ಕೊರೊನಾ: ರೈತರಿಗೆ ಕಳಪೆ ಬೀಜ, ರಾಸಾಯನಿಕ ಗೊಬ್ಬರ ವಿತರಿಸಿದರೆ ಜೈಲು
ಬೆಂಗಳೂರು, ಏ. 14: ಕೊರೊನಾ ವೈರಸ್ ಹರಡಂತೆ ತಡೆಯಲು ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಬಹುತೇಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಲಾಕ್ಡೌನ್ ಪಾಲನೆ ಆಗುತ್ತಿದೆ. ಅಗತ್ಯ ವಸ್ತುಗಳ ಉತ್ಪಾದನೆ ಬಿಟ್ಟರೆ ದೊಡ್ಡ ದೊಡ್ಡ ಕಾರ್ಖಾನೆಗಳೂ ಬಾಗಿಲು ಹಾಕಿವೆ. ದೇಶದ ಆರ್ಥಿಕತೆ ಈಗ ಏನಿದ್ದರೂ ಕೃಷಿ ವಲಯದ ಮೇಲೆ ನಿಂತಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ವೈರಸ್ ಹರಡದೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಚಟುವಟಿಕೆ ಮಾಡಲು ಸರ್ಕಾರ ಅವಕಾಶ ಕೊಟ್ಟಿದೆ, ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ.
ಆದರೆ ಎಚ್ಚರಿಕೆಯನ್ನು ಕೊಟ್ಟಿರುವುದು ರೈತರಿಗೆ ಅಲ್ಲ. ಬದಲಿಗೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರಿಗೆ. ಈ ಸಂಕಷ್ಟದ ಸಮಯದಲ್ಲಿ ರೈತರಿಗೆ ಮೋಸ ಮಾಡಿದರೆ ಜೈಲೂಟ ಗ್ಯಾರಂಟಿ ಎಂದು ರಾಜ್ಯ ಕೃಷಿ ವಿಚಕ್ಷಣ ಸಮಿತಿ ಎಚ್ಚರಿಕೆ ಕೊಟ್ಟಿದೆ.
ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆಗಳಿಗೆ ಸಚಿವರುಗಳ ಭೇಟಿ, ರೈತರೊಂದಿಗೆ ಚರ್ಚೆ
"ನೋ ಸ್ಟಾಕ್' ಬೋರ್ಡ್ ಇದ್ದರೆ ಕ್ರಮ
ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಕಳಪೆ ಬೀಜ ರಸಗೊಬ್ಬರ ಮಾರಾಟ ಮಾಡದಂತೆ ರಾಜ್ಯ ಕೃಷಿ ವಿಚಕ್ಷಣ ಸಮಿತಿ ಎಚ್ಚರಿಕೆ ಕೊಟ್ಟಿದೆ. ಗೊಬ್ಬರ ದಾಸ್ತಾನು ಇದ್ದರೂ ಕೆಲವೆಡೆ ನೋ ಸ್ಟಾಕ್ ಎಂಬ ಬೋರ್ಡ್ ಇರುವುದು ಸಮಿತಿ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ದುರ್ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರನ್ನು ಶೋಷಣೆ ಮಾಡಿದ್ದು ಕಂಡುಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕ್ರಮಜರುಗಿಸದೇ ಬಿಡುವುದಿಲ್ಲ ಎಂದು ಸಮಿತಿ ಎಚ್ಚರಿಕೆ ಕೊಟ್ಟಿದೆ.
ಕೃಷಿ ಅಧಿಕಾರಿಗಳ ಮೇಲೂ ಪ್ರಕರಣ
ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಕೃಷಿ ವಿಚಕ್ಷಣ ಸಮಿತಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಿದೆ. ಜೊತೆಗೆ ಆಯಾ ಭಾಗದ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರನ್ನು ಕೂಡ ಹೊಣೆ ಮಾಡಲಾಗುವುದು ಎಂದರು. ಈ ವರೆಗೆ 375 ಕಡೆ ಸಮಿತಿ ದಾಳಿ ನಡೆಸಿದ್ದು, 170 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 6 ಕೋಟಿ ರೂ. ಮೌಲ್ಯದ ಕಳಪೆ ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ. ಇಂಥವರ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಕಷ್ಟಪಟ್ಟು ಬೆವರುಸುರಿಸಿ ರೈತ ಬಿತ್ತನೆ ಮಾಡಿ ಬೆಳೆಬಾರದೇ ಇದ್ದರೆ ರೈತನ ಮನಸಿಗಾಗುವ ನೋವು ಹೇಳತೀರದು.ದೇಶಕ್ಕೆ ಅನ್ನಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ನೋವಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ. ಹೀಗಾಗಿ ರೈತರಿಗೆ ಯಾವುದೇ ಕಾರಣಕ್ಕೂ ಕಳಪೆ ಬೀಜ ಕಳಪೆ ರಸಗೊಬ್ಬರವನ್ನು ಯಾರೂ ವಿತರಿಸಬಾರದು. ಈ ಬಗ್ಗೆ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರುಗಳು ನಿಗಾವಹಿಸಬೇಕು. ಒಂದು ವೇಳೆ ಇಂಥದ್ದೇನಾದರೂ ಕಂಡುಬಂದರೆ ಅದಕ್ಕೆ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರುಗಳು ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಪಾಲಿಹೌಸ್ ವಿದ್ಯುತ್ ಬಿಲ್ ಮನ್ನಾ ಚಿಂತನೆ
ಬೆಂಗಳೂರು ಮತ್ತು ಸುತ್ತಮುತ್ತ ತರಕಾರಿ, ಹೂವು ಬೆಳೆದ ಬೆಳೆಗಾರರಿಗೆ ಸರಬರಾಜು ಮತ್ತು ಮಾರಾಟದಲ್ಲಿ ಸ್ವಲ್ಪ ತೊಂದರೆ, ವ್ಯತ್ಯಯವಾಗಿದೆ.
ಶೇ. 40ರಷ್ಟು ಹೂವು, ತರಕಾರಿ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ನಷ್ಟ ಹೇಗೆ ಭರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಬಿ.ಸಿ. ಪಾಟೀಲ್ ಭರವಸೆ ಕೊಟ್ಟಿದ್ದಾರೆ. ಪಾಲಿ ಹೌಸ್ ಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆಯೂ ಸಹ ಗಂಭೀರವಾಗಿ ಚಿಂತನೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರು ಜಿಲ್ಲೆಯೊಂದರಲ್ಲೆ 250 ಕೋಟಿ ರೂ. ನಷ್ಟ
ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ಲಾಕ್ಡೌನ್ ನಿಂದ ಈ ವರೆಗೆ ಹೂ ಬೆಳೆದ ರೈತರಿಗೆ ಸುಮಾರು 250 ಕೋಟಿ ರೂ. ನಷ್ಟವಾಗಿದೆ. ರೈತರು ಬೆಳೆದ ಹೂ ಮಾರಲು ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಮಾರುಕಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇತ್ತೀಚಿನ ಅಕಾಲಿಕ ಸುರಿದ ಮಳೆಯಿಂದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ.ಈ ಬಗ್ಗೆ ಮುಖ್ಯಮಂತ್ರಿಗಳು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ.ಕೃಷಿ ಸಮಸ್ಯೆಗಳ ಪರಿಹಾರಕ್ಕಾಗಿ ಕೃಷಿಕರಿಗಾಗಿ 080-22212818,080-22210237 ಸಂಖ್ಯೆಯ ಎರಡು ಸಹಾಯವಾಣಿ ತೆರೆಯಲಾಗಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಚಿವರು ರೈತರಲ್ಲಿ ಮನವಿ ಮಾಡಿದ್ದಾರೆ.