ಮುಧೋಳ: ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ
ಬಾಗಲಕೋಟೆ, ನವೆಂಬರ್, 17: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಹಾಗೆಯೇ ರೈತರು ಮುಧೋಳ ತಾಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಾರ್ಖಾನೆ ಮಾಲಿಕರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ಬಂದ್ ಮಾಡಿದ್ದರಿಂದ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.
ಕಬ್ಬಿಗೆ ಬೆಲೆ ನಗದಿ ಮಾಡುವಂತೆ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಧಿಡೀರ್ ರಾಷ್ಟ್ರೀಯ ಹೆದ್ದಾರಿ 218 ಅನ್ನು ಬಂದ್ ಮಾಡಿದ್ದು, ಜನತೆ, ವಿದ್ಯಾರ್ಥಿಗಳು, ವಾಹನ ಸವಾರರು ಪರದಾಡುವಂತಾಯಿತು. ಆಗ ಆಕ್ರೋಶಗೊಂಡ ರೈತರ ಮನವೊಲಿಸುವುದಕ್ಕೆ ಪೊಲೀಸರು, ತಹಶೀಲ್ದಾರರು ಮುಂದಾಗಿದ್ದರು. ಮುಧೋಳ ತಾಲೂಕಿನ ರೈತರು ಧಿಡಿರ್ ಅಂತಾ ಗದ್ದನಕೇರಿ ಕ್ರಾಸ್ನಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಮುಧೋಳ ಯಶಸ್ವಿ ಬಂದ್ ನಡೆಸಿದ್ದ ರೈತರು, ಎರಡನೇ ದಿನದ ಬಂದ್ ಮುಂದುವರೆಸುವುದಾಗು ಘೋಷಣೆ ಮಾಡಿದ್ದರು.

ರಾಷ್ಟ್ರೀಯ ಹೆದ್ದಾರಿ 218 ಬಂದ್
ಅದರಂತೆಯೇ ಮುಧೋಳದಲ್ಲೇ ಎರಡನೇ ದಿನದ ಬಂದ್ ಮುಂದುವರಿಯಬಹುದು ಅಂತಾ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಮುಧೋಳ ರೈತ ಮುಖಂಡರು ಗದ್ದನಕೇರಿ ಕ್ರಾಸ್ನಲ್ಲಿ ರಸ್ತೆ ನಡೆಸಿ ಆಕ್ರೋಶ ಹೊರಹಾಕಿದರು. ರಾಷ್ಟ್ರೀಯ ಹೆದ್ದಾರಿ 218 ಅನ್ನು ಬಂದ್ ಮಾಡಿದ್ದಕ್ಕೆ ಹುಬ್ಬಳ್ಳಿ-ಸೊಲ್ಹಾಪುರ ಹಾಗೂ ರಾಯಚೂರು-ಬೆಳಗಾವಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಇದೇ ಸರ್ಕಲ್ನಲ್ಲಿ ಜವಾವಣೆಗೊಂಡವು. ಅಲ್ಲದೇ ಕಿಲೋ ಮೀಟರ್ಗಟ್ಟಲೇ ಲಾರಿ, ಬಸ್, ಬೈಕ್ ಸೇರಿದಂತ ಸಾವಿರಾರು ವಾಹನಗಳು ಮೂರ್ನಾಲ್ಕು ಗಂಟೆ ನಿಂತಲ್ಲೇ ನಿಂತಿದ್ದವು.

ಸರ್ಕಾರಕ್ಕೆ ಅನ್ನದಾತರಿಂದ ಗಡುವು
"ರೈತರು ಸರ್ಕಾರಕ್ಕೆ ಕೊಟ್ಟಿದ್ದ ಎರಡು ದಿನದ ಗಡವು ಮುಗಿಯುತ್ತಾ ಬಂದಿದೆ. ಆದರೆ ಇದುವರೆಗೂ ಕಬ್ಬಿಗೆ ನಿಗದಿತ ಬೆಲೆಯನ್ನು ಘೋಷಣೆ ಮಾಡುತ್ತಿಲ್ಲ. ನಾವು ಕಾರ್ಖಾನೆ ಮಾಲಿಕರ ಜೊತೆ ಹೇಗೋ ನ್ಯಾಯಯುತ ಬೆಲೆಯನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಎರಡು ದಿನ ಕಾಲಾವಕಾಶ ಕೇಳಿತ್ತು. ಎರಡು ದಿನ ಕಳೆಯುತ್ತಾ ಬಂದರೂ ಕೂಡ ಯಾವುದೇ ಘೋಷಣೆ ಮಾಡಿಲ್ಲ. ಸಿಎಂ ಬೊಮ್ಮಾಯಿಯವರು ಧಮ್ಮು, ತಾಕತ್ತು ಅಂತಾ ಹೇಳುತ್ತಾರೆ. ಅವರಿಗೆ ತಾಕತ್ತನ್ನು ರೈತರ ಬೇಡಿಕೆ ಇಡೇರಿಸುವುದರಲ್ಲಿ ತೋರಿಸಲಿ," ಅಂತಾ ರೈತರು ಆಕ್ರೋಶ ಹೊರಹಾಕಿದರು.

ಕಬ್ಬು ಬೆಳೆಗಾರರ ಗೋಳು ಆಲಿಸದ ಸರ್ಕಾರ
ಇನ್ನು ಬೆಳಗ್ಗೆ 9 ಗಂಟೆಗೆ ಗದ್ದನಕೇರಿ ಕ್ರಾಸ್ಗೆ ಆಗಮಿಸಿದ ರೈತರು, ನೋಡ ನೋಡುತ್ತಿದ್ದಂತೆ ವಾಹನಗಳನ್ನು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿಸಿದ್ದರು. ಸುಮಾರು 2 ಗಂಟೆಯವರೆಗೂ ರಸ್ತೆ ಬಂದ್ ಮಾಡಿದ್ದ ರೈತರನ್ನು ತಹಶೀಲ್ದಾರ್ ವಿನಯಕುಮಾರ್ ಪ್ರತಿಭಟನೆ ಕೈಬಿಡುವಂತೆ ಮನವರಿಕೆ ಮಾಡಿದ್ದರು. ಆದರೂ ರೈತರು ತಹಶೀಲ್ದಾರರ ಮನವೊಲಿಕೆಗೂ ಜಗ್ಗದೇ ಪ್ರತಿಭಟನೆಯನ್ನು ಮುಂದುವರೆಸಿದ್ದರು. ನಂತರ ಪ್ರತಿಭಟನಾ ಸ್ಥಳಕ್ಕೆ ಎಡಿಸಿ ಮುರುಗಿ ಆಗಮಿಸಿ, ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಬ್ಬಿಗೆ ಸೂಕ್ತ ಬೆಲೆ ಘೋಷಣೆ ಆಗುತ್ತದೆ. ತಮ್ಮ ಹೋರಾಟದ ಬಗ್ಗೆ ಮೇಲಾಧಿಕಾರಿಳ ಗಮನಕ್ಕೆ ತರುವುದಾಗಿ ಹೇಳಿದ ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.

ಒಡೆದಾಳುವ ನೀತಿ, ಅನ್ನದಾತನ ಆರೋಪ
ಅಲ್ಲದೇ "ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒಡೆತನದ 5 ಶುಗರ್ ಕಾರ್ಖಾನೆಗಳಿವೆ. ಅದರಲ್ಲಿ ಮುಧೋಳ ವ್ಯಾಪ್ತಿಯಲ್ಲಿರುವ ಎರಡು ಕಾರ್ಖಾನೆಗಳು ಬಂದ್ ಆಗಿವೆ. ಆದರೆ ಬಾದಾಮಿ ತಾಲೂಕಿನಲ್ಲಿರುವ ಮೂರು ಕಾರ್ಖಾನೆಗಳು ಒಂದು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿವೆ. ನ್ಯಾಯಯುತ ಬೆಲೆ ನೀಡದೇ, ಅಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ನಿರಣಿ ಅವರ ಈ ನೀತಿಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಅದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನ್ಯಾಯಯುತ ಬೆಲೆ ನೀಡಿ ಕಾರ್ಖಾನೆ ಆರಂಭ ಮಾಡಿ. ರೈತರನ್ನು ಹೆದರಿಸಿ ಮೂರು ಕಾರ್ಖಾನೆಗಳನ್ನು ಆರಂಭ ಮಾಡಿದ್ದೀರಿ," ಎಂದು ಸಚಿವ ನಿರಾಣಿ ವಿರುದ್ದ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications