ಸೂರತ್ ಮಾದರಿಯ ನೈಸರ್ಗಿಕ ಕೃಷಿ ಇಡೀ ದೇಶಕ್ಕೆ ಮಾದರಿ: ಪಿಎಂ ಮೋದಿ
ನವದೆಹಲಿ, ಜುಲೈ 11: "ಗುಜರಾತ್ನ ಸೂರತ್ ಮಾದರಿಯ ಕೃಷಿಯು ಇಡೀ ದೇಶಕ್ಕೆ ಮಾದರಿಯಾಗಬಹುದು" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಗುಜರಾತ್ನ ಸೂರತ್ನಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಮಾತನಾಡಿ, "ಇಂದಿನ ಕಾರ್ಯಕ್ರಮವು ಅಮೃತ ಕಾಲದ ಗುರಿಗಳನ್ನು ಸಾಧಿಸುವ ದೇಶದ ನಿರ್ಣಯವನ್ನು ಗುಜರಾತ್ ಹೇಗೆ ಮುನ್ನಡೆಸುತ್ತಿದೆ ಎನ್ನುವುದರ ಸೂಚನೆಯಾಗಿದೆ. ಪ್ರತಿ ಪಂಚಾಯತ್ನ 75 ರೈತರನ್ನು ನೈಸರ್ಗಿಕ ಕೃಷಿಯೊಂದಿಗೆ ಜೋಡಿಸುವಲ್ಲಿ ಸೂರತ್ನ ಯಶಸ್ಸು ಇಡೀ ದೇಶಕ್ಕೆ ಉದಾಹರಣೆಯಾಗಲಿದೆ" ಎಂದರು. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಮುನ್ನಡೆಯುತ್ತಿರುವ ರೈತರನ್ನು ಅಭಿನಂದಿಸಿದರು.
"ಸ್ವಾತಂತ್ರ್ಯದ 75 ವರ್ಷಗಳ ಆಚರಣೆ ಸಂಬಂಧದಲ್ಲಿ ದೇಶವು ಅನೇಕ ಗುರಿಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ. ಇದು ಮುಂಬರುವ ದಿನಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಆಧಾರವಾಗಲಿದೆ. ನಮ್ಮ ಈ ಅಭಿವೃದ್ಧಿ ಪಯಣವನ್ನು ಮುನ್ನಡೆಸುತ್ತಿರುವ 'ಸಬ್ಕಾ ಪ್ರಯಾಸ್' ನ ಸ್ಪೂರ್ತಿಯೇ ದೇಶದ ಪ್ರಗತಿ ಮತ್ತು ಆದರ ವೇಗದ ಆಧಾರವಾಗಿದೆ. ಅದಕ್ಕಾಗಿಯೇ ಬಡವರು ಮತ್ತು ವಂಚಿತರ ಕಲ್ಯಾಣ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಪ್ರಮುಖ ಪಾತ್ರ ವಹಿಸಲಾಗಿದೆ" ಎಂದು ಹೇಳಿದರು.

ನೈಸರ್ಗಿಕ ಕೃಷಿಗೆ ಉತ್ತೇಜನ
ಪ್ರತಿ ಪಂಚಾಯಿತಿಯಿಂದ 75 ರೈತರನ್ನು ಆಯ್ಕೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಸಂಘಟಿತ ಪಾತ್ರ ವಹಿಸಿ ತರಬೇತಿ ಮತ್ತು ಇತರ ಸಂಪನ್ಮೂಲಗಳೊಂದಿಗೆ ಕೈ ಜೋಡಿಸಿವೆ. ಇದರಿಂದ 550 ಪಂಚಾಯಿತಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಗೆ ಉತ್ತೇಜನ ನೀಡಿದೆ. ಇದು ಉತ್ತಮ ಆರಂಭ ಮತ್ತು ತುಂಬಾ ಉತ್ತೇಜನಕಾರಿಯಾಗಿದೆ ಎಂದರು.

