"ನಾನೆನ್ ಮಾಡ್ಲೊ ಗೌಡಪ್ಪ ಲಾಕ್ಡೌನ್ ಐತಿ' ಎಂದರು ಸಚಿವ ಪಾಟೀಲ್!
ಗದಗ, ಮೇ 04: ಕೊರೊನಾ ಯಾರಿಗೆ ಎಷ್ಟು ಸಂಕಷ್ಟ ತಂದಿದೆಯೊ ಗೊತ್ತಿಲ್ಲ, ಆದರೆ ರೈತಾಪಿ ವರ್ಗದ ಜನರ ಜೀವನವನ್ನು ಲಾಕ್ಡೌನ್ ನೆಪದಲ್ಲಿ ವೈರಸ್ ಹಿಂಡುತ್ತಿದೆ. ಬೇಸಿಗೆಯಲ್ಲಿ ಬೆಳೆದಿದ್ದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಂಗಾಲಾಗಿದ್ದಾರೆ. ಲಾಕ್ಡೌನ್ನಿಂದ ಕೊರೊನಾ ವೈರಸ್ ನಿಯಂತ್ರಣವಾಗಿದೆ, ಆದರೆ ಅದೇ ಲಾಕ್ಡೌನ್ ರೈತರ ಜೀವ ತೆಗೆಯುವಲ್ಲಿ ಸಫಲವಾಗಿದೆ. ತಾವು ಬೆಳೆದಿದ್ದನ್ನು ಮಾರಾಟ ಮಾಡಲಾಗದೆ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಈರುಳ್ಳಿ ಬೆಳೆಗಾರರ ಗೋಳು ಕೇಳುವರಿಲ್ಲದಂತಾಗಿದೆ.
Recommended Video
ಸೂಕ್ತ ದರವಿಲ್ಲದೇ ಕೊಳೆಯುತ್ತಿರುವ ಉಳ್ಳಾಗಡ್ಡಿ ಸರ್ಕಾರದ ಉಡಾಫೆಗೆ, ಅಶಿಸ್ತಿಗೆ ಸಾಕ್ಷಿಯಂತಿದೆ. ಜಿಲ್ಲೆಯ ಉಳ್ಳಾಗಡ್ಡಿ ಕತೆಗೂ ಮೊದಲು ನಮ್ಮ ಸರ್ಕಾರದ ಕಾರ್ಯಶೈಲಿಯನ್ನೇ ನೋಡಿ, ಒಂದ್ 10-12 ಜಿಲ್ಲೆ ಗರಗರ ತಿರುಗಿ ಧಡ್ಬಡ್ ಪ್ರೆಸ್ಮೀಟ್ ಮಾಡಿ ಒಂದರ್ಡ್ ತರಾವರಿ ಡೈಲಾಗ್ ಒಗ್ದು ಹೋದರು ಕೃಷಿ ಸಚಿವ ಬಿ.ಸಿ. ಪಾಟೀಲರು.
ರೈತರ ಉತ್ಪನ್ನಗಳ ಸಾಗಾಣಿಕೆ ಮತ್ತು ವಹಿವಾಟಿಗೆ ಅಡೆತಡೆ ಇಲ್ಲ ಎಂದು ಹತ್ತು ದಿನದ ಹಿಂದೆಯೇ ಹೇಳಿದ್ದರು. ಮುಖ್ಯಮಂತ್ರಿ ಅವರೂ ಬೆಂಗಳೂರಿನಲ್ಲಿ ಪದೇಪದೇ ಇದನ್ನೇ ಹೇಳುತ್ತಿದ್ದರು. ಆದರೆ, ಅದು ಸಂಭವಿಸಲೇ ಇಲ್ಲ. ಹೂವು-ಹಣ್ಣು ಉತ್ಪನ್ನಗಳಂತೂ ಹೊಲ-ತೋಟದಲ್ಲೇ ಮಣ್ಣಾದವು. ಮಾವು-ಬಾಳೆ ನೆಲಕ್ಕೊರಗಿ ಮಲಗಿದವು ಎನ್ನುತ್ತಾರೆ ಗದಗ ಜಿಲ್ಲೆಯ ಬಹುತೇಕ ರೈತರು.

ಬೆಲೆಯಿಲ್ಲ, ಸಾಗಿಸಲು ಆಗ್ತಿಲ್ಲ ಕಟಾವು ಮಾಡಿಲ್ಲ!
