10 ಗಂಟೆ 45 ನಿಮಿಷಗಳ ಕಾಲ ಶ್ರೀಲಂಕಾದಿಂದ ಭಾರತಕ್ಕೆ ಈಜಿ ಬಂದು ಹೊಸ ದಾಖಲೆ ಬರೆದ ಬೆಂಗಳೂರು ದಂಪತಿ
ಬೆಂಗಳೂರು: ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಬೆಂಗಳೂರಿನ ದಂಪತಿ ನಿರೂಪಿಸಿದ್ದಾರೆ. ಸುಮಾರು 10 ಗಂಟೆ 45 ನಿಮಿಷಗಳ ಕಾಲ ಸಮುದ್ರದ ಭೀಕರ ಅಲೆಗಳು, ದಣಿವು ಮತ್ತು ಅಲೆಗಳ ವಿರುದ್ಧ ಹೋರಾಡಿದ ಈ ದಂಪತಿ, ಶ್ರೀಲಂಕಾದಿಂದ ಭಾರತಕ್ಕೆ ಈಜುವ ಮೂಲಕ ಐತಿಹಾಸಿಕ 'ರಾಮ್ ಸೇತು' ಮಾರ್ಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನ ನಿವಾಸಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಅಪರೂಪದ ಸಾಧನೆ ಮಾಡಿದ ದಂಪತಿ. ಇವರು ಶ್ರೀಲಂಕಾದ ತಲೈಮನ್ನಾರ್ನಿಂದ ಭಾರತದ ಧನುಷ್ಕೋಡಿವರೆಗೆ ಇರುವ ತೆರೆದ ಸಮುದ್ರದ ಸವಾಲಿನ ಮಾರ್ಗವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ. ಸಮುದ್ರದ ಬಲಿಷ್ಠ ಅಲೆಗಳು, ಅನಿರೀಕ್ಷಿತ ಹವಾಮಾನ ಬದಲಾವಣೆ ಮತ್ತು ದೈಹಿಕ ಬಳಲಿಕೆಯ ನಡುವೆಯೂ ದಂಪತಿ ತಮ್ಮ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾದರು. ಈ ಸಾಹಸದ ಉದ್ದಕ್ಕೂ ಇವರಿಗೆ ಬೆಂಬಲವಾಗಿ ಪ್ಯಾರಾಮೆಡಿಕ್ಸ್ ತಂಡಗಳು, ಕೋಸ್ಟ್ ಗಾರ್ಡ್ ಹಾಗೂ ತಾಂತ್ರಿಕ ಸಿಬ್ಬಂದಿಗಳು ದೋಣಿಗಳ ಮೂಲಕ ಸಾಥ್ ನೀಡಿದ್ದರು.

ಭಾರತದ ದಡವನ್ನು ಮುಟ್ಟಿದ ತಕ್ಷಣವೇ ದಂಪತಿ ತಮ್ಮ ಸಂಭ್ರಮವನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. "ನಾವು ಸಾಧಿಸಿದೆವು! ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆ 45 ನಿಮಿಷಗಳಲ್ಲಿ ಈಜಿ ಬಂದಿದ್ದೇವೆ. ನೀರಿನಲ್ಲಿ ಕಳೆದ ಈ ಸಮಯ ಅತ್ಯಂತ ಕಠಿಣವಾಗಿತ್ತು. ಈಗ ನಮಗೆ 12 ಗಂಟೆಗಳ ಕಾಲ ನಿದ್ರೆಯ ಅಗತ್ಯವಿದೆ" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ದಂಪತಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇವರ ಧೈರ್ಯ ಮತ್ತು ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. "ನಿಜಕ್ಕೂ ಇದು ಸ್ಫೂರ್ತಿದಾಯಕ ಸಾಧನೆ" ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಹಾರೈಸಿದ್ದಾರೆ.
ತೆರೆದ ಸಮುದ್ರದಲ್ಲಿ ಈಜುವುದು ಅಂದುಕೊಂಡಷ್ಟು ಸುಲಭವಲ್ಲ. ಸ್ವಿಮ್ಮಿಂಗ್ ಪೂಲ್ ಅಥವಾ ನಿಯಂತ್ರಿತ ಕ್ರೀಡಾಂಗಣಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿರುತ್ತದೆ. ಇಲ್ಲಿ ಸಮುದ್ರದ ಪ್ರವಾಹಗಳು ಯಾವುದೇ ಕ್ಷಣದಲ್ಲಿ ಬದಲಾಗಬಹುದು. ಹವಾಮಾನದ ಏರಿಳಿತಗಳು ಮತ್ತು ಉಪ್ಪುನೀರಿನಲ್ಲಿ ದೀರ್ಘಕಾಲ ಈಜುವುದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದೊಡ್ಡ ಸವಾಲೊಡ್ಡುತ್ತದೆ. ಇವೆಲ್ಲವನ್ನೂ ಮೆಟ್ಟಿ ನಿಂತು ಈ ದಂಪತಿ ಸಾಧನೆ ಮಾಡಿದ್ದಾರೆ.
ಈ ಸಾಹಸಮಯ ಈಜು ಅಭಿಯಾನವನ್ನು ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸಲು ಈ ಒಂದು ಪ್ರಯತ್ನವನ್ನು ನಡೆಸಲಾಯಿತು. ಕೇವಲ ವೈಯಕ್ತಿಕ ದಾಖಲೆಗಾಗಿ ಮಾತ್ರವಲ್ಲದೆ, ಉಭಯ ದೇಶಗಳ ನಡುವಿನ ಬಾಂಧವ್ಯದ ಸಂಕೇತವಾಗಿ ಈ ಈಜು ಸಾಹಸವನ್ನು ಕೈಗೊಳ್ಳಲಾಗಿತ್ತು.












Click it and Unblock the Notifications