ಜಮೀನಿನಲ್ಲೇ ರೈತನಿಗೆ ಸನ್ಮಾನ ಮಾಡಿದ ಸಚಿವ ಸುರೇಶ ಕುಮಾರ್
ಧಾರವಾಡ, ಡಿಸೆಂಬರ್ 23: ಧಾರವಾಡಕ್ಕೆ ಬರುವ ಮಾರ್ಗ ಮಧ್ಯೆ, ನೆಲೋಗಲ್ ಗ್ರಾಮದಲ್ಲಿ ರೈತರೊಬ್ಬರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಸುರೇಶ್ ಕುಮಾರ್ ಅವರು ಧಾರವಾಡಕ್ಕೆ ಕಾರ್ಯಕ್ರಮದ ಸಲುವಾಗಿ ಆಗಮಿಸಿದ್ದು, ಇದೇ ಸಂದರ್ಭ, ಇಂದು ರೈತರ ದಿನವಾದ ಕಾರಣ, ನೆಲೋಗಲ್ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಚನ್ನಬಸವಣಗೌಡ ಹೊಂಬರಡಿಗೆ ಸನ್ಮಾನ ಮಾಡಿದರು. ಸನ್ಮಾನ ಮಾಡಿ ನಮಸ್ಕರಿಸಿದರು.
ಈ ಕುರಿತು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿರುವ ಅವರು, "ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಈ 'ಅನ್ನದಾತ' ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಅವರಿಗೆ 'ರೈತರ ದಿನ' ದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ" ಎಂದು ಬರೆದುಕೊಂಡಿದ್ದಾರೆ. ಸಚಿವ ಸುರೇಶ್ ಕುಮಾರ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲ ಸಮಯವನ್ನೂ ಕಳೆದರು. ಕೈಯಲ್ಲಿ ಪುಸ್ತಕ ಹಿಡಿದು ಮಕ್ಕಳಿಗೆ ಪಾಠವನ್ನೂ ಮಾಡಿದರು. ಹಾಗೇ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿದರು.

"ನಿರಂತರ ಅಧ್ಯಯನ ಮತ್ತು ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಸತತವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು" ಎಂದು ಕಿವಿ ಮಾತು ಹೇಳಿದರು.












Click it and Unblock the Notifications