Budget 2023 Expectations : ಕೇಂದ್ರ ಬಜೆಟ್ ಅಧಿವೇಶನ 2023: ಹೆಚ್ಚು ನಿರೀಕ್ಷೆಯಲ್ಲಿ ಕೃಷಿಕರು
ಬೆಂಗಳೂರು, ಜನವರಿ 19: ಕೇಂದ್ರ ಬಜೆಟ್ ಅಧಿವೇಶನ 2023 ವು ಜನವರಿ 31 ರಂದು ಆರಂಭವಾಗಲಿದ್ದು, ಫೆಬ್ರುವರಿ 01 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ದೇಶದ ಆಯವ್ಯಯ ಮಂಡಿಸಲಿದ್ದಾರೆ. ಅವರಿಗೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೈತರು, ಕೆಲವು ಕಂಪನಿಗಳು ಕೃಷಿಗೆ ಸಹಾಯವಾಗುವ ಒಂದಷ್ಟು ಅಂಶಗಳ ಸೇರ್ಪಡೆಗೆ ಒತ್ತಾಯಿಸಿವೆ.
ಕೇಂದ್ರವು ಆಯವ್ಯಯದಲ್ಲಿ ರಸಗೊಬ್ಬರಗಳು ಮತ್ತು ಕೃಷಿ ರಾಸಾಯನಿಕಗಳ ಮೇಲೆ ಅಧಿಕ ಸಹಾಯಧನ ನೀಡಬೇಕು. ಪಶುಸಂಗೋಪನಾ ವಲಯಕ್ಕೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಕೃಷಿ ರಾಸಾಯನಿಕಗಳಿಗೆ ಉತ್ಪಾದನೆ -ಸಂಯೋಜಿತ ಪ್ರೋತ್ಸಾಹದಿಂದ ಗ್ರಾಮೀಣ ಭಾಗಗಳಲ್ಲಿ ರೈತರ ಆರ್ಥಿಕತೆ ಹೆಚ್ಚಿಸಲು ಪ್ರಯೋಜನವಾಗುತ್ತದೆ. ಜೊತೆಗೆ ಗ್ರಾಮೀಣ ಬೇಡಿಕೆ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಇವುಗಳು ಬಜೆಟ್ ನಲ್ಲಿ ಸೇರ್ಪಡೆಯಾಗಿ ಜಾರಿಯಾಗಬೇಕು ಎಂಬ ಆಶಯ ವ್ಯಕ್ತವಾಗಿದೆ.
ಇನ್ನೂ ಕೆಲವರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅಧಿಕ ಹಣ ನೀಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆರ್ಥಿಕತೆಗೆ ಹರಿಯುತ್ತದೆ. ಆದಾಯ ಹೆಚ್ಚಳಕ್ಕೂ ಇದು ದಾರಿ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಹಣದುಬ್ಬರ
ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು (FMCG) ಹಾಗೂ ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವರ್ಗಗಳ ಸರಕುಗಳು ಗ್ರಾಮೀಣ ಬೇಡಿಕೆ ಮೇಲೆ ಪರಿಣಾಮ ಬೀರುತ್ತಿವೆ. ಹಣದುಬ್ಬರವು ಕುಟುಂಬಗಳನ್ನು ಘಾಸಿಗೊಳಿಸುತ್ತಿದ್ದು, ರೈತರು ಸೇರಿದಂತೆ ಸಾಮಾನ್ಯ ಜನರ ನೈಜ ವೇತನಗಳಲ್ಲಿ ಇಳಿಕೆ ಆಗಿದೆ. ಇದರಿಂದ ಆದಾಯ ಕಡಿಮೆ, ಖರ್ಚು ಹೆಚ್ಚಾಗುವ ಪರಿಸ್ಥಿತಿ ಇದೆ.
ಆದ್ದರಿಂದ ಈ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಗಮನ ಹರಿಸಬೇಕು. ತಮ್ಮ ಕೃಷಿ ಆಯವ್ಯಯ ಪಟ್ಟಿಯಲ್ಲಿ ಈ ಕೆಲವು ಅಂಶಗಳನ್ನು ಸೇರಿಸಬೇಕು ಎಂದರು. ಗ್ರಾಮೀಣ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಆಯವ್ಯಯ ಪೂರಕವಾಗಿರಲಿದೆ ಎಂದು ನಿರೀಕ್ಷೆಯಲ್ಲಿದ್ದೇವೆ.
ದೇಶದ ಕೃಷಿ ವಲಯದತ್ತ ಸರ್ಕಾರ ಗಮನ ಕೇಂದ್ರೀಕರಿಸಬೇಕಿದೆ. ಕೃಷಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳಂತಹ ಕೃಷಿ-ಇನ್ಪುಟ್ ವಲಯವು ಸಾಕಷ್ಟು ಪ್ರಯೋಜನ ಪಡೆಯುವ ಮಹದಾಸೆ ಹೊಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಎಫ್ಎಂಸಿಜಿ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
ಇದೇ ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ 2023 ಆರಂಭವಾಗಲಿದ್ದು, ಏಪ್ರೀಲ್ 6ವರೆಗೂ ಮುಂದುವರಿಯಲಿದೆ. ಸುಮಾರು 66ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಫೆಬ್ರುವರಿ 1ರಂದು ವಿತ್ತ ಸಚಿವರು ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದರು.