"ನ್ಯಾಯಾಲಯ ಹೇಳಿದ್ದು ಸರಿಯಾಗಿದೆ; ನಾವು ಮಾತುಕತೆಗೆ ಸಿದ್ಧ"
ನವದೆಹಲಿ, ಡಿಸೆಂಬರ್ 17: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ನಿರತ ರೈತರನ್ನು ಗಡಿಯಿಂದ ತೆರವುಗೊಳಿಸುವಂತೆ ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿಗಳು ಬಂದಿವೆ.
ಈ ಅರ್ಜಿಗಳ ವಿಚಾರಣೆಯನ್ನು ಗುರುವಾರ ನ್ಯಾಯಾಲಯ ಮುಂದುವರೆಸಿದ್ದು, ರೈತರು ನಗರವನ್ನು ಹೀಗೆ ನಿರ್ಬಂಧಿಸುವಂತಿಲ್ಲ ಎಂದು ತಿಳಿಸಿದೆ. ಜೊತೆಗೆ ಕೇಂದ್ರ ಸರ್ಕಾರ ಹಾಗೂ ರೈತರು ಚರ್ಚೆ ನಡೆಸಿ ಈ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದೆ.
"ನ್ಯಾಯಾಲಯ ಹೇಳಿದಂತೆ ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಿದೆ. ನಮ್ಮನ್ನು ಮಾತುಕತೆಗೆ ಕರೆದರೆ ನಾವು ಹೋಗುತ್ತೇವೆ. ಆದರೆ ಸರ್ಕಾರ ಕೃಷಿ ಕಾಯ್ದೆಯ ತಿದ್ದುಪಡಿ ಕುರಿತು ಮಾತನಾಡುತ್ತಿದೆ. ನಾವು ಅವುಗಳನ್ನು ರದ್ದು ಪಡಿಸಲು ಆಗ್ರಹಿಸುತ್ತಿದ್ದೇವೆ" ಎಂದು ರೈತ ಮುಖಂಡ ರಾಕೇಶ್ ತಿಕೈಟ್ ತಿಳಿಸಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಗಡಿಯಿಂದ ತೆರವುಗೊಳಿಸುವಂತೆ ಮನವಿ ಮಾಡಿ ನ್ಯಾಯಾಲಯಕ್ಕೆ ಬಂದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬುಧವಾರ ನೋಟಿಸ್ ನೀಡಿತ್ತು.