"ಟ್ರ್ಯಾಕ್ಟರ್ಗಳನ್ನು ಪಶ್ಚಿಮ ಬಂಗಾಳಕ್ಕೂ ತೆಗೆದುಕೊಂಡು ಹೋಗುತ್ತೇವೆ ಹುಷಾರ್"
ನವದೆಹಲಿ, ಫೆಬ್ರವರಿ 18: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನು ಸರ್ಕಾರ ಪರಿಗಣಿಸದೇ ಇದ್ದರೆ ನಮ್ಮ ಹೋರಾಟವನ್ನು, ಟ್ರ್ಯಾಕ್ಟರ್ಗಳನ್ನು, ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರೈಲು ರೋಕೊ ನಡೆಸಿದ ನಂತರ ಹರಿಯಾಣದ ಖರಾಕ್ ಪುನಿಯಾ ಎಂಬಲ್ಲಿ ಮಹಾ ಪಂಚಾಯತ್ ನಡೆಸಿ ಮಾತನಾಡಿದ ರಾಕೇಶ್ ಟಿಕಾಯತ್, "ಬೆಳೆಗಳ ಬೆಲೆಯನ್ನು ಏರಿಸಿಲ್ಲ. ಆದರೆ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದೆ. ಈ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ತವಾಗಿ ನಿರ್ವಹಿಸದೇ ಇದ್ದರೆ, ನಮ್ಮ ಟ್ರ್ಯಾಕ್ಟರ್ಗಳನ್ನು ನಾವು ಪಶ್ಚಿಮ ಬಂಗಾಳಕ್ಕೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿಯೂ ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯುತ್ತಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶಾದ್ಯಂತ ರೈತ ಕಹಳೆ: "ಜೀವನ ಕಿತ್ತುಕೊಂಡವರಿಗೆ ಮತ ಹಾಕಬೇಕೇ"?
ಬೆಳೆಗಳ ಕೊಯ್ಲಿನ ಸಮಯ ಬಂದಿದೆ. ರೈತರು ವಾಪಸ್ ಗ್ರಾಮಗಳಿಗೆ ಮರಳುತ್ತಾರೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ತಿಳಿವಳಿಕೆ. ಇನ್ನೆರಡು ತಿಂಗಳಲ್ಲಿ ಪ್ರತಿಭಟನೆ ಕೊನೆಯಾಗುತ್ತದೆ ಎಂದುಕೊಳ್ಳುವುದು ತಪ್ಪು. ನಾವು ಬೆಳೆ ಕೊಯ್ಲನ್ನೂ ಮಾಡುತ್ತೇವೆ. ಪ್ರತಿಭಟನೆಯನ್ನೂ ನಡೆಸುತ್ತೇವೆ ಎಂದು ಸವಾಲು ಹಾಕಿದರು.
ಕೃಷಿ ಕಾಯ್ದೆಗಳ ವಿರುದ್ಧ ನಾವು ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ. ಗುಜರಾತ್ ಗೆ ಹೋಗುತ್ತೇವೆ, ಮಹಾರಾಷ್ಟ್ರಕ್ಕೆ ಹೋಗುತ್ತೇವೆ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳದಲ್ಲೂ ಕಿಸಾನ್ ಮಹಾ ಪಂಚಾಯತ್ ನಡೆಸುತ್ತೇವೆ. ಪಶ್ಚಿಮ ಬಂಗಾಳದ ರೈತರು ಕೂಡಾ ಹಲವು ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿರುವ ರೈತರು ಬೆಳೆದ ಬೆಳೆಗೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರಾಕೇಶ್ ಟಿಕಾಯತ್ ಆರೋಪಿಸಿದರು.
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ.