ಜಲಮಂಡಳಿಯ OTS ಯೋಜನೆಗೆ ಭರ್ಜರಿ ಸ್ಪಂದನೆ: ಕೋಟಿ ಕೋಟಿ ಹಣ ಸಂಗ್ರಹ, ಲಕ್ಷ ಲಕ್ಷ ನೋಟಿಸ್ ಜಾರಿ
ಬೆಂಗಳೂರು: ಸರ್ಕಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿನ ಬಾಕಿ ನೀರಿನ ಬಿಲ್ ವಸೂಲಿಗೆ ಶೇ.100ರಷ್ಟು ಬಡ್ಡಿ ವಿನಾಯಿತಿಯೊಂದಿಗೆ ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಗೆ ಜಾರಿಗೆ ತಂದಿತ್ತು. ಈ ಯೋಜನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, 2ಲಕ್ಷಕ್ಕೂ ಅಧಿಕ ನೋಟಿಸ್ ಜಾರಿ ಮಾಡಿದ್ದು, ಕೋಟ್ಯಾಂತರ ರೂಪಾಯಿ ಹಣ ಸಂಗ್ರಹವಾಗಿದೆ. ಮೊದಲ ಹಂತದಲ್ಲಿ ಭರ್ಜರಿ ಕಲೆಕ್ಟನ್ ಆಗಿದೆ.
ಈವರೆಗೆ ಬಿಲ್ ಕಟ್ಟಲು ಹಿಂದೆ ಮುಂದೆ ನೋಡುತ್ತಿದ್ದ ಗ್ರಾಹಕರು, ಒಟಿಎಸ್ ಯೋಜನೆಯಡಿ ಬಿಲ್ ಪಾವತಿಗೆ ಮುಂದಾಗಿದ್ದು ಸ್ಪಷ್ಟವಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಜಿಬಿಎ ವ್ಯಾಪ್ತಿ ಆಸ್ತಿಗಳ ಬಾಕಿ ಕೋಟ್ಯಾಂತರ ರೂಪಾಯಿ ತೆರಿಗೆ ವಸೂಲಿಗೆ ಇದೇ ನಿಯಮ ಅನುರಿಸಿತ್ತು. ಕಳೆದ ಯುಗಾದಿ ಹಬ್ಬಂದಂದು ಡಿಕೆ ಶಿವಕುಮಾರ್ ಅವರು ಈ ಯೋಜನೆ ಘೋಷಿಸಿ ಸಿಹಿ ಸುದ್ದಿ ನೀಡಿದ್ದರು.

ಜಲಮಂಡಳಿಯ ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 2.12 ಲಕ್ಷಕ್ಕೂ ಅಧಿಕ ನೋಟಿಸ್ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲೇ 12.15 ಕೋಟಿ ರೂ. ಸಂಗ್ರಹವಾಗಿದೆ. ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ರೂಪಿಸಲಾದ ಈ ಯೋಜನೆಯು, ತ್ವರಿತ ಆಡಳಿತಾತ್ಮಕ ಅನುಷ್ಠಾನ ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
3.73 ಲಕ್ಷ ಗ್ರಾಹಕರ ಬಿಲ್ ಬಾಕಿ
11 ಲಕ್ಷ ಕಾವೇರಿ ನೀರಿನ ಸಂಪರ್ಕದಲ್ಲಿ, 5.11 ಲಕ್ಷ ಮಂದಿ ನೀರಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು. ಇದರಿಂದ ಜಲಮಂಡಳಿಗೆ ಆರ್ಥಿಕ ಹೊರೆ ಉಂಟಾಗಿತ್ತು. ಯೋಜನೆ ಆರಂಭಿಸಿದ ಅಧಿಕಾರಿಗಳು ದಾಖಲೆ ಸಂಖ್ಯೆಯ ಹಳೆಯ ದತ್ತಾಂಶಗಳನ್ನು ಪರಿಶೀಲಿಸಿದರು. ಮಂಡಳಿಯ 3,73,883 ದಾಖಲೆಗಳ ಪೈಕಿ ಓಟಿಎಸ್ ಯೋಜನೆಗೆ ಅರ್ಹವಾದ 2,81,019 ದಾಖಲೆಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದೆ. ಈಗಾಗಲೇ 2,12,359 ನೋಟಿಸ್ ಗಳನ್ನು ಮುದ್ರಿಸಿ ಆಯಾ ಉಪ-ವಿಭಾಗಗಳಿಗೆ ವಿತರಣೆಗಾಗಿ ಕಳುಹಿಸಲಾಗಿದೆ.
