ಧಾರವಾಡ: ರೈತರೇ ಕರ್ನಾಟಕದ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರದ ವಿಶೇಷತೆ ತಿಳಿಯಿರಿ
ಧಾರವಾಡ, ಜನವರಿ 11: ಧಾರವಾಡದ ತೇಗೂರಿನಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಿದೆ. ಇಲ್ಲಿ ಪ್ರಮುಖವಾಗಿ 'ಕೃಷ್ಣವ್ಯಾಲಿ' ಎಂಬ ಸ್ಥಳೀಯ ತಳಿಯನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಇದು ಒಂದೇ ಒಂದು ಕೇಂದ್ರವಾಗಿದ್ದು, ರೈತರಿಗೆ ಸಹಾಯಕವಾಗಿದೆ. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಈ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿನ ಕಾರ್ಯ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದರು.
ಧಾರವಾಡದ ಎಮ್ಮೆ ರಾಜ್ಯಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. 2019ರ ಜಾನುವಾರು ಗಣತಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿವೆ. ಇದರಲ್ಲಿ ಸುಮಾರು 50 ಸಾವಿರ ಎಮ್ಮೆಗಳಿವೆ. ತೇಗೂರಿನಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಿದ್ದು, 'ಕೃಷ್ಣವ್ಯಾಲಿ' ಎಂಬ ಸ್ಥಳೀಯ ತಳಿಯನ್ನು ಇಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ.

ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಎಮ್ಮೆ ತಳಿ ಸಂವರ್ಧನಾ ಕೇಂದ್ರ 1910ರಲ್ಲಿ ಪ್ರಾರಂಭವಾದ ಸಂಸ್ಥೆಯಾಗಿದೆ. ಜಾನುವಾರು ಕ್ಷೇತ್ರವೆಂದು ರೂಪಾಂತರಗೊಂಡು 1976 ರಲ್ಲಿ ಇದು ಎಮ್ಮೆ ತಳಿ ಸಂವರ್ಧನಾ ಕೇಂದ್ರವೆಂದು ನಾಮಕರಣಗೊಂಡಿತು. ರಾಜ್ಯದಲ್ಲಿ ಇರುವ ಈ ಮಾದರಿ ಏಕೈಕ ಕೇಂದ್ರ ಇದಾಗಿದೆ.
ಧಾರವಾಡ ಜಿಲ್ಲಾಧಿಕಾರಿಗಳು ಮಾತನಾಡಿ, "ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿದ್ದು ಆಕಳು, ಆಡು ಇನ್ನುಳಿದಂತೆ ವಿವಿಧ ಪ್ರಬೇಧದ ಜಾನುವಾರುಗಳಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ, ಅತಿವೃಷ್ಟಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಕೇವಲ ಕೃಷಿಗೆ ಮಾತ್ರ ಅವಲಂಭಿತರಾಗದೆ ಇತರ ಕೃಷಿ ಉಪಕಸುಬುಗಳಾದ ಎಮ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಆರ್ಥಕವಾಗಿ ಸಹಾಯಕವಾಗಿದೆ" ಎಂದರು.
ತಳಿ ಸಂವರ್ಧನಾ ಕೇಂದ್ರದ ವಿವರಗಳು: ಜಾನುವಾರು ತಳಿ ಸಂವರ್ಧನಾ ಕೇಂದ್ರದ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗುವಂತೆ ನೀರಾವರಿ ಆಶ್ರಯದ 53 ಎಕರೆ ಕ್ಷೇತ್ರದಲ್ಲಿ, ಮಳೆಯ ಆಶ್ರಯದ 51 ಎಕರೆ ಕ್ಷೇತ್ರದಲ್ಲಿ ಮೇವು ಬೆಳೆಯಲಾಗುತ್ತದೆ. ಜಾನುವಾರುಗಳನ್ನು ಮೇಯಿಸಲು 126.09 ಎಕರೆಯ ವಿಸ್ತೀರ್ಣದ ಪ್ರದೇಶವನ್ನು ಕಾಯ್ದಿರಿಸಲಾಗಿದೆ, 41 ಎಕರೆ ವಿಸ್ತೀರ್ಣದಲ್ಲಿ ಕೆರೆ, ಬಾವಿ, ಟ್ರೆಂಚ್ಗಳನ್ನು ನಿರ್ಮಿಸಲಾಗಿದೆ.
ರಾಜ್ಯ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಮುಖ್ಯವಾದ ಉದ್ದೇಶ ರಾಜ್ಯದ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟ ಹಾಲಿನ ಇಳುವರಿ ಹೊಂದಿದ ಎಮ್ಮೆಗಳಿಗೆ ಜನಿಸಿದ ಗಂಡು ಎಮ್ಮೆ ಕರು/ ಕೋಣದ ಕರುಗಳನ್ನು ನೀಡುವುದು. ನಂತರ ಈ ಕೋಣಗಳಿಂದ ವೀರ್ಯವನ್ನು ಸಂಗ್ರಹಿಸಿ ಸಂಸ್ಕರಿಸಿದ ವೀರ್ಯ ಕಡ್ಡಿಗಳನ್ನು ರಾಜ್ಯದ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ, ಕೃತಕಗರ್ಭಧಾರಣೆ ಮಾಡಲು ಉಪಯೋಗಿಸುವುದು. ಆದ್ದರಿಂದ ಈ ಕೇಂದ್ರ ರಾಜ್ಯದ ಏಕೈಕ ಮಾತೃ ಕೋಣ ಉತ್ಪಾದನಾ ಸಂಸ್ಥೆಯಾಗಿದೆ.
ಕ್ಷೇತ್ರದಲ್ಲಿ ಹೆಚ್ಚಿನ ಇಳುವರಿ ಬರುವ ಸೂಪರ್ ಹೈಬ್ರಿಡ್ ನೇಪಿಯರ್, ಕಾಫ್ಸ್, ಗಿನಿಹುಲ್ಲು, ಗ್ರೇಝಿಂಗ್ಗಿನಿ, ಮೆಕ್ಕೆಜೊಳ, ಅಲಸಂಧಿ, ಸುಬಾಬುಲ್ಸ್ ಮುಂತಾದ ಮೇವಿನ ಬೆಳೆಗಳನ್ನು ಬೆಳೆದು ನಿಯಮಿತವಾಗಿ ಜಾನುವಾರುಗಳಿಗೆ ಮೇಯಿಸಲಾಗುತ್ತಿದೆ.
ಕ್ಷೇತ್ರದ ಹೈನೋದ್ಯಮದಲ್ಲಿ ಆಸಕ್ತರಿಗೆ ಅಧಿಕ ಇಳುವರಿ ನೀಡುವ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ಇಲಾಖೆ ನಿಗದಿಪಡಿಸಿದ ದರದಲ್ಲಿ ವಿತರಿಸಲಾಗುತ್ತದೆ ಮತ್ತು ಹೆಚ್ಚುವರಿಯಾಗಿ ಉಳಿದ ಹಸಿರು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬೇಸಿಗೆ ಹಾಗೂ ಮೇವು ಅಭಾವದ ಸಂದರ್ಭಗಳಲ್ಲಿ ಜಾನುವಾರುಗಳಿಗೆ ನೀಡಿ ನಿರ್ವಹಿಸಲಾಗುತ್ತದೆ. ಕ್ಷೇತ್ರದಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಘಟಕವಿದ್ದು, ಪ್ರಾತ್ಯಕ್ಷಿಕೆಯೊಂದಿಗೆ ಆಸಕ್ತರಿಗೆ ವಿವರಿಸಲಾಗುತ್ತದೆ.
2019-20ನೇ ಸಾಲಿನಲ್ಲಿ ಅಳಿವಿನಂಚಿನಲ್ಲಿರುವ ದೇಶಿ ಆಕಳು ತಳಿಯಾದ ಕೃಷ್ಣವ್ಯಾಲಿ ಜಾನುವಾರುಗಳನ್ನು ಜಾನುವಾರು ಸಂವರ್ಧನಾ ಕೇಂದ್ರ ಮುನಿರಬಾದನಿಂದ ತೇಗೂರು ಕ್ಷೇತ್ರಕ್ಕೆ ವರ್ಗಾಯಿಸಿ ತಳಿ ಸಂರಕ್ಷಣಾ ಯೋಜನೆಯನ್ನು ಮುಂದುವರಿಸಲಾಗುತ್ತಿದೆ.
2022-23ನೇ ಸಾಲಿನಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಸೌಮ್ಯದ ಹಂದಿ ಉತ್ಪಾದನಾ ಘಟಕವನ್ನು ತೇಗೂರು ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿದೆ. ಈ ಕ್ಷೇತ್ರದಲ್ಲಿ ಪ್ರಮುಖ ಮಾಂಸ ಹಾಗೂ ಮರಿ ಉತ್ಪಾದನೆಯಲ್ಲಿ ಉತ್ಕೃಷ್ಟವಾದ ವಿದೇಶಿ ಹಂದಿ ತಳಿಗಳಾದ ಯಾರ್ಕಶೈರ್, ಡ್ಯೂರಾಕ್ ಮತ್ತು ಲ್ಯಾಂಡ್ ರೇಸ ಹಂದಿಗಳನ್ನು ಪಾಲನೆ ಮಾಡಲಾಗುತ್ತದೆ.
ಆಸಕ್ತ ಹಂದಿ ಸಾಕಾಣಿಕೆದಾರರಿಗೆ ಕ್ಷೇತ್ರದಲ್ಲಿ ಬೆಳೆಸಿದ 3 ರಿಂದ 4 ತಿಂಗಳ ಶುದ್ಧ ಹಾಗೂ ಮಿಶ್ರತಳಿ ಹಂದಿ ಮರಿಗಳನ್ನು ರೋಗ ಮುಂಜಾಗ್ರತಾ ಲಸಿಕೆ ಹಾಗೂ ಜಂತುನಾಷಕ ಔಷಧಿಗಳನ್ನು ನೀಡಿದ ನಂತರ ಪಾಲನೆಗಾಗಿ ಇಲಾಖೆ ನಿಗದಿಪಡಿಸಿದ ದರಗಳಲ್ಲಿ ವಿತರಿಸಲಾಗುತ್ತದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಹಂದಿ ಸಾಕಾಣಿಕೆಗೆ ನಿರುದ್ಯೋಗ ಯುವಕ ಮತ್ತು ಯುವತಿಯರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದು, ಆನೇಕ ಹಂದಿ ಫಾರ್ಮ್ಗಳು ಪ್ರಾರಂಭವಾಗಿದ್ದು ಹಂದಿಮರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದ್ದರಿಂದ ಮಾತೃ ಹಂದಿಗಳ ಪಾಲನೆಗಾಗಿ 2 ಹೆಚ್ಚುವರಿ ಹಂದಿ ಶೆಡ್ಗಳನ್ನು ಅನುದಾನದ ಲಭ್ಯತೆಯ ಅನುಗುಣವಾಗಿ ನಿರ್ಮಿಸಲಾಗುತ್ತಿದೆ.












Click it and Unblock the Notifications