ಕಬ್ಬಿನ ದರ ನಿಗದಿಗಾಗಿ ಸಚಿವರ ಮನೆ ಮುಂದೆ ರೈತರಿಂದ ಪ್ರತಿಭಟನೆ
ಮೈಸೂರು, ಡಿಸೆಂಬರ್ 27 : ಬಣ್ಣಾರಿ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿಗೆ ಕಬ್ಬು ದರ ನಿಗದಿ ಹಾಗೂ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಕೊಡಿಸಲು ಒತ್ತಾಯಿಸಿ ರೈತರು ಸೋಮವಾರ ಸಚಿವ ಮಹದೇವಪ್ರಸಾದ್ ಅವರ ಮನೆ ಮುಂದೆ ಕಬ್ಬು ಹಿಡಿದು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಕಬ್ಬು ದರ ನಿಗದಿಗೊಳಿಸುವಂತೆ ಒತ್ತಾಯಿಸಿದರು.[ಕಬ್ಬು ಬೆಳೆ ಇಳಿಕೆ, ಸಕ್ಕರೆ ಬೆಲೆ ಭಾರೀ ಏರಿಕೆ ಸಂಭವ]

ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ದರವನ್ನು ಕಳೆದ ವರ್ಷಕ್ಕಿಂತ ಕಡಿಮೆ ಪಾವತಿಸುತ್ತಿದ್ದಾರೆ. ಪ್ರಸ್ತುತ ಸಕ್ಕರೆ ಬೆಲೆ ಕ್ವಿಂಟಲ್ ಗೆ ರು 4 ಸಾವಿರ ಏರಿಕೆಯಾಗಿದ್ದರೂ, ಪರಿಗಣಿಸದೆ ರೈತರಿಗೆ ದ್ರೋಹ ಎಸಗಿದ್ದಾರೆ. ಕಬ್ಬು ಕಟಾವು, ಸಾಗಣಿಕೆ ವೆಚ್ಚ ಕಳೆದು ಟನ್ನಿಗೆ ರು 1,700 ರೂ. ಮಾತ್ರ ಲಭಿಸುತ್ತಿದೆ. ಕಬ್ಬಿನ ದರ 2016-17ನೇ ಸಾಲಿಗೆ 9.5 ಇಳುವರಿಗೆ ರು.3,000 ನಿಗದಿಪಡಿಸಬೇಕೆಂದು ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದರೂ ಸರಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.[ಕಬ್ಬು ಬೆಳೆಗಾರರ ಸಮಸ್ಯೆ, ಸಿದ್ದರಾಮಯ್ಯ ಕೊಟ್ಟ ಉತ್ತರ]

ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಭತ್ತದ ಬೆಳೆ ಒಣಗಿ ಹೋಗಿ ನಷ್ಟ ಸಂಭವಿಸಿದೆ. ಸರಕಾರ ವಿಶೇಷ ಯೋಜನೆ ರೂಪಿಸಿ ಎಕರೆಗೆ ಕನಿಷ್ಠ ರು. 25,000 ಬೆಳೆ ನಷ್ಟ ಕೊಡಿಸಬೇಕು. ಯಳಂದೂರು, ಕೊಳ್ಳೇಗಾಲ, ಚಾಮರಾಜನಗರ ತಾಲೂಕಿನ ರೈತರಿಗೆ ನಾಲೆಗಳಲ್ಲಿ ನೀರು ಹರಿಸದ ಕಾರಣ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಬೇಕು. ನೋಟ್ ನಿಷೇಧದ ನಂತರ ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಿದ್ದು, ಸಹಕಾರಿ ಕ್ಷೇತ್ರದ ಎಲ್ಲ ಕೃಷಿ ಸಾಲಗಳನ್ನು ಶೀಘ್ರವೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications