ದೇಶದ ಜನತೆ ವಿರುದ್ಧ ರಾಹುಲ್ ಗಾಂಧಿ ಯುದ್ಧ: ಸ್ಮೃತಿ ಇರಾನಿ ಕಿಡಿ
ನವದೆಹಲಿ, ಜನವರಿ 30: ದೇಶದ ಜನತೆಯ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಯುದ್ಧ ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳದಿದ್ದರೆ, ಪ್ರಸ್ತುತ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿರುವ ರೈತರ ಪ್ರತಿಭಟನೆಯು ಇತರೆ ರಾಜ್ಯಗಳಿಗೂ ವ್ಯಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು.
'ರಾಹುಲ್ ಗಾಂಧಿ ಭಾರತದ ಜನತೆಯ ವಿರುದ್ಧ ಯುದ್ಧ ಘೋಷಿಸಿದ್ದಾರೆ. ತಮ್ಮ ರಾಜಕೀಯ ನಿಲುವನ್ನು ನಮ್ಮ ದೇಶದ ಪ್ರಧಾನಿ ಬೆಂಬಲಿಸದೆ ಹೋದರೆ ನಗರಗಳು ಸುಟ್ಟುಹೋಗುತ್ತವೆ ಎಂದಿದ್ದಾರೆ. ರಾಹುಲ್ ಗಾಂಧಿ ಅಬರು ಕರೆ ನೀಡಿರುವ ಹಿಂಸಾಚಾರಕ್ಕೆ ಸೂಕ್ತ ಶಾಂತಿಯ ಉತ್ತರ ನೀಡುವಂತೆ ದೇಶದ ಪ್ರತಿ ನಾಗರಿಕರಿಗೂ ನಾನು ಮನವಿ ಮಾಡುತ್ತೇನೆ' ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
'ಜನವರಿ 26ರಂದು ಸಂಭವಿಸಿದ ಗಲಭೆಯ ಮಾದರಿಯನ್ನೇ ಪ್ರತಿ ನಗರ, ಕೊಳೆಗೇರಿಗಳಲ್ಲಿ ಕೂಡ ದೇಶವು ನೋಡಲಿದೆ ಎಂದು ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಕಾಂಗ್ರೆಸ್ ನಾಯಕರೊಬ್ಬರು ಶಾಂತಿಯ ಬದಲು ಮತ್ತಷ್ಟು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ' ಎಂದು ಸ್ಮೃತಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ.

ಕಸದ ಬುಟ್ಟಿಗೆ ಹಾಕುವುದೇ ಪರಿಹಾರ
'ಕಳೆದ ನವೆಂಬರ್ನಿಂದ ದೆಹಲಿಯ ಸುತ್ತಲೂ ತೀವ್ರ ಚಳಿಯಲ್ಲಿ ಬೀಡುಬಿಟ್ಟಿದ್ದ ಸಾವಿರಾರು ಸಂಖ್ಯೆಯ ರೈತರು ಪೊಲೀಸರ ಕ್ರಮಕ್ಕೆ ಕೆಚ್ಚೆದೆಯಿಂದ ಸವಾಲು ಹಾಕಿದ್ದಾರೆ. ರೈತರೊಂದಿಗಿನ ಈ ಸುದೀರ್ಘ ಸಂಘರ್ಷವನ್ನು ಅಂತ್ಯಗೊಳಿಸಲು ಇರುವ ಏಕೈಕ ಪರಿಹಾರವೆಂದರೆ ಕೃಷಿ ಕಾಯ್ದೆಗಳನ್ನು ಕಸದ ಬುಟ್ಟಿಗೆ ಹಾಕುವುದು' ಎಂದು ರಾಹುಲ್ ಗಾಂಧಿ ಹೇಳಿದ್ದರು.

ರೈತರು ಮನೆಗೆ ಹೋಗುವುದಿಲ್ಲ
'ರೈತರು ತಮ್ಮ ಮನೆಗಳಿಗೆ ವಾಪಸ್ ಹೋಗುತ್ತಾರೆ ಎಂದು ಸರ್ಕಾರ ಭಾವಿಸಬಾರದು. ಅವರಿ ಮನೆಗೆ ಮರಳುವುದಿಲ್ಲ. ಈ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತದೆ ಎಂಬ ಕಳವಳ ಮೂಡಿದೆ. ಈ ಸನ್ನಿವೇಶ ವಿಸ್ತರಿಸುವಂತಾಗುವುದು ನಮಗೆ ಬೇಡ. ನಾವು ರೈತರೊಂದಿಗೆ ಮಾತನಾಡಬೇಕು. ನಮಗೆ ಪರಿಹಾರ ಬೇಕು' ಎಂದಿದ್ದರು.

ರೈತರನ್ನು ಏಕೆ ಬಿಟ್ಟಿರಿ?
ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರೈತರನ್ನು ಕೆಂಪು ಕೋಟೆ ಒಳಗೆ ಹೋಗಲು ಏಕೆ ಬಿಟ್ಟಿರಿ? ನಿಮ್ಮಿಂದ ಅವರನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ? ಇದು ಗೃಹ ಸಚಿವಾಲಯದ ಕಾರ್ಯನಿರ್ವಹಣೆ ವೈಫಲ್ಯ ಎಂದೂ ಹೇಳಬಹುದಲ್ಲವೇ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.
Recommended Video

ಮೂರು ಕಾಯ್ದೆಗಳಿಂದ ಮೂರು ಹಾನಿ
ನಮ್ಮ ಕೇಂದ್ರ ಸರ್ಕಾರ ಈಚೆಗೆ ಮೂರು ಕೃಷಿ ಕಾಯ್ದೆಗಳನ್ನು ಪರಿಚಯಿಸಿದೆ. ಮೊದಲನೇ ಕಾಯ್ದೆ ಮಂಡಿ ಪದ್ಧತಿಯನ್ನು ಹಾಳುಗೆಡವಿದರೆ, ಎರಡನೆಯದ್ದು ರೈತರನ್ನು ಕಡಿಮೆ ಬೆಲೆಗೆ ತಮ್ಮ ಬೆಳೆ ಮಾರಲು ಪ್ರೇರೇಪಿಸುತ್ತಿದೆ. ಮೂರನೆಯದು ರೈತರು ತಮಗೆ ಏನೇ ಸಂಕಷ್ಟ ಎದುರಾದರೂ ನ್ಯಾಯಾಲಯಕ್ಕೆ ಹೋಗದಂತೆ ತಡೆಯುತ್ತಿದೆ ಎಂದು ಆರೋಪಿಸಿದ್ದರು.












Click it and Unblock the Notifications