2 ದಿನದಲ್ಲಿ 50,000 ನೋಟಿಸ್ ಜಾರಿ
ಈ ಬೃಹತ್ ಪ್ರಮಾಣದ ನೋಟಿಸ್ ಗಳನ್ನು ನಿಭಾಯಿಸಲು ಮತ್ತು ಗ್ರಾಹಕರಿಗೆ ಯೋಜನೆಯ ಲಾಭ ಪಡೆಯಲು ವಿಳಂಬವಾಗದಂತೆ ನೋಡಿಕೊಳ್ಳಲು, ಮಂಡಳಿಯು ಮುದ್ರಣ ಕಾರ್ಯವನ್ನು ಹೊರಗುತ್ತಿಗೆ ನೀಡಿದೆ. ನಿಯೋಜಿತ ಸಂಸ್ಥೆಯು ಪ್ರಸ್ತುತ ಪ್ರತಿ 48 ಗಂಟೆಗಳಿಗೆ 50,000 ದಷ್ಟು (ಆಯಾ ಗ್ರಾಹಕರಿಗೆ ಅನುಗುಣವಾದ ಮಾಹಿತಿಯನ್ನು ಒಳಗೊಂಡ) ನೋಟಿಸ್ ಗಳನ್ನು ಮುದ್ರಿಸುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬಾಕಿ ಉಳಿದಿರುವ 1,17,098 ನೋಟಿಸ್ ಗಳನ್ನು 2026 ಮೇ 10 ರೊಳಗೆ ಮುದ್ರಿಸಿ, ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಮಂಡಳಿ ಹೊಂದಿದೆ.
ಬಾಕಿ 471.56 ಕೋಟಿ ರೂ ಸಂಗ್ರಹದ ಗುರಿ
ಈ ಯೋಜನೆಯ ಮೂಲಕ ಒಟ್ಟು 471.56 ಕೋಟಿ ರೂ.ಗಳ ಅಸಲು ಬಾಕಿಯನ್ನು ಸಂಗ್ರಹಿಸುವ ಗುರಿ ಜಲಮಂಡಳಿಯದ್ದಾಗಿದೆ. 252.29 ಕೋಟಿ ರೂ.ಗಳಷ್ಟು ಬಡ್ಡಿ ಮನ್ನಾದ ಸೌಲಭ್ಯವನ್ನು ಗ್ರಾಹಕರಿಗೆ ಈ ಯೋಜನೆ ಒದಗಿಸುತ್ತಿದೆ. ಸಾರ್ವಜನಿಕರಿಂದ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಿತರಿಸಲಾದ ಕೇವಲ 56,765 ನೋಟಿಸ್ ಗಳ ಮೊದಲ ಬ್ಯಾಚ್ ನಿಂದಲೇ ಮಂಡಳಿಯು ಬರೋಬ್ಬರಿ 12.15 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಈ ಆರಂಭಿಕ ಸಂಗ್ರಹಣೆಯು, ಗ್ರಾಹಕ-ಸ್ನೇಹಿ ಯೋಜನೆಗಳನ್ನು ಪ್ರಾರಂಭಿಸಿದಾಗ ನಾಗರಿಕರು ತಮ್ಮ ಬಾಕಿಯನ್ನು ಪಾವತಿಸಲು ಆಸಕ್ತಿ ತೋರಿಸುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ.
ಈ ಯೋಜನೆಯ ಯಶಸ್ಸಿನ ಕುರಿತು ಮಾತನಾಡಿದ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ಜಲಮಂಡಳಿಯು ಜನಪರವಾದ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧವಾಗಿದೆ. ಯಾವುದೇ ಆರ್ಥಿಕ ಸಂಕಷ್ಟವಿಲ್ಲದೆ ಪ್ರತಿಯೊಬ್ಬ ನಾಗರಿಕರಿಗೂ ಶುದ್ಧ ನೀರು ಸಿಗಬೇಕು ಎಂಬ ಅವರ ಸಂಕಲ್ಪವೇ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ ಎಂದರು.
ಒನ್ ಟೈಮ್ ಸೆಟಲ್ಮೆಂಟ್ ಯೋಜನೆಗೆ ಸಿಗುತ್ತಿರುವ ಅಭೂತಪೂರ್ವ ಆರಂಭಿಕ ಪ್ರತಿಕ್ರಿಯೆಯು, ನಾವು ಪಾರದರ್ಶಕ ಮತ್ತು ಗೌರವಾನ್ವಿತ ವ್ಯವಸ್ಥೆಯನ್ನು ಒದಗಿಸಿದಾಗ ಗ್ರಾಹಕರು ಸುಲಭವಾಗಿ ಸ್ಪಂದಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಎಲ್ಲಾ ಅರ್ಹ ನಾಗರಿಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ವಿನಂತಿಸಿಕೊಂಡರು.
ಆದಾಯ ಸಂಗ್ರಹಣೆಯಲ್ಲಿನ ಅಡೆತಡೆಗಳನ್ನು ನಿವಾರಿಸುವ ಮತ್ತು ಗ್ರಾಹಕರಿಗೆ ಸಾಲದ ಹೊರೆಯಿಂದ ಮುಕ್ತರಾಗಲು ಅವಕಾಶ ಕಲ್ಪಿಸುವ ಮೂಲಕ, ಓಟಿಎಸ್ ಯೋಜನೆಯು ಬೆಂಗಳೂರಿನ ನಾಗರಿಕರಿಗೆ ಹಾಗೂ ಜಲಮಂಡಳಿಯ ಆರ್ಥಿಕ ಭದ್ರತೆಗೆ ದಾರಿದೀಪವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Click it and Unblock the Notifications