ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ; ದೇಶವ್ಯಾಪಿ ಚಳವಳಿಗೆ ತಯಾರಿ
ದಿಲ್ಲಿ ಗಡಿಯ ರೈತ ಚಳವಳಿಗೆ 200 ದಿನ ತುಂಬಿದೆ. ಚಳವಳಿ ಆರಂಭವಾದಾಗಿನಿಂದ ದೇಶದಾದ್ಯಂತ ನೂರಾರು ಪ್ರತಿಭಟನೆಗಳು, ರ್ಯಾಲಿಗಳು, ಸಾರ್ವಜನಿಕ ಸಭೆಗಳು ನಡೆದಿವೆ. ಆ ಲೆಕ್ಕದಲ್ಲಿ ದಿಲ್ಲಿ ರೈತ ಚಳುವಳಿಗೆ 200ಕ್ಕೂ ಹೆಚ್ಚಿನ ದಿನಗಳು ಮುಗಿದಿವೆ.
ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಈ ಅಸಡ್ಡೆಯೇ ಅವರಿಗೆ ಗಂಡಾಂತರವಾಗಿ ಪರಿಣಮಿಸಬಹುದು. ರೈತ ಸತ್ಯಾಗ್ರಹಿಗಳು ದಿನದಿಂದ ದಿನಕ್ಕೆ ಹೆಚ್ಚು ಸಂಘಟಿತರಾಗುತ್ತಿದ್ದಾರೆ, ತಮ್ಮ ಕಾಳಜಿಯ ಹೋರಾಟವನ್ನು ಗಟ್ಟಿಗೊಳಿಸುತ್ತಿದ್ದಾರೆ.
ದಿಲ್ಲಿಯಲ್ಲಿ ಪ್ರತಿಭಟನಾನಿರತ ಸತ್ಯಾಗ್ರಹಿಗಳು ಮೂಳೆ ಕೊರೆಯುವ ಚಳಿಯನ್ನು ಎದುರಿಸಿದ್ದಾರೆ, ಬಿರುಗಾಳಿಗೆ ತಮ್ಮ ಗುಡಾರಗಳೇ ಎದ್ದು ಹೋದರೂ ಜಗ್ಗದೆ ಕುಳಿತಿದ್ದಾರೆ, ಮೈಸುಡುವ ಬೇಸಿಗೆಗೂ ಎದೆಯೊಡ್ಡಿದ್ದಾರೆ, ಇದೀಗ ಮಳೆಯ ಆರ್ಭಟದಲ್ಲಿ ತೊಯ್ದು ತೊಪ್ಪೆಯಾಗುತ್ತಿದ್ದಾರೆ.

ಈಗ ಭತ್ತ ನಾಟಿಯ ಸಮಯ. ಆದಾಗ್ಯೂ ಸಾವಿರಾರು ರೈತರು ದಿಲ್ಲಿ ಗಡಿಗಳನ್ನು ತಲುಪುತ್ತಿದ್ದಾರೆ. ಮಳೆಯಲ್ಲಿ ತೊಯ್ಯುತ್ತಲ್ಲೇ ಚಳವಳಿ ಮುಂದುವರೆಸುವ ಸಂಕಲ್ಪ ರೈತರದ್ದು. ಪ್ರತಿಭಟನಾ ಸಭೆಗಳನ್ನು ಮಳೆಯಲ್ಲಿಯೇ ಮುಂದುವರೆಸಲು ಸಿದ್ಧರಿದ್ದಾರೆ. ನಿನ್ನೆ ಅದೇ ರೀತಿ ಆದದ್ದು ಕೂಡಾ.
ಜೂನ್ 26ಕ್ಕೆ "ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ" ಹೋರಾಟಕ್ಕೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಜೂನ್ 26ಕ್ಕೆ ದಿಲ್ಲಿ ಚಲೋ ರೈತ ಚಳವಳಿಗೆ ಏಳು ತಿಂಗಳು ತುಂಬುಲಿದೆ. ಅಂದು ಭಾರತದಲ್ಲಿ ತಂದಿದ್ದ ತುರ್ತು ಪರಿಸ್ಥಿತಿಗೆ ೪೬ನೆಯ ವಾರ್ಷಿಕ ದಿನ. ಇದೀಗ ಭಾರತದಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಸಾವಿರಾರು ಪ್ರತಿಭಟನಾ ಕಾರ್ಯಕ್ರಮಗಳು ಅದೇ ದಿನದಂದು ನಡೆಯಲಿವೆ.
26ನೇ ತಾರೀಖಿಗೆ ಮತ್ತೊಂದು ಮಹತ್ವವಿದೆ. ರೈತರ ಬಹುದೊಡ್ಡ ಹೋರಾಟಗಾರರಾದ ಸ್ವಾಮಿ ಸಹಜಾನಂದ ಸರಸ್ವತಿ ಅವರು ತೀರಿಹೋದ ದಿನವದು. ಅಂದು ದೇಶದಾದ್ಯಂತ ರೈತ ಸತ್ಯಾಗ್ರಹಿಗಳು ರಾಜಭವನ, ಜಿಲ್ಲಾಡಳಿತ ಕಚೇರಿ, ತಾಲ್ಲೂಕು ತಹಶೀಲ್ದಾರರ ಕಚೇರಿಗಳ ಮುಂದೆ ಶಾಂತಿಯುತ ಧರಣಿ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ದೇಶದ ಎಲ್ಲಾ ಜನಪರ ಸಂಘಟನೆಗಳು, ಯುವ ಸಂಘಟನೆಗಳು, ಮಹಿಳಾ ಸಂಘಟನೆಗಳು, ನಾಗರೀಕ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಚಳುವಳಿಯಲ್ಲಿ ಭಾಗಿಯಾಗಬೇಕೆಂದು ಸಂಯುಕ್ತ ಕಿಸಾನ್ ಮೂರ್ಚಾ ಕರೆ ನೀಡಿದೆ.
ಇದೇ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ "ಬಿಕೆಯು ಏಕ್ತಾ ಉರ್ಗಹಾನ್" ಟ್ವಿಟ್ಟರ್ ಅಕೌಂಟಿಗೆ ತಾತ್ಕಾಲಿಕ ತಡೆ ಒಡ್ಡಿರುವುದನ್ನು ವಿರೋಧಿಸುತ್ತದೆ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುವ ಈ ಕ್ರಮವನ್ನು ಖಂಡಿಸುವುದಲ್ಲದೆ ವ್ಯವಸ್ಥೆಗೆ ಎಚ್ಚರಿಕೆ ನೀಡುತ್ತದೆ.
ದಿಲ್ಲಿಯ ಗಡಿಗಳಿಗೆ ರೈತ ಸತ್ಯಾಗ್ರಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದಾರೆ. ಕಳೆದ ೪೮ ಗಂಟೆಯಲ್ಲಿ ಪಶ್ಚಿಮ ಬಂಗಾಳದಿಂದ ಸಾವಿರಾರು ರೈತರು ಬಂದಿದ್ದಾರೆ. ಇಂದು ಸಿ.ಐ.ಟಿ.ಯು ಬ್ಯಾನರಿನಡಿ ದಿಲ್ಲಿಯ ಸಿಂಘು ಗಡಿಗೆ ನೂರಾರು ಕಾರ್ಮಿಕರು ಬಂದು ಸೇರಿದರು. ಒಟ್ಟಿನಲ್ಲಿ ಚಳವಳಿ ಗಟ್ಟಿಯಾಗುತ್ತಿದೆ, ಮುಂದುವರೆಯುತ್ತಿದೆ.












Click it and Unblock the Notifications