ದಾವಣಗೆರೆ ಜಿಲ್ಲೆಯಲ್ಲಿ ಗಗನಕ್ಕೇರುತ್ತಲೇ ಇದೆ ತರಕಾರಿ ದರ; ಗ್ರಾಹಕರು ಕಂಗಾಲು!
ದಾವಣಗೆರೆ, ಸೆಪ್ಟೆಂಬರ್ 18: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಕಾರಣ ದಿನೇ ದಿನೇ ತರಕಾರಿ ದರಗಳು ಗಗನಕ್ಕೇರುತ್ತಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ತರಕಾರಿ ಬೆಲೆ ದುಪ್ಪಟ್ಟಾದ ಕಾರಣ ಜನರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಕೆಲ ತರಕಾರಿ ಬೆಲೆ ಇಪ್ಪತ್ತು ರೂಪಾಯಿ ಆಸುಪಾಸಿನಲ್ಲಿದ್ದರೆ, ಉಳಿದಂತೆ ಎಲ್ಲ ತರಕಾರಿಗಳು ದುಪ್ಪಟ್ಟಾಗಿವೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೊಪ್ಪು, ತರಕಾರಿ ದರ ಹೆಚ್ಚಾಗುತ್ತಿದ್ದು, ಜನರು ಮಾರುಕಟ್ಟೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಭತ್ತ, ಮೆಕ್ಕೆಜೋಳ ಬೆಳೆ ಮಳೆಗೆ ಆಹುತಿ ಆಗಿವೆ. ಇನ್ನು ವಾಣಿಜ್ಯ ಬೆಳೆ ಲಾಭ ತರುತ್ತದೆ ಎಂದುಕೊಂಡಿದ್ದ ಬೆಳೆಗಾರರು ಕೈಸುಟ್ಟುಕೊಳ್ಳುವಂತಾಗಿದೆ.
ಹತ್ತು ರೂಪಾಯಿಗೆ ಮೂರರಿಂದ ನಾಲ್ಕು ಕಟ್ಟು ಸಿಗುತ್ತಿದ್ದ ಸೊಪ್ಪು, ಇದೀಗ ಒಂದು ಕಟ್ಟು ಸೊಪ್ಪು18 ರೂಪಾಯಿಗೆ ತಲುಪಿದೆ. ಜನರು ಸೊಪ್ಪಿನ ದರ ಕೇಳಿ ಬೆಚ್ಚಿ ಬೀಳುವಂತಾಗಿದೆ. ಕೊತಂಬರಿ, ಪಾಲಾಕ್, ಮೆಂತೆ, ರಾಜಗಿರಿ, ಎಳೆ ಅರಬಿ, ಸಬ್ಬಸಗಿ, ಪುದೀನಾ, ಬಸಳೆ ಸೇರಿದಂತೆ ವಿವಿಧ ಸೊಪ್ಪಿನ ಬೆಲೆಯು ದುಪ್ಪಟ್ಟಾಗಿದೆ. ಮಳೆ ಬಂದು ಜಮೀನಿನಲ್ಲಿ ನೀರು ನಿಂತ ಕಾರಣ ಈ ಬಾರಿ ಸೊಪ್ಪು ಹೆಚ್ಚಾಗಿ ಬಂದಿಲ್ಲ. ಆದ ಕಾರಣ ಮಾರುಕಟ್ಟೆಗಳಲ್ಲಿ ಸೊಪ್ಪಿನ ಬೆಲೆಯೂ ಗಗನಕ್ಕೇರಿದೆ.

ಗಗನಕ್ಕೇರುತ್ತಿರುವ ತರಕಾರಿ ಬೆಲೆ
ಇನ್ನು ಮಣ್ಣಿನಲ್ಲೇ ಸೊಪ್ಪುಗಳು ಹೂತು ಹೋಗಿದ್ದು, ಕೀಳಲು ಆಗದಂತ ಪರಿಸ್ಥಿತಿ ನಿರ್ಮಾಣ ಆಗಿದೆ. 30 ರೂಪಾಯಿ ಇದ್ದ ತರಕಾರಿಗಳ ಬೆಲೆ ಇದೀಗ 80 ರೂಪಾಯಿಗೆ ಏರಿದೆ. ಅಂದರೆ ಒಂದು ಕೆ.ಜಿ.ಗೆ 50 ರೂಪಾಯಿ ಜಾಸ್ತಿ ಆಗಿದೆ. ಆಲೂಗೆಡ್ಡೆ, ಬದನೆಕಾಯಿ, ಬೀನ್ಸ್, ಬದನೆಕಾಯಿ, ಸೋರೆಕಾಯಿ, ದೊಣ್ಣೆ ಮೆಣಸಿನಕಾಯಿ, ಗೆಡ್ಡೆ ಕೋಸು, ನವಿಲು ಕೋಸು, ಬೆಂಡೆ ಕಾಯಿ, ಮೆಣಸಿನಕಾಯಿ ತರಕಾರಿಗಳು ದರವೂ ತುಟ್ಟಿ ಆಗಿದೆ. ಒಂದೆಡೆ ಮಳೆ ಅಬ್ಬರಿಸಿದ್ದು, ಬೆಳೆ ನಾಶವಾದರೆ, ಮತ್ತೊಂದೆಡೆ ಬೇಡಿಕೆ ಹೆಚ್ಚಾಗಿರುವುದರಿಂದ ತರಕಾರಿಗಳ ದರ ಹೆಚ್ಚಾಗುತ್ತಿದೆ. ಇದರಿಂದ ಹೋಟೆಲ್ ಬಾಡಿಗೆ, ಸಿಬ್ಬಂದಿ ವೇತನ, ದುಬಾರಿ ಖರ್ಚು ಬರುತ್ತಿರುವ ಕಾರಣ ಮಾಲೀಕರು ಕಂಗಾಲಾಗಿದ್ದಾರೆ.

