ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!
ಕೊಪ್ಪಳ, ನವೆಂಬರ್ 09: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ರೈತರೊಬ್ಬರು ಪಪ್ಪಾಯ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಸಮಯದಲ್ಲಿ ಸಲಹೆಗಳನ್ನು ನೀಡಿ ಸಹಕಾರ ಕೊಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದ ರೈತ ನೀಲಪ್ಪ ಕಾಮನೂರು ಪಪ್ಪಾಯ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಮೊದಲು ಇವರು ಮಳೆಯಾಶ್ರಿತ ಕೃಷಿ ಬೆಳೆಗಳಾದ ಸಜ್ಜೆ, ಮೆಕ್ಕೆಜೋಳ ಬೆಳೆಯುತ್ತಿದ್ದರು.
ಹಲವು ರೈತರು ತೋಟಗಾರಿಕೆ ಇಲಾಖೆಯ ಸಲಹೆಯಂತೆ ಪಪ್ಪಾಯ ಬೆಳೆದು ಉತ್ತಮ ಆದಾಯ ಪಡೆಯುತ್ತಿರುವುದನ್ನು ಕಂಡು ನೀಲಪ್ಪ ಸಹ ಪಪ್ಪಾಯ ಬೆಳೆಯಲು 2019-20ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದ್ದರು.

ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ ಅಹ್ಮದ್ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ 4 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದರು.
ನೀಲಪ್ಪ ಅವರು 2019ರ ಜುಲೈ ತಿಂಗಳಲ್ಲಿ ಬೆಂಗಳೂರಿನಿಂದ ಪಪ್ಪಾಯ ಸಸಿ ತರಿಸಿ ಹನಿ ನೀರಾವರಿ ಅಳವಡಿಸಿ 7x5 ಅಡಿ ಅಂತರದಲ್ಲಿ ಸುಮಾರು 5,000 ಸಸಿಗಳನ್ನು ನಾಟಿ ಮಾಡಿದ್ದರು. ನಾಟಿ ಮಾಡುವ ಸಮಯದಲ್ಲಿ ತಜ್ಞರ ಸಲಹೆಯಂತೆ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರಗಳನ್ನು ಬೆರೆಸಿ 1.1/2 ಘನ ಅಡಿ ಗುಂಡಿಗಳನ್ನು ಮಾಡಿ ನಾಟಿ ಮಾಡಿದರು.
ಅಧಿಕಾರಿಗಳ ಸಲಹೆಯಂತೆ ಕಾಲಕಾಲಕ್ಕೆ ಪೋಷಕಾಂಶಗಳು ಮತ್ತು ನೀರಿನ ನಿರ್ವಹಣೆ ಮಾಡಿದರು. ಮಾರ್ಚ್ ತಿಂಗಳಿನಿಂದಲೇ ಉತ್ತಮ ಫಸಲು ಆರಂಭವಾಗಿದ್ದು, ಕಳೆದ ರಂಜಾನ್ ಹಬ್ಬದಲ್ಲಿ ಉತ್ತಮ ಬೆಲೆ ಸಿಕ್ಕಿದೆ.
"ಭೂಮಿ ಸಿದ್ಧತೆ, ಗೊಬ್ಬರ, ಆಳುಗಳ ಖರ್ಚು, ಸಸ್ಯ ಸಂರಕ್ಷಣೆಗೆ ಸುಮಾರು 3 ಲಕ್ಷ ಖರ್ಚಾಗಿದೆ, ಇದುವರೆಗೂ ನನಗೆ ಸುಮಾರು 10 ಲಕ್ಷ ಆದಾಯ ಬಂದಿದೆ. ಇನ್ನೂ ಫಸಲು ಬರುತ್ತಾ ಇದ್ದು, ದೀಪಾವಳಿ ಹಬ್ಬ ಮುಗಿಯುವವರೆಗೂ ಇನ್ನೂ ರೂ. 5 ರಿಂದ 6 ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ" ಎಂದು ರೈತ ನೀಲಪ್ಪ ಹೇಳಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನೀಲಪ್ಪರನ್ನು ಆಯ್ಕೆ ಮಾಡಿ ಪಪ್ಪಾಯ ಬೆಳೆಯ ತಾಂತ್ರಿಕತೆ ಬಗ್ಗೆ ಸಲಹೆಯನ್ನು ಇಲಾಖೆ ನೀಡಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಒಗ್ಗೂಡಿಸಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ.90ರಷ್ಟು ಸಹಾಯಧನ ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications