ರೈತರ ಪರ ಮೆರವಣಿಗೆ: ಪ್ರಿಯಾಂಕಾ ಗಾಂಧಿ ಬಂಧನ, ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್

ನವದೆಹಲಿ, ಡಿಸೆಂಬರ್ 24: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೈಜೋಡಿಸಿರುವ ಕಾಂಗ್ರೆಸ್, ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರಾಹುಲ್ ಗಾಂಧಿ ಮುಂದಾಳತ್ವದ ಕಾಂಗ್ರೆಸ್ ನಿಯೋಗವು ಗುರುವಾರ ಬೆಳಿಗ್ಗೆ ಕೃಷಿ ಕಾಯ್ದೆಗಳ ವಿರುದ್ಧದ 2 ಕೋಟಿ ಸಹಿಗಳುಳ್ಳ ಜ್ಞಾಪನಾ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ರಾಷ್ಟ್ರಪತಿ ಭವನದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಬಂಧನ ನಡೆದಿದೆ.

ರಾಷ್ಟ್ರಪತಿ ಭವನದ ಕಡೆಗೆ ಸಾಗುತ್ತಿದ್ದ ಕಾಂಗ್ರೆಸ್ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದರು. ಆದರೆ ರಾಹುಲ್ ಗಾಂಧಿ ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಲು ತೆರಳಿದರು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ದೆಹಲಿ ಗಡಿಗಳಲ್ಲಿನ ರೈತರು ಹಿಂದಕ್ಕೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಮುಂದೆ ಓದಿ.

ರೈತರ ಬೆಂಬಲಕ್ಕಿದೆ

ರೈತರ ಬೆಂಬಲಕ್ಕಿದೆ

ರಾಷ್ಟ್ರಪತಿ ಕೋವಿಂದ್ ಭೇಟಿ ಬಳಿಕ ಮಾತನಾಡಿದ ರಾಹುಲ್ ಗಾಂಧಿ, 'ವಿರೋಧಪಕ್ಷವು ರೈತರ ಬೆಂಬಲಕ್ಕಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನಾನಿರತ ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಭಾರತದಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ' ಎಂದು ಟೀಕಿಸಿದರು.

ಜಂಟಿ ಅಧಿವೇಶನ ಕರೆಯಿರಿ

ಜಂಟಿ ಅಧಿವೇಶನ ಕರೆಯಿರಿ

'ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೆ ಹೋದರೆ ರೈತರು ಕೂಡ ಮನೆಗೆ ಮರಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ. ಕೇಂದ್ರ ಸರ್ಕಾರವು ಕೂಡಲೇ ಸಂಸತ್ತಿನ ಜಂಟಿ ಅಧಿವೇಶನ ಕರೆಯಬೇಕು. ಎಲ್ಲ ವಿರೋಧಪಕ್ಷಗಳೂ ರೈತರ ಜತೆಗಿವೆ' ಎಂದರು.

ರೈತರಿಗೆ ಬೆಂಬಲದ ಧ್ವನಿ

ರೈತರಿಗೆ ಬೆಂಬಲದ ಧ್ವನಿ

ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ಸರ್ಕಾರದ ವಿರುದ್ಧದ ಯಾವುದೇ ಅಸಮ್ಮತಿಯನ್ನು ಭಯೋತ್ಪಾದನೆಯ ವಿಷಯ ಎಂಬಂತೆ ಬಿಂಬಿಸಲಾಗುತ್ತದೆ. ರೈತರಿಗೆ ನಮ್ಮ ಬೆಂಬಲದ ಧ್ವನಿಯನ್ನಾಗಿ ಈ ಮೆರವಣಿಗೆಯನ್ನು ನಾವು ನಡೆಸುತ್ತಿದ್ದೇವೆ' ಎಂದು ಹೇಳಿದರು.

ಸರ್ಕಾರ ಸಿದ್ಧವಿಲ್ಲ

ಸರ್ಕಾರ ಸಿದ್ಧವಿಲ್ಲ

'ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಅವರೆಲ್ಲ ಚುನಾಯಿತ ಸಂಸದರು. ಅವರಿಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಹಕ್ಕು ಇದೆ. ಅವರಿಗೆ ಅನುಮತಿ ನೀಡಬೇಕು. ಅದರಲ್ಲಿ ಸಮಸ್ಯೆ ಏನಿದೆ? ಗಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರ ಧ್ವನಿಯನ್ನು ಕೇಳಲು ಸರ್ಕಾರ ಸಿದ್ಧವಿಲ್ಲ' ಎಂದು ಕಿಡಿಕಾರಿದರು.

ಮೆರವಣಿಗೆಗೆ ಅನುಮತಿ ಇರಲಿಲ್ಲ

ಮೆರವಣಿಗೆಗೆ ಅನುಮತಿ ಇರಲಿಲ್ಲ

ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ ತೆರಳಲು ಕಾಂಗ್ರೆಸ್‌ಗೆ ಯಾವ ಅನುಮತಿಯನ್ನೂ ಇಂದು ನೀಡಿರಲಿಲ್ಲ. ಆದರೆ ರಾಷ್ಟ್ರಪತಿ ಭವನದಲ್ಲಿ ಭೇಟಿಗೆ ಸಮಯ ಪಡೆದುಕೊಂಡಿದ್ದ ಮೂವರು ನಾಯಕರಿಗೆ ಅಲ್ಲಿಗೆ ಹೋಗಲು ಅವಕಾಶ ನೀಡಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ದೀಪಕ್ ಯಾದವ್ ತಿಳಿಸಿದ್ದಾರೆ.

ಮೆರವಣಿಗೆಗೆ ಅನುಮತಿ ಇಲ್ಲದ ಕಾರಣ ಪ್ರಿಯಾಂಕಾ ಗಾಂಧಿ ಮತ್ತು ಇತರರನ್ನು ಬಂಧಿಸಿ ಪೊಲೀಸ್ ಬಸ್‌ನಲ್ಲಿ ಕರೆದೊಯ್ಯಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+