ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೃಷಿ ಸಚಿವ ಬಿ. ಸಿ. ಪಾಟೀಲ್
ಬೆಂಗಳೂರು, ಜೂನ್ 10; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಹಂಗಾಮು ಆರಂಭಗೊಂಡಿದೆ. ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ತಯಾರಿ ನಡೆಸುತ್ತಿದ್ದಾರೆ.
ಕೃಷಿ ಸಚಿವ ಬಿ. ಸಿ. ಪಾಟೀಲ್ ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ರೈತರು ಯಾವುದೇ ಅಪಪ್ರಚಾರದ ಮಾಹಿತಿಗೆ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕೇಂದ್ರ ಸರ್ಕಾರ ಇದರ ಅನುಗುಣವಾಗಿ ಮಾಹೆವಾರು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ನಿಂದ ಜೂನ್ವರೆಗೂ 12.5ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಇಲ್ಲಿಯವರೆಗೆ 14.51ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಸರಬರಾಜು ಆಗಿದ್ದು, 7.34 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿರುತ್ತದೆ. ಜಿಲ್ಲೆಗಳಲ್ಲಿ 7.16 ಲಕ್ಷ ಮೆಟ್ರಿಲ್ ಟನ್ ವಿವಿಧ ಗ್ರೇಡಗಳ ರಸಗೊಬ್ಬರ ದಾಸ್ತಾನು ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ
ವಿಶೇಷವಾಗಿ ಜಿಲ್ಲೆಗಳಿಂದ ಡಿಎಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮುಂಗಾರು ಹಂಗಾಮಿಗೆ 4 ಲಕ್ಷ ಮೆಟ್ರಿಕ್ ಟನ್ ಡಿಎಪಿಗೆ ಬೇಡಿಕೆ ಇದ್ದು, ಈಗಾಗಲೇ 2.59 ಲಕ್ಷ ಮೆಟ್ರಿಕ್ ಟನ್ ಸರಬರಾಜು ಆಗಿದ್ದು 1.61 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿರುತ್ತದೆ. ಇನ್ನೂ 98 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.

ರೈತರಿಗೆ ಆತಂಕ ಬೇಡ
ಕೇಂದ್ರ ಸರ್ಕಾರವು 60 ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರವನ್ನು ಪ್ರಸ್ತುತ ಮಾಹೆಯಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಂಡಿದೆ. ರೈತರು ಯಾವುದೇ ಅಪಪ್ರಚಾರದ ಮಾಹಿತಿಗೆ ಆಂತಕಕ್ಕೆ ಒಳಗಾಗದೇ ರಸಗೊಬ್ಬರವನ್ನು ಖರೀದಿ ಮಾಡಬೇಕು ಎಂದು ಮನವಿ ಮಾಡಲಾಗಿದೆ. ರೈತರು ಸಹ ಅಧಿಕೃತ ಮಾರಾಟಗಾರರಿಂದ ಗೊಬ್ಬರ ಖರೀದಿ ಮಾಡಬೇಕು. ಬಿಲ್ಗಳನ್ನು ತಪ್ಪದೇ ಪಡೆದು ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ.

ಸಮತೋಲಿತ ರಸಗೊಬ್ಬರ ಬಳಸಿ
ಕೃಷಿ ಸಚಿವ ಬಿ. ಸಿ. ಪಾಟೀಲ್ ಡಿಎಪಿ ರಸಗೊಬ್ಬರದಲ್ಲಿನ ಪೋಷಕಾಂಶಗಳು ಕಾಂಪ್ಲೆಕ್ಸ್ ರಸಗೊಬ್ಬರಗಳಲ್ಲಿಯೂ ಇದ್ದು ರೈತರು ಬೆಳೆಗಳಿಗೆ ಅವಶ್ಯಕ ತಕ್ಕಂತೆ ಸಮತೋಲನ ರಸಗೊಬ್ಬರ ಬಳಸಲು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಮುಂಗಾರು ಹಂಗಾಮು ಶುರುವಾಗಿದ್ದು ಬೀಜ, ಗೊಬ್ಬರ ಕೊಳ್ಳಲು ರೈತರು ಅಂಗಡಿಗಳಿಗೆ ಬಂದಾಗ ಅವರುಗಳು ಕೇಳಿದ ಬಿತ್ತನೆ ಬೀಜ, ಗೊಬ್ಬರ ನೀಡದೆ, ಹೆಚ್ಚುವರಿಯಾಗಿ ಬೇರೆ ಬೇರೆ ರಸಗೊಬ್ಬರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ ಅಂತಹ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದರೊಂದಿಗೆ ಪರವಾನಗಿ ರದ್ದುಗೊಳಿಸುವುದಾಗಿ ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.
|
ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾಹಿತಿ
ರಾಜ್ಯದ ಕೃಷಿ ಸಚಿವ ಬಿ. ಸಿ. ಪಾಟೀಲ್ ಜಿಲ್ಲೆಗಳಲ್ಲಿ ಜೂನ್ 10ರ ಮಾಹಿತಿಯಂತೆ ಲಭ್ಯವಿರು ರಸಗೊಬ್ಬರದ ದಾಸ್ತಾನು ವಿವರ ನೀಡಿದ್ದಾರೆ. ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರಗಳು ಎಷ್ಟು ಲಭ್ಯವಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.
ರೈತರು ಕೇವಲ ಒಂದೇ ಗೊಬ್ಬರವನು ಡಿಎಪಿ ಅಥವಾ ಕಾಂಪ್ಲೆಕ್ಸ್ ಬಳಸದೇ ಸಮತೋಲಿತ ಗೊಬ್ಬರಗಳನ್ನು ಬಳಸಬೇಕು. ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆಗಳಿಗೆ ಅಗತ್ಯ ಹಾಗೂ ಪೋಷಕಾಂಶ ಭರಿತ ಗೊಬ್ಬರಗಳನ್ನು ಬಳಕೆ ಮಾಡಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications