ ಪಂಚರಾಜ್ಯಗಳ ಚುನಾವಣೆ ಮಹತ್ವ ಪಡೆದುಕೊಂಡಿವೆ.

2014 ರಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರ ಸರ್ಕಾರದಲ್ಲಿ ಬಿಜೆಪಿಯೇ ಆಡಳಿತವನ್ನು ಪಡೆದುಕೊಂಡಿತ್ತು. ಬಳಿಕ 2017 ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಭರ್ಜರಿ ಜಯವು ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. 2022 ರಲ್ಲಿ, ಆಡಳಿತ ಪಕ್ಷವು ಯುಪಿಯಲ್ಲಿ ಮರು ಆಯ್ಕೆಗೆ ಪ್ರಯತ್ನಿಸುತ್ತಿದೆ. ಈ ಮೂಲಕ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್‌ರನ್ನೇ ಮುಖ್ಯಮಂತ್ರಿ ಮಾಡುವ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಈ ನಡುವೆ ವಿರೋಧ ಪಕ್ಷಗಳು ಕೂಡಾ ಬಿಜೆಪಿ ಆಡಳಿತದ ವಿರುದ್ಧವಾಗಿ ಎಲ್ಲಾ ತಂತ್ರಗಾರಿಕೆಯನ್ನು ಮಾಡುತ್ತಿದೆ. ರೈತರ ಪ್ರತಿಭಟನೆ, ಕೋವಿಡ್‌ ನಿರ್ವಹಣೆಯಲ್ಲಿನ ಲೋಪವನ್ನು ಕಾಂಗ್ರೆಸ್‌ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಮುಂದಿಟ್ಟುಕೊಂಡು ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸುತ್ತಿದೆ. ಆದ್ದರಿಂದ ಉತ್ತರ ಪ್ರದೇಶವು ಉಳಿದ ರಾಜ್ಯಗಳಿಗಿಂತ ಮುಖ್ಯವಾಗಿ ಬಿಜೆಪಿಯ ಈ ಚುನಾವಣಾ ಹೋರಾಟಕ್ಕೆ ಪ್ರಮುಖ ರಾಜ್ಯವಾಗಿ ಬಿಂಬಿತವಾಗಿದೆ.

 ಉತ್ತರ ಪ್ರದೇಶದ ಆಡಳಿತದ ಮೇಲೆ ವಿಪಕ್ಷಗಳ ಕಣ್ಣು

ಉತ್ತರ ಪ್ರದೇಶದ ಆಡಳಿತದ ಮೇಲೆ ವಿಪಕ್ಷಗಳ ಕಣ್ಣು

ಉತ್ತರ ಪ್ರದೇಶವು ದೇಶದಲ್ಲೇ ಅಧಿಕ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ರಾಜ್ಯವಾಗಿದೆ. ಈ ರಾಜ್ಯವನ್ನು ದೇಶದಲ್ಲೇ ಅತೀ ದೊಡ್ಡದಾದ ರಾಜ್ಯ ಹಾಗೂ ರಾಜಕೀಯವಾಗಿ ಅತೀ ಮುಖ್ಯವಾದ ರಾಜ್ಯ ಎಂದೇ ಪರಿಗಣಿಸಲಾಗಿದೆ. ಈ ರಾಜ್ಯದಲ್ಲಿ ಪ್ರಸ್ತುತ ಅಪ್ನಾ ದಳದ ಮೈತ್ರಿಯೊಂದಿಗೆ ಬಿಜೆಪಿಯು ಆಡಳಿತದ ಚುಕ್ಕಾಣಿಯನ್ನು ಹಿಡಿದುಕೊಂಡಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷವು ಅಧಿಕಾರದ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್‌ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತವನ್ನು ತನ್ನ ತೆಕ್ಕೆಗೆ ಪಡೆಯುವ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ಕಾರ್ಯವನ್ನು ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಎಸ್‌ಪಿ ಈಗಾಗಲೇ ಆರಂಭ ಮಾಡಿದೆ.

