ಉಪಕಸುಬಾಗಿ ಬಿದಿರಿನ ಕೃಷಿ; "ಬಿದಿರು ನೀನಾರಿಗಲ್ಲದವಳು..."
ಅದೊಂದು ಕಾಲವಿತ್ತು. ಹೊಲಗಳ ಅಂಚಿಗೆ "ಜೀವಂತ ಬೇಲಿ" ಬೆಳೆಸುವ, ಬೆಳೆಗಳ ನಡುವೆ ಅಕ್ಕಡಿ ಸಾಲು ಹಾಕುವ ಕಾಲವದು. ಜೀವಂತ ಬೇಲಿಯೆಂದರೆ ಮರಮುಟ್ಟುಗಳು, ಮೇವು, ಹಸಿರೆಲೆ ಗೊಬ್ಬರ, ಹಕ್ಕಿ ಪಕ್ಷಿಗಳು ಹಣ್ಣು ತಿನ್ನಲು ಗೂಡು ಕಟ್ಟಲು ಆಸರೆ, ಪೂಜೆಗೆ ಪತ್ರೆ, ನೆರಳು ಮತ್ತು ಹೊಲಕ್ಕೆ ರಕ್ಷಣೆಯಾಗಿರುವ ಬಹುಪಯೋಗಿ ಹಸಿರು ಕವಚ. ಇನ್ನು ಅಕ್ಕಡಿಯೆಂದರೆ ಮನೆಗಾಗುವಷ್ಟು ಉಚ್ಚೆಳ್ಳು, ಜೋಳ, ತೊಗರಿ, ಹಲಸಂದೆ, ಹೆಸರುಕಾಳು ರೈತನಿಗೆ ಕೊಡುವ ಮತ್ತು ಹಕ್ಕಿ ಪಕ್ಷಿಗಳು ಬಂದು ಕುಳಿತು ಹೊಂಚುಹಾಕಿ ಕ್ರಿಮಿ ಕೀಟಗಳನ್ನು ಆಯ್ದು ತಿನ್ನಲು ನೆರವಾಗುವ ಅಕ್ಷಯವದು.
ಹೊಲಗಳಲ್ಲಿ ಜೀವವೈವಿಧ್ಯತೆ ಕಾಪಾಡಿಕೊಳ್ಳುವುದರಿಂದ ಭೂಮಿ, ಪರಿಸರಕ್ಕಷ್ಟೇ ಅಲ್ಲ ರೈತನಿಗೆ ಉಪಆದಾಯದ ಮೂಲವೂ ಆಗಿರುತ್ತಿತ್ತು. ರೈತರು ಏಕಬೆಳೆ ಬೆಳೆಯಲಾರಂಭಿಸಿದಾಗಿನಿಂದ ಹೊಲಗಳಲ್ಲಿ ಜೀವವೈವಿಧ್ಯತೆ ಇಲ್ಲವಾಗಿ ಹೊಲವೆಂದರೆ -ಕೃಷಿಯೆಂದರೆ- ರೈತ ಬದುಕೆಂದರೆ ಎಂಥದೋ ಬೆಳೆ "ಉತ್ಪಾದನೆ ಮಾಡಿ ಮಾರಾಟ ಮಾಡುವ" ಕಾರ್ಖಾನೆಯ ಮಾದರಿಯಾಗಿ ಕೃಷಿ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಕಾರಣವಾದದ್ದನ್ನು ನಾವೆಲ್ಲಾ ಕಂಡಿದ್ದೇವೆ. ಉಪಕಸುಬುಗಳನ್ನೂ ರೈತ ಕೈಬಿಟ್ಟಿದ್ದಾನೆ.
ಕೆಟ್ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಈಗ ಎಲ್ಲೆಡೆ ಸುಸ್ಥಿರ ಕೃಷಿ, ಜೀವವೈವಿಧ್ಯತೆ ಹೀಗೆ ಅನೇಕ ಹೆಸರುಗಳಲ್ಲಿ ಕಳೆದು ಹೋದ ಕೃಷಿ ಪದ್ಧತಿಗೆ ಮತ್ತು ಉಪಕಸುಬುಗಳಿಗೆ ಮರುಜೀವ ಕೊಡುವ ಯತ್ನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ರೈತರು ಬಿದಿರು ಬೆಳೆಯನ್ನು ಉಪಕಸುಬನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. (ಕೆಲವರು ಮುಖ್ಯ ಕಸುಬಾಗಿಯೂ ಮಾಡಿಕೊಂಡಿದ್ದಾರೆ) ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ 40,000 ರೈತರು ಬಿದಿರು ಬೆಳೆಯಲು ಮುಂದಾಗುತ್ತಿದ್ದಾರೆ, ದಿನೇ ದಿನೇ ಅವರ ಸಂಖ್ಯೆ ಹೆಚ್ಚುತ್ತಿದೆ.

