Mandous Cyclone Effect: ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರ ಬದುಕು ಬೀದಿಪಾಲು, ಇಲ್ಲಿದೆ ವಿವರ
ಚಿಕ್ಕಮಗಳೂರು, ಡಿಸೆಂಬರ್, 13: ಮಾಂಡೌಸ್ ಚಂಡಮಾರುತದ ಎಫೆಕ್ಟ್ಗೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. 2022ರಲ್ಲಿ ಇಡೀ ವರ್ಷ ಮಳೆ ಸುರಿದ ಪರಿಣಾಮ, ಕೊಯ್ಲಿಗೆ ಬಂದ ಕಾಫಿ ಬೆಳೆ ಇದೀಗ ಗೊಬ್ಬರವಾಗುತ್ತಿದೆ. ಕೆಲಸಕ್ಕೆ ಜನರು ಸಿಗದ ಕಾರಣ ಇದೀಗ ಕಾಫಿ ಬೆಳೆ ಅದೇ ತೋಟಕ್ಕೆ ಗೊಬ್ಬರವಾಗುತ್ತಿದೆ. ಚಂಡಮಾರುತದಿಂದ ಶೀತ ಹೆಚ್ಚಾಗಿದ್ದು, ಗಿಡದಲ್ಲಿ ಹಣ್ಣಾಗಿರುವ ಕಾಫಿ ಉದುರಿ ಹೋಗುತ್ತಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಮುಂದೆಯೇ ಕರಗಿ ಹೋಗುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ.
ತಮಿಳುನಾಡಿನ ಮ್ಯಾಂಡೌಸ್ ಚಂಡಮಾರುತ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಬದುಕಿನ ಮೇಲೆ ಬರೆ ಎಳೆದಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಳೆ ಸುರಿಯುತ್ತಿದ್ದು, ಚಳಿಗಾಳಿಗೆ ಕಾಫಿ ಸಂಪೂರ್ಣ ನೆಲಕಚ್ಚುತ್ತಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲೇ ಕಾಫಿ ಕೊಯ್ಲಿಗೆ ಬರುತ್ತದೆ. ಎಲ್ಲಾ ಸರಿ ಇದ್ದಿದ್ದರೆ ಈಗಾಗಲೇ ತೋಟದ ತುಂಬಾ ಕಾರ್ಮಿಕರು ಕಾಫಿ ಕೊಯ್ಯುತ್ತಿದ್ದರು. ಆದರೆ, ಕಳೆದ ಮೂರ್ನಾಲ್ಕು ದಿನದಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕಾಫಿ ಕೊಯ್ಯಲು ಕಾರ್ಮಿಕರು ಬರುತ್ತಿಲ್ಲ. ಮಳೆ ಹಾಗೂ ಗಾಳಿಗೆ ಗಿಡದಲ್ಲಿರುವ ಹಣ್ಣು ಕೂಡ ನೆಲಕ್ಕುದುರುತ್ತಿದೆ. ಇದರಿಂದ ಕಂಗಾಲಾಗಿರುವ ಕಾಫಿ ಬೆಳೆಗಾರರು ಸರ್ಕಾರದ ನೆರವಿನ ದಾರಿಯನ್ನು ಕಾಯುತ್ತಿದ್ದಾರೆ.
ಕಾಫಿನಾಡಿನಲ್ಲಿ ಧಾರಾಕಾರ ಮಳೆ: ಸಂಕಷ್ಟದಲ್ಲಿ ಭತ್ತ, ಕಾಫಿ, ಅಡಿಕೆ ಬೆಳೆಗಾರರು
ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಕಂಗಾಲು
ಕಳೆದ ನಾಲ್ಕೈದು ವರ್ಷಗಳಿಂದ ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಮಳೆಯಿಂದ ಅಕ್ಷರಶಃ ಬೀದಿಗೆ ಬಂದಿದ್ದರು. ಅದರಲ್ಲೂ ಸಣ್ಣ-ಸಣ್ಣ ಬೆಳೆಗಾರರ ಬದುಕು ಮಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ವರ್ಷವಂತೂ ಸತತವಾಗಿ ಮಳೆ ಸುರಿದ ಕಾರಣ ಕಾಫಿ ಬೀಜಗಳು ನೆಲಕ್ಕೆ ಬಿದ್ದು ಗೊಬ್ಬರವಾಗುತ್ತಿವೆ. 2022ರ ಜನವರಿಯಲ್ಲಿ ಆರಂಭವಾದ ಮಳೆ ಡಿಸೆಂಬರ್ ಬಂದರೂ ಕೂಡ ಬಿಡುವು ಕೊಡುತ್ತಿಲ್ಲ.
ಕಾಫಿನಾಡಲ್ಲೇ ಠಿಕಾಣಿ ಹೂಡಿದ ವರುಣದೇವ
ವಾರ, ಹದಿನೈದು ದಿನ ಬಿಡುವು ನೀಡಿದ್ದು ಬಿಟ್ಟರೇ ವರುಣದೇವ ವರ್ಷವಿಡಿ ಕಾಫಿನಾಡಲ್ಲೇ ಠಿಕಾಣಿ ಹೂಡಿದ್ದಾನೆ. ಇದು ಕಾಫಿ-ಅಡಿಕೆ-ಮೆಣಸು ಸೇರಿದಂತೆ ಆಹಾರ ಬೆಳೆಗಳ ಮೇಲೂ ಪರಿಣಾಮ ಬೀರಿತ್ತು. ಚಂಡಮಾರುತ ಬೆಳೆಗಾರರ ಮೇಲೆ ಸವಾರಿ ಮಾಡುತ್ತಿದ್ದು, ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹಣ್ಣನ್ನು ಕೊಯ್ಯುವ ಸಮಯದಲ್ಲೇ ಚಂಡಮಾರುತ ಅಪ್ಪಳಿಸಿದೆ. ಆದ್ದರಿಂದ ಈ ವರ್ಷ ಕಾಫಿ ಕೈಗೆ ಸಿಗುವುದು ಅನುಮಾನವಾಗಿದೆ ಎಂದು ಅಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ, ಬೆಳೆಗಾರರು ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನೆಲಕ್ಕೆ ಬೀಳುತ್ತಲೇ ಇವೆ ಕಾಫಿ ಬೀಜ
ಇನ್ನು ಈ ಬಗ್ಗೆ ಮಾತಾನಾಡಿರುವ ಕಾಫಿ ಬೆಳೆಗಾರ ರತನ್, ನಿರಂತರ ಮಳೆಯಿಂದ ಕಾಫಿ ಮಣ್ಣು ಪಾಲಾಗುತ್ತಿದೆ. ಕಾಫಿ ಹಣ್ಣು ಬಿಡಿಸಲು ಕಾರ್ಮಿಕರು ಸಿಗುತ್ತಿಲ್ಲ. ಇದರ ನಡುವೆಯೇ ಮಳೆಯಿಂದ ಬೆಳೆಯೂ ನೆಲಕ್ಕಚ್ಚುತ್ತಿದೆ. ಪರಿಹಾರ ನೀಡಿದರೆ ಬದುಕಬಹುದು, ಇಲ್ಲದಿದ್ದರೆ ಬದುಕಿನ ದಾರಿಯೇ ಇಲ್ಲ. ಇದೇ ರೀತಿ ಮಳೆ ಮುಂದುವರೆದರೆ ನಾವು ಬೀದಿಗೆ ಬೀಳುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬೀದಿಗೆ ಬಂದ ಕಾಫಿ ಬೆಳೆಗಾರರ ಬದುಕು
ಒಟ್ಟಾರೆ, 2022ರ ವರ್ಷಪೂರ್ತಿ ಮಳೆ ಸುರಿದ ಪರಿಣಾಮ ಕಾಫಿನಾಡ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಯುವ ಸಮಯದಲ್ಲೇ ಚಂಡಮಾರುತದ ಎಫೆಕ್ಟ್ ಮಳೆಯಿಂದ ಕಂಗಾಲಾಗಿದ್ದ ಬೆಳೆಗಾರರ ಬದುಕಿನ ಮೇಲೆ ಚಂಡಮಾರುತವೂ ಬರೆ ಎಳೆದಿದೆ.