 ಆಡಳಿತರೂಢ ಬಿಜೆಪಿಯ ಮುಂದಿದೆ ಹಲವಾರು ಸವಾಲು

ಆಡಳಿತರೂಢ ಬಿಜೆಪಿಯ ಮುಂದಿದೆ ಹಲವಾರು ಸವಾಲು

ಇತ್ತೀಚೆಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಎಬಿಪಿ-ಸಿವೋಟರ್‌ ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಮತ್ತೆ ಆಡಳಿತವನ್ನು ಪಡೆಯಲಿದೆ ಎಂದು ತಿಳಿಸಿದೆ. ಹಾಗೆಯೇ ಬಿಜೆಪಿಯು ಯಾವುದೇ ತೊಂದರೆಯಿಲ್ಲದೇ ಸರಾಗವಾದ ಭರ್ಜರಿ ಜಯ ಗಳಿಸಲಿದೆ ಎಂದು ಈ ಸಮೀಕ್ಷೆಯು ಹೇಳಿದೆ. ಆದರೆ ಉತ್ತರ ಪ್ರದೇಶದಲ್ಲಿ ಆಡಳಿತವನ್ನು ಉಳಿಸಿಕೊಳ್ಳಲು ಬಿಜೆಪಿಯು ಹಲವಾರು ವಿಚಾರಗಳನ್ನು ಈಗಲೇ ಸರಿಪಡಿಸಿಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಕೋವಿಡ್‌ ನಿರ್ವಹಣೆಯಲ್ಲಿನ ಲೋಪ, ಗಂಗೆಯಲ್ಲಿ ತೇಲಿ ಬಂದ ಶವಗಳ ರಾಶಿ, ಹಣದುಬ್ಬರ, ಅಪರಾಧ ಸಂಖ್ಯೆಯಲ್ಲಿ ಹೆಚ್ಚಳ, ನ್ಯಾಯಾಗ ವ್ಯವಸ್ಥೆಯ ಪರಿಸ್ಥಿತಿ, ರೈತರ ಪ್ರತಿಭಟನೆ, ರೈತರ ಮೇಲಿನ ದೌರ್ಜನ್ಯ, ಸಾಮಾನ್ಯ ಜನರ ಮೇಲೆ ಪೊಲೀಸರ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರವಾದ ಹೇಳಿಕೆಗಳು ಇವೆಲ್ಲವೂ ಕೂಡಾ ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತವನ್ನು ಪಡೆಯಲು ಅಡ್ಡಲಾಗಿರುವ ಮುಳ್ಳಿನ ಕೋಟೆಯಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಶಾಸಕರುಗಳೇ ಬಹಿರಂಗ ಹೇಳಿಕೆ ನೀಡಿದ್ದು ಹೈಕಮಾಂಡ್‌ಗೆ ತಲೆ ನೋವಿನ ವಿಚಾರವಾಗಿದೆ. ಆದರೆ ಬಿಜೆಪಿಯು ಹಿಂದುತ್ವ ಹಾಗೂ ರಾಮ ಮಂದಿರದ ಹೆಸರಿನಲ್ಲಿ ಇಲ್ಲಿ ತನ್ನ ಪ್ರಾಬಲ್ಯ ಸಾಧಿಸುವ ಪ್ರಯತ್ನ ಮಾಡುವ ಎಲ್ಲಾ ಸಾಧ್ಯತೆಗಳು ಇದೆ.

 ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜಾತಿ ಆಧಾರದ ಕಾರ್ಯತಂತ್ರ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜಾತಿ ಆಧಾರದ ಕಾರ್ಯತಂತ್ರ

ಬಿಜೆಪಿಯು ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ಈಗ ಜಾತಿ, ಧರ್ಮ ಹಾಗೂ ಭೌಗೋಳಿಕ ವ್ಯಾಪ್ತಿಯ ಆಧಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಎಲ್ಲಾ ಜಾತಿಯ ಜನರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ಯುಪಿ ಬಿಜೆಪಿ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದೆ. ಮಾಜಿ ಕಾಂಗ್ರೆಸ್‌ ನಾಯಕ ಜಿತಿನ್‌ ಪ್ರಸಾದ್ ಈಗ ಬಿಜೆಪಿಯ ಸಚಿವ ಸಂಪುಟ ಸದಸ್ಯರಾಗಿದ್ದಾರೆ. ಇವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಆಪ್ತರಾಗಿದ್ದರು. ಹಾಗೆಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಉನ್ನತ ಹುದ್ದೆಯಲ್ಲಿ ಇರುವ ಬ್ರಾಹ್ಮಣ ಸಮುದಾಯದ ವ್ಯಕ್ತಿಯಾಗಿದ್ದರು. ಈಗ ಬಿಜೆಪಿಯು ಕಾಂಗ್ರೆಸ್‌ನ ಪ್ರಭಾವಿ ಬ್ರಾಹ್ಮಣ ವ್ಯಕ್ತಿಗೆ ಸ್ಥಾನ ನೀಡುವ ಮೂಲಕ ಬ್ರಾಹ್ಮಣ ಸಮುದಾಯದ ಮತಕ್ಕೆ ಬಲೆ ಬೀಸುವ ಯತ್ನವನ್ನು ಮಾಡಿದೆ. ಉತ್ತರ ಪ್ರದೇಶದ ಸುಮಾರು ಶೇಕಡ 13 ರಷ್ಟು ಮತದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ ಎಂಬುವುದು ಇಲ್ಲಿ ಪ್ರಮುಖ ಅಂಶ. ಜಿತಿನ್‌ ಪ್ರಸಾದ್ ಮಾತ್ರವಲ್ಲದೇ, ಬರೇಲಿಯ ಬಹೇದಿ ಕ್ಷೇತ್ರದ ಚತ್ರಪಾಲ್‌ ಗಂಗಾವರ್‌, ಆಗ್ರಾದ ಎಮ್‌ಎಲ್‌ಸಿ ಧರ್ಮವೀರ ಪ್ರಜಾಪತಿ, ಗಾಜಿಯಪುರ ಸಾದಾರ್‌ನ ಡಾ. ಸಂಗೀತ ಬಲವಂತ್‌ ಬಿಂದ್‌ಗೆ ಸಚಿವ ಸ್ಥಾನವನ್ನು ಉತ್ತರ ಪ್ರದೇಶ ಸರ್ಕಾರದಲ್ಲಿ ನೀಡಲಾಗಿದೆ. ಈ ಮೂವರು ಕೂಡಾ ಹಿಂದುಳಿದ ವರ್ಗಕ್ಕೆ ಸೇರಿದವರು ಆಗಿದ್ದಾರೆ. ಹಾಗೆಯೇ ಹಸ್ತಿನಾಪುರ ಶಾಸಕ ದಿನೇಶ್ ಖತೀಕ್‌, ಪೂರ್ವ ಯುಪಿಯ ಸೋನಭದ್ರಾದಲ್ಲಿ ಓಬ್ರಾದಿಂದ ಮೊದಲ ಬಾರಿಗೆ ಶಾಸಕರಾದ ಸಂಜೀವ್ ಕುಮಾರ್, ಬಲರಾಂಪುರ ಸದರ್‌ನಿಂದ ಮೊದಲ ಬಾರಿಗೆ ಶಾಸಕರಾದ ಪಾಲ್ತು ರಾಮ್‌ಗೆ ಕೂಡಾ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಪೈಕಿ ಬಲರಾಂಪುರ ಸದರ್‌ನಿಂದ ಮೊದಲ ಬಾರಿಗೆ ಶಾಸಕರಾದ ಪಾಲ್ತು ರಾಮ್‌ ಈ ಹಿಂದೆ ಬಿಎಸ್‌ಪಿಯಲ್ಲಿ ಇದ್ದು, ಸುಮಾರು ಎರಡು ದಶಕಗಳ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಇನ್ನು ಈ ಪೈಕಿ ಹಸ್ತಿನಾಪುರ ಶಾಸಕ ದಿನೇಶ್ ಖತೀಕ್‌ ಹಾಗೂ ಪಾಲ್ತು ರಾಮ್‌ ಪರಿಶಿಷ್ಟ ಜಾತಿಯವರು ಆಗಿದ್ದಾರೆ, ಸಂಜೀವ್ ಕುಮಾರ್ ಪರಿಶಿಷ್ಟ ಪಂಗಡದವರು ಆಗಿದ್ದಾರೆ.

