"ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ; ದೀರ್ಘ ಹೋರಾಟಕ್ಕೆ ನಾವು ಸಿದ್ಧ"
ನವದೆಹಲಿ, ಡಿಸೆಂಬರ್ 26: ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಪ್ರಧಾನಿ ಮೋದಿ ಶುಕ್ರವಾರ ರೈತರಿಗೆ ಕರೆ ಕೊಟ್ಟಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವು ರೈತ ಸಂಘಗಳು, "ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ದೀರ್ಘಾವಧಿ ಹೋರಾಟಕ್ಕೆ ನಾವು ಸಿದ್ಧವಾಗಿದ್ದೇವೆ" ಎಂದಿದ್ದಾರೆ.
ಶನಿವಾರ ದೆಹಲಿಯಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ 31ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಆಹ್ವಾನ ನೀಡಿದ್ದು, ಕೆಲವು ರೈತ ಸಂಘಗಳು ಪ್ರತಿಕ್ರಿಯೆ ನೀಡಿವೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಇದು ಹೀಗೇ ಮುಂದುವರೆದರೆ ಪ್ರತಿಭಟನೆಯನ್ನು ಸುದೀರ್ಘವಾಗಿ ನಡೆಸುತ್ತೇವೆ ಎಂದು ಹೇಳಿವೆ.
ನರೇಂದ್ರ ಮೋದಿ ಅವರು ರೈತರನ್ನು ಉದ್ದೇಶಿಸಿ ನಿನ್ನೆ ಮಾತನಾಡಿದರು. ಆದರೆ ಆ ಮಾತುಗಳಲ್ಲಿ ಸರ್ಕಾರ ತನ್ನ ಕಾಯ್ದೆಗಳನ್ನು ಹಿಂಪಡೆಯುವ ಯಾವುದೇ ಸೂಚನೆ ದೊರೆತಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕಾರ್ಯನಿರತ ಸದಸ್ಯ ಜಗಮೋಹನ್ ಸಿಂಗ್ ಹೇಳಿದ್ದಾರೆ.

"ಕಾಯ್ದೆಗಳು ರದ್ದಾಗುವವರೆಗೂ ನಾವು ದೆಹಲಿ ಗಡಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಪ್ರಜಾಪ್ರಭುತ್ವವಲ್ಲದ ನಡೆಯ ವಿರುದ್ಧ ನಮ್ಮ ಹೋರಾಟ. ಸರ್ಕಾರ ನಮ್ಮ ಪ್ರಸ್ತಾವವನ್ನು ಕೇಳುತ್ತಿದೆ. ಆದರೆ ತಾರ್ಕಿಕ ಪರಿಹಾರವನ್ನು ಸರ್ಕಾರವೇ ನೀಡಬೇಕಿದೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೆ, ಈ ಕಾಯ್ದೆಗಳನ್ನು ಅವರು ಜಾರಿಗೆ ತರುತ್ತಲೇ ಇರಲಿಲ್ಲ. ಈಗ ತಿದ್ದುಪಡಿ ಕುರಿತು ಮಾತನಾಡಿ ಏನು ಪ್ರಯೋಜನ. ನಾವು ಗೆಲ್ಲುವವರೆಗೂ ದೆಹಲಿ ಬಿಡುವುದಿಲ್ಲ" ಎಂದು ಭಾರತೀಯ ಕಿಸಾನ್ ಸಂಘ ಹರಿಯಾಣದ ಗುರುನಾಮ್ ಸಿಂಗ್ ಚಡುನಿ ತಿಳಿಸಿದ್ದಾರೆ.












Click it and Unblock the Notifications