ಮುಂಗಾರು ಮಳೆ ಆರಂಭ; ಕಾಳುಮೆಣಸು ಬೇಸಾಯಕ್ಕೆ ಸಲಹೆಗಳು
ಕೇರಳ ರಾಜ್ಯಕ್ಕೆ ನೈಋತ್ಯ ಮುಂಗಾರು ಆಗಮನವಾಗಿದೆ. ಕರ್ನಾಟಕಕ್ಕೆ ಜೂನ್ 2ಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇದೆ. ಮಳೆ ಆರಂಭವಾಗುವ ಸಮಯ ಹತ್ತಿರವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಲಿದ್ದಾರೆ.
ಮಳೆಗಾಲದ ಬೇಸಾಯ ಕ್ರಮಗಳು, ಬೆಳೆಗಳ ರಕ್ಷಣೆ, ಕೀಟ ಹತೋಟಿ ಕುರಿತು ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಮಾಹಿತಿ ನೀಡಿದೆ. ಕೇಂದ್ರ ನೀಡಿದ ಸಲಹೆಗಳನ್ನು ಪಾಲಿಸುವ ಮೂಲಕ ರೈತರು ಬೇಸಾಯ ಕೈಗೊಂಡು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
ಹಲವಾರು ರೈತರು ಅಡಕೆ ತೋಟಗಳ ನಡುವೆ ಮಿಶ್ರಬೆಳೆಯಾಗಿ ಕಾಳುಮೆಣಸು ಬೆಳೆಯುತ್ತಾರೆ. ಕಾಳುಮೆಣಸು ಬೆಳೆ ರಕ್ಷಣೆ ಕುರಿತು ಕೇಂದ್ರ ರೈತರಿಗೆ ಅನೇಕ ಕ್ರಮಗಳನ್ನು ಶಿಫಾರಸು ಮಾಡಿದೆ. ಕೀಟ ಮತ್ತು ರೋಗಗಳನ್ನು ಕಡಿಮೆ ಮಾಡಲು ಈ ಶಿಫಾರಸುಗಳನ್ನು ಪರಿಗಣಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಮನವಿ ಮಾಡಿದ್ದಾರೆ.
ಕಾಳುಮೆಣಸಿನ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದ ಆಸಕ್ತ ರೈತರು ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08274-247274.

ಚಿಬ್ಬು ರೋಗ ಹತೋಟಿ
ಚಿಬ್ಬು ರೋಗವನ್ನು ಹತೋಟಿ ಮಾಡಲು ಕಾರ್ಬೆಂಡೆಜಿಮ್ + ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ಪ್ರತಿ ಬಳ್ಳಿಗೆ 50 ರಿಂದ 60 ಗ್ರಾಂ ಟ್ರೈಕೋಡರ್ಮ ಎಂಬ ಜೈವಿಕ ಶಿಲೀಂಧ್ರವನ್ನು 1 ಕೆಜಿ ಬೇವಿನ ಹಿಂಡಿ ಅಥವಾ 5 ಕೆಜಿ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು ಅಥವಾ 4 ಕೆಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಒಂದು ಕೆಜಿ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್ನಷ್ಟು) ಸುರಿಯಬೇಕು.

ಬೇಸಾಯ ಕ್ರಮಗಳನ್ನು
ರೈತರು ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿಯ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಮುನ್ನೆಚ್ಚರಿಕೆಯಾಗಿ ಮುಂಗಾರಿಗೆ ಮುನ್ನ ಬಳ್ಳಿ, ಎಲೆ ಮತ್ತು ಕಾಂಡ ಪೂರ್ಣ ತೊಯ್ಯುವಂತೆ ಶೇ. 1ರ ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡಬೇಕು. ಟ್ರೈಕೋಡರ್ಮ ಅಥವಾ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಹಾಕದಿದ್ದರೆ ಪ್ರತಿ ಬಳ್ಳಿಗೆ 3 ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರಲ್ಗೆ 500 ಗ್ರಾಂ) ದ್ರಾವಣದಿಂದ ಬಳ್ಳಿಯ ಬುಡದ ಭಾಗವನ್ನು ನೆನೆಸಬೇಕು ಮತ್ತು ಶೇ. 1 ರ ಬೋರ್ಡೊ ದ್ರಾವಣ ಅಥವಾ 3.0 ಮಿ. ಲಿ. ಪೊಟ್ಯಾಸಿಯಂ ಪಾಸ್ಪೋನೇಟ್ನ್ನು ಪ್ರತಿ ಲೀಟರ್ ನೀರಿಗೆ ಬೆರಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು.

ರಸಗೊಬ್ಬರ ಹಾಕುವ ಕ್ರಮ
ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಗಿಡಕ್ಕೆ 300 ಗ್ರಾಂ ಯೂರಿಯಾ, 275 ಗ್ರಾಂ ಶಿಲಾರಂಜಕ ಮತ್ತು 450 ಗ್ರಾಂ ಎಂ.ಓ.ಪಿನ್ನು ಕೊಡಬೇಕು. ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಬಳ್ಳಿಗೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೇ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.ನೆಲದ ಮೇಲೆ ಹರಡಿರುವ ಹಾಗೂ ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿಗೆ ಮುನ್ನ ಕತ್ತರಿಸಿ ತೆಗೆಯಬೇಕು.

ಮರಕ್ಕೆ ಬಳ್ಳಿಯನ್ನು ಕಟ್ಟಬೇಕು
ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆ ಕಟ್ಟಿ ಬೆಳೆಯಲು ಬೀಡಬೇಕು. ಕತ್ತರಿಸಿದ ಭಾಗಕ್ಕೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟ್ನಿಂದ ಲೇಪನ ಮಾಡಬೇಕು. ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಒಂದಕ್ಕಿಂತ ಹೆಚ್ಚು ತಳಿಗಳಿರುವಂತೆ ಕಾಳುಮೆಣಸು ಬಳ್ಳಿಗಳನ್ನು ನಾಟಿ ಮಾಡಬೇಕು. ಬಳ್ಳಿಯ ಗಾತ್ರ ಹೆಚ್ಚಿಸಲು 5-8 ಬಳ್ಳಿಗಳನ್ನು ನಾಟಿಮಾಡುವುದು ಜಂತುಹುಳುಗಳ ಬಾಧೆಯನ್ನು ತಪ್ಪಿಸಲು (ನಿಧಾನ ಸೊರಗು ರೋಗ) ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಪ್ರತಿ ಬಳ್ಳಿಗೆ 1 ಕಿ. ಗ್ರಾಂ ಬೇವಿನ ಹಿಂಡಿ ಗಿಡದ ಬುಡಕ್ಕೆ ಹಾಕಬೇಕು.












Click it and Unblock the Notifications