ಬದಲಾವಣೆ ತರುವುದು ಸುಲಭವಲ್ಲ
ಜನರ ಸಹಭಾಗಿತ್ವದ ಶಕ್ತಿಯಿಂದ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಅವುಗಳ ಯಶಸ್ಸನ್ನು ದೇಶದ ಜನತೆಯೇ ಖಾತ್ರಿಪಡಿಸುತ್ತಾರೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರಿಗೆ ಪ್ರಮುಖ ಪಾತ್ರವನ್ನು ನೀಡಿದ ಉದಾಹರಣೆಯನ್ನು ಮೋದಿ ಉಲ್ಲೇಖಿಸಿದರು. ಅದೇ ರೀತಿ ಗ್ರಾಮದಲ್ಲಿ ಬದಲಾವಣೆ ತರುವುದು ಸುಲಭವಲ್ಲ ಎಂದು ಹೇಳುತ್ತಿದ್ದವರಿಗೆ ಡಿಜಿಟಲ್ ಇಂಡಿಯಾ ಮಿಷನ್ನ ಅಸಾಧಾರಣ ಯಶಸ್ಸು ದೇಶದ ಉತ್ತರವಾಗಿದೆ. ಗ್ರಾಮಗಳು ಬದಲಾವಣೆಯನ್ನು ತರಲು ಮಾತ್ರವಲ್ಲದೆ ಬದಲಾವಣೆಗೆ ಕಾರಣವಾಗುತ್ತವೆ ಎನ್ನುವುದನ್ನು ನಮ್ಮ ಗ್ರಾಮಗಳು ತೋರಿಸಿಕೊಟ್ಟಿವೆ. ಮುಂದಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ಜನ ಆಂದೋಲನ (ಜನರ ಆಂದೋಲನ) ಕೂಡ ದೊಡ್ಡ ಯಶಸ್ಸು ಕಾಣಲಿದೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಕೃತಿಯಿಂದ ಕೃಷಿ ಆಧಾರಿತ ದೇಶ
ನಮ್ಮ ಜೀವನ, ನಮ್ಮ ಆರೋಗ್ಯ, ನಮ್ಮ ಸಮಾಜವು ನಮ್ಮ ಕೃಷಿ ವ್ಯವಸ್ಥೆಗೆ ಆಧಾರವಾಗಿದೆ. ಭಾರತವು ಪ್ರಕೃತಿ ಮತ್ತು ಸಂಸ್ಕೃತಿಯಿಂದ ಕೃಷಿ ಆಧಾರಿತ ದೇಶವಾಗಿದೆ. ಆದ್ದರಿಂದ, ನಮ್ಮ ರೈತ ಪ್ರಗತಿ ಹೊಂದುತ್ತಿದ್ದಂತೆ, ನಮ್ಮ ಕೃಷಿ ಪ್ರಗತಿ ಮತ್ತು ಸಮೃದ್ಧಿ ಹೊಂದಿದಂತೆ, ನಮ್ಮ ದೇಶವೂ ಪ್ರಗತಿ ಹೊಂದುತ್ತದೆ. ನೈಸರ್ಗಿಕ ಕೃಷಿಯು ಸಮೃದ್ಧಿಯ ಸಾಧನವಾಗಿದೆ ಎಂದು ಅವರು ರೈತರಿಗೆ ನೆನಪಿಸಿದರು.

ಜಾಗತಿಕ ಅವಕಾಶಗಳ ಸಂಪೂರ್ಣ ಲಾಭ
ಇಡೀ ಜಗತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಮಾತನಾಡುತ್ತಿದೆ. ಇದು ಶತಮಾನಗಳಿಂದ ಭಾರತವು ಜಗತ್ತನ್ನು ಮುನ್ನಡೆಸಿರುವ ಒಂದು ಕ್ಷೇತ್ರವಾಗಿದೆ. ಆದ್ದರಿಂದ ನಾವು ನೈಸರ್ಗಿಕ ಕೃಷಿಯ ಹಾದಿಯಲ್ಲಿ ಮುನ್ನಡೆಯುವ ಸಮಯ ಮತ್ತು ಹೊರಹೊಮ್ಮುತ್ತಿರುವ ಜಾಗತಿಕ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವ ಸಮಯ ಇದಾಗಿದೆ. ಸಾಂಪ್ರದಾಯಿಕ ಕೃಷಿಗೆ ಸಂಪನ್ಮೂಲಗಳು ಮತ್ತು ತರಬೇತಿಯನ್ನು ಒದಗಿಸುವ 'ಪರಂಪರಾಗತ ಕೃಷಿ ವಿಕಾಸ ಯೋಜನೆ'ಯಂತಹ ಯೋಜನೆಗಳ ರೂಪದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೋದಿ ಹೇಳಿದರು.












Click it and Unblock the Notifications