ಇವತ್ತಿನಿಂದ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ರೈತರ ಉತ್ಪನ್ನಗಳ ಮಾರಾಟ ಆಗ್ಬಹುದು. ಅದ್ರೆ ಅಷ್ಟಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯಿತು ಅಂತಾ ಅಧಿಕಾರಿಗಳು ಮಂತ್ರಿಗಳು ನಿರಾಳವಾಗಿದ್ದಾರೆ. ಕೇವಲ ಲಾಕ್ಡೌನ್ ತೆಗೆದು ಹಾಕುವುದರಿಂದ ಏನೂ ಆಗೋದಿಲ್ಲ. ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸ ಎನ್ನುತ್ತಾರೆ ಜಿಲ್ಲೆಯ ಲಕ್ಕುಂಡಿಯ ರೈತ ಬಸವರಾಜ್ ಗುರಿಕಾರ್.
ಈಗ ಸೂಕ್ತ ಬೆಲೆಯಿಲ್ಲದೆ, ಕೊಳ್ಳುವವರೂ ಇಲ್ಲದೇ ಉಳ್ಳಾಗಡ್ಡಿ (ಈರುಳ್ಳಿ) ಕೊಳೆಯತೊಡಗಿದೆ. ಲಾಕ್ಡೌನ್ ನಿಭಾಯಿಸುವುದು ಎಂದರೆ, ಮನೆಯಿಂದ ಯಾರೂ ಹೊರ ಬರದಂತೆ ನೋಡಿಕೊಳ್ಳುವುದಷ್ಟೇ ಎಂದು ಸರ್ಕಾರ ಭಾವಿಸಿದ್ದರ ಪರಿಣಾಮವಿದು ಎನ್ನುತ್ತಾರೆ ಬಸವರಾಜ್ ಗುರಿಕಾರ. ತಮ್ಮ 3 ಎಕರೆ ಹೊಲದಲ್ಲಿ ಉಳ್ಳಾಗಡ್ಡಿ ಬೆಳೆದು ಮಾರಲಾಗದೇ ಕೈಚೆಲ್ಲಿ ಕುಳಿತಿದ್ದಾರೆ. ಬೆಲೆಯಿಲ್ಲದ ಕಾರಣಕ್ಕೆ ಕಟಾವಿಗೆ ಬಂದಿರುವ ಈರುಳ್ಳಿಯನ್ನು ಜಮೀನಿನಲ್ಲೇ ಬಿಟ್ಟಿದ್ದಾರೆ. ಬೀಜ, ಗೊಬ್ಬರ, ಔಷಧಿ ಸೇರಿದಂತೆ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಕಳೆದ ವರ್ಷ ಬೆಳೆದಿದ್ದ ಸೇವಂತಿ ಹೂ ಕೂಡ ಹೀಗೆ ಆಗಿತ್ತು!
ಕಳೆದ ವರ್ಷ ದೀಪಾವಳಿಯ ಟೈಮ್ನ್ಯಾಗ ಇದೇ ಹೊಲದಲ್ಲಿ ಮೂರು ಎಕರೆಯಲ್ಲಿ ಸೇವಂತಿಗೆ ಹೂವನ್ನು ಬೆಳೆದಿದ್ದೆ. ಆದರೆ ಬಾಳಾ ಮಳಿ ಆಗಿ ಎಲ್ಲಾ ಹೂ ಕೊಳೆತು ಹೋಯಿತು. ಸೇವಂತಿಗೆಗೆ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದೆ. ಹತ್ತರಿಂದ ಹನ್ನೆರಡು ಲಕ್ಷದವರೆಗೆ ಹೂ ಮಾರಬಹುದುದ ಅಂದ್ಕೊಂಡಿದ್ದೆ. ಆದ್ರೆ ಆದರೆ ಮಳೆ ಹೊಡೆತಕ್ಕೆ ಸೇವಂತಿಗೆ ಹಾಳಾತು, ಆದ್ರೆ ಸಾಲ ಮಾತ್ರ ಹಾಗೇ ಉಳಿತು. ಉಳ್ಳಾಗಡ್ಡಿ ಬೆಳೆದು ಸಾಲ ತೀರಿಸಬೇಕು ಅಂದ್ಕೊಂಡಿದ್ದೆ. ಆದ್ರ ಈಗ ಗಾಯದ್ ಮ್ಯಾಲ್ ಬರಿ ಹಾಕಿದಂತೆ ಆಗೇತಿ ಎನ್ನುತ್ತಾರೆ ರೈತ ಬಸವರಾಜ್ ಅವರು. ಗದಗ ಜಿಲ್ಲೆ ಲಕ್ಕುಂಡಿ ಭಾಗದಲ್ಲಿ ನೀರಾವರಿಯಲ್ಲಿ ಉಳ್ಳಾಗಡ್ಡಿ ಬೆಳೆದವರೆಲ್ಲರ ಪಾಡು ಇದೇ ಆಗಿದೆ.