 ರೈತರ ಮನವೊಲಿಸಲು ಯುಪಿಯಲ್ಲಿ ಬಿಜೆಪಿಯ ಯತ್ನ

ರೈತರ ಮನವೊಲಿಸಲು ಯುಪಿಯಲ್ಲಿ ಬಿಜೆಪಿಯ ಯತ್ನ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ವರ್ಷದಿಂದ ಪ್ರತಿಭಟನೆ ಮಾಡುತ್ತಲಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿಯೂ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಉತ್ತರ ಪ್ರದೇಶ ಸರ್ಕಾರವು ಕಬ್ಬಿನ ಬೆಳೆ ಏರಿಕೆ ಮಾಡುವ ಮೂಲಕ ರೈತರ ಪರವಾಗಿ ನಾವಿದ್ದೇವೆ ಎಂದು ಬಿಂಬಿಸುವ ಯತ್ನವನ್ನು ಮಾಡಿದೆ. ಈ ಬಗ್ಗೆ ಸೆಪ್ಟೆಂಬರ್‌ 26 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆಯೊಂದನ್ನು ಮಾಡಿದ್ದಾರೆ. "ಈವರೆಗೆ ಕಬ್ಬಿನ ಬೆಲೆಯು ಕ್ವಿಂಟಾಲ್‌ಗೆ 325 ರೂಪಾಯಿ ಆಗಿತ್ತು, ಇನ್ನು ಮುಂದೆ ಕಬ್ಬಿನ ಬೆಲೆಯು ಕ್ವಿಂಟಾಲ್‌ಗೆ 350 ರೂಪಾಯಿ ಆಗಲಿದೆ," ಎಂದು ತಿಳಿಸಿದೆ. ಆದರೆ ಇ‌ತ್ತೀಚೆಗೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವು ಉತ್ತರ ಪ್ರದೇಶ ಸರ್ಕಾರದ ಮೇಲೆ ರೈತರ ಆಕ್ರೋಶ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಈ ಪೈಕಿ ನಾಲ್ವರು ರೈತರು ಆಗಿದ್ದಾರೆ. ಕೇಂದ್ರ ಸಚಿವ ಅಜಯ್‌ ಮಿಶ್ರಾರ ಪುತ್ರ ಆಶೀಶ್‌ ಮಿಶ್ರಾ ಇದ್ದ ವಾಹನವು ರೈತರ ಮೇಲೆ ಹರಿದು ರೈತರು ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಆರೋಪವನ್ನು ಅಲ್ಲಗಳೆದಿರುವ ಮಿಶ್ರಾ ಮಾತ್ರ ಇದು ತಮಗೆ ಸೇರಿದ ವಾಹನ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅದರಲ್ಲಿ ತನ್ನ ಮಗ ಇರಲಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಆಶೀಶ್‌ ವಿರುದ್ದ ಎಫ್‌ಐಆರ್‌ ದಾಖಲಾಗಿದೆ, ಆದರೆ ಈವರೆಗೂ ಯಾರದೇ ಬಂಧನವಾಗಿಲ್ಲ. ಈ ಘಟನೆಯ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+