ತರಕಾರಿ ಬೆಲೆ ಹೆಚ್ಚಳಕ್ಕೆ ಹಬ್ಬ ಹೇಗೆ ಕಾರಣ?
ಜೊತೆಗೆ ಗಣೇಶೋತ್ಸವವೂ ಸಹ ದರ ದುಪ್ಪಟ್ಟಾಗಲು ಕಾರಣವಾಗಿದೆ. ಕಳೆದ ಎರಡು ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ಮಾಡಿರಲಿಲ್ಲ. ಹಿಂದೂ ಮಹಾಗಣಪತಿ ಸೇರಿದಂತೆ ವಿಜೃಂಭಣೆಯಿಂದ ಆಚರಿಸುವ ಕಡೆಗಳಲ್ಲಿ 25 ಸಾವಿರ ಜನರಿಗೆ ಅನ್ನಸಂತರ್ಪಣೆಗೆ ತರಕಾರಿ ಕೊಂಡುಕೊಳ್ಳುತ್ತಾರೆ. ಕೆಲವರು ನೇರವಾಗಿ ರೈತರಿಂದ ಖರೀದಿ ಮಾಡಿದರೆ, ಮತ್ತೆ ಕೆಲವರು ಮಾರುಕಟ್ಟೆಗಳಲ್ಲಿ ತರಕಾರಿ ಖರೀದಿಸಿ ತರುತ್ತಿದ್ದಾರೆ. ಇದೂ ಸಹ ತರಕಾರಿ ಬೆಲೆ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.

ಗೋಳು ತೋಡಿಕೊಂಡ ವ್ಯಾಪಾರಿಗಳು
ಕೆ.ಜಿ. ಗಟ್ಟಲೇ ತರಕಾರಿ ಮನೆಗೆ ತೆಗೆದುಕೊಂಡು ಹೋಗುವವರು ದರ ಕೇಳುತ್ತಿದ್ದಂತೆ, ಇದೀಗ ಕಾಲು ಕೆ.ಜಿ. ಮಾತ್ರ ತರಕಾರಿಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ವ್ಯಾಪಾರಿಗಳ ಬಳಿ ಕೇಳಿದರೆ ಏನು ಮಾಡುವುದು, ತರಕಾರಿ ಬಂದಿಲ್ಲ. ಬಂದರೂ ಮಣ್ಣಿನಲ್ಲಿ ಕೊಳೆತು ಹೋಗಿರುತ್ತದೆ. ಅದನ್ನು ಸ್ವಚ್ಛಗೊಳಿಸಿ ತರುವುದೇ ದೊಡ್ಡ ಸವಾಲಾಗಿದೆ. ಹಾಗಾಗಿ ದರ ಏರಿಕೆ ಆಗಿದ್ದು, ಜನರು ಸಹ ಸಹಕರಿಸಬೇಕು. ಕೆಲವೊಮ್ಮೆ ತರಕಾರಿ ದರ ನೂರು ರೂಪಾಯಿ ದಾಟಿದ್ದು ಉದಾಹರಣೆ ಇದೆ. ಈಗ ತರಕಾರಿ ಬೆಲೆ ಹೆಚ್ಚಾಗಿರುವುದರಿಂದ ವ್ಯಾಪಾರವೂ ಕಡಿಮೆ ಆಗಿದೆ ಎನ್ನುತ್ತಿದ್ದಾರೆ.

ಹಳದಿ ಬಣಕ್ಕೆ ತಿರುಗುತ್ತಿರುವ ಸೊಪ್ಪಿನ ಬೆಳೆ
ಮಳೆ ಹೆಚ್ಚಾದ ಕಾರಣ ಜಮೀನಿನಲ್ಲಿಯೇ ಸೊಪ್ಪಿನ ಬೆಳೆ ಕೊಳೆಯುತ್ತಿದೆ. ಇಳುವರಿಯೂ ಕಡಿಮೆ ಆಗುತ್ತದೆ. ಮಳೆ ಕಡಿಮೆಯಾಗಿ ಬಿಸಿಲು ಬಿದ್ದರೆ ದರ ಇಳಿಕೆ ಆಗಲಿದೆ. ಸೊಪ್ಪು ಹಳದಿ ಬಣ್ಣಕ್ಕೆ ತಿರುಗುವುದರಿಂದ ಜನರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಹಾಗಾಗಿ ವರುಣ ಕೃಪೆ ತೋರಿದರೆ ಮಾತ್ರ ಬೆಲೆ ಕಡಿಮೆ ಆಗಬಹುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.












Click it and Unblock the Notifications