ನೆಟೆ ರೋಗದಿಂದ ತೊಗರಿ ಬೆಳೆ ಹಾನಿ, ಪರಿಹಾರ ಕೋರಿ ಸಿಎಂ ಬಳಿ ನಿಯೋಗ
ಕಲಬುರಗಿ, ಜನವರಿ 08; ಕರ್ನಾಟಕದ ತೊಗರಿ ಕಣಜ ಎಂದು ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯ ಕಾರಣ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿದ್ದು, ಬೆಳೆ ಹಾನಿಯಾಗಿದೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿಯೂ ನೆಟೆ ರೋಗದ ಬಗ್ಗೆ ಚರ್ಚೆ ನಡೆದಿತ್ತು. ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆಯಿತು.
ಕಲಬುರಗಿಗೆ ತೊಗರಿ ಬೇಳೆ ಕಣಜ ಟ್ಯಾಗ್ ಕಳಚಿ ಬೀಳುವ ಆತಂಕ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ ನಿರಾಣಿ, "ಇಲ್ಲಿನ ಪ್ರಮುಖ ಬೆಳೆ ತೊಗರಿ ನೆಟೆ ರೋಗದಿಂದ ತತ್ತರಿಸಿ ಭಾಗಶ: ಹಾನಿಯಾಗಿದ್ದ್ದು, ಸೂಕ್ತ ಪರಿಹಾರ ಕೋರಿ ಶೀಘ್ರದಲ್ಲಿಯೇ ಸಿಎಂ ಬಳಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು" ಎಂದು ಹೇಳಿದರು.
ಅಧಿಕ ಮಳೆಯಿಂದ ಬೆಳೆ ಹಾನಿ: ತೊಗರಿ, ಉದ್ದಿನ ಬೇಳೆ ಕಾಳುಗಳ ಬೆಲೆ ಶೇ.15 ಏರಿಕೆ
"ನೆಟೆ ರೋಗಕ್ಕೆ ವಿಶೇಷ ಪರಿಹಾರದ ಜೊತೆಗೆ ಸಂಪೂರ್ಣ ಬೆಳೆ ವಿಮೆಗೆ ಪರಿಹಾರಕ್ಕೆ ಕೋರಲಾಗುವುದು. ಇದಲ್ಲದೆ ಕೃಷಿ, ತೋಟಗಾರಿಕೆ ಸಚಿವರನ್ನು ಸಹ ಭೇಟಿ ಮಾಡಲಾಗುವುದು. ಈ ಸಂಬಂಧ ವಿಸ್ತೃತ ವರದಿಯನ್ನು 2 ದಿನದಲ್ಲಿ ನೀಡಬೇಕು" ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ಗೆ ಸಚಿವರು ಸೂಚಿಸಿದರು.
ಹವಾಮಾನ ಬದಲಾವಣೆ; ತೊಗರಿ ಬೆಳೆದ ರೈತರಿಗೆ ಸಲಹೆಗಳು
ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆ
ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಮೇಲಿನ ಚರ್ಚೆ ವೇಳೆ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಮಾತನಾಡಿದರು. "2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 8.54 ಲಕ್ಷ ಹೆಕ್ಟೇರ್ ಬಿತ್ತನೆ ಪೈಕಿ ಅತಿವೃಷ್ಠಿಯಿಂದ 1.80 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ಪರಿಹಾರ ನೀಡಲು 2,19,277 ರೈತರನ್ನು ಗುರುತಿಸಿದ್ದು, ಇದರಲ್ಲಿ 2.59 ಲಕ್ಷ ರೈತರಿಗೆ ಎನ್. ಡಿ. ಆರ್. ಎಫ್. ಮಾರ್ಗಸೂಚಿಯಂತೆ ರಾಜ್ಯ ಸರ್ಕಾರದಿಂದ 240 ಕೋಟಿ ರೂ. ಇನ್ಪುಟ್ ಸಬ್ಸಿಡಿ ಪರಿಹಾರ ನೀಡಿದೆ. ಇದಲ್ಲದೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಯಾದ 2.14 ಲಕ್ಷ ರೈತರ ಪೈಕಿ 1.18 ಲಕ್ಷ ರೈತರು ದೂರು ನೀಡಿದ್ದು, ದೂರು ದಾಖಲಿಸಿದವರ ಪೈಕಿ 62,700 ರೈತರಿಗೆ 38 ಕೋಟಿ ರೂ. ಬೆಳೆ ವಿಮೆ ಪರಿಹಾರ ಅವರ ಖಾತೆಗೆ ಜಮೆ ಮಾಡಲಾಗಿದೆ" ಎಂದು ಸಭೆಗೆ ಮಾಹಿತಿ ನೀಡಿದರು.
ರೈತರಿಗೆ ತುಂಬಾ ತೊಂದರೆಯಾಗುತ್ತಿದೆ
ಬಾಬೂರಾವ್ ಚಿಂಚನಸೂರು ಮಾತನಾಡಿ, "ಹೊಸ ತಾಲೂಕುಗಳಿಗೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ತೆರೆದಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ" ಎಂದರು.
ಅಫಜಲಪೂರ ಶಾಸಕ ಎಂ. ವೈ. ಪಾಟೀಲ ಮಾತನಾಡಿ, ತಮ್ಮ ಕ್ಷೇತ್ರದ ಗುಡೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2018ರ ಬೆಳೆ ವಿಮೆ ಪರಿಹಾರ ಇಂದಿಗೂ ಬಂದಿಲ್ಲ ಎಂದು ಹೇಳಿದರು.
ಅಫಜಲಪೂರ ಶಾಸಕ ಸುಭಾಷ್ ಗುತ್ತೇದಾರ್ ಮಾತನಾಡಿ, "ಬೆಳೆ ಪರಿಹಾರ ಸರಿಯಾಗಿ ವಿತರಣೆ ಮಾಡಿಲ್ಲ. ಬೆಳೆ ವಿಮೆ ನೋಂದಣಿ ಮಾಡಿದ ರೈತರು ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡಲು ಕರೆ ಮಾಡಿದರೆ ವಿಮೆ ಕಂಪನಿಯವರು ಫೋನ್ ಸ್ವೀಕರಿಸುತ್ತಿಲ್ಲ. ಇದರಿಂದ ಬಹಳಷ್ಟು ರೈತರು ದೂರು ಸಲ್ಲಿಸಲು ಸಾಧ್ಯವಾಗಿಲ್ಲ" ಎಂದರು.
ಸರಿಯಾಗಿ ರೈತರಿಗೆ ಹಣ ಪಾವತಿಯಾಗುತ್ತಿಲ್ಲ
ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯಿತು. ಪ್ರತಿ ಟನ್ ಕಬ್ಬಿಗೆ 2,350 ರೂ. ನಿಗದಿ ಮಾಡಿದರು ಎನ್. ಎಸ್. ಎಲ್ ಸಕ್ಕರೆ ಕಾರ್ಖಾನೆಯವರು ಇಳುವರಿ ಕಮ್ಮಿ ಎಂದು ರೈತರಿಗೆ 2,300 ರೂ. ಮಾತ್ರ ನೀಡುತ್ತಿದ್ದಾರೆ, ನಿಗದಿಯಂತೆ ಹಣ ಪಾವತಿ ಮಾಡುವಂತೆ ಕಾರ್ಖಾನೆಗೆ ಸೂಚನೆ ನೀಡಿ ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಗಮನ ಸೆಳೆದರು.
ಜಿಲ್ಲಾಧಿಕಾರಿಗಳು ಮಾತನಾಡಿ, "2,350 ರೂ. ದರ ನಿಗದಿ ಮಾಡಲಾಗಿದೆ. ಅಷ್ಟು ಹಣ ಕಾರ್ಖಾನೆಯವರು ಪಾವತಿ ಮಾಡಲೇಬೇಕು. ಕಬ್ಬು ರೈತರ ಹಿತಕ್ಕಾಗಿ ಕಬ್ಬು ಮಿತ್ರ ತಂತ್ರಾಂಶ ತರಲಾಗಿದೆ. ಯಾವುದೇ ರೈತ ಯಾವುದೇ ಕಾರ್ಖಾನೆಗೆ ಕಬ್ಬು ಪೂರೈಸಬಹುದು" ಎಂದರು.
ಸಚಿವ ಡಾ. ಮುರುಗೇಶ ನಿರಾಣಿ ಮಾತನಾಡಿ, "ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿ ಅವರುಗಳ ನಡುವೆ ಸ್ಪರ್ಧೆ ಏರ್ಪಟ್ಟು ರೈತರಿಂದ ಕಬ್ಬು ಖರೀದಿಗೆ ಮುಗಿಬಿದ್ದಲ್ಲಿ ಮಾತ್ರ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು-ಉದ್ಯಮಿಗಳು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಬೇಕು" ಎಂದು ಹೇಳಿದರು.
ಕಬ್ಬಿನ ಇಳುವರಿ ಕಡಿಮೆ ಬರುವ ನಿರೀಕ್ಷೆ
ಸಚಿವ ಮುರುಗೇಶ ನಿರಾಣಿ ಮಾತನಾಡಿ, "ಕಬ್ಬಿನಲ್ಲಿ ಕಡಿಮೆ ಇಳುವರಿ ಬರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಹಾರ, ಕಾನೂನು ಮಾಪನಶಾಸ್ತ್ರ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮಿತಿ ರಚಿಸಿಕೊಂಡು ವಾರಕೊಮ್ಮೆ ಸಕ್ಕರೆ ಕಾರ್ಖಾನೆಗಳಿಗೆ ಅನಿರೀಕ್ಷಿತ ದಾಳಿ ಮಾಡಿ ತಪಾಸಣೆ ಮಾಡಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
"ಈಗಾಗಲೆ 4 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿದೆ. ಇಳುವರಿ ಕಡಿಮೆ ಕುರಿತಂತೆ ಪರಿಶೀಲಿಸಲು ರಾಯಚೂರು ಕೃಷಿ ವಿ.ವಿ.ಗಳಿಂದ ತಜ್ಞರನ್ನು ಕರೆಸಿ ಪರಿಶೀಲಿಸಿದಾಗ ಇಳುವರಿ ಸರಿಯಾಗಿಯೇ ಇರುವುದನ್ನು ಪತ್ತೆ ಹಚ್ಚಲಾಗಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.