ಶೂನ್ಯ ಕೃಷಿಯ ಸಾಧಕ ದೇವಂಗಿ ಪ್ರಫುಲ್ಲಚಂದ್ರ ಇನ್ನಿಲ್ಲ
1934 ಅಕ್ಟೋಬರ್ 14 ರಂದು ರೈತಾಪಿ ಕುಟುಂಬದಲ್ಲಿ ಜನಿಸಿದ ಪ್ರಫುಲ್ಲ ಚಂದ್ರ ಅವರು ಬಾಲ್ಯದಿಂದಲೇ ಪ್ರಕೃತಿ ವಿಸ್ಮಯಗಳು ಕೃಷಿಯಲ್ಲಿನ ಹೊಸ ಪ್ರಯೋಗಗಳ ಆಕರ್ಷಿತರಾಗಿದ್ದರು. ಸುಮಾರು 40 ವರ್ಷಗಳ ಕಾಲದ ಬೇಸಾಯದಿಂದ 8 ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳು, 1988ರಲ್ಲಿ ವಿಶ್ವ ಆಹಾರ ದಿನ ಪ್ರಶಸ್ತಿಯನ್ನು ಗಳಿಸಿದ ಮಲೆನಾಡಿನ ಹೆಮ್ಮೆ ರೈತ ಎನಿಸಿದರು.
ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಪತ್ನಿ ಹೇಮಾವತಿ ಅವರ ತಮ್ಮನಾಗಿದ್ದ ಪ್ರಫುಲ್ಲಚಂದ್ರ ಅವರ ಸ್ಪೂರ್ತಿಯಿಂದಲೇ ಸೋದರಳಿಯ ಪೂರ್ಣಚಂದ್ರತೇಜಸ್ವಿ ಅವರು ಸಹಜ ಕೃಷಿ, ಫುಕಾವೋಕಾ ತತ್ವದೆಡೆಗೆ ಆಕರ್ಷಿತರಾಗಿದ್ದರು ಎನ್ನಲಾಗಿದೆ.
ಒಂದು ಹೆಕ್ಟೇರ್ ನಲ್ಲಿ 16.1 ಟನ್ ಭತ್ತ ಹಾಗೂ 147.1 ಟನ್ ಕಬ್ಬು ಬೆಳೆದ ಸಾಧನೆ ಮಾಡಿದ್ದಾರೆ. ಇವರ ಕೃಷಿ ಭೂಮಿ ಅನೇಕ ವಿಶ್ವ ವಿದ್ಯಾಲಯಗಳಿಗೆ ಕುತೂಹಲಕಾರಿ ತಾಣವಾಗಿತ್ತು.
ಕೃಷಿ ಸ್ವಾವಲಂಬನೆಗೆ ಒತ್ತು ನೀಡುತ್ತದೆ, ನಮ್ಮ ಕೆಲಸಗಳನ್ನು ನಾವೇ ಶ್ರಮವಹಿಸಿ ಮಾಡಿಕೊಂಡಾಗ ಅದಕ್ಕೊಂದು ಅರ್ಥ ಸಿಗುತ್ತದೆ. ರೈತರು ಒಂದೇ ತೆರನಾದ ಬೆಳೆ ಬೆಳೆದರೆ ಉಳಿಗಾಲ ಸಾಧ್ಯವಿಲ್ಲ, ಬೆಳೆಗಳಲ್ಲಿ ಅಂತರದ ಬದಲಾವಣೆ ಅಗತ್ಯವಾಗಿದೆ ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎಂದು ದೇವಂಗಿ ಪ್ರಫುಲ್ಲಚಂದ್ರ ಅವರು ಸದಾಕಾಲ ಹೇಳುತ್ತಿದ್ದರು.
1986ರಲ್ಲಿ ಮೊದಲ ಬಾರಿಗೆ ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೆಟ್ಟು ದ್ಯುತಿ ಸಂಶ್ಲೇಷಣಾ ಕ್ರಿಯೆ ಅಧಿಕಗೊಳ್ಳುವಂತೆ ಮಾಡಿದರು. ಸಾವಯಮ, ನೈಸರ್ಗಿಕ, ಆಧುನಿಕ ಕೃಷಿಗಳ ಸಮ್ಮಿಶ್ರ ಪ್ರಯೋಗಾಲಯವಾಗಿದ್ದ ಇವರ ಕಬ್ಬಿನ ಸರಾಸರಿ ಇಳುವರಿ ಎಕರೆಗೆ 33 ಟನ್ ನಷ್ಟಿತ್ತು. ಇದು ರಾಜ್ಯದ ಒಟ್ಟಾರೆ ಸರಾಸರಿಗಿಂತ ಮುಂದಿತ್ತು.
ಕೂಳೆ ಕಬ್ಬನ್ನು ಸಮರ್ಪಕವಾಗಿ ಬಳಸಿ ಕಬ್ಬು ನಾಟಿಗೆ ಬೇಕಾದ ಖರ್ಚುವೆಚ್ಚ ಉಳಿಸುತ್ತಿದ್ದರು. ಹೆಚ್ಚಿನ ರಸಗೊಬ್ಬರ ಇಲ್ಲದೆ ಸೋಗೆಯನ್ನು ಹರಡಿ ಭೂಮಿಗೆ ಪೋಷಕಾಂಶ ಒದಗಿಸಿದ್ದರು.
ಕರ್ನಾಟಕ ರಾಜ್ಯ ಪ್ರಶಸ್ತಿ, ಕೃಷಿ ಸಾಮ್ರಾಟ್, U.N. World Food and Agricultural Organization ನಿಂದ ಪ್ರಶಸ್ತಿ, ರಾಷ್ಟ್ರೀಯ ಏಕತಾ ಕೃಷಿ ಮಿತ್ರ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ರಾಜ್ಯ ಪರಿಸರ ಪ್ರಶಸ್ತಿ, ಅಮೆರಿಕನ್ ರೈತ ಮಿತ್ರ ಗೌರವ, ಗದಗಿನ ಕೃಷಿ ಮಿತ್ರ, ಕೇರಳದ ಸ್ವದೇಶಿ ಕೇರಾ ಪುರಷ್ಕರಂ ಮುಂತಾದ ಪ್ರಶಸ್ತಿ ಗೌರವಗಳು ಇವರಿಗೆ ಸಂದಿದೆ.