ಮುಂಡರಗಿ ತಾಲೂಕಿನ ರೈತರ ಪರಿಸ್ಥಿತಿಯೂ ಇದೆ
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತ ಹುಚ್ಚಪ್ಪ ರಾಜೂರು ಕೂಡ ಉಳ್ಳಾಗಡ್ಡಿ ಬೆಳೆದು ಮುಂದಿನ ದಾರಿ ಕಾಣದೆ ಕುಳಿತಿದ್ದಾರೆ. ಬೆಲೆ ಇಲ್ಲದ್ದರಿಂದ ತಮ್ಮ ಹೊಲದಲ್ಲಿ ಈರುಳ್ಳಿ ಹರವಿಕೊಂಡು ಕುಳಿತಿದ್ದಾರೆ. ಹೊಲದಿಂದಲೇ ತಮ್ಮ ಗೋಳನ್ನು ಸರ್ಕಾರಕ್ಕೆ ಮುಟ್ಟಿಸಿ ಎಂದು ಮನವಿ ಮಾಡಿದ್ದಾರೆ. ಅವರ ಮನವಿಯ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಉದ್ದೇಶಿಸಿ ಮಾತನಾಡಿರುವ ರೈತ ಹುಚ್ಚಪ್ಪ, ತುಂಬ ನೋವಿನಿಂದ ನಿವೇದನೆ ಮಾಡಿಕೊಂಡಿದ್ದಾರೆ. "ಬೆಳೆದ ಬೆಳೆಗೆ ಸರಿಯಾದ ರೇಟು ಕೊಡಿಸಿ ಮುಖ್ಯಮಂತ್ರಿಗಳೇ. ಖರ್ಚು ಮಾಡಿದ್ದೂ ಕೈಗೆ ಸಿಗದಂಗ ಕಡಿಮೆ ರೇಟು ಕೇಳಾಕ ಹತ್ಯಾರ. ನೀವು ಏನಾರ್ ಮಾಡಿ ನ್ಯಾಯ ಕೊಡಿಸಿ' ಎಂದಿದ್ದಾರೆ. "ಊರಿಗೆ ಹೋದ್ರೆ ಸಾಲಗಾರರ ಕಾಟ. ಅದಕ್ಕ ಹೊಲ ಬಿಟ್ಟು ಎಲ್ಲೂ ಹೋಗಲ್ಲ. ಯೋಗ್ಯ ಬೆಲೆ ನೀಡಿ ಖರೀದಿ ಮಾಡಿರಿ. ಇಲ್ಲಂದ್ರ ಆತ್ಮಹತ್ಯೆ ಒಂದೇ ದಾರಿ' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸಂಕಷ್ಟದಲ್ಲಿರುವವರಿಗೆ ಉಚಿತ ಹಂಚಿಕೆ
ಇನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ಬೈರನಹಟ್ಟಿಯ ಬಸನಗೌಡ ಚಿಕ್ಕನಗೌಡರ್ ತಮ್ಮ 12 ಎಕರೆ ಹೊಲದಲ್ಲಿ ಉಳ್ಳಾಗಡ್ಡಿ ಬೆಳೆದು ಸೂಕ್ತ ದರವಿಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಒಂದಿಷ್ಟು ಹಾಳಾಗಿತ್ತು. ಈಗ ನೋಡಿದರೆ ರೇಟಿಲ್ಲ. ಅವರು ಗದಗಿನಲ್ಲಿ ಮಾರಾಟ ಮಾಡಲೆಂದು ಒಂದು ಲೋಡ್ ಈರುಳ್ಳಿ ತಂದಿದ್ದರು. ಕ್ವಿಂಟಲ್ಗೆ 200-250 ರೇಟು ಕೇಳಿ ಬೆಚ್ಚಿ ಬಿದ್ದರು. ಒಂದಿಷ್ಟನ್ನು ಹೋಲ್ಸೇಲ್ನವರಿಗೆ ಮಾರಿದರು. ಅವರ ಮಕ್ಕಳು ಗದಗಿನ ಗಲ್ಲಿಗಲ್ಲಿಗಳಲ್ಲಿ ತಿರುಗಿ ಒಂದಿಷ್ಟು ಈರುಳ್ಳಿ ಮನೆಮನೆಗೆ ಮಾರಿದ್ದಾರೆ.