ಬಿದಿರು ನೀನಾರಿಗಲ್ಲಾದವಳು
ಬ್ರಿಟೀಷರು ಬಿದಿರನ್ನು ಮರವೆಂದು ಗಣಿಸಿದ್ದರು. 2017ರ ನಂತರ ಮೋದಿ ಸರ್ಕಾರ ಬಿದಿರನ್ನು ಹುಲ್ಲೆಂದು ಹೇಳಿತು. ಆದರೆ ನಮ್ಮ ಜನಪದರು ಬಿದಿರನ್ನು ಕುರಿತು "ಹುಟ್ಟುತ್ತ ಹುಲ್ಲಾದೆ ಬೆಳೆಯುತ್ತ ಮರವಾದೆ" ಎಂದು ಎಂದೋ ಹೇಳಿ... ಆ ಸಾಲುಗಳನ್ನು ಖ್ಯಾತ ಜಾನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜು ಹಾಗೂ ಜನ್ನಿ ಅವರ ನಾಲಗೆಯ ಮೇಲೆ ತಿದ್ದಿ ಹೋಗಿದ್ದಾರೆ.
ವಿಷಯಕ್ಕೆ ಬರೋಣ. ಬಿದಿರನ್ನು ಹುಲ್ಲು ಎಂದು ಪರಿಗಣಿಸಿದ ಮೇಲೆ ಖಾಸಗಿಯಾಗಿ ಬೆಳೆಯುವುದು, ಕಟಾವು ಮಾಡುವುದು, ಸಾಗಿಸುವುದು ಕಾನೂನಿನ ಅಡಿಯಲ್ಲಿ ಸುಲಭವಾಗಿದೆ. ಇದರಿಂದ ಬಿದಿರು ಬಂಬುಗಳ ಪೀಠೋಪಕರಣಗಳು ಮತ್ತಿತರ ಆಲಂಕಾರಿಕ ಹಾಗೂ ದಿನೋಪಯೋಗಿ ವಸ್ತುಗಳನ್ನು ಮಾಡಲಾಗುತ್ತಿದೆ. ಮತ್ತದು ಹೆಚ್ಚು ಪ್ರಸಿದ್ಧಿಯೂ ಪಡೆಯುತ್ತಿದೆ. ಮಹಾರಾಷ್ಟ್ರದ ಸಿಂದೂದುರ್ಗ್ ಜಿಲ್ಲೆಯೊಂದರಲ್ಲೇ ಸುಮಾರು 10,000 ಮಂದಿ ಬಿದಿರು ಬೆಳೆಯುತ್ತಿದ್ದಾರೆ.

ಬಿದಿರು ತಜ್ಞ ಹಾಗೂ KONKAN BAMBOO and CANE DEVELOPMENT CENTRE ನ ಸಂಸ್ಥಾಪಕ ಸಂಜೀವ್ ಕರ್ಪೆ ಅವರು ಕೆಲ ಸಂಸ್ಥೆಗಳ ಸಹಯೋಗದೊಂದಿಗೆ ಬಿದಿರಿನ ಉತ್ಪನ್ನಗಳನ್ನು ತಯಾರಿಸಲು ಸುಮಾರು 650 ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಭಾರತೀಯ ಸ್ಟ್ಯಾಂಡರ್ಡ್ ಪ್ರಕಾರ ಒಂದು ಕುಟುಂಬವೆಂದರೆ ಐದು ಮಂದಿ 650x5 ಎಂದರೆ 3250 ಮಂದಿಯ ಜೀವನ ಮತ್ತು ಇವರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವವರೊಂದಷ್ಟು ಮಂದಿ ಮತ್ತವರ ಕುಟುಂಬಗಳ ಬದುಕು, ಇವೆಲ್ಲದಕ್ಕೂ ಕಾರಣರಾದ 10,000 ರೈತ ಕುಟುಂಬಗಳ ಬದುಕಿಗೆ ಆಸರೆಯಾದ ಕೃಷಿಯ ಉಪಕಸುಬು, ಎಷ್ಟು ಚಂದದ economics ಅಲ್ಲವೇ!
ಅದಕ್ಕೆ ಜನಪದರು ಹೇಳಿದ್ದು "ಬಿದಿರು ನೀನಾರಿಗಲ್ಲದವಳು..."












Click it and Unblock the Notifications