ರೇಷ್ಮೆ ಇಲಾಖೆ ವಿಲೀನಕ್ಕೆ ರೈತರ ವಿರೋಧ: ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ
ರಾಮನಗರ ಅಕ್ಟೋಬರ್ 14: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ರೇಷ್ಮೆ ಬೆಳೆಗಾರರು ಖಂಡಿಸಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರ ಕೈಬಿಡದಿದ್ದರೆ ರೈತರು ಹೋರಾಟ ಹಾದಿ ತುಳಿಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಮನಗರದ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಸರ್ಕಾರದ ನಡೆಯನ್ನು ಖಂಡಿಸಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಲು ಉಪ ಸಮಿತಿ ರಚಿಸಿ ಅದರ ಸಲಹೆಯಂತೆ ರೇಷ್ಮೆ ಇಲಾಖೆಯ 2346 ಹುದ್ದೆಗಳನ್ನು ರದ್ಧು ಮಾಡಲು ಮುಂದಾಗಿರು ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಚರ್ಮಗಂಟು ರೋಗ; ರಾಮನಗರದಲ್ಲಿ ಒಂದು ತಿಂಗಳು ಜಾನವಾರು ಜಾತ್ರೆ ನಿಷೇಧ
ಇಡೀ ದೇಶದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ರೈತನಿಗೆ ತಲುಪಿಸಿ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಸರ್ಕಾರ ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನ ಮಾಡಿದರೆ ರಾಜ್ಯದಲ್ಲಿ ರೇಷ್ಮೆ ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ರೇಷ್ಮೆ ಬೆಳಗಾರರು ವ್ಯಕ್ತಪಡಿಸಿದ್ದಾರೆ.
ರೇಷ್ಮೆ ಕೃಷಿಯನ್ನೇ ನಂಬಿಕೊಂಡ ಲಕ್ಷಾಂತರ ಕುಟುಂಬಗಳು
ಕರ್ನಾಟಕದ ರೇಷ್ಮೆಗೆ ಪ್ರತ್ಯೇಕ ಇಲಾಖೆ ಸ್ಥಾಪನೆ ಮಾಡಿ ಇಂದಿಗೆ 108 ವರ್ಷ ಗತಿಸಿದ್ದು, ರೇಷ್ಮೆ ಉದ್ಯಮವು ನಾಡಿನ ರೈತರ ಬೆನ್ನೆಲುಬಾಗಿದೆ. ರೇಷ್ಮೆ ಕೃಷಿಯನ್ನು ನಂಬಿ ಒಂದು ಲಕ್ಷದ ಐವತ್ತು ಸಾವಿರ ರೇಷ್ಮೆ ಕೃಷಿ ಕುಟುಂಬಗಳು ಮತ್ತು ಸುಮಾರು 10 ಸಾವಿರಕ್ಕೂ ಹೆಚ್ಚು ರೀಲರ್ಸ್ ಕುಟುಂಬಗಳು ರೇಷ್ಮೆ ಉದ್ಯಮದ ಅವಲಂಭಿತರಾಗಿದ್ದಾರೆ.
ರಾಜ್ಯದಲ್ಲಿ 1.07 ಲಕ್ಷ ಹೆಕ್ಟೇರ್ನಲ್ಲಿ ಹಿಪ್ಪುನೇರಳೆ ಬೇಸಾಯ ಮಾಡುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 8000 ಮೆಟ್ರಿಕ್ ಟನ್ ರೇಷ್ಮೆ ಹಾಗೂ 12.000 ಸಾವಿರ ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ತಾದಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 55 ಸರ್ಕಾರಿ ರೇಷ್ಮೆ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಸುಮಾರು 2500-3000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ.
ಸಾವಿರಾರು ಉದ್ಯೋಗಗಳು ರದ್ದಾಗುವ ಭೀತಿ
ಸರ್ಕಾರ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡುವುದರಿಂದ ಕೇವಲ ರೇಷ್ಮೆ ಬೆಳೆಗಾರರಿಗೆ ಮಾತ್ರ ತೊಂದರೆ ಯಾಗುವುದಿಲ್ಲ, ರೇಷ್ಮೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಉದ್ಯೋಗಗಳು ರದ್ದಾಗುವ ಭೀತಿ ನೌಕರರಲ್ಲಿ ಮೂಡಿಸಿದೆ. ಈಗಾಗಲೇ ಸರ್ಕಾರ 2346 ಹುದ್ದೆಗಳನ್ನು ರದ್ದುಮಾಡು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಅಲ್ಲದೇ ಸರ್ಕಾರ ಕಳೆದ 3-4 ವರ್ಷಗಳಿಂದ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 733 'ಸಿ' ಗ್ರೂಪ್ ಹುದ್ದೆಗಳ ನೇಮಕ ಪ್ರಸ್ತಾವನೆ ಆರ್ಥಿಕ ಇಲಾಖೆಯ ಮುಂದಿದ್ದು ಅದಕ್ಕೂ ರೇಷ್ಮೆ ಇಲಾಖೆ ವಿಲೀನ ಪ್ರಕ್ರಿಯೆ ನೌಕರರ ನೇಮಕಕ್ಕೂ ತೊಡಕಾಗಿದೆ.
ರೇಷ್ಮೆ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ
ಸರ್ಕಾರದ ಇ-ಆಡಳಿತ ಇಲಾಖೆಯಿಂದ ಉತ್ತಮ ನಾಗರೀಕ ಸೇವೆ ಪ್ರಶಸ್ತಿ ಬಂದಿರುವುದು ರೇಷ್ಮೆ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ. ಆದರೆ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಇದ್ದು ತುಂಬಾ ಒತ್ತಡದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. 12 ವರ್ಷಗಳಲ್ಲಿ ಇಲಾಖೆಯ ನೌಕರರು ನಿವೃತ್ತಿ ಹೊಂದುತ್ತಿದ್ದು, ತೀವ್ರ ಸಿಬ್ಬಂದಿ ಕೊರತೆ ಉಂಟಾಗಿದೆ. ಸರ್ಕಾರ ಖಾಲಿ ಇರುವ ಸಿಬ್ಬಂದಿ ನೇಮಕಾತಿ ಮಾಡಿಕೊಂಡು ಇಲಾಖೆಯನ್ನು ಸದೃಢಗೊಳಿಸುವ ಬದಲು ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನ ಮಾಡುವುದು ಎಷ್ಟು ಸರಿ ಎನ್ನುತ್ತಿದ್ದಾರೆ ಹೊರಾಟಗಾರರು.
ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ರೇಷ್ಮೆ ಬೆಳೆಗಾರರು
ಸರ್ಕಾರ ನಿರ್ಧಾರವನ್ನು ಖಂಡಿಸಿದ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಗೌಡ, ರೈತರೊಂದಿಗೆ ನೇರ ಸಂಪರ್ಕ ಇರುವ ಎಕೈಕ ಇಲಾಖೆ ರೇಷ್ಮೆ ಇಲಾಖೆ. ರೇಷ್ಮೆ ಗೂಡಿನ ಧಾರಣೆ ಕುಸಿದಾಗ ಸರ್ಕಾರದಿಂದ ಸಿಗುವ ಬೆಂಬಲ ಬೆಲೆ ರೈತರಿನಿಗೆ ತಲುಪಿಸುತ್ತಾರೆ. ಅಲ್ಲದೆ ರೈತನ ಜಮೀನಿಗೆ ತೆರಳಿ ಕಾಲಕಾಲಕ್ಕೆ ಹಿಪ್ಪುನೇರಳೆ ಬೇಸಾಯದ ಬಗ್ಗೆ ಮಾಹಿತಿ ನೀಡುತ್ತಾರೆ. ಸರ್ಕಾರ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡಿದರೆ ರೇಷ್ಮೆ ಉತ್ಪಾದನೆ ಕುಸಿಯುತ್ತದೆ. ಹಾಗಾಗಿ ರೇಷ್ಮೆ ಇಲಾಖೆ ವಿಲೀನ ಕೈಬಿಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ರವಿ ಮಾತನಾಡಿ, "ರೇಷ್ಮೆ ಕೃಷಿಕರನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡಬೇಕಾದ ಸರ್ಕಾರ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ನಿರ್ಧಾರ ತಪ್ಪು . ಸರ್ಕಾರ ತಕ್ಷಣವೇ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 2707 ಹುದ್ದೆಗಳನ್ನು ಭರ್ತಿ ಮಾಡಿ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡಬೇಕು," ಎಂದು ಸರ್ಕಾರವನ್ನು ಒತ್ತಾಯಿಸಿದರು.