ರಾಜ್ಯ ರೈತರಿಗೆ ಮೈತ್ರಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ
Recommended Video

ಬೆಂಗಳೂರು, ನವೆಂಬರ್ 17: ಈಗಾಗಲೇ ಬೆಳೆ ಸಾಲ ಯೋಜನೆ ಜಾರಿಗೊಳಿಸಿ ರಾಜ್ಯ ರೈತರಿಗೆ ಸಿಹಿ ಸುದ್ದಿ ನಿಡಿರುವ ಮೈತ್ರಿ ಸರ್ಕಾರ ಈಗ ಮತ್ತೊಂದು ರೈತೋಪಯೋಗಿ ಯೋಜನೆಗೆ ನೀಲಿನಕ್ಷೆ ಸಿದ್ಧಪಡಿಸಿದೆ.
ಕೇಂದ್ರದ 'ಫಸಲ್ ಭೀಮಾ ಯೋಜನೆ' ಸರಿಯಾಗಿ ಜಾರಿಯಾಗದಿರುವ ಕಾರಣ ರಾಜ್ಯ ಸರ್ಕಾರವೇ ಹೊಸದೊಂದು, ಸರಳವಾದ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ.
ಕೇಂದ್ರದ ಫಸಲ್ ಭೀಮಾ ಯೋಜನೆ ಬಗ್ಗೆ ಈಗಾಗಲೇ ಮಹಾರಾಷ್ಟ್ರ, ಮಧ್ಯ ಪ್ರದೇಶಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇತ್ತೀಚೆಗಷ್ಟೆ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು ಫಸಲ್ ಭೀಮಾ ಯೋಜನೆ ದೊಡ್ಡ ಹಗರಣ ಎಂದು ಸಹ ಕರೆದಿದ್ದರು.
ಈ ನಡುವೆ ರಾಜ್ಯ ಸರ್ಕಾರ ಬೆಳೆ ವಿಮೆ ತರಲು ಸಿದ್ಧವಾಗಿದ್ದು, ಈ ಬಗ್ಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ನೀಲನಕ್ಷೆ ತಯಾರಾಗಿದ್ದು ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಡಿಮೆ ಹಣದಲ್ಲಿ ಬೆಳೆ ವಿಮೆ
ಯೋಜನೆ ಜಾರಿ ಆದರೆ ರೈತರಿಗೆ ಕಡಿಮೆ ಹಣದಲ್ಲಿ ಬೆಳೆ ವಿಮೆ ದೊರಕಲಿದೆ. ಬೆಳೆ ನಾಶವಾದರೂ ರೈತ ಕಂಗಾಲಾಗುವುದು ಇದರಿಂದ ತಪ್ಪಲಿದೆ. ಯೋಜನೆಯಿಂದ ರೈತರಿಗೆ ಅನಿಶ್ಚಿತತೆ ದೂರವಾಗುತ್ತದೆ ಎನ್ನಲಾಗಿದೆ.

ಭತ್ತಕ್ಕೆ ಬೆಂಬಲ ಬೆಲೆ
ಇತ್ತೀಚೆಗಷ್ಟೆ ಕುಮಾರಸ್ವಾಮಿ ಅವರು ಭತ್ತಕ್ಕೆ ಬೆಂಬಲ ಘೋಷಿಸಿದ್ದರು. ಇದರಿಂದ ಲಕ್ಷಾಂತರ ರೈತರಿಗೆ ಲಾಭವಾಗಲಿದೆ. ಭತ್ತಕ್ಕೆ ಬೆಂಬಲ ಬೆಲೆ ನೀಡಬೇಕು ಎಂಬುದು ಬಹುದಿನದ ಬೇಡಿಕೆ ಆಗಿತ್ತು. ಪ್ರತಿ ಕ್ವಿಂಟಾಲ್ಗೆ 1600 ರೂ ಕೊಟ್ಟು ಖರೀದಿಸುವಂತೆ ಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಬ್ಬಿಗೆ ಬೆಂಬಲ ಬೆಲೆಗೆ ಒತ್ತಾಯ
ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಕೆಲವು ದಿನಗಳಿಂದ ರಾಜ್ಯದ ಕಬ್ಬು ಬೆಳೆಗಾರರು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಸ್ಥಗಿತಗೊಳಿಸುವಂತೆ ಕಬ್ಬು ಬೆಳೆಗಾರರೊಂದಿಗೆ ಕುಮಾರಸ್ವಾಮಿ ಮನವಿ ಮಾಡಿದ್ದು, ಸೋಮವಾರ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಿಎಂ ಮಾತುಕತೆ ನಡೆಸಲಿದ್ದಾರೆ.

ಸಾಲಮನ್ನಾ ಯೋಜನೆ
ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿನ ಕೃಷಿ ಸಾಲ ಮನ್ನಾ ಕಾರ್ಯ ಅಂತಿಮ ಹಂತದಲ್ಲಿದ್ದು, ಖಾಸಗಿ ಬ್ಯಾಂಕುಗಳಲ್ಲಿ ಕೃಷಿ ಸಲಮನ್ನಾ ಕಾರ್ಯ ಚಾಲ್ತಿಯಲ್ಲಿದೆ ಎಂದು ಕುಮಾರಸ್ವಾಮಿ ಇತ್ತೀಚೆಗಷ್ಟೆ ಹೇಳಿದ್ದರು. ಐಎಎಸ್ ಅಧಿಕಾರಿಯೊಬ್ಬರನ್ನು ಸಾಲಮನ್ನಾದ ಕಾರ್ಯವನ್ನು ನಿರ್ದೇಶಿಸಲು ನಿಯುಕ್ತಿಗೊಳಿಸಲಾಗಿದೆ.












Click it and Unblock the Notifications