ಸಿಂಘು ಗಡಿಯಲ್ಲಿ ಹಿಂಸಾಚಾರ: ಖಡ್ಗದಿಂದ ದಾಳಿ ನಡೆಸಿದ ಆರೋಪಿ ಸೇರಿ 44 ಮಂದಿ ಬಂಧನ
ನವದೆಹಲಿ, ಜನವರಿ 30: ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 44 ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಇದರಲ್ಲಿ ದೆಹಲಿ ಮತ್ತು ಹರ್ಯಾಣ ನಡುವಿನ ಸಿಂಘು ಗಡಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಖಡ್ಗದಿಂದ ದಾಳಿ ಮಾಡಿದ್ದ ವ್ಯಕ್ತಿ ಕೂಡ ಸೇರಿದ್ದಾನೆ.
ಇನ್ನೊಂದೆಡೆ ಉತ್ತರ ಪ್ರದೇಶದ ಗಾಜಿಪುರ ಗಡಿಯಲ್ಲಿ ಸೇರಿದ್ದ ರೈತರು ಅಲ್ಲಿಂದ ಜಾಗ ತೆರವು ಮಾಡುವಂತೆ ಆಡಳಿತ ಎಚ್ಚರಿಕೆ ನೀಡಿದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ರೈತರು ಅಲ್ಲಿ ಸೇರಿಕೊಳ್ಳುವ ಮೂಲಕ ಉತ್ತರ ಪ್ರದೇಶ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಕಣ್ಣೀರಿನ ಮಾತುಗಳಿಗೆ ಸ್ಪಂದಿಸಿದ ರೈತರು, ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ತಡೆಯಲು ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ ದೊಡ್ಡ ಮಟ್ಟದ ಸಂಘರ್ಷ ನಡೆದಿದೆ. ಈ ವೇಳೆ ಗುಂಪೊಂದು ರೈತರ ಟೆಂಟ್ಗಳಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದರು. ರೈತರು ಮತ್ತು ಗುಂಪಿನ ನಡುವೆ ಸಂಘರ್ಷ ನಡೆಯುವಾಗ ಜನರನ್ನು ಚೆದುರಿಸಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಪ್ರದೀಪ್ ಪಲಿವಾಲ್ ಸೇರಿದಂತೆ ಅನೇಕ ಪೊಲೀಸರು ಗಾಯಗೊಂಡಿದ್ದರು.
ಜಾಗ ಖಾಲಿ ಮಾಡಿ ಎಂದ ಯೋಗಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು!
ರಂಜೀತ್ ಸಿಂಗ್ ಎಂಬ 22 ವರ್ಷದ ಯುವಕ ಅಲೀಪುರ ಎಸ್ಎಚ್ಒ ಪ್ರದೀಪ್ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಪ್ರದೀಪ್ ಅವರ ಮುಂಗೈಗೆ ಗಾಯವಾಗಿತ್ತು. ಬಂಧಿತರಾದ ಎಲ್ಲ 44 ಮಂದಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣಗಳನ್ನು ದಾಖಲಾಗಿಸಲಾಗಿದೆ.