ಯೂರಿಯಾ ರಸಗೊಬ್ಬರದ ಬಳಕೆ ಕಡಿಮೆ ಮಾಡಲು ಸಲಹೆ
ಬೆಂಗಳೂರು, ಜುಲೈ 31 : ರೈತರು ಯೂರಿಯಾ ರಸಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ. ಮಣ್ಣು ಪರೀಕ್ಷಾ ವರದಿಯ ಶಿಫಾರಸು ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಉತ್ತಮವಾಗಿ ಮಳೆಯಾದ ಸಂದರ್ಭದಲ್ಲಿ ಭೂಮಿಯ ತೇವಾಂಶ ಹೆಚ್ಚಿರುತ್ತದೆ. ಇದರ ಜೊತೆಗೆ ಅಧಿಕ ಪ್ರಮಾಣದ ಯೂರಿಯಾ ಬಳಕೆ ಮಾಡಿದಲ್ಲಿ ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ಬಳಕೆ ಕಡಿಮೆ ಮಾಡಿ ಎಂದಿದ್ದಾರೆ.
ಯೂರಿಯಾ ರಸಗೊಬ್ಬರದ ಮಾರಾಟ ದರವು ಉಳಿದೆಲ್ಲಾ ರಸಗೊಬ್ಬರಗಳಿಗಿಂತ ಕಡಿಮೆ ಇದೆ. ಬಿತ್ತನೆ ಸಮಯದಲ್ಲಿ ಮಾತ್ರ ಖರೀದಿಸದೆ ಸಮತೋಲನ ಪೋಷಕಾಂಶಗಳನ್ನು ಒದಗಿಸಲು ಕಾಂಪ್ಲೆಕ್ಸ್, ಡಿಎಪಿ ಮತ್ತು ಎಂಓಪಿ ರಸಗೊಬ್ಬರಗಳನ್ನೂ ಸಹ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ಹಾಗೂ ಹನಿ ನೀರಾವರಿ ಬೆಳೆಗಳಿಗೆ ಶೇ.100 ರಷ್ಟು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು. ಕಬ್ಬು ಬೆಳೆಗಾರರು ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ಅಮೋನಿಯಂ ಸಲ್ಫೇಟ್ ಬಳಸಬೇಕು ಎಂದು ತಿಳಿಸಲಾಗಿದೆ.
ಯೂರಿಯಾ ರಸಗೊಬ್ಬರದಲ್ಲಿ ದಪ್ಪ ಕಾಳು ಹಾಗೂ ಸಣ್ಣ ಕಾಳಿನ ರಸಗೊಬ್ಬರ ಸರಬರಾಜಾಗುತ್ತಿದೆ. ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ಲಭ್ಯವಿರುವ ಯಾವುದೇ ಗಾತ್ರದ ಯೂರಿಯಾ ರಸಗೊಬ್ಬರವನ್ನು ರೈತರು ಬಳಕೆ ಮಾಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ರಸಗೊಬ್ಬರಗಳನ್ನು ಖರೀದಿಸುವಾಗ ರೈತರು ತಪ್ಪದೇ ತಮ್ಮ ಗುರುತಿನ ಚೀಟಿ/ಆಧಾರ್ ಕಾರ್ಡ್ ಮಾಹಿತಿಯನ್ನು ಪರಿಕರ ಖರೀದಿಸುವ ಸಂದರ್ಭದಲ್ಲಿ ಪರಿಕರ ಮಾರಾಟ ಮಾಲೀಕರಿಗೆ ಒದಗಿಸಬೇಕು. ಪಿ. ಓ. ಎಸ್. ಯಂತ್ರದ ಮೂಲಕವೇ ಖರೀದಿಸುವುದು ಮತ್ತು ರಸೀದಿಯನ್ನು ಪಡೆಯಬೇಕು ಎಂದು ಕೋರಲಾಗಿದೆ.
ಯೂರಿಯಾ ರಸಗೊಬ್ಬರಕ್ಕೆ ಅತಿ ಹೆಚ್ಚಿನ ಸಹಾಯಧನವನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ಆದಷ್ಟು ಮಿತವಾಗಿ ರೈತರು ಯೂರಿಯಾ ಬಳಕೆ ಮಾಡಬೇಕು.












Click it and Unblock the Notifications