ತಮ್ಮ ಕಷ್ಟದ ಕಾಲದಲ್ಲಿಯೂ ಬಸನಗೌಡರು, 10 ಪಾಕೇಟ್ ಉಳ್ಳಾಗಡ್ಡಿಯನ್ನು ದಿನಸಿ ಕಿಟ್ ವಿತರಿಸುವ ಸಂಘಟನೆಗಳಿಗೆ ನೀಡಿದ್ದಾರೆ. ಇನ್ನಷ್ಟು ಪಾಕೇಟ್ಗಳನ್ನು ನೀಡಲು ಉದ್ದೇಶಿಸಿದ್ದಾರೆ. ಬಸನಗೌಡರು ಉಳ್ಳಾಗಡ್ಡಿ ಬೆಳೆಯಲು 5 ಲಕ್ಷ ಖರ್ಚು ಮಾಡಿದ್ದಾರೆ. ಈಗಿರುವ ಉಳ್ಳಾಗಡ್ಡಿ ಸೂಕ್ತ ಬೆಲೆಗೆ ಖರೀದಿಯಾದರೆ ಅವರಿಗೆ ಮಾಡಿದ ಖರ್ಚಾದರೂ ಕೈಗೆ ಬರುತ್ತದೆ.

ನಾನೆನ್ ಮಾಡ್ಲಿ ಲಾಕ್ಡೌನ್ ಐತಿ ಎಂದ ಸಚಿವ ಪಾಟೀಲ್!
ಬೈರನಹಟ್ಟಿಯ ಬಸನಗೌಡ ಚಿಕ್ಕನಗೌಡರ್ ಕ್ಷೇತ್ರದ ಶಾಸಕ ಹಾಗೂ ಸಚಿವ ಸಿ.ಸಿ. ಪಾಟೀಲ್ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಸಚಿವರು ಮಾತ್ರ, "ಅಲ್ಲೋ ಗೌಡಪ್ಪ, ಲಾಕ್ಡೌನ್ನಿಂದ ಎಲ್ಲ ಕಡೆ ಇದೇ ಹಣೆಬರಹ. ಮಾರ್ಕೆಟೇ ಬಿದೈತಿ. ನಾ ಏನ್ ಮಾಡಾಕ್ ಆಗತೈತಿ ಹೇಳು' ಅಂದರಂತೆ ಸಿ.ಸಿ. ಪಾಟೀಲ್.

ಕ್ಯಾತನಾಯಕನ ಹಳ್ಳಿಯ ರೈತ ಯುವತಿಯ ಕಥೆ ಮಾತ್ರವಲ್ಲ!
ಇತ್ತಿಚೆಗೆ ಕ್ಯಾತನಾಯಕನ ಹಳ್ಳಿಯ ರೈತ ಮಹಿಳೆಯ ವಿಡಿಯೋ ಸರ್ಕಾರದ ಕಣ್ಣುತೆರಸಿದೆ ಎಂದು ಜನ ನಂಬಿದ್ದಾರೆ. ಆ ಯುವತಿ ಕೇವಲ ತನ್ನ ಕುಟುಂಬದ ಸಮಸ್ಯೆ ಹೇಳಲಿಲ್ಲ. ಅದು ಎಲ್ಲ ಈರುಳ್ಳಿ ಬೆಳೆಗಾರರ ಸಮಸ್ಯೆಯೂ ಹೌದು. ರೈತರ ಉತ್ಪನ್ನಗಳಿಗೆ ಈಗ ಬೆಲೆ ಕೊಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೇವಪ ಪ್ರಚಾರಕ್ಕಾಗಿ ಮಾತ್ರ ಒಬ್ಬ ರೈತರಿಗೆ ಸಹಾಯ ಮಾಡುವುದರಿಂದ ಯಾವುದೇ ಉಪಯೋಗ ಆಗುವುದಿಲ್ಲ. ಈರುಳ್ಳಿ ಸೇರಿದಂತೆ ರೈತರ ಬೆಳೆಗೆ ಈಗಾಲಾದರೂ ಸರ್ಕಾರ ಸ್ಪಂಧನೆ ಮಾಡಬೇಕಿದೆ. ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೆಳೆದಿರುವ ನೀರಾವರಿ ಉಳ್ಳಾಗಡ್ಡಿ ಖರೀದಿಸುವುದೇನೂ ಸರ್ಕಾರಕ್ಕೆ ದೊಡ್ಡ ಮಾತಲ್ಲ. ಆದರೆ ಸರ್ಕಾರ ಇಚ್ಚಾಶಕ್ತಿ ಬೇಕು ಅಷ್ಟೇ!
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications