ನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿ
ಬೆಂಗಳೂರು, ಫೆಬ್ರವರಿ 4: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಪರವಾಗಿ ವಿದೇಶಿ ಸೆಲೆಬ್ರಿಟಿಗಳು ಧ್ವನಿ ಎತ್ತಿರುವುದು, ಪ್ರತಿಭಟನೆ ಕುರಿತಾದ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ. ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಮುಂತಾದವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವುದು ಪರ-ವಿರೋಧದ ಚರ್ಚೆಯ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ವಿದೇಶಿ ಸೆಲೆಬ್ರಿಟಿಗಳು ರೈತರ ಹೋರಾಟದ ಪರ ಧ್ವನಿಗೂಡಿಸಿರುವುದನ್ನು ಪ್ರತಿಭಟನೆಯ ಬೆಂಬಲಿಗರು ಸ್ವಾಗತಿಸಿದ್ದಾರೆ. ಇದೇ ವೇಳೆ ಸರ್ಕಾರ ಮತ್ತು ಕಾಯ್ದೆಯ ಪರ ನಿಂತಿರುವ ಅನೇಕರು ವಿದೇಶಿಗರ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿದ್ದಾರೆ. ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನಿಲ್ ಶೆಟ್ಟಿ ಮುಂತಾದವರು ಕೂಡ ಸರ್ಕಾರದ ಪರ ನಿಂತಿದ್ದಾರೆ.
ರೈತರ ಹೋರಾಟದ ವಿಚಾರದಲ್ಲಿ 'ಸೆಲೆಬ್ರಿಟಿ ವಾರ್' ಶುರುವಾಗಿರುವುದು ವಿವಾದವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ. ಭಾರತವು ರೈತರ ವಿಚಾರದಲ್ಲಿ ಒಗ್ಗಟ್ಟಿನಿಂದ ಇದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಮಹತ್ವದ್ದು. ಅವರ ಹಿತಾಸಕ್ತಿಗಳನ್ನು ಸರ್ಕಾರ ರಕ್ಷಿಸಲಿದೆ. ಇದು ಸಂಪೂರ್ಣ ಆಂತರಿಕ ವಿಚಾರ. ಇದರಲ್ಲಿ ಹೊರದೇಶದವರು ಹಸ್ತಕ್ಷೇಪ ನಡೆಸುವ ಅಗತ್ಯವಿಲ್ಲ ಎನ್ನುವ ಮೂಲಕ ವಿದೇಶಿಗರ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವ ಷಡ್ಯಂತ್ರದಿಂದಲೂ ದೇಶದ ಏಕತೆಗೆ ಧಕ್ಕೆಯಾಗದು: ಅಮಿತ್ ಶಾ
ಕನ್ನಡಿಗ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಸರ್ಕಾರದ ಪರವಾಗಿ ಮಾತನಾಡಿರುವುದು ಅನೇಕರಿಗೆ ಖುಷಿ ನೀಡಿದೆ. ಹಾಗೆಯೇ ರೈತರ ಪರ ನಿಂತಿರುವವರಲ್ಲಿ ಆಕ್ರೋಶ ಮೂಡಿಸಿದೆ. ಕುಂಬ್ಳೆ ಟ್ವೀಟ್ ವಿರುದ್ಧ ಕಿಡಿಕಾರಿದ್ದಾರೆ. ಸಂಘಿಗಳ ಪಾಳೆಯಕ್ಕೆ ಸೇರಿಕೊಂಡು ರೈತರನ್ನು ಅವಮಾನಿಸುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ.
ಭಾರತ ಸಮರ್ಥವಾಗಿದೆ- ಕುಂಬ್ಳೆ
'ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತವು ಅವಳ ಆಂತರಿಕ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಸಮರ್ಥವಾಗಿದೆ' ಎಂದು ಅನಿಲ್ ಕುಂಬ್ಳೆ, ಭಾರತವು ಒಗ್ಗಟ್ಟಿನಿಂದ ಇದೆ, ಹಿತಾಸಕ್ತಿಯ ಪ್ರಚಾರಗಳ ವಿರುದ್ಧ ಭಾರತ ನಿಂತಿದೆ ಎಂದಿದ್ದರು.
ಕಾಂಗ್ರೆಸ್ಗೆ ಶಾಹಿನ್ ಬಾಗ್ ರೀತಿ ಹಿಂಸಾಚಾರ ಸೃಷ್ಟಿ ಮಾಡಬೇಡಿ ಎಂದ ಬಿಜೆಪಿ
ಆತ್ಮಸಾಕ್ಷಿ ಎಲ್ಲಿತ್ತು?
ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತುಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ರೈತರ ಮೇಲೆ ದಾಳಿಯಾದಾಗ, ಸುಳ್ಳು ಕೇಸು ಹಾಕಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು ಸರ್? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ. Shame on you- ದಿನೇಶ್ ಕುಮಾರ್
ಅನ್ನ ತಿಂದಿದ್ದಕ್ಕೆ ನಿಯತ್ತು ಇರಲಿ
ಅಮೇರಿಕದ ಮಾಜಿ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ದೇಶ ಅಂದಾಗ ಯಾರು ಮಾತಾಡಲಿಲ್ಲ. ಆದ್ರೆ ಇಲ್ಲಿನ ರೈತರ ಬಗ್ಗೆ ಅನುಕಂಪ ತೋರಿಸಿದ ವಿದೇಶಿಯರು ಮಾಡಿದ ಒಂದೇ ಒಂದು ಬರಹಕ್ಕೆ ಎಷ್ಟು ಮಾತಾಡುತ್ತೀರೋ. ಇಷ್ಟು ದಿನ ರೈತ ಬೆಳೆದ ಅನ್ನ ತಿಂದಿದ್ದಕ್ಕಾದ್ರು ಸ್ವಲ್ಪ ನಿಯತ್ತು ಇರಲಿ.- ರೇಖಾ ಶ್ರೀನಿವಾಸ್.
ರೈತರಿಗೆ ಪಾಪ್ ಗಾಯಕಿ ಬೆಂಬಲ; ಗರಂ ಆದ ವಿದೇಶಾಂಗ ವ್ಯವಹಾರ ಸಚಿವಾಲಯ
ಇದು ವಿಪರ್ಯಾಸ
ರೈತರು, ನಾಗರೀಕರು ಸರ್ಕಾರದ ಅಪಾಯಕಾರಿ ಕಾಯ್ದೆಯ ವಿರುದ್ದ ಹೋರಾಡುತ್ತಿರುವ ಹೊತ್ತಲ್ಲಿ .. ನಿಮ್ಮಂಥವರು ಪರೋಕ್ಷವಾಗಿ ಸರ್ಕಾರದ ಪರವಾಗಿ ನಿಲ್ಲುವುದು ವಿಪರ್ಯಾಸ- ರಾಜೇಂದ್ರ ಪ್ರಸಾದ್.
