ಮಾದರಿ ರೈತ ಮಾರುಗೊಂಡನಹಳ್ಳಿ ಸದಾಶಿವಯ್ಯ ಇನ್ನಿಲ್ಲ
ತುಮಕೂರು, ಡಿಸೆಂಬರ್ 11: ಮಾದರಿ ರೈತ ಮಾರುಗೊಂಡನಹಳ್ಳಿ ಸದಾಶಿವಯ್ಯ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ಬಳಿಯ ಮಾರುಗೊಂಡನಹಳ್ಳಿಯ ಇವರ ತೋಟ ಮತ್ತವರ ಕೃಷಿ ಚಟುವಟಿಕೆಗಳ ಬಗ್ಗೆ ಹಿಂದೊಮ್ಮೆ ಟಿವಿಯ ಕೃಷಿ ಸಮಯ ಕಾರ್ಯಕ್ರಮಕ್ಕೆ ಒಂದು ಎಪಿಸೋಡ್ ಮಾಡಿದ್ದೆ. ಹನ್ನೆರಡು ವರ್ಷಗಳೇ ಕಳೆದಿರಬಹುದು. ಅವರ ಮಾತುಗಳು ಇನ್ನೂ ಕೇಳಿಸುತ್ತಿವೆ.
'ತುಪ್ಪ ಇಲ್ಲದ ಊಟ ಸೊಪ್ಪಿಲ್ಲದ ತೋಟ' ಎಂಥದ್ರೀ ಎಂದು ಮಾತು ಆರಂಭಿಸಿ ಕಲ್ಲು ಭೂಮಿಯಲ್ಲಿ ಹಸಿರುಕ್ಕಿಸಿದ ಅವರು ಶ್ರಮದ ಬಗ್ಗೆ ಹೇಳಿಕೊಟ್ಟರು. ಬೆಳಿಗ್ಗೆ ಎದ್ದು ತೋಟಕ್ಕೆ ಹೋಗಬೇಕು, ಮತ್ತೆ ಸಾಯಂಕಾಲನೂ ಹೋಗಬೇಕು. ಗಿಡ ಮರಗಳು ತಮಗೇನು ಬೇಕು ಅಂತಾ ತಾವೇ ಹೇಳ್ತಾವೆ, ಕೇಳ್ತಾವೆ. ನೋಡಿ ಇಲ್ಲಿ ಬಾಳೆಗಿಡ ಬಗ್ಗೋಗೈತೆ, ಇದನ್ನೀಗ ಸರಿಯಾಗಿ ನಿಲ್ಲಿಸ್ಬೇಕು ಎಂದು ಗಿಡಕ್ಕೆ ಕೋಲು ಆನಿಸಿ ಸರಿ ಮಾಡಿದರು.
ತೋಟ ಐತೆ ನಂದು ಅಂತಾ ಕಾಲ್ಮೇಲೆ ಕಾಲಾಕ್ಕೊಂಡು ಟಿವಿ ನೋಡ್ಕೊಂಡು ಕೂತ್ಕೊಂಡ್ರೆ ತೋಟ ಆದಾತ. ಬೆಳಿಗ್ಗೆ, ಸಾಯಂಕಾಲ ತೋಟದಲ್ಲಿರಬೇಕು ಎಂದು ಆಬ್ಸೆಂಟೀ ಫಾರ್ಮರ್ಸ್ ಮಾಡಿಕೊಳ್ಳುವ ಎಡವಟ್ಟುಗಳ ಬಗ್ಗೆ ಮಾತನಾಡಿದರು.
ಸದಾಶಿವಯ್ಯ ವಿಟ್ಟಿ. ನನಗೆ ಹನ್ನೊಂದನೇ ಕಸುಬಿದು. ಇದು ನನ್ನ ಕೈ ಹಿಡಿದೈತೆ. ಮೊದ್ಲೆಲ್ಲಾ ಊರಿಗೆ ಪೊಲೀಸ್ ಜೀಪ್ ಬಂದ್ರೆ ಈ ಸದಾಶಿವಯ್ಯ ಏನೂ ಕಿತಾಪತಿ ಮಾಡಿರ್ಬೇಕು, ಅದ್ಕೇ ಪೊಲೀಸ್ನೋರು ಬಂದೌರೆ ಅಂದ್ಕೊಂತಿದ್ರು ಜನ. ಈಗ ಪೊಲೀಸ್ ಜೀಪ್ ಬಂದ್ರೆ, ನಾಳಿಕೋ ನಾಡಿದ್ದೋ ಯಾರೋ ಮಿನಿಸ್ಟರ್ ಬರ್ತಿರ್ಬೋದು ಸದಾಶಿವಯ್ಯನ ತೋಟ ನೋಡಾಕೆ ಅದ್ಕೇ ಪೊಲೀಸ್ ಜೀಪ್ ಬಂದೈತೆ ಅಂತಾರೆ. ಹೋದ್ವಾರ ಆಂಧ್ರದ ಕೃಷಿ ಮಂತ್ರಿ ಬಂದೋದ್ರು ಎಂದು ಹೇಳುತ್ತಲೇ ಮನೆಯತ್ತ ನಮ್ಮನ್ನು ಕರಕೊಂಡು ಹೋಗಿ ಒಳ್ಳೇ ಮಜ್ಜಿಗೆ ಕೊಟ್ಟು ಉಪಚರಿಸಿದ್ದರು.
ಹೋಗಿ ಬನ್ನಿ ಸದಾಶಿವಯ್ಯನವರೇ, ನಿಮ್ಮ ತೋಟದ ಜೀವಂತ ಬೇಲಿ, ಪ್ರಾಣಿ- ಪಕ್ಷಿಗಳಿಗೆಂದೇ ಮೀಸಲಾಗಿ ಬೆಳೆದ ತೋಟದಂಚಿತ ಹಣ್ಣಿನ ಗಿಡಗಳು, ಕೊರಕಲು ಕಲ್ಲಿನ ಬಾವಿ, ನಿಂಬೆ ಸಸಿಗಳ ಪುಟ್ಟ ನರ್ಸರಿ, ದನಗಳು ಮತ್ತು ಬಂದು ಹೋಗುವವರಿಗೆ ಕೂರಲು ಮಾಡಿದ್ದ ಪುಟ್ಟ ಕುಟೀರ ನಿಮ್ಮನ್ನು ಶಾಶ್ವತವಾಗಿ ಮಿಸ್ ಮಾಡುತ್ತವೆ. ಅವುಗಳ ಮೂಲಕ ನೀವು ಕಲಿಸಿದ ಕೃಷಿ ಪಾಠ ರೈತ ಮಕ್ಕಳಿಗೆ ದಾರಿದೀಪವಾಗಿ ಶಾಶ್ವತವಾಗಿ ಉಳಿಯುತ್ತವೆ.
Recommended Video