ಮಿಡತೆಗಳ ರೂಪದಲ್ಲಿ ಪ್ರಕಟಗೊಂಡ ಪ್ರಾಕೃತಿಕ ವಿಕೋಪ
ನಿನ್ನೆ ಇಲ್ಲದ ಮಿಡತೆಗಳು ಇಂದು ಎಲ್ಲಿಂದ ಬಂದವು? ಕಳೆದ ವರ್ಷ ಈ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲವಲ್ಲ? ಎರಡು ದಶಕಗಳ ಹಿಂದೆ ಮಿಡತೆಗಳ ಹಾವಳಿ ಬಂದಿತ್ತಂತೆ? ಮಿಡತೆಗಳ ಹಾವಳಿ ಇಷ್ಟು ದೊಡ್ಡ ಮಟ್ಟದಲ್ಲಿ ಹಿಂದೆಂದೂ ಇರಲಿಲ್ಲ! ಈಗೇಕೆ ಧುತ್ತನೆ ಬಂದೆರಗಿದ್ದು? ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮುಂದಿವೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ?
Recommended Video

ಭಾರತದ ಯಾವ್ಯಾವ ರಾಜ್ಯಗಳಲ್ಲಿ ಮಿಡತೆಗಳ ಹಾವಳಿ ಇದೆ?
ಪಾಕಿಸ್ತಾನ ಮತ್ತು ಇರಾನ್ ದೇಶದಿಂದ ಆಹಾರ ಹುಡುಕಿ ಹೊರಟ ಮಿಡತೆಗಳ ಸಮೂಹ ಥಾರ್ ಮರುಭೂಮಿಯನ್ನು ತಟಾಯ್ದು ರಾಜಸ್ಥಾನ, ಗುಜರಾತ್, ಪಂಜಾಬ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮುಂತಾದ ಕಡೆ ಬೆಳೆಗಳಿಗೆ ದಾಳಿ ಇಟ್ಟಿವೆ. ಸುಮಾರು ಎರಡರಿಂದ ಮೂರು ಕಿಲೋಮೀಟರ್ ಉದ್ದಕ್ಕೆ ದಂಡು ದಂಡಾಗಿ ಹಾರಿ ಬಂದಿರುವ ಈ ಮಿಡತೆಗಳಿಗೆ ನಿರ್ದಿಷ್ಟ ಆಹಾರವೆಂಬುದಿಲ್ಲ. ಯಾವುದೇ ಬೆಳೆಯ ಎಲೆಗಳನ್ನು ತಿನ್ನುತ್ತವೆ. ಮೇವಿನ ಬೆಳೆ, ತರಕಾರಿ ಬೆಳೆ, ಭತ್ತ, ಹತ್ತಿ ಏನಾದರೂ ಆಗಬಹುದು. ಹಸಿರೆಲೆಗಳಿದ್ದರಾಯ್ತು. ಪ್ರತಿ ದಿನ ಈ ಹುಳುಗಳು ಅವುಗಳ ದೇಹದ ತೂಕದಷ್ಟು ಪ್ರಮಾಣದ ಎಲೆಗಳನ್ನು ತಿನ್ನುತ್ತವೆ. ಹೀಗಿರುವಾಗ ಕೋಟ್ಯಂತರ ಸಂಖ್ಯೆಯಲ್ಲಿ ಹೊಲಗಳಿಗೆ ದಾಳಿ ಮಾಡಿದರೆ ಕ್ಷಣಾರ್ಧದಲ್ಲಿ ಹೊಲ ಬರಿದಾಗುವುದರಲ್ಲಿ ಸಂಶಯವಿಲ್ಲ.
ಈ ಮಿಡತೆಗಳು ಹಸಿದು-ಹಾರಿ ಬರುವ ಹಾದಿಯಲ್ಲಿ ಆಹಾರ (ಬೆಳೆಗಳು) ಸಿಗದೇ ಹೋದಲ್ಲಿ ಸಿಕ್ಕ ಸಿಕ್ಕ ಮರಗಳನ್ನೇ ಆಹಾರಕ್ಕಾಗಿ ಆಶ್ರಯಿಸುತ್ತಿವೆ. ನಿನ್ನೆ (25-05-2020) ರಾಜಸ್ಥಾನದ ಜಯಪುರ್ ನಗರಕ್ಕೆ ದಾಳಿ ಇಟ್ಟದ್ದು ಕೂಡ ಸುದ್ದಿಯಾಗಿದೆ.

ಈ ವಲಸೆ ಮಿಡತೆಗಳ ಗುಂಪು ಬಂದದ್ದಾದರು ಎಲ್ಲಿಂದ?
ಈ ದಾಳಿಯನ್ನು ಮನಗಂಡ ಆಯಾ ರಾಜ್ಯ ಸರ್ಕಾರಗಳು ರಾಸಾಯನಿಕಗಳನ್ನು ಸಿಂಪಡಿಸಿ ಮಿಡತೆಗಳನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡುತ್ತಿದ್ದರೆ, ಇವುಗಳ ಹಾವಳಿಯಿಂದ ಕಂಗಾಲಾಗಿರುವ ರೈತರು ತಮಗೆ ತೋಚಿದ ಎಲ್ಲವನ್ನೂ ಮಾಡುತ್ತಿದ್ದಾರೆ. ತಟ್ಟೆ ಲೋಟಗಳನ್ನು ಬಡಿದು ಸದ್ದು ಹೊರಡಿಸುವುದು, ಜೋರು ಧ್ವನಿಯಲ್ಲಿ ಮ್ಯೂಸಿಕ್ ಹಾಕುವುದು, ಟಯರ್ ಗಳಿಗೆ ಬೆಂಕಿ ಹಾಕುವುದು, ಹೊಲಗಳಲ್ಲಿ ದೊಡ್ಡ ಗದ್ದಲ ಎಬ್ಬಿಸುವುದು, ಟ್ರಾಕ್ಟರ್ ಓಡಿಸುತ್ತಾ ಬೊಬ್ಬೆ ಹಾಕುವುದು ಹೀಗೆ ಏನೆಲ್ಲಾ ತೋಚುತ್ತೋ ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಸದ್ದು ಗದ್ದಲದಿಂದ ಕೊಂಚ ಮುಂದೆ ಹೋಗುವ ಮಿಡತೆಗಳು ಪಕ್ಕದ ಇನ್ನೊಂದು ಹೊಲಕ್ಕೆ ದಾಳಿ ಇಡುತ್ತಿವೆ.
ಫೆಬ್ರವರಿ 2020ರಲ್ಲಿ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO)ಯು "ಈಶಾನ್ಯ ಆಫ್ರಿಕಾದಲ್ಲಿ ಮಿಡತೆಗಳು ಸಾವಿರಾರು ಹೆಕ್ಟೇರ್ ಕೃಷಿ ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ. ಕಳೆದ 25 ವರ್ಷಗಳಲ್ಲಿ ಇದು ಮಿಡತೆಗಳ ಅತಿದೊಡ್ಡ ಸಮೂಹಗಳ ದಾಳಿ" ಎಂಬುದಾಗಿ ವರದಿ ಪ್ರಕಟಿಸಿತ್ತು. ಅಲ್ಲಿಂದ ಪಾಕಿಸ್ತಾನಕ್ಕೆ ಹಾರಿಬಂದ ಮಿಡತೆಗಳು ಏಪ್ರಿಲ್ 2020 ರಲ್ಲಿ ಭಾರತವನ್ನೂ ಪ್ರವೇಶಿಸಿದವು. (ಭಾರತದಲ್ಲಿ ಕಳೆದ 27 ವರ್ಷಗಳಲ್ಲಿ ಮಿಡತೆಗಳ ಅತಿ ದೊಡ್ಡ ಹಾವಳಿ ಇದಾಗಿದೆ).

ಈ ಮಿಡತೆಗಳ ಹಾವಳಿ ಪ್ರತಿ ವರ್ಷ ಏಕಿರುವುದಿಲ್ಲ?
ನಮ್ಮ ಹೊಲ ಗದ್ದೆಗಳಲ್ಲಿ ಆಗಾಗ್ಗೆ ಚಿಟ ಚಿಟ ಎಂದು ಹಾರಿ ಹೋಗುವ ಉದ್ದನೆಯ ಕಾಲಿನ, ಎರಡು ಮೀಸೆಗಳ ಅದೇ ಮಿಡತೆಯಾ ಇದು? ಹೌದಾದರೆ ಇಷ್ಟು ದಿನ ಏಕೆ ಇವುಗಳ ಸುದ್ದಿ ಇರಲಿಲ್ಲ?. ಹೌದು. ಅದೇ ಜಾತಿಗೆ ಸೇರಿದ ಮಿಡತೆಗಳಿವು. ನಿಮ್ಮ ಹೊಲಗಳಲ್ಲಿ ಹಾಗೂ ಆಫ್ರಿಕಾ, ಇರಾನ್, ಪಾಕಿಸ್ತಾನ, ಭಾರತದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಮಿಡತೆಗಳು ನಿರುಪದ್ರವಿ ಜೀವಿಗಳು. ಇವುಗಳ ಸಂಖ್ಯೆಯೂ ಕಡಿಮೆ. ಕೃಷಿ ಬೆಳೆಗಳಲ್ಲಿ ಆರ್ಥಿಕ ನಷ್ಟ ಉಂಟುಮಾಡುವಂತಹ ಹಾನಿ ಇವುಗಳಿಂದಾಗಿರಲಿಲ್ಲ. ಹಾಗಾಗಿ ಇವುಗಳ ಸುದ್ದಿ ಕೇಳಿಬರುವುದಿಲ್ಲ.
ಆದರೆ ಉಷ್ಣವಲಯದ ಪ್ರದೇಶಗಳಲ್ಲಿ ತೀವ್ರ ಬರಗಾಲದ ನಂತರದ ದಿನಗಳಲ್ಲಿ ಭೂಮಿಯಲ್ಲಿ ಹಸಿರು ಉಕ್ಕುವಂತಹ ಸನ್ನಿವೇಶ ಬಂದಲ್ಲಿ ಈ ಮಿಡತೆಗಳ ಸಂತಾನ ಹೆಚ್ಚಾಗುತ್ತದೆ. ಎಷ್ಟೆಂದರೆ, ಕೋಟ್ಯಂತರ ಸಂಖ್ಯೆಯಲ್ಲಿ ಇವುಗಳ ಸಂತಾನ ವೃದ್ಧಿಯಾಗುತ್ತದೆ.

ಮಿಡತೆ ಸಂತಾನ ಹೆಚ್ಚಾಗಲು ಅನುಕೂಲವಾದ ಸನ್ನಿವೇಷ ಯಾವುದಿತ್ತು?
ಆಫ್ರಿಕಾದ ಕೆಲ ಭಾಗಗಳಲ್ಲಿ ಸೈಕ್ಲೋನ್ (ಮೇ ಮತ್ತು ಅಕ್ಟೋಬರ್ 2018) ಬಂದ ಕಾರಣ ಅಕಾಲಿಕ ಮಳೆಯಾಗಿ, ಚದುರಿ ಹೋದ ಮಳೆಯಿಂದ ಮಿಡತೆಗಳ ಸಂತಾನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಯಿತು. ಹಾಗಾಗಿ 2018 ಜೂನ್ ನಿಂದ ಮಾರ್ಚ್ 2019ರ ಅವಧಿಯಲ್ಲಿ ಸುಮಾರು ಏಳೆಂಟು ಸಾವಿರ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಂತಾನವೃದ್ಧಿಯಾಗಿದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. (ಇಂತಹ ಅನುಕೂಲಕರ ಸನ್ನಿವೇಶದಲ್ಲಿ ಮಿಡತೆಗಳು ತಮ್ಮ ಸಂತಾನ ಹೆಚ್ಚಿಸಿಕೊಳ್ಳಲು ಪ್ರಚೋದನೆ ಪಡೆದುಕೊಳ್ಳುತ್ತವೆ. ತತ್ಪರಿಣಾಮ ಸಂತಾನ ಹಲವು ಪಟ್ಟು ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಮತ)
ಹೀಗೆ ಅಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡ ಮಿಡತೆಗಳ ಸಮೂಹ ಆಹಾರಕ್ಕಾಗಿ ಅಂಡಲೆಯುತ್ತಾ ಹಾರಿ ಹೋಗುತ್ತವೆ. ಒಂದೊಂದು ಸಮೂಹವೂ ಕೋಟ್ಯಂತರ ಮಿಡತೆಗಳಿಂದ ಕೂಡಿರುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿಮ್ಮ ಹೊಲಕ್ಕೆ ದಾಳಿ ಇಟ್ಟವೆನ್ನಿ! ಅವುಗಳಿಂದಾಗುವ ಹಾನಿಯನ್ನು ಊಹಿಸಲೂ ಅಸಾಧ್ಯ.

ಮಿಡತೆಗಳ ಜೀವನ ಚಕ್ರ
ಕೋಶಾವಸ್ಥೆ: 10-65 ದಿನಗಳು
ಮರಿಹುಳುಗಳು: 24-95 ದಿನಗಳು
ಪ್ರೌಢಾವಸ್ಥೆ: 60-150 ದಿನಗಳು
(ಅಂದಮೇಲೆ ಮೂರು ತಿಂಗಳ ಕಾಲ ಪ್ರೌಢಾವಸ್ಥೆಯ ಹುಳುಗಳು ಆಹಾರಕ್ಕಾಗಿ ಅಲೆಯುತ್ತವೆ) ಪ್ರೌಢಾವಸ್ಥೆಯ ಮಿಡತೆಗಳು ವೇಗವಾಗಿ ಹಾರಬಲ್ಲವು. ದಿನವೊಂದಕ್ಕೆ 150 ಕಿಲೋಮೀಟರ್ ಕ್ರಮಿಸಬಲ್ಲವು. ಒಂದು ಚದರ ಕಿಲೋಮೀಟರ್ ವ್ಯಾಪ್ತಿಯ ಮಿಡತೆಗಳ ಸಮೂಹ 35,000 ಮಂದಿ ಒಂದು ದಿನ ತಿನ್ನುವಷ್ಟು ಆಹಾರವನ್ನು ತಿನ್ನಬಲ್ಲವು ಎಂಬುದಾಗಿ ಸಮೀಕ್ಷೆಗಳು ಹೇಳಿವೆ.
ಮುಂದುವರೆಯುವುದು...
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications