'ಸಮಸ್ಯೆ ಬಗೆಹರಿಸಿ, ಇಲ್ಲವೇ ವಿಧಾನಸೌಧ ಖಾಲಿ ಮಾಡಿ'
ಮೈಸೂರು, ಜೂನ್ 11: ರಾಜ್ಯದಲ್ಲಿ ಬರ ಎದುರಾಗಿದ್ದು, ನೀರಿನ ಸಮಸ್ಯೆ ಎಲ್ಲೆಡೆ ಕಂಡುಬರುತ್ತಿದೆ. ಆದರೆ ಸಮ್ಮಿಶ್ರ ಸರ್ಕಾರ, ವಿರೋಧ ಪಕ್ಷದವರಾರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಕುರ್ಚಿಯ ದಾಹಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ರೈತರ ಸಮಸ್ಯೆ ಬಗೆಹರಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಿ, ಇಲ್ಲವಾದರೆ ವಿಧಾನಸೌಧ ಖಾಲಿ ಮಾಡಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಹೀಗಾಗಿ ಜೂನ್ 13ರಿಂದ 19ರವರೆಗೆ ರೈತ ಸಂಘದ 10 ಜನ ಪದಾಧಿಕಾರಿಗಳು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಬರ ಅಧ್ಯಯನ ಪ್ರವಾಸ ನಡೆಸಿ ನಂತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರ, ಖಾಸಗಿಯವರಿಗೆ ಬಿಟ್ಟುಕೊಡಲು ಮುಂದಾಗಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಸರ್ಕಾರವೇ ಈ ಎರಡು ಕಾರ್ಖಾನೆ ನಡೆಸಬೇಕು. ಇದಕ್ಕೆ ನ್ಯಾಯ ಸಿಗಬೇಕು ಇಲ್ಲವಾದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಬಜೆಟ್ ಕೃಷಿ ಕ್ಷೇತ್ರದ ಸಲಹೆ ಕುರಿತು ಇಂದು ಬಜೆಟ್ ಪೂರ್ವ ಚರ್ಚೆಗಾಗಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ರೈತ ಮುಖಂಡರ ಸಭೆ ಕರೆದಿದ್ದಾರೆ. ಸಿಐಎಫ್ ಎನ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ರೈತರ ಬೇಡಿಕೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದರು. ಪ್ರತಿ ಬೆಳೆಗೂ ಬೆಳೆ ವಿಮೆ ಪದ್ಧತಿ ಜಾರಿಗೊಳಿಸಬೇಕು. ಕಬ್ಬಿನ ದರವನ್ನು (ಎಫ್ ಆರ್ ಪಿ ) ಕನಿಷ್ಠ 3 ಸಾವಿರ ನಿಗದಿ ಮಾಡಬೇಕು. ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದೆ ಎಂದು ಹೇಳಿದ ಅವರು, ತಕ್ಷಣವೇ ಗುಂಡ್ಲುಪೇಟೆ ತಾಲೂಕಿನ ಬಿಡೆಗೆರೆ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯ ಆರಂಭಿಸಬೇಕು ಎಂದೂ ಆಗ್ರಹಿಸಿದರು.












Click it and Unblock the Notifications