ಚಾಮರಾಜನರ: ಬೇವರು ಸುರಿಸಿ ಬೆಳೆದಿದ್ದ ಹತ್ತಿ ಬೆಳೆ ದುಷ್ಕರ್ಮಿಗಳಿಂದ ನಾಶ
ಚಾಮರಾಜನಗರ, ಜೂನ್ 3: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಮಾತು ಇಲ್ಲೂ ಅನ್ವಯಿಸುತ್ತದೆ. ರೈತರು ಕಷ್ಟಪಟ್ಟು, ಎಷ್ಟೋ ದಿನ ಬೆವರು ಸುರಿಸಿ ಬೆಳೆಸಿದ ಹತ್ತಿಯನ್ನು ಕೆಲ ದುಷ್ಕರ್ಮಿಗಳು ಒಂದೇ ದಿನದಲ್ಲಿ ನಾಶ ಮಾಡಿದ್ದಾರೆ.
ಮಳೆ ಬಿದ್ದ ಖುಷಿಯಲ್ಲಿದ್ದ ರೈತರು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದ ಹತ್ತಿ ಸಸಿಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಿತ್ತು ನಾಶ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಾಡಿದ ಕೃತ್ಯದಿಂದ ರೈತರಾದ ರಾಮಯ್ಯ, ಮಹದೇವಪ್ಪ ಮತ್ತು ನಾಗರಾಜು ಅವರಿಗೆ ನಷ್ಟವಾಗಿದ್ದು, ಬೇಸರದಲ್ಲೇ ದಿನ ಕಳೆಯುವಂತಾಗಿದೆ. ಈ ಮೂವರು ರೈತರು ಸೇರಿ ಒಟ್ಟು ಆರು ಎಕರೆ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಬೆಳೆಯುವ ಸಲುವಾಗಿ ಉಳುಮೆ ಮಾಡಿ ಹತ್ತಿಯನ್ನು ನಾಟಿ ಮಾಡಲಾಗಿತ್ತು. ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದರು.[ಗುಂಡ್ಲುಪೇಟೆ: ಬರಿದಾದ ಕೆರೆಗಳಲ್ಲೀಗ ಜೀವಜಲ]

ಗಿಡಗಳು ಬೆಳೆಯುವ ಹಂತದಲ್ಲಿದ್ದವು. ಇದನ್ನು ನೋಡುತ್ತಾ ರೈತರು ಖುಷಿಪಡುತ್ತಿದ್ದರು. ಆದರೆ ಈ ನಡುವೆ ಅದ್ಯಾರೋ ದುಷ್ಕರ್ಮಿಗಳು ಹತ್ತಿ ಬೆಳೆ ಕೃಷಿ ಮಾಡಿರುವುದನ್ನು ನೋಡಿ ದ್ವೇಷದಿಂದ ಅದನ್ನು ನಾಶ ಮಾಡುವ ಉದ್ದೇಶದಿಂದ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಸುಮಾರು ಆರು ಎಕರೆ ಪ್ರದೇಶದ ಮೂರು ರೈತರಿಗೆ ಸೇರಿದ ಬೆಳೆಯನ್ನು ನಾಶ ಮಾಡಿ ಪರಾರಿಯಾಗಿದ್ದಾರೆ.
ಎಂದಿನಂತೆ ಜಮೀನಿಗೆ ತೆರಳಿದ ರೈತರಿಗೆ ಹತ್ತಿ ಬೆಳೆಯನ್ನು ನಾಶ ಮಾಡಿರುವುದು ಕಂಡು ಬಂದಿದೆ. ಇದರಿಂದ ನೊಂದ ರೈತರು ಪೊಲೀಸರಿಗೆ ದೂರು ನೀಡಿದ್ದಾರೆ. ಇದು ಪ್ರಕೃತಿಯ ವಿಕೋಪವಲ್ಲದ ಕಾರಣದಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಕೇಳಿ ಬಂದಿದ್ದರಿಂದ ರೈತರು ಆತಂಕದಲ್ಲಿದ್ದಾರೆ.
ಹಲವು ವರ್ಷಗಳಿಂದ ಬರಗಾಲದ ಕಾರಣಕ್ಕೆ ಬೆಳೆ ಬೆಳೆಯಲಾಗಿರಲಿಲ್ಲ. ಈ ಬಾರಿ ಮಳೆ ಬಿದ್ದಿದ್ದರಿಂದ ಖುಷಿಯಾಗಿಯೇ ಕೃಷಿಗೆ ಮುಂದಾಗಿದ್ದರು. ಆದರೆ ದುಷ್ಕರ್ಮಿಗಳು ಬೆಳೆಯನ್ನು ನಾಶ ಮಾಡಿದ್ದರಿಂದ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ.












Click it and Unblock the Notifications