ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ…
ಬಹಳ ಹಿಂದೆ ಒಂದು ಸಣ್ಣ ಕಥೆಯೊಂದನ್ನು ಕೇಳಿದ್ದ ಅಸ್ಪಷ್ಟ ನೆನಪು. "ಹೊಳೆಯ ದಂಡೆಯ ಮೇಲೆ ಕೂತಿದ್ದ ಕೊಕ್ಕರೆಯೊಂದು ಹೊಳೆಯಲ್ಲಿದ್ದ ಮೀನೊಂದನ್ನು ಕಂಡು ಗಬಕ್ಕನೆ ಕೊಕ್ಕಿನಿಂದ ಮೇಲೆತ್ತಿ, ನೀರಿನಲ್ಲಿ ಮುಳುಗುತ್ತಿದ್ದ ಮೀನನ್ನು ರಕ್ಷಿಸಿದೆ ಎಂದು ಹೇಳಿಕೊಳ್ಳುತ್ತದೆ."
ಅದೇ ರೀತಿ ಕನ್ನಡದ ಹಿರಿಯ ಕವಿಯೊಬ್ಬರು ಬರೆದ ಸಾಲುಗಳು ಹೀಗಿವೆ " ಕೊಕ್ಕರೆಯೊಂದು ಮೀನು ಪ್ರೀತಿಸಿತು ಈ ಪ್ರೇಮದ ಪರಿಯೇನು.. ಈ ಪ್ರೀತಿಯ ಗುಟ್ಟೇನು.." ಕಳೆದ ಎರಡು ವಾರಗಳಿಂದ ಕಾಡುತ್ತಿರುವ ಸಾಲುಗಳಿವು...
ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಮತ್ತು ರೈತರನ್ನು ಉದ್ದೇಶಿಸಿ ಪ್ರಭುತ್ವ ಮಾತನಾಡುತ್ತಿರುವ ರೀತಿಯನ್ನು ಗಮನಿಸಿದಾಗ ಈ ಕೊಕ್ಕರೆ ಮೀನಿನ ಸನ್ನಿವೇಶಗಳು ತಲೆಯಿಂದ ಹೋಗುತ್ತಲೇ ಇಲ್ಲ.
ನಿನ್ನೆ ಪ್ರಧಾನಿ ಮಾಡಿದ ಭಾಷಣದ ಸಾರಾಂಶ..
* ಹೊಸದಾಗಿ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವ ಮಾತೇ ಇಲ್ಲ.
* ಹೊಸ ಕಾಯಿದೆಗಳಿಂದ ರೈತರ ಜಮೀನನ್ನು ಬೇರಾರೋ ಕಸಿದುಕೊಳ್ಳುವುದಿಲ್ಲ.
* ರೈತರನ್ನು ದಿಕ್ಕುತಪ್ಪಿಸುವ ಹುನ್ನಾರವಿದೆ,
* ಈಗ ತಂದಿರುವ ಮೂರೂ ಕಾಯಿದೆಗಳಿಂದ ಅವರ ಕೃಷಿ ಭೂಮಿ ಕೈತಪ್ಪಿ ಹೋಗುತ್ತದೆ ಎಂದು ಸುಳ್ಳು ಹೇಳಿ ರೈತರನ್ನು ನಂಬಿಸಲಾಗಿದೆ.
* ತಮ್ಮ ಸರ್ಕಾರ ರೈತರ ಹಿತಾಸಕ್ತಿ ಕಾಯಲು ಬದ್ಧವಾಗಿದೆ.
* ಹೊಸ ಕಾಯಿದೆಗಳಿಂದ ರೈತರ ಆದಾಯ ಹೆಚ್ಚಾಗುವುದಲ್ಲದೆ ದುಡಿಮೆಗೆ ಹೆಚ್ಚೆಚ್ಚು ಮಾರ್ಗಗಳು ತೆರೆದುಕೊಳ್ಳಲಿವೆ
* ರೈತ ಸಂಘಟನೆಗಳು ಕಾಲಾನುಕಾಲದಿಂದ ಕೋರಿದ್ದ ಬೇಡಿಕೆಗಳನ್ನು ಈಡೇರಿಸಲಾಗಿದೆ.
* ವಿರೋಧ ಪಕ್ಷಗಳು ಅದನ್ನು ವಿರೋಧಿಸುತ್ತಿದ್ದಾರೆ.
* ಹಿಂದೆ ಅವರು ಅಧಿಕಾರದಲ್ಲಿದ್ದಾಗ ಈ ಕಾನೂನುಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದರು.
* ನಾವೀಗ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನದ ವಿರುದ್ಧ ರೈತರನ್ನು ಎತ್ತಿಕಟ್ಟಿದ್ದಾರೆ
* ಗುಜರಾತ್ ರಾಜ್ಯದಲ್ಲಿ ರೈತರು ತೋಟಗಾರಿಕೆ ಬೆಳೆಗಳನ್ನು ಮಾಡುವುದರ ಜೊತೆಗೆ ಡೈರಿ ಫಾರ್ಮಿಂಗ್ ನಲ್ಲಿ ಯಶ ಸಾಧಿಸಿರುದ್ದಾರೆ.
* ಗುಜರಾತ್ ನಲ್ಲಿ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ.
ಇಷ್ಟೂ ಅಂಶಗಳನ್ನು ಹೇಳಿದ ಪ್ರಧಾನಿ "ಒಬ್ಬ ಡೈರಿ ಗುತ್ತಿಗೆದಾರ ನಿಮ್ಮಲ್ಲಿ ಹಾಲು ಕೊಳ್ಳಲು ಕೇಳಿದರೆ ನಿಮ್ಮ ಹಸುವನ್ನೇ ಹೊಡಕೊಂಡು ಹೋಗುತ್ತಾನೇನೂ..? ನಿಮ್ಮಲ್ಲಿ ತರಕಾರಿ ಕೊಳ್ಳಲು ಬರುವ ವ್ಯಾಪಾರಿ ನಿಮ್ಮ ಭೂಮಿ ಕಬ್ಜ ಮಾಡಿಕೊಳ್ಳುವನೇ? ಎಂದೂ ಸಭಿಕರತ್ತ ಪ್ರಶ್ನೆಗಳನ್ನು ಎಸೆದಿದ್ದಾರೆ.
ಮುಂದುವರೆದು ಮಾತನಾಡಿದ ಪ್ರಧಾನಿ, ನನ್ನ ರೈತ ಸ್ನೇಹಿತರಿಗೆ ಹೇಳುವುದಿಷ್ಟೇ.., ನಿಮ್ಮ ಯಾವುದೇ ಅಹವಾಲುಗಳನ್ನು ನಾನು ಬಗೆಹರಿಸಲು ಸಿದ್ಧನಿದ್ದೇನೆ. ನಮ್ಮ ಸರ್ಕಾರಕ್ಕೆ ರೈತರೇ ಮೊದಲ ಆದ್ಯತೆ ಎಂದೂ ಹೇಳಿದ್ದಾರೆ.
ರೈತ ಹೋರಾಟ ಮತ್ತು ಸರ್ಕಾರ
"ದಿಲ್ಲಿ ಚಲೋ" ಮೊದಲ ಹಂತದಲ್ಲಿ ಮಾನ್ಯ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಬೇಡಿಕೆಗಳನ್ನು ಆಲಿಸಿರುವುದಾಗಿ ಮತ್ತು ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತರುವುದಾಗಿ ಆಶ್ವಾಸನೆ ನೀಡಿದ್ದರು. ತಿದ್ದುಪಡಿಯನ್ನು ಒಪ್ಪುವುದಿಲ್ಲ ಮೂರು ಕಾಯಿದೆಗಳನ್ನು ಹಿಂಪಡೆಯಬೇಕು ಎಂಬ ರೈತರ ಒತ್ತಾಯಕ್ಕೆ ಏನೂ ಮಾಡಲು ತೋಚದೆ ವಿಳಂಬ ನೀತಿ ಅನುಸರಿಸಿದರು.
ಅಷ್ಟರ ನಡುವೆ ಒಂದಷ್ಟು ರೈತ ಸಂಘನೆಗಳ ಮುಖ್ಯಸ್ಥರು ಇದೇ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ " ಈಗ ತಂದಿರುವ ಕಾನೂನುಗಳನ್ನು ಸ್ವಾಗತಿಸುವುದಾಗಿಯೂ, ಅವುಗಳಿಂದ ರೈತರಿಗೆ ಪ್ರಯೋಜನವಿದೆ ಎಂಬುದಾಗಿಯೂ, ಅವುಗಳ ಬಗ್ಗೆ ಹೆಚ್ಚು ಪ್ರಚಾರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿಯೂ" ರೈತರೇ ಸರ್ಕಾರವನ್ನು ಕೇಳುವ ಹಾಗೊಂದು scripted ಕಾರ್ಯಕ್ರಮವಾಯಿತು. ಆ ಸುದ್ಧಿಯನ್ನೂ ಫೋಟೋಗಳ ಸಮೇತ ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿತು. ಇದು ನಡೆದು ಒಂದೇ ದಿನದ ನಂತರ ಪ್ರಧಾನಿ ಮೇಲಿನಂತೆ ಮಾತನಾಡಿದ್ದಾರೆ.
ರೈತರ ಬೇಡಿಕೆಗಳಿಗೆ ಪ್ರಭುತ್ವ ಸ್ಪಂದಿಸುವ ಪರಿಯೇ ಇದು? ರೈತರಿಗೆ ಏನು ಬೇಕು? ಏನು ಬೇಡ? ಎಂಬುದು ರೈತರಿಗೆ ಗೊತ್ತೋ ಇಲ್ಲಾ ಸರ್ಕಾರಗಳಿಗೆ ಗೊತ್ತೋ? ಉಫ್... ಸುಮ್ಮಲಿರಲಾಗುವುದಿಲ್ಲ ಬರೆಯಲೇ ಬೇಕು. ಎಂದಾದರೂ ನಮ್ಮ ಧ್ವನಿಗೂ ಬೆಲೆ ಬರಬಹುದೆಂಬ ಭರವಸೆಯಲ್ಲಿ.
ಅಮೆರಿಕನ್ ಜಾಕ್ಪಾಟ್ನಲ್ಲಿ 520 ಮಿಲಿಯನ್ ಡಾಲರ್ ಗೆಲ್ಲಲು ಅವಕಾಶ