ಗೋಡೆ ಕಟ್ಟಿದಾಗ ನಾಚಿಕೆ ಆಗಲಿಲ್ಲ
ಟ್ರಂಪ್ ಬಂದಾಗ ಸ್ಲಮ್ ಗಳಿಗೆ ಗೋಡೆ ಕಟ್ಟಿದ್ರಲ್ಲ ಅವಾಗ ಈ ಸಜ್ಜನರಿಗೆ ನಾಚಿಕೆ ಆಗ್ಲಿಲ್ಲಾ ಅಂದ್ರೆ ಈಗ ರೈತರ ಹೋರಾಟದ ಬಗ್ಗೆ ಆದ್ರೂ ಯಾಕೆ ನಾಚಿಕೆ ಬರುತ್ತೆ ಇಷ್ಟೇ ವಿಷಯ ಇವರು ಸಜ್ಜನರು ಅಲ್ವೇ.. ಕರ್ನಾಟಕದವರು ಸಜ್ಜನರು ಅಂತ ಬಿಂಬಿಸೋಕೆ ಇಂಥವರು ಬೇಕು- ವಸಂತ ಕುಮಾರ್ ಕಡ್ಲಿಮಟ್ಟಿ
ಘನತೆ ಇರುವುದು ಬಕೆಟ್ ಹಿಡಿಯುವುದರಲ್ಲಿ ಅಲ್ಲ
ಅನಿಲ್ ಕುಂಬ್ಳೆ ರವರೇ , ನಿಮ್ಮ ಘನತೆಯನ್ನು ನೀವು ಕಳೆದುಕೊಂಡು ರಾಜ್ಯದ ಜನರಿಂದ ದೇಶದ ರೈತರಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ , ದೇಶದ ಘನತೆ ಗೌರವ ಇರುವುದು ಬಕೆಟ್ ಹಿಡಿಯುದರಲ್ಲಿ ಅಲ್ಲ , ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ ಶೋಷಿತ ಪರವಾಗಿ ನಿಂತಾಗ ಗೌರವ ತನ್ನಿಂತಾನೇ ಪಡೆದುಕೊಳ್ಳುತ್ತದೆ- ರಾಜಾ ಕಸಿವಿರೆಡ್ಡಿಹಳ್ಳಿ
ಅಬ್ ಕೀ ಬಾರ್ ಟ್ರಂಪ್ ಸರ್ಕಾರ್
ಅಲ್ರಪ್ಪಾ ನಿಮ್ಮ 56 ಕಿಲೋಮೀಟರ್ ಉದ್ದ ಎದೆಯವನು ಅಮೆರಿಕಾದಲ್ಲೂ ಭಾರತದಲ್ಲೂ "ಅಬ್ ಕೀ ಬಾರ್ ಟ್ರಂಪ್ ಸರ್ಕಾರ್" ಎಂದು ಬೊಗಳಿದ್ದು ಅಮೆರಿಕಾದ ಆಂತರಿಕ ವಿಷಯದಲ್ಲಿ ತಲೆಹಾಕಿದಂಗೆ ಅಲ್ಲವೇನ್ರಪ್ಪಾ? ಆಗ ಅಮೆರಿಕಾದ sovereigntyಗೆ ಧಕ್ಕೆ ಬರಲಿಲ್ಲ ಕಣ್ರಪ್ಪಾ? ಆಗ ಇನ್ನೊಂದು ದೇಶದ ವಿಚಾರದಲ್ಲಿ ಮೂಗು ತೂರಿಸುವುದು ಎಂದು ಯಾರಿಗೂ ಅನ್ನಿಸಲಿಲ್ಲ- ಕಲ್ಲಡ್ಕ ಫಾರೂಕ್
ಮೌನವಾಗಿಯೇ ಇರಿ
ದೇಶದ ರೈತರ ಪರ ದನಿ ಎತ್ತಬೇಕಾದ ನಿಮ್ಮಂತವರೆಲ್ಲ ಮೌನವಾಗೆ ಇದ್ದೀರ. ಹೋಗಲಿ ರೈತರ ಪರ ದನಿ ಎತ್ತುವವರ ವಿರುದ್ಧ ಮಾತನಾಡಿ ಸಣ್ಣವರಾಗಬೇಡಿ, ಅದು ನಿಮಗೆ ಶೋಭೆ ಅಲ್ಲ. ಸಾಧ್ಯವಾದರೆ ದನಿ ಎತ್ತಿ ಇಲ್ಲವಾದರೆ ಇಷ್ಟು ದಿನ ಇದ್ದಂತೆಯೆ ಮೌನವಾಗೇ ಇರಿ- ಸಂತೋಷ್ ಕುಮಾರ್