ಪಕ್ಷದ ಸಂಘಟನಾ ಸಭೆಯಲ್ಲಿ ಜೆಡಿಎಸ್ ವಿಸರ್ಜನೆಯ ಮಾತನಾಡಿದ ಕುಮಾರಸ್ವಾಮಿ
ಬಾಗಲಕೋಟೆ, ಫೆ 1: ಜಾತ್ಯಾತೀತ ಜನತಾದಳ ತಮ್ಮ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ.
ಪಕ್ಷದ ಮೊದಲ ಪಂಕ್ತಿಯ ಮುಖಂಡರ ಕಾರ್ಯವೈಖರಿಯಿಂದ ಬೇಸರಗೊಂಡು, ಪಕ್ಷದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಗೌಡ್ರು ಮತ್ತು ಕುಮಾರಸ್ವಾಮಿ ಮುಂದಾಗಿದ್ದಾರೆ.
ಪಕ್ಷದ ಚಟುವಟಿಕೆಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ವಿವಿಧ ಪದಾಧಿಕಾರಿ ಹುದ್ದೆಗೆ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನು ಆಲಿಸಿ ನೇಮಕ ಮಾಡಿಕೊಳ್ಳಲಾಗಿದೆ.
ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿ, ಪಕ್ಷಕ್ಕಾಗಿ ದುಡಿಯಿರಿ ಎಂದು ಶಪಥವೊಂದನ್ನು ಮಾಡಿದ್ದಾರೆ.
"ಎರಡು ಬಾರಿ ಅಧಿಕಾರಕ್ಕೆ ಬಂದಾಗ, ನನ್ನ ಆಡಳಿತ ಪರಿಧಿಯಲ್ಲಿ ಹಲವಾರು ಯೋಜನೆಗಳನ್ನು ತಂದಿದ್ದೇನೆ. ಆದರೆ, ಎರಡೂ ಬಾರಿ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಸರಕಾರ ರಚಿಸಿದ್ದರಿಂದ, ನನಗೆ ಸಂಪೂರ್ಣ ಅಧಿಕಾರವಿರಲಿಲ್ಲ, ಮುಂದಿನ ಚುನಾವಣೆಯ ಹೊತ್ತಿಗೆ ಈ ರೀತಿಯ ಪರಿಸ್ಥಿತಿ ಎದುರಾಗಬಾರದು"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
"ನಾನು ಈ ಸಭೆಯ ಮೂಲಕ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ಇದುವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ನಮ್ಮ ರಾಜ್ಯದ ಜನತೆ ಆಶೀರ್ವಾದವನ್ನು ಮಾಡಿದ್ದಾರೆ. ನಾನು ಎರಡು ಬಾರಿ ಸಿಎಂ ಆದಾಗಲೂ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಮುಲಾಜಿನಲ್ಲಿ ಅಧಿಕಾರ ನಡೆಸಬೇಕಾಯಿತು. ಒಂದು ಬಾರಿ ಜೆಡಿಎಸ್ಸಿಗೆ ಜನ ಆಶೀರ್ವಾದವನ್ನು ಮಾಡಲಿ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
"ಮುಂದಿನ ಸಲವಾದರೂ ಇನ್ನೊಬ್ಬರ ಮನೆಬಾಗಿಲಿಗೆ ಹೋಗುವ ಹಾಗೆ ಮಾಡಬೇಡಿ. ದಯವಿಟ್ಟು ನಮಗೆ ಸಂಪೂರ್ಣ ಮೆಜಾರಿಟಿಯನ್ನು ನೀಡಿ, ಹೇಗೆ ಅಧಿಕಾರ ಮಾಡಬಹುದು ಎಂದು ತೋರಿಸಿಕೊಡುತ್ತೇನೆ. ಬಡವರ ಪರ ಕೆಲಸ ಮಾಡಿ, ರಾಜ್ಯವನ್ನು ಅಭಿವೃದ್ದಿಯನ್ನು ಮಾಡುತ್ತೇನೆ"ಎಂದು ಕುಮಾರಸ್ವಾಮಿ ಮನವಿ ಮಾಡಿದರು.
"ನಾನು ಹೇಳಿದ ಕೆಲಸವನ್ನು ಮಾಡಿ ತೋರಿಸುತ್ತೇನೆ, ಅದು ಸಾಧ್ಯವಾಗಿಲ್ಲ ಎಂದಾದರೆ, ಜೆಡಿಎಸ್ ಪಕ್ಷವನ್ನು ವಿಸರ್ಜಿಸಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತೇನೆ"ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದ್ದಾರೆ.